ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
“ಯತ್ರ ಗೀಯತೇ ಹರಿಃ ತತ್ರ ತಿಷ್ಠಂತಿ ದೇವತಾಃ।
ಭಕ್ತಜನಸಮಾಕೀರ್ಣಂ ತದ್ ಸ್ಥಾನಂ ತೀರ್ಥಸಮ್ಮತಮ್॥” ಅಂದರೆ ಎಲ್ಲಿ ಹರಿಯ ಗಾನ ಮೊಳಗುವುದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ; ಭಕ್ತರಿಂದ ತುಂಬಿದ ಆ ಸ್ಥಾನ ತೀರ್ಥಕ್ಷೇತ್ರಕ್ಕೆ ಸಮಾನ. ಎಂಬ ಶ್ಲೋಕದಂತೆ ಶಿವಮೊಗ್ಗದ ಕುವೆಂಪು ರಂಗಮಂದಿರವು ಒಂದು ಅವಿಸ್ಮರಣೀಯ ಸಂಜೆಗೆ ಸಾಕ್ಷಿಯಾಯಿತು. ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ “ನಾಮಾಮೃತ” ಭಕ್ತಿ ಗಾನ ಸಂಭ್ರಮ ನಿರೀಕ್ಷೆಯನ್ನೂ ಮೀರಿ ಅದ್ಭುತ ಯಶಸ್ಸು ಕಂಡಿತು. ಸಂಜೆ 5:30ರ ವೇಳೆಗಾಗಲೇ ರಂಗಮಂದಿರದ ಪ್ರತಿ ಆಸನವೂ ಭರ್ತಿಯಾಗಿ, ಸಂಗೀತಾಸಕ್ತರು ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ ಅವರ ಅಭಿಮಾನಿಗಳು ತುಂಬಿ ತುಳುಕುತ್ತಿದ್ದರು.
“ಯಸ್ಯ ಕಂಠಾತ್ ಪ್ರವಹತಿ ಭಕ್ತಿಗಂಗಾ ಸರಸ್ವತೀ।
ಶ್ರೋತೃಚಿತ್ತಂ ಪ್ರಸನ್ನಂ ಸ್ಯಾತ್ ಈಶ್ವರಾನುಗ್ರಹೋ ಹಿ ಸಃ॥” ಅಂದರೆ ಯಾರ ಕಂಠದಿಂದ ಭಕ್ತಿ ಗಂಗೆ ಸರಸ್ವತಿಯಂತೆ ಹರಿಯುವಳೋ, ಆ ಗಾಯನದಿಂದ ಶ್ರೋತೃಗಳ ಮನ ಪ್ರಸನ್ನಗೊಳ್ಳುವುದು ಇದು ಈಶ್ವರನ ಅನುಗ್ರಹವೇ ಸರಿ ಎಂಬ ಶ್ಲೋಕದಂತೆ ಮುಖ್ಯ ಗಾಯಕಿಯಾದ ಶ್ರೀಮತಿ ಶಿವಶ್ರೀ ತೇಜಸ್ವಿ ಸೂರ್ಯ ಅವರು ತಮ್ಮ ಮಧುರ ಕಂಠದಿಂದ ಭಜನೆ ಮತ್ತು ಭಕ್ತಿ ಗೀತೆಗಳನ್ನು ಹಾಡಿ ಇಡೀ ರಂಗಮಂದಿರವನ್ನು ಭಾವಪರವಶಗೊಳಿಸಿದರು. ಪ್ರತಿ ಗೀತೆಯೂ ಶ್ರೋತೃಗಳ ಹೃದಯ ತಟ್ಟಿ, ಕಣ್ಣಾಲಿಗಳನ್ನು ತೇವಗೊಳಿಸಿತು. ಸಹ ಗಾಯನದಲ್ಲಿ ಅವರ ತಂದೆಯಾದ ಹಿರಿಯ ಕಲಾವಿದ ಶ್ರೀ ಜೆ. ಸ್ಯಂದ ಪ್ರಸಾದ್ ಹಾಗೂ ವಿನಯ್ ಶಿವಮೊಗ್ಗ ಅವರ ಅನುಭವ ಪೂರ್ಣ ಸ್ವರ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು. ಅಲ್ಲದೇ ಶಿವಶ್ರೀ ತಾವೊಬ್ಬರೇ ಹಾಡದೇ ಅಲ್ಲಿದ್ದವರನ್ನು ಒಳಗೊಳ್ಳುವಂತೆ ಮಾಡಿದ್ದು, ಎಲ್ಲರೂ ನಾಮ ಸ್ಮರಣೆ ಮಾಡಿ ಪುನೀತಭಾವ ಅನುಭವಿಸಿದ್ದು ಬೇರೆಯ ಲೋಕಕ್ಕೆ ಕೊಂಡೋಯ್ದ ಭಾವ ತಂದಿತು.
ವಾದ್ಯ ವೃಂದದ ಮಾಂತ್ರಿಕ ಸ್ಪರ್ಶ
“ತಾಲಲಯಸಮಾಯುಕ್ತಂ ವಾದ್ಯಗೀತಂ ಮನೋಹರಮ್ ಎಂದು ಕೇಳಿರುವ ಶ್ಲೋಕ ನೆನಪಾಯಿತು. ತಾಳ-ಲಯಗಳಿಂದ ಕೂಡಿದ ವಾದ್ಯ ಗೀತ ಎಷ್ಟು ಮನೋಹರವಾಗಿದೆಯೆಂದರೆ ದೇವತೆಗಳೇ ಆನಂದಿಸುತ್ತಾರೆ, ಮಾನವರ ಮಾತೇನು? ಎಂಬ
ಶ್ರೀ ಗೌರವ್ ಗಡಿಯಾರ್ ಅವರ ಹಾರ್ಮೋನಿಯಂ, ಶ್ರೀ ಅನಿರುದ್ಧ್ ಭಟ್ ಅವರ ಮೃದಂಗ ಮತ್ತು ಮಾಸ್ಟರ್ ಅಲ್ಲ ಪಂಡಿತ್ ಪ್ರದ್ಯುಮ್ನ ಕರ್ಪುರ್ ಅವರ ತಬಲಾ ವಾದನ ಕಾರ್ಯಕ್ರಮಕ್ಕೊಂದು ಅದ್ಭುತ ಲಯ ಮತ್ತು ತಾಳ ನೀಡಿದವು. ಮೂವರ ಸಮ್ಮಿಳಿತ ವಾದನ ಗಾಯನಕ್ಕೆ ಜೀವ ತುಂಬಿ ನಿಜವಾದ ಸಾಥ್ ನೀಡಿ ಇಡೀ ಸಭಾಂಗಣ ಭಕ್ತಿ ಲಹರಿಯಲ್ಲಿ ತೇಲಾಡುವಂತೆ ಮಾಡಿತು.
ಜನ ಸಾಗರ — ಭಕ್ತಿಯ ಹೊನಲು
ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡ ಈ ಭಕ್ತಿ ಗಾನ ಸಂಭ್ರಮಕ್ಕೆ ಜನರ ಸ್ಪಂದನ ಅಭೂತಪೂರ್ವವಾಗಿತ್ತು. ವಿವಿಧ ವಯೋಮಾನದವರು ಆಗಮಿಸಿ ಉಚಿತ ಪ್ರವೇಶದ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ರಂಗಮಂದಿರ ತುಂಬಿ ತುಳುಕಿದ ದೃಶ್ಯ ಆಯೋಜಕರ ಪರಿಶ್ರಮಕ್ಕೆ ಸಿಕ್ಕ ಅತ್ಯುತ್ತಮ ಪ್ರತಿಫಲವಾಯಿತು.
ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಮತ್ತು ಪಂಚತಾರ ಐಸ್ಕ್ರೀಮ್ಸ್ ಪಾರ್ಲರ್ ಅವರ ಸಂಯುಕ್ತ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮ, ಸಮಾಜಕ್ಕೆ ಸಂಸ್ಕೃತಿ-ಭಕ್ತಿಯ ಕೊಡುಗೆ ನೀಡುವ ಟ್ರಸ್ಟ್ನ ಉದಾತ್ತ ಧ್ಯೇಯಕ್ಕೆ ಪ್ರತ್ಯಕ್ಷ ನಿದರ್ಶನವಾಗಿ ನಿಂತಿತು.
ಈ ಕಾರ್ಯಕ್ರಮದಲ್ಲಿ ಮತ್ತೊಂದು ಗಮನಿಸಿದ ಅಂಶ ಎಂದರೆ ಚುಟುಕಾದ ಸಭಾ ಕಾರ್ಯಕ್ರಮ ಹಾಗೂ “ಭಕ್ತಿಗಾನ ವಾರಿಧಿ” ಎಂಬ ಬಿರುದು ಶ್ರೀಮತಿ ಶಿವಶ್ರೀಯವರಿಗೆ ನೀಡಿದ್ದು, ಕಾರ್ಯಕ್ರಮದ ರಸಾಸ್ವಾದಾನೆಗೆ ಭಂಗ ಬರದಂತೆ ಆಯೋಜಕರು ನಿಗಾ ವಹಿಸಿದ್ದನ್ನು ಖಂಡಿತವಾಗಿಯೂ ಶ್ಲಾಘಿಸಲೇ ಬೇಕು.
“ಸಫಲಂ ತಸ್ಯ ಜೀವಿತಂ ಯಃ ಭಕ್ತ್ಯಾ ಗಾಯತಿ ಈಶ್ವರಮ್।
ಸಫಲಂ ತಸ್ಯ ಶ್ರವಣಂ ಯೋ ಭಕ್ತಿಗೀತಂ ಶೃಣೋತಿ ಚ॥” ಎನ್ನುವ ಸಾರ್ಥಕ ಭಾವ ಮೂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
