ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಇಂದು ಮತದಾನ ಪ್ರಕ್ರಿಯೆ ಕೆಲವು ಸಣ್ಣಪುಟ್ಟ ಲೋಪದೋಷ ಬಿಟ್ಟರೆ ಅತ್ಯಂತ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ.
ಸುಮಾರು 3 ಗಂಟೆಯ ವೇಳೆಗೆ ಸರಾಸರಿ ಶೇ. 50 ರಷ್ಟು ಮತದಾನವಾಗಿತ್ತು. ಬೆಳಗ್ಗಿನಿಂದಲೇ ಎಲ್ಲಾ ಬೂತ್ಗಳಲ್ಲೂ ಜನರು ಸರತಿಯ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಬಿಸಿಲಿನ ಬೇಗೆ ಇರುವುದರಿಂದ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯೊಳಗೆ ಶೇ.30ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.45ರಷ್ಟು ಮತದಾನ ನಡೆದಿತ್ತು. ಸಂಜೆಯ ವೇಳೆಗೆ ಶೇ.75ರಷ್ಟು ಮತದಾನವಾಗುವ ನಿರೀಕ್ಷೆ ಇದೆ.
ಬೈಂದೂರು, ತೀರ್ಥಹಳ್ಳಿ, ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿವಮೊಗ್ಗ ಗ್ರಾಮಾಂತರ ಸೊರಬ ಮುಂತಾದ ಕಡೆಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಶೇ. 45ರಷ್ಟು ಮತದಾನವಾಗಿತ್ತು. ಕೆಲವು ಕಡೆ ಸರತಿಯ ಸಾಲು ಉದ್ದವಿದ್ದರೆ ಮತ್ತೆ ಕೆಲವು ಕಡೆ ಸಾಧಾರಣವಾಗಿತ್ತು. ಬಹುತೇಕ ಎಲ್ಲಾ ಬೂತ್ಗಳಲ್ಲಿಯೂ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮತದಾನ ನಡೆಯುವ ಸ್ಥಳದಿಂದ 100 ಮೀ. ದೂರದಲ್ಲಿ ಎಲ್ಲಾ ಪಕ್ಷಗಳು ಮತದಾನ ಚೀಟಿ ಬರೆಯಲು ಕುಳಿತಿರುವ ದೃಶ್ಯ ಕಂಡು ಬಂದಿತ್ತು. ಆಯಾ ವ್ಯಾಪ್ತಿಯ ಮುಖಂಡರು ಮತದಾನ ಮಾಡಲು ಬರುವವರೆಗೆ ತಮ್ಮ ತಮ್ಮ ಪಕ್ಷಗಳಲ್ಲಿ ಬರುವವರೆಗೆ ಕೊನೆಯ ಬಾರಿ ಮತಹಾಕುವಂತೆ ಮನವಿ ಮಾಡುತ್ತಿರುವ ದೃಶ್ಯ ಕೂಡ ಸಾಮಾನ್ಯವಾಗಿತ್ತು.
ಆಯಾ ಪಕ್ಷದ ಕಾರ್ಯಕರ್ತರು, ಮುಖಂಡರು, ಪಕ್ಷದ ಚಿಹ್ನೆಯ ಗುರುತನ್ನು ಧರಿಸಿಕೊಂಡು ಸಂಭ್ರಮದಿಂದ ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಮತಹಾಕಲು ಇನ್ನೂ ಯಾರೂ ಬಂದಿಲ್ಲ ಎಂದು ಕೊಂಡು ತಮ್ಮ ಪರಿಚಯದವರನ್ನು ಪೋನ್ಮೂಲಕ ಕರೆಸಿಕೊಳ್ಳುತ್ತಿದ್ದರು.
ಕೆಲವು ಕಡೆ ಎವಿಎಂ ಮಿಷನ್ ಕೈಕೊಟ್ಟ ಘಟನೆಗಳು ನಡೆದವು. ಇದರಿಂದಾಗಿ ಮತದಾನ ಪ್ರಕ್ರಿಯೆ ಕೆಲವು ಕಾಲ ಮುಂದಕ್ಕೆ ಹೋಗಿತ್ತು. ಮತ್ತೆ ಕೆಲವು ಕಡೆ ಕಾರ್ಯಕರ್ತರ ಮಧ್ಯೆ ಸಣ್ಣಪುಟ್ಟ ವಾಗ್ವಾದಗಳು ಕೂಡ ನಡೆದವು. ಬಾಪೂಜೆ ನಗರದಲ್ಲಿ ಪೊಲೀಸರೊಂದಿಗೆ ಚಕಮಕಿ ನಡೆದ ಘಟನೆ ಕೂಡ ನಡೆದಿದೆ.
ಕೆಲವು ಬೂತ್ಗಳಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಮಹಿಳೆಯರಿಗಾಗಿಯೇ ಸಖಿ ಬೂತ್ನ್ನು ನಿರ್ಮಾಣ ಮಾಡಲಾಗಿತ್ತು. ಜಿ.ಪಂ.ನಲ್ಲಿ ಅರಮನೆಯಂತೆ ಶೃಂಗಾರಗೊಂಡ ಮತದಾನ ಕೇಂದ್ರದಲ್ಲಿ ಮತಹಾಕಿ ಬಂದು ರಾಜನ ರೀತಿಯ ಕಿರೀಟ ಧರಿಸಿ ಸಂಭ್ರಮಿಸಿದರು. ರವೀಂದ್ರನಗರದ ಸಖಿ ಮತಗಟ್ಟೆ ಪಿಂಕ್ ಬಣ್ಣದಲ್ಲಿ ಗಮನಸೆಳೆಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬೆಳಲಮಕ್ಕಿ ಮತಗಟ್ಟೆ ಸಂಖ್ಯೆ 76 ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರ ಮನಸೆಳೆಯಿತು.
ಜಿಲ್ಲಾ ಪಂಚಾಯತ್ ಆವರಣದಲ್ಲಿನ ಮತಗಟ್ಟೆ ಅರಮನೆಯ ಗತವೈಭವವನ್ನು ಸಾರಿದಂತೆ ರೂಪಗೊಂಡಿತ್ತು. 283ರ ಈ ಮತಗಟ್ಟೆ ಪ್ರಜಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಈ ಉದ್ದೇಶದಿಂದಲೇ ಈ ಮತಗಟ್ಟೆ ಸಿದ್ಧವಾಗಿದೆ ಎಂದು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ವಯಸ್ಸಾದವರಿಗಾಗಿಯೇ ಈ ಬಾರಿ ವ್ಹೀಲ್ ಚೇರ್ಗಳನ್ನು ಬಹುತೇಕ ಎಲ್ಲಾ ಮತಕೇಂದ್ರಗಳಲ್ಲೂ ಇಡಲಾಗಿತ್ತು. ಹಿರಿಯರು, ಅಂಗವಿಕಲರು ಇದರ ಸೌಲಭ್ಯ ಪಡೆದು ಮತಚಲಾಯಿಸಿದರು.
ಅಬ್ಬಲಗೆರೆಯ 98 ವರ್ಷದ ಶಿವಗಂಗಮ್ಮ, ಶಿಕಾರಿಪುರದ ಈಸೂರಿನಲ್ಲಿ 94 ವರ್ಷದ ಶಿವಾಚಾರ್, 78 ವರ್ಷದ ಈರಮ್ಮ ಸರತಿಯ ಸಾಲಿನಲ್ಲಿ ಬಂದು ಮತಚಲಾಯಿಸಿದರು. 70ಕ್ಕೂ ಹೆಚ್ಚು ವರ್ಷ ವಯಸ್ಸಿನ ಅನೇಕರು ಯಾರ ಸಹಾಯವು ಇಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಯುವ ಮತದಾರರು ಕೂಡ ಈ ಬಾರಿ ಅತ್ಯಂತ ಸಂಭ್ರಮದಿಂದ ಮತದಾನ ಮಾಡಿದರು. ಎಂಬಿಎ ವಿದ್ಯಾರ್ಥಿ ಸಂಜನ ಮತದಾನ ಮಾಡಿ ಮೊದಲ ಸಾರಿ ಮತದಾನ ಮಾಡಿ ನಮ್ಮ ದೇಶ ನಮ್ಮ ಹಕ್ಕು ಎಂಬ ಅಡಿಯಲ್ಲಿ ಪ್ರತಿಯೊಬ್ಬರ ಮತದಾನ ಮಾಡಬೇಕು ಎಂದರು.
ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮಧುಬಂಗಾರಪ್ಪ, ಕುಮಾರಬಂಗಾರಪ್ಪ, ಡಿ.ಹೆಚ್.ಶಂಕರಮೂರ್ತಿ, ಹರತಾಳ್ ಹಾಲಪ್ಪ, ಬೇಲೂರು ಗೋಪಾಲಕೃಷ್ಣ, ಎಸ್.ಎನ್. ಚನ್ನಬಸಪ್ಪ, ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಭಾನುಪ್ರಕಾಶ್, ಹೆಚ್.ಸಿ.ಯೋಗೀಶ್, ಹೆಚ್.ಎಸ್.ಸುಂದರೇಶ್, ಎಸ್. ರುದ್ರೇಗೌಡ, ಎಂ.ಶ್ರೀಕಾಂತ್, ಶಾರದಪೂರ್ಯನಾಯ್ಕ, ಆರ್.ಎಂ.ಮಂಜುನಾಥ್ ಗೌಡ, ಆಯನೂರು ಮಂಜುನಾಥ್, ಎಸ್.ದತ್ತಾತ್ರಿ, ಗಿರೀಶ್, ಆರ್.ಕೆ.ಸಿದ್ರಾಮಣ್ಣಾ, ವೈ.ಹೆಚ್.ನಾಗರಾಜ್ ಸೇರಿದಂತೆ ಅನೇಕೆ ರಾಜಕೀಯ ಮುಖಂಡರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕುಟುಂಬದೊಂದಿಗೆ ಮತಚಲಾಯಿಸಿದರು.
ಶುಭಂ ಹೋಟೆಲ್ನಲ್ಲಿ ಬೆಳಗ್ಗೆ 7 ಗಂಟೆಯಿಂದ 1 ಗಂಟೆಯವರೆಗೆ ಮತದಾನ ಮಾಡಿ ಬಂದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಾಲ್ಗುಡಿ ಹೋಟೆಲ್ನಲ್ಲಿ ಟೀ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಕಡೆ ಮತದಾನ ಮಾಡಿ ಬಂದವರಿಗೆ ಸಸಿಗಳನ್ನು ನೀಡಲಾಯಿತ್ತು.
Also read: ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಕಾದಿದೆ ಮುಂದೆ ಆಘಾತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ
ಅಮೇರಿಕ, ಅಸ್ಟ್ರೇಲಿಯಾ, ಕತ್ತಾರ್ ಮುಂತಾದ ಹೊರದೇಶಗಳಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು ವಿಶೇಷವಾಗಿತ್ತು. ಕೆಲವು ಕಡೆ ಮತದಾನ ಮಾಡುವವರಿಗೆ ಹೋಗಲು ಬಸ್ಗಳ ತೊಂದರೆಕೂಡ ಆಗಿದ್ದು ಗಮನಕ್ಕೆ ಬಂದಿತ್ತು.
ಈ ಬಾರಿ ಜಿಲ್ಲಾ ಹಾಗೂ ಮಹಾನಗರಪಾಲಿಕೆಯ ಆಡಳಿತದ ಸ್ವೀಪ್ ತಂಡ ಜಾಗೃತಿಯನ್ನು ಮೂಡಿಸಿತ್ತು. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಪಾಲಿಕೆ ಆಯುಕ್ತ ಮಾಯಣ್ಣಗೌಡ ವಿಶೇಷ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದು ಎದ್ದುಕಾಣುತ್ತಿದೆ.
ಒಟ್ಟಾರೆ ಕಳೆದ 40 ದಿನಗಳಿಂದ ಸುಡು ಬಿಸಿಲಿನಲ್ಲೂ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಸ್ಪರ್ಧಿಗಳು ಸೇರಿದಂತೆ ಕಾರ್ಯಕರ್ತರು ಹೈರಾಣಾಗಿ ಹೋಗಿದ್ದರು. ಚುನಾವಣೆ ಮುಗಿದರೆ ಸಾಕಪ್ಪ ಎಂದುಕೊಂಡಿದ್ದರು. ಈ ಎಲ್ಲಾ ಬಿಸಿಲು, ಅಭ್ಯರ್ಥಿಗಳ ತಲ್ಲಣ, ಚುನಾವಣೆಯ ತವಕಗಳ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಅತ್ಯಂತ ಶಾಂತಿಯುತವಾಗಿಯೇ ನಡೆದಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post