ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೌರವ ಪ್ರೀತಿಯಿಂದ ಬದುಕುತ್ತಿದ್ದ ಸರ್ವಜನಾಂಗದ ಶಾಂತಿಯ ತೋಟವನ್ನು ಮತ್ತೆ ಸೃಜಿಸಲು ಹಾಗೂ ಮಾನವೀಯತೆಯನ್ನು ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ ಎಂದು ಖ್ಯಾತ ವಿಮರ್ಶಕಿ ಡಾ.ಎಂ.ಎಸ್. ಆಶಾದೇವಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಕಸಾಪದಲ್ಲಿ ನಡೆದಿರುವ ಅತ್ಯಂತ ದೊಡ್ಡ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ, ಶಿವಮೊಗ್ಗದ ಜಿಲ್ಲಾಧ್ಯಕ್ಷರಾದ ಡಿ.ಮಂಜುನಾಥ, ಬೆಂಗಳೂರಿನ ಜಿಲ್ಲಾಧ್ಯಕ್ಷರ ಪ್ರಕಾಶಮೂರ್ತಿ ಮತ್ತು ಹಿರಿಯ ಸಾಹಿತಿಗಳು ಯಶಸ್ವಿಯಾಗಿರುವುದು ಬಹಳ ದೊಡ್ಡ ಸಾಧನೆ. ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುತ್ತಿರುವ ಸಂಸ್ಥೆ ಕಸಾಪ ಅದು ಸರ್ವಾಧಿಕಾರಿದ ತೆಕ್ಕೆಗೆ ಸಿಲುಕಿ ನಲುಗಬಾರದು.
ಶಿವಮೊಗ್ಗದ ಮಣ್ಣು ಅದ್ಭುತ ಪ್ರತಿಭೆಗಳನ್ನು ಸೃಷ್ಟಿಮಾಡಿದೆ. ಲಂಕೇಶ್, ಶಾಂತವೇರಿ ಗೋಪಾಲಗೌಡರಂತಹ ವ್ಯಕ್ತಿತ್ವಗಳು ಕನ್ನಡದ ಸಾಕ್ಷಿ ಪ್ರಜ್ಞೆಗಳಾಗಿ ನಿಂತಿದ್ದಾರೆ. ಸತ್ಯವನ್ನು ಹೇಳಲು ಇರುವ ಹಕ್ಕನ್ನು ಪ್ರತಿನಿಧಿಸಿದವರು. ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿ ಕಾಪಾಡಿದ್ದು ಕನ್ನಡದ ವಿವೇಕವಾಗಿದೆ. ಸತ್ಯದ ಪರವಾಗಿ ನಿಲ್ಲುವ ಗುಣವನ್ನು ಬೆಳೆಸಿಕೊಳ್ಳಬೇಕು. ಅದು ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಸಾಹಿತ್ಯದ ಬೆಳಕಿನಲ್ಲಿ ಮಾನವೀಯತೆ ಪುನಃ ಅರಳಲಿ, ಸಮಾಜದಲ್ಲಿ ಪ್ರೀತಿ, ಸಹೋದರತ್ವ ಮತ್ತು ಶಾಂತಿ ಮತ್ತೆ ನೆಲೆಸಲಿ ಎಂಬುದು ನಮ್ಮೆಲ್ಲರ ಆಶಯವಾಗಬೇಕು.
ಕುವೆಂಪು ಅವರ ಬಗ್ಗೆ ಹೆಮ್ಮೆಪಟ್ಟರೆ ಸಾಲದು. ಅವರ ಅನೇಕ ವಿಚಾರಗಳನ್ನು ಕಲಿಯಬೇಕಿದೆ. ಶಿಕ್ಷಣದ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ ಎಂಬ ಚರ್ಚೆಯಾಗಬೇಕು. ಕನ್ನಡದ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಾಹಿತ್ಯ ಸಮ್ಮೇಳನದ ವೇದಿಕೆಗಳ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕೇಂದ್ರ ಕಸಾಪದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸಮ್ಮೇಳನವನ್ನು ಮಾರ್ಚ್ ತಿಂಗಳಲ್ಲಿ ತಡವಾಗಿ ಸಂಘಟಿಸುವ ಅನಿವಾರ್ಯತೆ ಮೂಡಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹಿನ್ನಲೆಯಲ್ಲಿ ಅನೇಕ ಶಿಕ್ಷಕರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. 4 ಸಮ್ಮೇಳನವನ್ನು ನಮ್ಮ ಅವಧಿಯಲ್ಲಿ ಸಂಘಟಿಸಲಾಗಿದ್ದು, ಈ ಬಾರಿ ಮಹಿಳೆಯೊಬ್ಬರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹೊಸನಗರವನ್ನು ಪ್ರತ್ಯೇಕ ಕ್ಷೇತ್ರವಾಗಿ, ಸಾಗರವನ್ನು ಜಿಲ್ಲೆಯನ್ನಾಗಿ ರೂಪಿಸುವ ಕುರಿತ ಮಲೆನಾಡಿನ ಒಡಲಾಳದ ಚಿಂತೆ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಪ್ರತ್ಯೇಕತೆಯ ಕೂಗು ಕನ್ನಡಕ್ಕೆ ಒಳ್ಳೆಯ ಲಕ್ಷಣವಲ್ಲ
ಪ್ರತ್ಯೇಕತೆಯ ಕೂಗು ಕನ್ನಡಕ್ಕೆ ಒಳ್ಳೆಯ ಲಕ್ಷಣವಲ್ಲ. ಹೀಗೆ ಮುಂದುವರಿದರೆ ಕನ್ನಡ ಮತ್ತಷ್ಟು ಕಳೆದುಹೋಗುವ ಅಪಾಯವಿದೆ. ಕನ್ನಡಿಗರಲ್ಲಿ ನಿಜವಾದ ಕಳಕಳಿ ಮೂಡಿ,ಭಾವೈಕ್ಯವಾಗಬೇಕು. ಅದಕ್ಕೆ ಸಾಹಿತ್ಯ ಸಮ್ಮೇಳನಗಳು ಪೂರಕ ವೇದಿಕೆಯಾಗಿದೆ ಎಂದು ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿಜಯಶ್ರೀ ಅಭಿಪ್ರಾಯಪಟ್ಟರು.
ಕನ್ನಡ ಭಾಷೆ ಕಲಿತವರು ನಿರಾಯಾಸವಾಗಿ ಕರ್ನಾಟಕದಲ್ಲಿ ಬದುಕಬೇಕು. ನ್ಯಾಯಾಲಯ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಕಛೇರಿ, ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ಕಡೆಗಳಲ್ಲಿ ಕನ್ನಡ ಬಳಸುತ್ತಾ ಹೋಗಬೇಕು. ಭಾಷೆ ಉಪಯೋಗಿಸುತ್ತಾ ಹೋದರೆ ತಾನಾಗಿಯೇ ಬೆಳೆಯುತ್ತದೆ.ಕೃಷಿ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಮಟ್ಟದಲ್ಲಿ, ಸಾಮಾಜಿಕ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಈಗಂತೂ ಆಸ್ಪತ್ರೆಗಳು, ವಿದ್ಯಾಕೇಂದ್ರಗಳು ಹೆಚ್ಚಾಗಿವೆ. ಆದರೆ ಸ್ತ್ರೀ ಜಗತ್ತು ವಿಶಾಲವಾಗಿ ವಿಸ್ತರಿಸಬೇಕಿದೆ.
ಶಿವಮೊಗ್ಗ ಅಗಾಧವಾಗಿ ಬೆಳೆಯುತ್ತಿದೆ. ಇಲ್ಲಿನ ಐತಿಹಾಸಿಕ, ಸಾಂಸ್ಕೃತಿಕ ಕ್ಷೇತ್ರಗಳ ರಕ್ಷಣೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವಂತಹ ಯೋಜನೆಗಳನ್ನು ರೂಪಿಸಲು ಸರ್ಕಾರ ಮತ್ತು ಸಾರ್ವಜನಿಕರು ಇತ್ತ ಗಮನಕೊಡಬೇಕು. ಸಂಶೋಧನೆಯಷ್ಟೆ ಅಭಿವೃದ್ಧಿ ಕೂಡ ಮುಖ್ಯ. ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಸಂಸ್ಕೃತಿ, ಪರಂಪರೆ, ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿ ಎಂದರು. ಭಾಷೆ?ಸಂಸ್ಕೃತಿಗಳ ಉಳಿವು ಸಮಾಜದ ಚೇತನಕ್ಕೆ ಅತ್ಯಂತ ಅಗತ್ಯವಾಗಿದ್ದು, ಸಾಹಿತ್ಯ ಸಮಾಜಕ್ಕೆ ದಿಕ್ಕು ತೋರಿಸುವ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.
ನಮ್ಮ ಮಕ್ಕಳಲ್ಲಿ ಸೃಜನಶೀಲತೆ ತುಂಬುವ ಕಾರ್ಯ ನಡೆಯಬೇಕಿದೆ. ಮಕ್ಕಳು ನಾವು ಹೇಳಿದ್ದನ್ನು ಕೇಳುವುದಕ್ಕಿಂತ, ಮಾಡಿದ್ದನ್ನು ನೋಡಿ ಅನುಸರಿಸುತ್ತಾರೆ. ಅವರಿಗೆ ನೆಲದ ಮಣ್ಣನ್ನು ಕೊಟ್ಟು ನೋಡಿ, ಏನನ್ನು ಸೃಜಿಸುತ್ತಾರೆ ಎಂದು ಕಾಯಿರಿ. ನಾವು ಕನ್ನಡದಲ್ಲಿ ಮಾತನಾಡಿದರೆ ಅವರ ಉತ್ತರವೂ ಕನ್ನಡದಲ್ಲಿರುತ್ತದೆ.
ಮೊಬೈಲ್ ಹಾವಳಿ ಇವತ್ತು ಪ್ರಾಣಾಂತಿಕವಾಗುತ್ತಿದೆ. ದೊಡ್ಡವರು, ಮಕ್ಕಳು, ಪೋಷಕರು ಮನೆಗೊಂದು ದಿನಪತ್ರಿಕೆ ತರಿಸಿ. ವಾಚನಾಲಯದತ್ತ ಗಮನ ಹರಿಸಬೇಕಿದೆ. ಕೆಲ ಭಾಷಿಕರ ದಬ್ಬಾಳಿಕೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಅಮ್ಮಾ ಎಂದರೆ ತಬ್ಬಿಕೊಳ್ಳೋಣ, ಅಜ್ಜಿ ಎಂದರೆ ಮುದ್ದಿಸೋಣ, ನಮ್ಮ ಪ್ರೀತಿ ನಂಬಿಕೆಗೆ ಬೆಲೆ ಕೊಡದವರಿಂದ, ಅಭಿಮಾನಕ್ಕೆ ಭಂಗ ತರುವವರಿಂದ ನಾವೇ ದೂರವಿರೋಣ ಎಂದರು.
ತೆರೆದ ಜೀಪ್ನಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಗೋಪಾಳದ ಆನೆ ವೃತ್ತದಿಂದ ಬೆಳಗ್ಗೆ 10:30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭವಾಯಿತು. ಕನ್ನಡದ ಧ್ವಜದೊಂದಿಗೆ ಅಲಂಕೃತಗೊಂಡಿದ್ದ ವಿಶೇಷ ತೆರೆದ ಜೀಪ್ ನಲ್ಲಿ ಸಮ್ಮೇಳನಾಧ್ಯಕ್ಷರಾದ ವಿಜಯಶ್ರೀ ಅವರನ್ನು ಮೆರವಣಿಗೆ ಮೂಲಕ ಸಾಹಿತ್ಯ ಗ್ರಾಮಕ್ಕೆ ಕರೆತರಲಾಯಿತು. ಸೂಡಾ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಜನಪದ ಕಲಾ ತಂಡಗಳು, ಕನ್ನಡದ ಮನಸ್ಸುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಸಾಹಿತ್ಯ ಗ್ರಾಮದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷೆ ವಿಜಯಶ್ರೀ ರಾಷ್ಟ್ರಧ್ವಜ, ಸಾಹಿತಿ ಎಂ.ನವೀನ್ ಕುಮಾರ್ ನಾಡಧ್ವಜ, ಕಸಾಪ ಅಧ್ಯಕ್ಷ ಡಿ.ಮಂಜುನಾಥ ಪರಿಷತ್ತಿನ ಧ್ವಜವನ್ನು ಆರೋಹಣಗೊಳಿಸಿದರು. ಜಿಲ್ಲಾ ಭಾರತ ಸೇವಾದಲ ಜಿಲ್ಲಾ ಸಂಘಟಕ ಪ್ರಸನ್ನಕುಮಾರ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಹಿಂದಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜೆ.ಕೆ.ರಮೇಶ್ ಮಾತನಾಡಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಈ.ಕಾಂತೇಶ್, ಕಾಂಗ್ರೆಸ್ ಮುಖಂಡ ರಮೇಶ್ ಶಂಕರಘಟ್ಟ, ಶಿಕಾರಿಪುರ ನಾಗರಾಜಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಉಮೇಶ್, ತಾಲ್ಲೂಕು ಕಸಾಪ ಅಧ್ಯಕ್ಷರಾದ ನಾಗರಕೊಡಿಗೆ ಗಣೇಶ್ ಮೂರ್ತಿ, ಟಿ.ಕೆ.ರಮೇಶ್ ಶೆಟ್ಟಿ, ಎಚ್.ಎಸ್.ರಘು, ಎಚ್.ತಿಮ್ಮಪ್ಪ, ವಿ.ಟಿ.ಸ್ವಾಮಿ, ಷಣ್ಮುಖಾಚಾರ್, ಕೆ.ಎಸ್.ಹುಚ್ಚರಾಯಪ್ಪ, ನರಸಿಂಹಸ್ವಾಮಿ, ಸುಧಾಮಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ಜೆ.ಕೆ.ರಮೇಶ್ ಅವರು ವಿಯಶ್ರೀ ಅವರಿಗೆ ಕಸಾಪ ಧ್ವಜವನ್ನು ಹಸ್ತಾಂತರಿಸಿದರು. ತೀರ್ಥಹಳ್ಳಿಯ ಉಮಾದೇವಿ ಉರಾಳ್ ಅವರು ಬರೆದ ‘ಒಲುಮೆಯ ಓದು’, ನಾಗರತ್ನ ಕೆ. ಎಸ್. ನಿಲ್ಸ್ ಕಲ್ ಅವರ ‘ಮುಗಿಲಧ್ವನಿ’, ಹಾಲಪ್ಪ ಎ.ಕೆ. ಅವರ ‘ಹೆಡ್ಡಪ್ಪ ಮತ್ತು ಸರ್ಕಾರಿ ಶಾಲೆ’, ಪೆÇ್ರ. ಸತ್ಯನಾರಾಯಣ ಅವರ ‘ತುಂತುರು’, ಕೆ.ಸಿದ್ದಪ್ಪ ಹಾಲಿವಾಣ ಅವರ ‘ದಾರಿದೀಪ’ ಕೃತಿಗಳು ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















