ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವ್ಯಕ್ತಿಯೋರ್ವರ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ, ಅವರ ಪುತ್ರನನ್ನು ಅಪಹರಿಸಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದವನಿಗೆ, ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಗ್ರಾಮದ ನಿವಾಸಿ ಬಸವರಾಜಪ್ಪ (40) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. 16-08-2023 ರಂದು ನ್ಯಾಯಾಧೀಶರಾದ ಬಿ. ಆರ್. ಪಲ್ಲವಿ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ಅವರು ವಾದ ಮಂಡಿಸಿದ್ದರು.
ಘಟನೆ ಹಿನ್ನಲೆ:
ಶಿವಮೊಗ್ಗದ ಆಲ್ಕೋಳದ ನಿವಾಸಿ ನಿಂಗರಾಜು ಎಂಬವರೊಂದಿಗೆ ಶಿಕ್ಷೆಗೊಳಗಾದ ಅಪರಾಧಿ ಬಸವರಾಜಪ್ಪಗೆ ಹಳೇಯ ವೈಷಮ್ಯವಿತ್ತು. ಈ ಕಾರಣದಿಂದ ನಿಂಗರಾಜು ಅವರ 8 ವರ್ಷದ ಪುತ್ರ ಪ್ರೇಮ್ ಕುಮಾರನನ್ನು, 02-03-2017 ರಂದು ಆಲ್ಕೋಳದಿಂದ ಬಸವರಾಜಪ್ಪನು ಕಿಡ್ನ್ಯಾಪ್ ಮಾಡಿದ್ದ.
Also read: ಎಂಟೂವರೆ ವರ್ಷದ ಬಾಲಕ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಣೆ: ಹಲವು ವೈಶಿಷ್ಟ್ಯಗಳಿಗೆ ನಾಂದಿ
ನಂತರ ಶಿಕಾರಿಪುರದ ಚುರ್ಚಿಗುಂಡಿ ಗ್ರಾಮಕ್ಕೆ ಬಾಲಕನ್ನು ಕರೆತಂದಿದ್ದ. ಸಮೀಪದ ಕುಮದ್ವತಿ ನದಿಗೆ ಕರೆದೊಯ್ದು, ನೀರಿನಲ್ಲಿ ಮುಳುಗಿಸಿ ಬಾಲಕನನ್ನು ಕೊಲೆ ಮಾಡಿದ್ದ. ಈ ಕುರಿತಂತೆ ಮೃತ ಬಾಲಕನ ತಂದೆ ನಿಂಗರಾಜು ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪೊಲೀಸರು ಐಪಿಸಿ ಕಲಂ 363, 302, 201 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ದೊಡ್ಡಪೇಟೆ ಠಾಣೆ ವೃತ್ತದ ಸರ್ಕಲ್ ಇನ್ಸ್’ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post