ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆಗೆ ಸಂಬಂಧಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ Minister B C Patil ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸರ್ಕಾರವು ಸಬ್ಸಿಡಿ ದರದಲ್ಲಿ ನೀಡುವ ಬೇವು ಲೇಪಿತ ಯೂರಿಯಾವನ್ನು ಸುಳ್ಳು ದಾಖಲೆ ನೀಡಿ ರೈತರ ಹೆಸರಿನಲ್ಲಿ ಖರೀದಿಸಲಾಗುತ್ತಿದೆ. ಹೀಗೆ 45 ಕೆಜಿ ತೂಕದ ರಸಗೊಬ್ಬರ ಚೀಲಗಳನ್ನು ಒಂದಕ್ಕೆ 266 ರೂಪಾಯಿಗೆ ಖರೀದಿಸಿ ಅಕ್ರಮ ದಾಸ್ತಾನು ಮಾಡಲಾಗುತ್ತಿದೆ. ಅವುಗಳ ಚೀಲವನ್ನು ಬದಲಿಸಿ, ಸುಮಾರು 1600 ರೂಪಾಯಿಗೆ ಹೊರರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡಿ ಭಾರೀ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಾಜ್ಯ ರೈತರಿಗೆ ರಸಗೊಬ್ಬರದ ಅಭಾವ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ರಸಗೊಬ್ಬರ ದಂಧೆಯು ಅವ್ಯಾಹತವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕೇವಲ ಸಣ್ಣಪುಟ್ಟ ಅಧಿಕಾರಿಗಳ ವಿರುದ್ಧ ನಾಮಕಾವಸ್ಥೆಗೆ ದೂರು ದಾಖಲಿಸಿಕೊಂಡು ಹಗರಣವನ್ನು ಮುಚ್ಚಿ ಹಾಕಲು ಸರ್ಕಾರ ಮುಂದಾಗಿದೆ. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಬಿ.ಸಿ. ಪಾಟೀಲ್ ವಿರುದ್ಧ ತನಿಖೆ ನಡೆಸಿದರೆ ಬಹುಕೋಟಿ ಹಗರಣವು ಬೆಳಕಿಗೆ ಬರಲಿದೆ ಎಂದು ಹೇಳಿದೆ.
Also read: ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸೂಕ್ತ ಕ್ರಮ: ವಿಜಯೇಂದ್ರ ಹೇಳಿಕೆ
ಕರ್ನಾಟಕದ ರೈತರಿಗೆ ಸಬ್ಸಿಡಿ ದರದಲ್ಲಿ ಸಿಗಬೇಕಾದ ರಸಗೊಬ್ಬರವು ನೆರೆ ರಾಜ್ಯಗಳು ಮಾತ್ರವಲ್ಲದೇ ನೇಪಾಳ ಹಾಗೂ ಬಾಂಗ್ಲಾದೇಶಕ್ಕೂ ಅಕ್ರಮವಾಗಿ ಮಾರಾಟವಾಗುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಸಚಿವರ ಕೈವಾಡವಿಲ್ಲದೇ ಇಷ್ಟು ದೊಡ್ಡಮಟ್ಟದ ಅಕ್ರಮ ನಡೆಯಲು ಸಾಧ್ಯವೇ ಇಲ್ಲ. ರಸಗೊಬ್ಬರ ಕಳ್ಳಸಾಗಣೆ ಮಾಡುವವರಿಂದ ರಾಜ್ಯ ಬಿಜೆಪಿ ಸರ್ಕಾರವು ಎಷ್ಟು ಕಮಿಷನ್ ಪಡೆಯುತ್ತಿದೆ ಎಂಬುದು ಜನರಿಗೆ ತಿಳಿಯಬೇಕಾದರೆ ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒತ್ತಾಯಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post