ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿಗೆ ಕೇಂದ್ರದ ನರೇಂದ್ರ ಮೋದಿ #NarendraModi ನೇತೃತ್ವದ ಬಿಜೆಪಿ #BJP ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ್ದು, ಪ್ರತಿ 5 ಲೋಕಸಭೆ ಹಾಗೂ 5 ವಿಧಾನಸಭಾ ಸ್ತರದಲ್ಲಿ ವಿಶೇಷವಾಗಿ ಆಚರಣೆ ಮಾಡಲು ರಾಷ್ಟ್ರೀಯ ಸಂಘಟನೆ ತೀರ್ಮಾನಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಆರ್ಟಿಕಲ್ 370 #Article370 ರದ್ದು, ರಾಮಮಂದಿರ ನಿರ್ಮಾಣ, ತ್ರಿಬಲ್ ತಲಾಖ್, ಹನ್ನೊಂದು ಕೋಟಿ ಶೌಚಾಲಯ ನಿರ್ಮಾಣ, ಕೊರೋನಾದಲ್ಲಿ ಎರಡು ವರ್ಷಗಳ ಕಾಲ ದೇಶದ ಜನರಿಗೆ ಆರೋಗ್ಯ ರಕ್ಷಣೆ ಮಾಡಿ ಇನ್ನೂರು ಕೋಟಿ ವ್ಯಾಕ್ಷಿನೇಷನ್ ಸೇರಿದಂತೆ ಮಹತ್ತರ ಸಾಧನೆ ಮಾಡಿ ವಿಶ್ವ ನಾಯಕ ಎನಿಸಿಕೊಂಡಿದ್ದಲ್ಲದೆ ಅಭಿವೃದ್ಧಿಯಲ್ಲೂ ವೇಗದ ಮುನ್ನಡೆ ಸಾಧಿಸಿದೆ ಎಂದರು.
ಮೇ 30ರ ಇಂದಿನಿಂದ ಜೂನ್ 30ರವರೆಗೆ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ವಾರ್ಡ್ಗಳಲ್ಲಿ ಕನಿಷ್ಟ 250 ಜನರ ಭೇಟಿ ಮಾಡಿ ಅವರನ್ನು ಸಂಪರ್ಕಿಸಿ ಸರ್ಕಾರದ ಬಗ್ಗೆ ಮಾಹಿತಿ ಪಡೆಯುವ ಸಂಪರ್ಕ ಸಮರ್ಥನಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2000ಕ್ಕೂ ಹೆಚ್ಚು ಕೀ ವೋಟರ್ಗಳನ್ನು ಸೇರಿಸಿ ಸಮಾವೇಶ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಕೇಂದ್ರದ ಓರ್ವ ಮಂತ್ರಿ ಹಾಗೂ ರಾಜ್ಯದ ಮುಖಂಡರು ಭಾಗವಹಿಸುತ್ತಾರೆ. ಕೇಂದ್ರದ ಪ್ರಾಯೋಜಿತ ಯೋಜನೆಗಳ ಬಗ್ಗೆ ವಿಚಾರ ವಿನಿಮಯ, ಅಭಿವೃದ್ಧಿ ಕಾರ್ಯಗಳ ಸ್ಥಳ ವೀಕ್ಷಣೆ ಮತ್ತು ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದರ ಮೂಲಕ ಸಂವೇದನಾ ವಿಕಾಸ ಯಾತ್ರೆ ನಡೆಸಲಾಗುವುದು ಎಂದರು.
ವ್ಯಾಪಾರಿಗಳ ಸಮಾವೇಶ ಮಾಡಿ ಸಂವಾದ ಏರ್ಪಡಿಸಿ ಅವರಿಗೆ ಸುಗಮ ಕಾರ್ಯಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹ ಮಾಡುವುದು. ಎಲ್ಲಾರೂ ಒಟ್ಟಾಗಿ ಮನೆಮನೆಗೆ ಭೇಟಿ ಮಾಡುವ ಕಾರ್ಯಕ್ರಮವನ್ನು ಕೂಡ ಈ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದರು.
ವಿಧಾನ ಸಭಾ ಮಟ್ಟದಲ್ಲಿ ಬಿಜೆಪಿಯ ಹರಿಯ ಕಾರ್ಯಕರ್ತರು ಮತ್ತು ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ ಅವರ ಸಲಹೆ ಪಡೆಯುವುದು, ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡುವುದು,ಬಿಜೆಪಿಯಲ್ಲಿ ಎಲ್ಲಾ ಮೋರ್ಚಾಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲಾ ಮೋರ್ಚಾಗಳ ಸಂಯುಕ್ತ ಸಮಾವೇಶ ಹಮ್ಮಿಕೊಳ್ಳುವುದು. ಜೂನ್ 21ರಂದು ಅಂತರಾಷ್ಟ್ರೀಯ ಯೋಗದಿನವಾಗಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳು ಮತ್ತು ಯೋಗ ಸಂಸ್ಥೆಗಳೊಂದಿಗೆ ಜೊತೆಯಾಗಿ ಯೋಗ ದಿನಾಚರಣೆ ಆಚರಿಸುವುದು ಎಂದರು.
ಜೂ. 23ರಂದು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನದ ದಿನವಾಗಿದ್ದು, ಪ್ರಧಾನಿ ಮೋದಿಯವರು ಡಿಜಿಟಲ್ ರ್ಯಾಲಿ ಹಮ್ಮಿಕೊಂಡಿದ್ದು, ಬೂತ್ ಮಟ್ಟದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಸಿ ಅಥವಾ ದೊಡ್ಡ ಮನೆಗಳಲ್ಲಿ ಎಲ್ಲರೂ ಸೇರಿ ವೀಕ್ಷಣೆ ಮಾಡುವುದು. ಜೂ.25ರಂದು ತುರ್ತು ಪರಿಸ್ಥಿತಿ ಹೇರಿದ ಕರಾಳ ದಿನವಾಗಿದ್ದು ಈ ದಿನದಂದು ತುರ್ತು ಪರಿಸ್ಥಿತಿಯ ಸಂದರ್ಭದ ಅವಲೋಕನ ಮಾಡುವುದು. ಜೂ.23ರಿಂದ 30ರ ವರೆಗೆ ಸಾಧನೆ ಮತ್ತು ಸರ್ಕಾರದ ಭರವಸೆಯ ವಿಷಯಗಳನ್ನು ಕರಪತ್ರಗಳ ಮೂಲಕ ಹಂಚಿಕೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 30 ದಿನದ ಈ ಕಾರ್ಯಕ್ರಮದ ಜಿಲ್ಲಾ ಸಂಚಾಲನಾ ತಂಡವನ್ನು ಈಗಾಗಲೇ ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಪಟೇಲ್, ಡಾ. ಧನಂಜಯ ಸರ್ಜಿ, ಹರಿಕೃಷ್ಣ, ಶಿವರಾಜ್, ಬಿ.ಕೆ. ಶ್ರೀನಾಥ್, ಅಶೋಕ ಮೂರ್ತಿ, ಎನ್.ಡಿ. ಸತೀಶ್, ವಿನ್ಸೆಂಟ್,ಪ್ರಶಾಂತ್ ಪಂಡಿತ್, ಅಣ್ಣಪ್ಪ ಮೊದಲಾದವರಿದ್ದರು.
Discussion about this post