ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಗೃಹಸಚಿವರಿಗೆ ರಾಜಕೀಯ ಕಳಂಕ ಎಂದು ಹೇಳಿಕೆ ನೀಡಿದ್ದು ನಿಜಕ್ಕೂ ಇದು ಅವರ ಮೂರ್ಖತನದ ಪರಮಾವಧಿ. ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ ಮೂರು ಮೂರುಸಲ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಬಹಳಷ್ಟು ಮಕ್ಕಳ ಜೀವನ ಹಾಳು ಮಾಡಿದ್ದಲ್ಲದೆ ಹಲವಾರು ಅಸಂಬದ್ಧ ತೀರ್ಮಾನಗಳನ್ನು ತೆಗೆದುಕೊಂಡಿದ್ದು ನಾವಿನ್ನು ಮರೆತಿಲ್ಲ. ಆಗ ರತ್ನಾಕರ್ ರವರು ರಾಜಕೀಯ ಕಳಂಕಿತರಾಗಿರಲಿಲ್ಲವೇ? ಎಂದು ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಪ್ರಶ್ನಿಸಿದ್ದಾರೆ.
ಗೃಹಸಚಿವರು ಜೆ.ಜೆ ನಗರದಲ್ಲಿ ನಡೆದ ಚಂದ್ರುವಿನ ಹತ್ಯೆಯ ಪ್ರಕರಣದ ವಿವರವನ್ನು ಹೇಳುವ ಸಂದರ್ಭದಲ್ಲಿ ಅವರಿಗೆ ಮೊದಲು ಏನು ಮಾಹಿತಿ ದೊರೆತಿತ್ತೋ ಅದನ್ನು ಹೇಳಿದ್ದಾರೆ. ಸ್ಪಷ್ಟವಾದ ಮಾಹಿತಿ ಬಂದೊಡನೆ ತಕ್ಷಣವೇ ಅದನ್ನು ಸರಿಪಡಿಸಿದ್ದಾರೆ. ತಪ್ಪಾಗಿದ್ದನ್ನು ಸರಿಪಡಿಸಿ ಹೇಳುವುದು ಜ್ಞಾನೇಂದ್ರ Home Minister Araga Gnanendra ರವರ ದೊಡ್ಡತನ. ಇದನ್ನು ಹಿಡಿದು ಅವರನ್ನು ರಾಜಕೀಯ ಕಳಂಕ ಎಂದು ಹೇಳಿದ್ದಲ್ಲದೆ ಪ್ರತಿಭಟನೆಗೆ ಇಳಿದಿರುವುದು ಕಾಂಗ್ರೇಸಿಗರ ಮೂರ್ಖತನದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also read: ಭದ್ರಾವತಿ: ಗೃಹ ಸಚಿವರ ವಿರುದ್ಧ ಕಾನೂನು ಕ್ರಮಕ್ಕೆ ಯುವ ಕಾಂಗ್ರೆಸ್ ಆಗ್ರಹ
ಅವರ ಪಕ್ಷದ ನಾಯಕರು ಇಂತಹ ಅನೇಕ ತಪ್ಪುಗಳನ್ನು ಮಾಡಿ ಅದನ್ನು ಸರಿಪಡಿಸಿಕೊಳ್ಳದೆ, ಆ ತಪ್ಪನ್ನೇ ಸಮರ್ಥಿಸಿಕೊಳ್ಳುವ ಭಂಡತನದ ವಾದಕ್ಕಿಳಿಯುತ್ತಾರೆ. ಮೊನ್ನೆ ಹಿಜಾಬ್ ವಿಚಾರದಲ್ಲಿ ಶಿವಮೊಗ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿ ಧ್ವಜಸ್ತಂಭಕ್ಕೆ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕೆ, ರಾಷ್ಟ್ರಧ್ವಜವನ್ನೇ ಇಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದು ಬೊಬ್ಬೆ ಹೊಡೆದ ಡಿ.ಕೆ ಶಿವಕುಮಾರ್, ನಂತರ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಅದರ ಸ್ಪಷ್ಟತೆಯನ್ನು ಕೊಟ್ಟಾಗಲೂ ಕೂಡ ಅವರ ತಪ್ಪನ್ನು ಒಪ್ಪಿಕೊಳ್ಳದೆ ಭಂಡತನದ ವಾದವನ್ನಿಟ್ಟು ರಾಷ್ಟ್ರೀಯ ಮಟ್ಟದಲ್ಲಿ ಶಿವಮೊಗ್ಗದ ಘನತೆಯನ್ನು ಹಾಳು ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು ಈ ಕಿಮ್ಮನೆ ರತ್ನಾಕರ್? ಎಂದಿದ್ದಾರೆ.
ನಿಜವಾದ ರಾಜಕೀಯ ಕಳಂಕರು ಕಿಮ್ಮನೆ ರತ್ನಾಕರ್, ಅವರ ಪಕ್ಷದ ನಾಯಕರು, ನಿಸ್ವಾರ್ಥದಿಂದ ರಾಜಕೀಯ ನಡೆಸುವುದನ್ನು ಗೃಹ ಸಚಿವಆರಗ ಜ್ಞಾನೆಂದ್ರ ಅವರಿಂದ ಕಾಂಗ್ರೇಸಿಗರು ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post