ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿಯೊಂದು ಕೊನೆಗೂ ಒಂದು ಆರಂಭವಿದೆ. ವೈದ್ಯ ಪದವೀಧರರಿಗೆ ಇಂದಿನಿಂದ ಕ್ಷಣಕ್ಷಣವೂ ಕಲಿಕೆಯ ಮಜಲುಗಳು ತೆರೆದುಕೊಳ್ಳುತ್ತವೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ನರಶಸ್ತ್ರ ಚಿಕಿತ್ಸಾ ತಜ್ಞ ಡಾ.ನಾರಾಯಣ ಪಂಜಿ ಹೇಳಿದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ಶಾಶ್ವತ ವಿದ್ಯಾರ್ಥಿಗಳು. ವೈದ್ಯರುಗಳಿಗೆ ಕಲಿಕೆ ಕೇವಲ ಕಾಲೇಜು ಶಿಕ್ಷಣಕ್ಕೆ ಕೊನೆಯಾಗುವುದಿಲ್ಲ. ವೈದ್ಯ ವೃತ್ತಿ ಎಂಬುದು ನಿರಂತರ ಕಲಿಕೆ ಹಾಗೂ ಸ್ಪರ್ಧಾತ್ಮಕ ಜ್ಞಾನ ಸಂಪಾದನೆಯ ಆಗಾರ. ವಿಶ್ವದ ವಿದ್ಯುನ್ಮಾನಗಳು, ವೇಗವಾಗಿ ಬದಲಾಗುವ ಪರಿಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ವೈದ್ಯಕೀಯ ಕ್ಷೇತ್ರದ ಸಾಧನೆಯ ಹಾದಿ ಸರಾಗವಾಗುತ್ತದೆ ಎಂದರು.
ವೈದ್ಯ ಪದವಿ ಪಡೆಯುವ ಈ ಐದು ವರ್ಷಗಳಲ್ಲಿ ಜಗತ್ತಿನ ನಾನಾ ಆಯಾಯಮಗಳು ಬದಲಾಗಿವೆ ಹಾಗೆಯೇ ವಿದ್ಯಾರ್ಥಿಗಳಾಗಿದ್ದವರು ವೈದ್ಯರಾಗಿದ್ದೀರಿ. ಸಮಾಜದ ಜವಬ್ದಾರಿಯುತ ವೃತ್ತಿ ನಿಮ್ಮದಾಗಿದೆ. ಸೇವಾ ಮನೋಭಾವ ಪ್ರತಿ ವೈದ್ಯರ ಉಸಿರಾಗಬೇಕು. ವೈದ್ಯಕೀಯ ಶೈಕ್ಷಣಿಕ ವಯಲದಲ್ಲಿ ಕೌಶ್ಯಲ್ಯಯುಕ್ತ ಜ್ಞಾನ ಸಂಪಾದನೆ ದೇಶದ ಅಭಿವೃದ್ಧಿ ದೃಷ್ಠಿಯಿಂದ ಮಹತ್ವದ ಪಾತ್ರ ವಹಿಸುತ್ತದೆ. ವೈದ್ಯಕೀಯ ಕ್ಷೇತ್ರದ ಆಧುನಿಕ ತಂತ್ರಜ್ಞಾನ ಅವಳವಡಿಕೆಯ ನೈಪುಣ್ಯತೆ ಶ್ರೇಷ್ಠ ವೈದ್ಯರಾಗಲು ಪೂರಕ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಮಾತನಾಡಿ, ವೈದ್ಯರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿ ರೋಗಿಗೆ ಚಿಕಿತ್ಸೆ ನೀಡುವ ವೈದ್ಯ ಸಾಕ್ಷಾತ್ ದೈವ ಸ್ವರೂಪಿ ಆಪತ್ಬಾಂಧವನಂತೆ ಕಾಣುತ್ತಾರೆ. ಹಾಗಾಗಿಯೇ ವೈದ್ಯೋ ನಾರಾಯಣೋ ಹರಿಃ ಎಂದು ಬೇರೆ ಯಾವ ಕ್ಷೇತ್ರದ ವೃತ್ತಿ ನಿರತರಿಗೆ ಗುರುತಿಸುವುದಿಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ವೈದ್ಯರಿಗೆ ಕೇವಲ ಪದವಿ ಸಾಕಾಗುವುದಿಲ್ಲ. ಸ್ನಾತಕೋತ್ತರ ಹಾಗೂ ಸೂಪರ್ ಸ್ಪೇಷಾಲಿಟಿ ಸಂಬಂಧಿಸಿದ ಉನ್ನತ ವಿದ್ಯಾಭ್ಯಾಸ ಅಗತ್ಯವಾಗಿದೆ. ವೈದ್ಯರಾದವರು ಯುಪಿಎಸ್ಸಿ ಅಂತಹ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ತಗೆದುಕೊಂಡು ದೇಶದ ಎಲ್ಲಾ ವಲಯಗಳಲ್ಲಿ ಉತ್ತಮ ಸುಧಾರಣೆ ತರುವ ಮೂಲಕ ಯಶಸ್ಸು ಸಾಧಿಸಬೇಕು ಎಂದರು.

ಪ್ರಾಂಶುಪಾಲ ಡಾ.ಸುರೇಶ್ ಮಾತನಾಡಿ, ಕೋವಿಡ್ ನಿರ್ವಹಣೆಯಲ್ಲಿ ವೈದ್ಯರ ಸೇವೆ ಮಹತ್ವದಾಗಿದ್ದು, ವೈದ್ಯ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಕೆಯನ್ನು ವೈದ್ಯ ವೃತ್ತಿಯ ಜೊತೆಗೆ ನಿರಂತರ ಕಲಿಕೆ ಹಾಗೂ ಸಂಶೋಧನಾತ್ಮಕ ದೃಷ್ಠಿಕೋನವನ್ನು ರೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಸಂಭವಿಸುವ ವಿಪತ್ತುಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸಲು ಸಹಾಯಕವಾಗುತ್ತದೆ ಎಂದರು.
ಪದವಿ ಪ್ರದಾನ ಸಂದಂರ್ಭದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಡಾ.ಆರ್.ಪಿ. ಪೈ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಿಪೊಕ್ರೆಟಿಕ್ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಯ ಶ್ರೀನಿವಾಸ್, ಸುಬ್ಬಯ್ಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ವನಮಾಲ ಸತೀಶ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















