ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕಾರ್ಖಾನೆ ಉಳಿಸಲು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿರುವ ಬೆನ್ನಲ್ಲೇ ಇನ್ನೊಂದೆಡೆ ನಿವೃತ್ತ ಕಾರ್ಮಿಕರಿಗೆ ವಸತಿ ಗೃಹಗಳನ್ನು ಶಾಶ್ವತವಾಗಿ ಉಳಿಸಿಕೊಡುವ ಸಲುವಾಗಿ ಪತ್ರದ ಮೂಲಕ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಗುತ್ತಿದೆ.
ಕಾರ್ಖಾನೆಯಲ್ಲಿ ಸುಮಾರು 30-40 ವರ್ಷ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ಕಾರ್ಮಿಕರು ತಮಗೆ ಬಂದ ನಿವೃತ್ತಿ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಯಾವುದೇ ಸ್ವಂತ ಸೂರಿಲ್ಲದ ಬಹುತೇಕ ನಿವೃತ್ತ ಕಾರ್ಮಿಕರು ಲಕ್ಷಾಂತರ ರೂ. ವೆಚ್ಚದಲ್ಲಿ ಕಾರ್ಖಾನೆಯ ದುಸ್ಥಿತಿಯಲ್ಲಿದ್ದ ವಸತಿ ಗೃಹಗಳನ್ನು ವಾಸಿಸಲು ಯೋಗ್ಯವಾದ ರೀತಿಯಲ್ಲಿ ದುರಸ್ತಿಪಡಿಸಿಕೊಂಡು ವಾಸಿಸುತ್ತಿದ್ದಾರೆ. ಇದೀಗ ಈ ಮನೆಗಳನ್ನು ಸಹ ಖಾಸಗಿಯವರಿಗೆ ವಹಿಸಿಕೊಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಕಾರ್ಮಿಕರು ವಾಸದ ಗೃಹಗಳನ್ನು ಶಾಶ್ವತವಾಗಿ ತಮಗೆ ವಹಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮುಂದಾಗಿದ್ದಾರೆ.

ನಿವೃತ್ತ ಕಾರ್ಮಿಕರು ಪತ್ರದ ಮೂಲಕ ಸಹಿ ಅಭಿಯಾನ ಕೈಗೊಂಡು ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕಳೆದ ಸುಮಾರು ಒಂದು ವಾರದಿಂದ ಪ್ರತಿಯೊಂದು ಮನೆಗೆ ತೆರಳಿ ಸಹಿ ಸಂಗ್ರಹಿಸುತ್ತಿದ್ದು, ಈ ಕಾರ್ಯದಲ್ಲಿ ನಿವೃತ್ತ ಕಾರ್ಮಿಕರಾದ ನರಸಿಂಹಚಾರ್, ರಾಜಪ್ಪ, ಜಗದೀಶ್, ನಂಜಪ್ಪ, ಸುಬ್ರಮಣ್ಯ, ಕೆಂಪಯ್ಯ, ನಾಗರಾಜ್, ವಿ. ಪ್ರಸಾದ್ ಸೇರಿದಂತೆ ಈ ಕಾರ್ಯ ಮಾಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















