ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅವ್ವ ಮಕ್ಕಳಿಗೆ ಕೊಡುವ ಸಂಸ್ಕಾರ, ಮಾನವೀಯತೆಯ ಸಂಸ್ಕಾರ, ಅದು ವಿದ್ಯೆಗಿಂತಲೂ ಮಿಗಿಲಾದುದು. ಜೀವನಕ್ಕೆ ಬೇಕಾಗಿರುವ ಈ ಸಂಸ್ಕಾರವನ್ನು ನೀಡಿದ ತಂದೆ-ತಾಯಿಯರನ್ನು ವಿದ್ಯೆ ಪಡೆದು ನೌಕರಿ ಪಡೆಯುವವರು ಮರೆಯಬಾರದು ಎಂದು ಕಾಚಿಕೊಪ್ಪ ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಮಹೇಶ್ವರಪ್ಪ ಹೇಳಿದರು.
ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಗ್ರಾಮೀಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ನೌಕರಿಗಾಗಿ ಹಳ್ಳಿಬಿಟ್ಟು ಪಟ್ಟಣ ಸೇರುವ ಹಲವರಿರುತ್ತಾರೆ. ಆದರೆ ಜೀವನ ಪಾಠ ಕಲಿಸಿದ ಊರು, ಸಂಸ್ಕಾರ ಕಲಿಸಿದ ತಾಯಿಯನ್ನು ಮರೆತು, ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಆಧುನಿಕತೆಗೆ ಮಾರು ಹೋಗಬೇಡಿರಿ ಎಂದು ಅವರು ಕಿವಿಮಾತು ಹೇಳಿದರು.
ಆಯನೂರು ಬಳಿಯ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಿಕೊಪ್ಪ ಎಂಬ ಗ್ರಾಮದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಗ್ರಾಮೀಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು ಮಂಡಘಟ್ಟ ಗ್ರಾಮಪಂಚಾಯಿತಿಯ ಅಧ್ಯಕ್ಷೆ ಗಿರಿಜಮ್ಮನವರು ದೀಪ ಬೆಳಗಿಸಿ ಉದ್ಘಾಟಿಸಿದರು.
Also read: ಹುಲಿ ಮೃತದೇಹ ಪತ್ತೆ | ಸಮಗ್ರ ತನಿಖೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ಈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಮಂಡಘಟ್ಟ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರೇಷ್ಮಾ ಸಂತೋಷ್ ಮಾತನಾಡಿ, ಕಾಚಿಕೊಪ್ಪ ಗ್ರಾಮದ ಗ್ರಾಮಸ್ಥರು ಯಾವುದೇ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಾಗೂ ಪ್ರೀತಿಯಿಂದ ನಡೆಸಿಕೊಡುತ್ತಾರೆ. ಆದುದರಿಂದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೂ, ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಯ ಸದಸ್ಯರಾದ ಕಾಚಿಕೊಪ್ಪದ ಶಿವಕುಮಾರ್ ರವರು ಇಂದಿನ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನವನ್ನು ಅನುಭವಿಸುವ ಅವಕಾಶ ನೀಡಬೇಕಾದುದು ಹಿರಿಯರ ಕರ್ತವ್ಯವಾಗಿದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಶಿಬಿರಕ್ಕಾಗಿ ಈ ಗ್ರಾಮವನ್ನು ಆಯ್ಕೆ ಮಾಡಿರುತ್ತಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದು ಹೇಳಿದರು.
ಮಾನಸ ಟ್ರಸ್ಟ್ನ ಡಾ ರಾಜೇಂದ್ರ ಚೆನ್ನಿಯವರು ಮಾತನಾಡುತ್ತಾ ಕಾಚಿಕೊಪ್ಪದ ಗ್ರಾಮಸ್ಥರು ಆದರದಿಂದ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ, ಗ್ರಾಮಗಳಿಂದ, ಪಟ್ಟಣಗಳಿಂದ ಬಂದಿರುವ ವಿದ್ಯಾರ್ಥಿಗಳು ಈ ಕಾಚಿಕೊಪ್ಪದ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ಒಂದು ಸಾಂಸ್ಕೃತಿಕ ಸಮ್ಮಿಲನವಾಗುತ್ತದೆ. ಹಿಂದಿನಿಂದ ಇಂದಿನವರೆಗೂ ನಡೆಯುತ್ತಿರುವ ಭಾರತದ ಕೋಮುಗಲಭೆಗಳಾವುವು ಗ್ರಾಮಗಳಲ್ಲಿ ನಡೆದಿಲ್ಲ ಎಂಬುದನ್ನು ನಾವು ಗಮನಿಸಿದರೆ, ಗ್ರಾಮಗಳೇ ನಿಜವಾದ ಸಾಮರಸ್ಯದ ಬದುಕಿನ ಪಾಠಕಲಿಸುವ ಪಾಠಶಾಲೆಗಳು ಎನ್ನಬಹುದು. ಆದುದರಿಂದ ಎನ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಅನುಭವ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ಘಟಕಗಳು ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕಾಚಿಕೊಪ್ಪ ಗ್ರಾಮದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.
ಶಿಬಿರದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ ಸುಕೀರ್ತಿಯವರು 7 ದಿನಗಳ ಕಾರ್ಯಕ್ರಮಗಳ ರೂಪುರೇಷೆಯನ್ನು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಊರ ಮುಖಂಡರಾದ ರೇಣುಕಪ್ಪ, ಶ್ರೀ ನಾಗರಾಜಪ್ಪ ಕಾಲೇಜಿನ ಕಾರ್ಯಕ್ರಮಾಧಿಕಾರಿ ರಾಬರ್ಟ್ ರಾಯಪ್ಪ ಉಪಸ್ಥಿತರಿದ್ದರು. ಶಿಬಿರಾರ್ಥಿ ಶಂಕರ್ ಸ್ವರೂಪ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳು ಪ್ರಾರ್ಥನೆಯನ್ನು ಹಾಗೂ ಎನ್ಎಸ್ಎಸ್ ಗೀತೆಯನ್ನು ಹಾಡಿದರು. ಸಹಶಿಬಿರಾಧಿಕಾರಿ ಮೋಹನ್ಕುಮಾರ್ ಎಲ್ಲರನ್ನು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post