ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾನು ಸೊರಬದಲ್ಲಿ ಬಂಗಾರಪ್ಪರ ಹಾದಿಯಲ್ಲಿ ಸಾಗುವೆ. ಅವರ ಚಿಂತನೆ ಮತ್ತು ಕೆಲಸಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ, ಜನರ ಪ್ರೀತಿ-ವಿಶ್ವಾಸ ಗಳಿಸುವಂತಹ ಕೆಲಸ ಮಾಡುತ್ತೇನೆ ಎಂದು ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಮೇದುವಾರ ಮಧು ಬಂಗಾರಪ್ಪ Madhu Bangarappa ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಜನಪರ ಕೆಲಸ ಮಾಡಿದವರು. ಯಾವತ್ತೂ ಜನರೊಟ್ಟಿಗೆಯೇ ಇದ್ದವರು. ಅಂತಹವರ ಹೆಸರನ್ನು ಉಳಿಸುವ ಕೆಲಸವನ್ನು ನಾನು ಮಾಡುತ್ತೇನೆ. ನೀರಾವರಿ, ಅರಣ್ಯ ಭೂಮಿ ಸಮಸ್ಯೆ, ಬಗರ್ ಹುಕುಂ ಸಮಸ್ಯೆ ಇತ್ಯರ್ಥಕ್ಕಾಗಿ ಪಾದಯಾತ್ರೆ ಮಾಡಿದ್ದೇನೆ. ನೀರಾವರಿಯನ್ನು ಸೊರಬ ಹೊರತಾಗಿ ಪಕ್ಕ ಶಿಕಾರಿಪುರ ಕ್ಷೇತ್ರಕ್ಕೂ ಅನುಕೂಲವಾಗವಂತೆ ಮಾಡಲಾಗಿದೆ. ಅಂದು ಮಾಡಿದ ಪಾದಯಾತ್ರೆಯ ಫಲವಿದು ಎಂದರು.
ಇಂದಿನ ಬಿಜೆಪಿ ಸರಕಾರ ಯಾವ ಸಮಸ್ಯೆಯನ್ನೂ ಪರಿಹರಿಸಲಿಲ್ಲ. ಅರಣ್ಯ ಭೂಮಿ ಸಮಸ್ಯೆಯನ್ನು ಪರಿಹರಿಸದ ಕಾರಣ ಇಂದಿಗೂ ರೈತರ ಜಮೀನನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳುತ್ತಿದ್ದ್ದಾರೆ. ಇನ್ನೊಂದೆಡೆ ಬಗರ್ಹುಕುಂ ಸಮಸ್ಯೆ ಸಹ ಇತ್ಯರ್ಥವಾಗಲಿಲ್ಲ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು 15 ದಿನ, ತಿಂಗಳ ಗಡುವು ಪಡೆದರೂ ಏನನ್ನೂ ಮಾಡಲಿಲ್ಲ ಎಂದ ಮಧು, ಸೊರಬದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ತನ್ನ ಗೆಲುವು ನೂರರಷ್ಟು ಖಚಿತ. ಅಲ್ಲಿನ ನೆಲದ ಚಿಂತನೆಯನ್ನು ಮತ್ತೆ ಬೆಳೆಸುತ್ತೇನೆ ಎಂದರು.
Also read: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಅಶೋಕನಾಯ್ಕ ಅವರ ಗೆಲುವು ಖಚಿತ: ಬಿ.ಎಸ್. ಯಡಿಯೂರಪ್ಪ
ತಾನು ಕಾಂಗ್ರೆಸ್ ಸೇರಿದ ಮೇಲೆ ಮಹತ್ವದ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಹಿಂದುಗಳಿದ ವಿಭಾಗಗಳ ರಾಜ್ಯಾಧ್ಯಕ್ಷನನ್ನಾಗಿ ಮತ್ತು ಪ್ರಣಾಳಿಕೆ ಸಮಿತಿಯ ಸದಸ್ಯನನ್ನಾಗಿ ಮಾಡಿದೆ. ಇದರ ಜೊತೆಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಗೆಲ್ಲಿಸುವ ಕೆಲಸವಿದೆ. ಕಾಂಗ್ರೆಸ್ ಪರ ಶೇ. 80ರಷ್ಟು ಹಿಂದುಳಿದವರಿದ್ದಾರೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಜೊತೆಗೆ ಸರಕಾರ ರಚನೆಯಾಗುವಂತೆ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಡಿದೆ. ಕಾಂಗ್ರೆಸ್ ಸಂಘಟನೆ ಈಗ ಉತ್ತಮವಾಗಿದೆ. ಡಿ ಕೆ ಶಿವಕುಮಾರ್ ಅಧ್ಯಕರಾದ ನಂತರ ಚುರುಕಿನಿಂದ ಪಕ್ಷ ಚಿಗುರುತ್ತಿದೆ. ಅನೇಕರು ಪಕ್ಷ ಸೇರುತ್ತಿದ್ದ್ದಾರೆ. ಬಿಜೆಪಿಯು ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡೀದ್ದು, ಬಹುತೇಕ ಭರವಸೆಯನ್ನು ಈಡೇರಿಸದೇ ಇರುವುದು ಜನರಿಗೆ ಗೊತ್ತಿದೆ. ಇವೆಲ್ಲವೂ ಬಿಜೆಪಿಗೆ ಮುಳುವಾಗಲಿದೆ. ಕಾಂಗ್ರೆಸ್ ಈ ಬಾರಿ ಕರ್ನಾಟಕದ ಐದು ಭಾಗಗಳಿಗೆ ಪ್ರತ್ಯೇಕ ಪ್ರಣಾಳಿಕೆ ರೂಪಿಸಿದೆ. ನಾಲ್ಕಾರು ಪ್ರಮುಖ ಭರವಸೆಯನ್ನ ಈಗಾಗಲೇ ಘೋಷಿಸಿದೆ. ಇವೆಲ್ಲವೂ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನುಷ್ಠಾನವಾಗಲಿದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post