ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಂತ್ರಜ್ಞಾನ ಬಳಕೆಯಿಂದ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಬಹುದಾಗಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಆಧುನಿಕ ನವೀಕೃತ ತಂತ್ರಜ್ಞಾನ ಬಳಕೆಯ ಕಲಿಕೆ ಅಗತ್ಯ ಎಂದು ಸುಬ್ಬಯ್ಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಥಮ ಬಾರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳ, ಶೈಕ್ಷಣಿಕ ಚಟುವಟಿಕೆ ಆರಂಭದ ಹಿನ್ನೆಲೆಯಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪೂರಕವಾದ ವೈದ್ಯಕೀಯ ಉಪಕರಣಗಳು, ತಂತ್ರಜ್ಞಾನದಲ್ಲಿ ಮುಂದಿರುವ ಯಂತ್ರಗಳು, ಶೈಕ್ಷಣಿಕವಾಗಿ ಬೆಳೆಯಲು ಅವಶ್ಯವಾದ ಪರಿಸರವನ್ನು ಸಂಸ್ಥೆ ಒದಗಿಸಿದೆ. ಭಾರತದಲ್ಲಿಯೇ ಅತ್ಯುತ್ತಮ ದಂತ ವೈದ್ಯಕೀಯ ಕಾಲೇಜನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಸ್ನಾತಕೋತ್ತರ ವಿದ್ಯಾರ್ಥಿಗಳಾಗಿ ದಾಖಲಾಗಿರುವ ಮೊದಲ ಬ್ಯಾಚ್ ನೀವುಗಳು. ಸಂಸ್ಥೆಯು ಯಶಸ್ಸು ಕಾಣಬೇಕಾದರೆ ವಿದ್ಯಾರ್ಥಿಗಳು ಯಶಸ್ವಿ ವೈದ್ಯರಾಗಿ ಸಮಾಜದ ಎಲ್ಲ ವರ್ಗದವರ ಸೇವೆ ಮಾಡುವಂತಾಗಬೇಕು. ದಂತ ವೈದ್ಯಕೀಯ ಕಾಲೇಜಿನಲ್ಲಿರುವ ಅನುಭವಿ ಪ್ರಾಧ್ಯಾಪಕ ವೃಂದವನ್ನು ಬಳಸಿಕೊಂಡು ಶ್ರೇಷ್ಠ ಗುಣಮಟ್ಟದ ವಿದ್ಯಾಭ್ಯಾಸ ನಡೆಸಿ, ರೋಗಿಗಳನ್ನು ಶಿಕ್ಷಿತರನ್ನಾಗಿ ಮುಂದಿನ ಪೀಳಿಗೆಯ ವೈದ್ಯಕೀಯ ವಿದ್ಯಾರ್ಥಿಗಳಿಗೂ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ಬಿ.ಎಸ್. ಮಾತನಾಡಿ, ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನದಲ್ಲಿ ಸರಿಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಕಲಿಯಲು ಸಾಕಷ್ಟು ವಿಷಯಗಳಿವೆ. ಸಂಸ್ಥೆಯ ಶಿಸ್ತಿಗೆ ತುಂಬ ಮಹತ್ವವನ್ನು ನೀಡುತ್ತದೆ. ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಬೇಕು. ಶಿಕ್ಷಣ ನೀಡುವ ಪ್ರಾಧ್ಯಾಪಕರಿಗೆ ಗೌರವ ನೀಡಬೇಕು ಎಂದರು.
ಕಾಲೇಜಿನ ಆವರಣದಲ್ಲಿ ರ್ಯಾಗಿಂಗ್ ರೀತಿಯ ಯಾವುದೇ ಕುಕೃತ್ಯವನ್ನು ನಡೆಸಕೂಡದು. ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ಅವಶ್ಯ ಸಹಾಯ, ಸಹಕಾರ ನಮ್ಮ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಸದಾ ಸೇವೆ ನೀಡಲು ಸಿದ್ಧವಾಗಿರುತ್ತದೆ. ಈ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ವೈದ್ಯರಾಗಿ ಜೀವನದಲ್ಲಿ ಯಶಸ್ಸು ಗಳಿಸಿ ಎಂದು ಕರೆ ನೀಡಿದರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್, ಉಪಪ್ರಾಂಶುಪಾಲ ಡಾ.ಮಿಥುನ್, ಡಾ.ಮಂಜುನಾಥ್ ಬಡ್ನಿ, ಡಾ.ಸುಮ, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post