ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಶೈಕ್ಷಣಿಕ ಸಾಧನೆಗಳ ಬಗ್ಗೆ ತನ್ನ ಬೆನ್ನು ತಟ್ಟಿಕೊಳ್ಳುತ್ತಿರುವ ಕುವೆಂಪು ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ ಶುಲ್ಕದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಕುವೆಂಪು ವಿವಿ ನಗರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಯುವ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಅದರ ಪ್ರವೇಶ ಶುಲ್ಕವು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಹೊರೆಯಾಗಿ ಪರಿಣಿಮಿಸಿದೆ. ವಿದ್ಯಾರ್ಥಿ ನಿಲಯವು ಕುವೆಂಪು ವಿವಿಯ ಅನುದಾನಕ್ಕೆ ಒಳಪಟ್ಟಿದ್ದರೂ ಅದೊಂದು ಖಾಸಗಿ ವಿದ್ಯಾರ್ಥಿನಿಲಯದಂತೆ ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮುಂಗಡ ಡಿಫಾಸಿಟ್ ಹೆಸರಿನಲ್ಲಿ 8500 ರೂ.ಗಳಿಂದ 9080 ರೂ.ಗಳವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಪ್ರತಿ ತಿಂಗಳು ಊಟದ ಖರ್ಚು ಮತ್ತು ವಿದ್ಯುತ್ ಬಿಲ್ ವಿದ್ಯಾರ್ಥಿಗಳಿಂದಲೇ ಪಡೆಯಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಹಾಸ್ಟೆಲ್ ಬಿಡುವ ಸಂದರ್ಭ ಬಂದಾಗ ಡಿಫಾಸಿಟ್ ಮಾಡಿದ ಮೊತ್ತದಲ್ಲಿ ಬಾಕಿ ಉಳಿದಿರಬಹುದಾದ ಊಟದ ಬಾಬ್ತು ಕಡಿತಗೊಳಿಸಿಕೊಂಡು ಮುಂಗಡ ಡಿಫಾಸಿಟ್’ನಲ್ಲಿ ಬಾಕಿ ಹಣ ಹಿಂತಿರುಗಿಸಬೇಕು. ಆದರೆ ಡಿಫಾಸಿಟ್’ನಲ್ಲಿ, ನಿಲಯದ ಅಭಿವೃದ್ದಿ ಶುಲ್ಕ, ಕೊಠಡಿ ಬಾಡಿಗೆ ಶುಲ್ಕ, ನೌಕರರ ಕಲ್ಯಾಣ ನಿಧಿ, ಮತ್ತು ಮಿಸಲೇನಿಯಸ್ ಹೆಸರಿನಲ್ಲಿ ಹಣವನ್ನು ಕಡಿತ ಗೊಳಿಸಲಾಗುತ್ತಿದೆ. 8000 ರೂ. ಕ್ಕೂ ಹೆಚ್ಚಿನ ಡಿಫಾಸಿಟ್ ಹಣದಲ್ಲಿ ಕೇವಲ 2000 ರೂ. ಮಾತ್ರವೆ ಡಿಫಾಸಿಟ್ ಹಣ ಎಂದು ಅಂತಿಮವಾಗಿ ಲೆಕ್ಕ ತೋರಿಸಲಾಗುತ್ತಿದೆ. ವಿದ್ಯಾರ್ಥಿ ಹಾಸ್ಟೆಲ್ ಗೆ ಸೇರುವಾಗು ಇಂತಹ ಯಾವುದೇ ಕಡಿತಗಳ ಮಾಹಿತಿಯನ್ನು ತಿಳಿಸಿರುವುದಿಲ್ಲ ಎಂದು ದೂರಿದ್ದಾರೆ.
ಆದರೆ ವಿದ್ಯಾರ್ಥಿಯು ತನ್ನ ಎಲ್ಲಾ ಕೋರ್ಸುಗಳನ್ನು ಮುಗಿಸಿ ಹಾಸ್ಟೆಲ್ ಬಿಡುವ ಸಂದರ್ಭದಲ್ಲಿ ಅರ್ಜಿ ಶುಲ್ಕ 150. ರೂ. ಭದ್ರತಾ ಮುಂಗಡ ಠೇವಣಿ 2000 ರೂ. ನಿಲಯದ ಅಭಿವೃದ್ದಿ ಶುಲ್ಕ 1430 ರೂ. ಕೊಠಡಿ ಬಾಡಿಗೆ (10 ತಿಂಗಳಿಗೆ) 1500 ರೂ. ನೌಕರರ ಕಲ್ಯಾಣ ನಿಧಿ (10ತಿಂಗಳಿಗೆ) 1000 ರೂ. ಮಿಸಲೇನಿಯಸ್ (10 ತಿಂಗಳಿಗೆ) 3000 ರೂ ಹಣ ವಸೂಲಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿದ್ದು ಈ ಕೂಡಲೇ ಕುಲಪತಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳಿಗೆ ಈ ಶುಲ್ಕದ ಸುಲಿಗೆಯಿಂದ ನ್ಯಾಯ ಕೊಡಿಸಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ಇಲ್ಲವಾದಲ್ಲಿ ಇದೇ ತಿಂಗಳು ಮೂರನೆಯ ತಾರೀಕು ನಡೆಯಲಿರುವ ಕುವೆಂಪು ವಿವಿಯ ಸಭೆಯಲ್ಲಿ ಯುವ ಕಾಂಗ್ರೆಸ್ ನಿಂದ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸುತ್ತವೆ.
ಮನವಿ ಸಂದರ್ಭದಲ್ಲಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ಪಿ. ಗಿರೀಶ್ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಲೋಕೇಶ್ ಗ್ರಾಮಾಂತರ ಅಧ್ಯಕ್ಷ ಈ.ಟಿ. ನಿತಿನ್ ರಾವ್ ನಗರ ಉಪಾಧ್ಯಕ್ಷರಾದ ಎಸ್. ಕುಮರೇಶ್, ಪುಷ್ಪಕ್ ಕುಮಾರ್ ಪದಾಧಿಕಾರಿಗಳಾದ ರಾಕೇಶ್ ಮುತ್ತಿಗೆ, ಕೆ.ಎಂ. ಪವನ್, ಗಗನ್ ಜಾಹಿದ್ ಉಲ್ಲಾ, ವೆಂಕಟೇಶ್ ಕಲ್ಲೂರು, ಅಭಿಲಾಶ್ ರಾವ್, ಆಕಾಶ್, ಗೋವಿಂದ ವರ್ಮ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post