ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಜೆಎನ್’ಎನ್’ಸಿ ಇಂಜಿನಿಯರಿಂಗ್ ಕಾಲೇಜು ರಾಜ್ಯ, ರಾಷ್ಟ್ರಕ್ಕೆ ಬಹಳಷ್ಟು ಪ್ರತಿಭಾನ್ವಿತ ವಿಜ್ಞಾನಿ, ಸಂಶೋಧಕರು ಹಾಗೂ ಇಂಜಿನೀಯರ್’ಗಳನ್ನು ಕೊಟ್ಟಂತಹ ಪ್ರತಿಷ್ಠಿತ ಸಂಸ್ಥೆ. ಇಂತಹ ಕಾಲೇಜಿನ ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳ ಈಗ ನೂತನ ಆವಿಷ್ಕಾರವೊಂದರಲ್ಲಿ ಯಶಸ್ಸು ಗಳಿಸಿದ್ದಾರೆ.
ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜಿನ ರಸಾಯನಾ ವಿಜ್ಞಾನ ವಿಭಾಗದ ವತಿಯಿಂದ ಜೈವಿಕ ಎಥನಾಲ್ ಉತ್ಫಾದನೆಗಾಗಿ ಜೈವಿಕ ರಿಯಾಕ್ಟರ್ ಘಟಕವನ್ನು ವಿನ್ಯಾಸಗೊಳಿಸಲಾಗಿದ್ದು ಸಸ್ಯಜನ್ಯ ಜೈವಿಕ ಎಥನಾಲ್ ಉತ್ಫಾದನೆಯಲ್ಲಿ ಒಂದು ಪ್ರಯೋಗಾತ್ಮಕ ವಿನೂತನ ಪ್ರಯತ್ನವಾಗಿದೆ.
ರಸಾಯನಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎಸ್.ಜಿ. ಚೇತನ್ ಅವರ ಮಾರ್ಗಸರ್ಶನದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಜೆ. ಶರಣ್, ಎಸ್.ಆರ್. ರಾಹುಲ್ ಎಂಬ ವಿದ್ಯಾರ್ಥಿಗಳ ತಂಡ ಈ ನಾವಿನ್ಯಯುತ ಪ್ರಯತ್ನವನ್ನು ಮಾಡಿದೆ.
ಏನಿದು ಪ್ರಯೋಗ?
ಆಲ್ಕೋಹಾಲ್ನ ಒಂದು ರೂಪವಾಗಿರುವ ಎಥನಾಲ್, ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗೆ ಬೆರೆಸಿದಾಗ ವಾಹನದ ಕಾರ್ಯಕ್ಷಮತೆ ಉತ್ತಮವಾಗುವುದರ ಜೊತೆಗೆ ವಾಹನದಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸುತ್ತದೆ. ಇದರಿಂದ ಪೆಟ್ರೋಲ್ ಆಮದು ಮೇಲಿನ ಅವಲಂಬನೆ ಹೊರೆಯು ಇಳಿಮುಖವಾಗಲಿದೆ. ಒಂದೊಮ್ಮೆ ಶೇ.5 ರಷ್ಟು ಎಥನಾಲನ್ನು ಪೆಟ್ರೋಲ್ಗೆ ಬೆರೆಸಿದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂಪಾಯಿ ಉಳಿಸಬಹುದಾಗಿದ್ದು ಇಂತಹ ಎಥನಾಲ್ ಉತ್ಫಾದನೆಗೆ ವಿದ್ಯಾರ್ಥಿಗಳ ಈ ನಾವಿನ್ಯ ಯೋಜನೆ ಪೂರಕವಾಗಲಿದೆ.
ಹೇಗೆ ಕೆಲಸ ಮಾಡುತ್ತದೆ?
ಸುಮಾರು 100 ಲೀಟರ್ ರಿಯಾಕ್ಟರ್ ಸಾಮರ್ಥ್ಯದೊಂದಿಗೆ 90 ಡಿಗ್ರಿ ಸೆಲ್ಸಿಯಸ್ ಆಪರೇಷನ್ ಟೆಂಪರೇಚರ್ ಅವಶ್ಯಕತೆಯಿದೆ. ಕೃಷಿ ತ್ಯಾಜ್ಯಗಳಾದ ಕಬ್ಬು, ಕಾಫಿ ಹಣ್ಣು, ಗೊಂಡಬಿಯ ಸಿಪ್ಪೆಗಳು, ತಿರುಳುಗಳು, ಹುಲ್ಲು ಮೊದಲಾದವುಗಳಿಂದ ಸೆಲ್ಯುಲಸ್ ಎಂಬ ಸಂಯುಕ್ತ ಶರ್ಕರಾಂಶದಿಂದ ಎಥನಾಲ್ ಉತ್ಫಾದಿಸಬಹುದಾಗಿದೆ. ಜೊತೆಗೆ ಅನುಪಯುಕ್ತ ಹಣ್ಣುಗಳು, ಬೀಜಗಳಿಂದ ಎಥನಾಲ್ ತಯಾರಿಸಬಹುದಾಗಿದೆ.
100 ಲೀಟರ್ ರಿಯಾಕ್ಟರ್ ಸಾಮರ್ಥ್ಯದ ಈ ಘಟಕದಿಂದ ಸುಮಾರು 20 ಲೀಟರ್ನಷ್ಟು ಎಥನಾಲ್ ಉತ್ಫಾದನೆ ಮಾಡಬಹುದಾಗಿದ್ದು, ಉತ್ಫಾದನೆಗೆ ನೀಡುವ ತ್ಯಾಜಗಳ ಆಧಾರದ ಮೇಲೆ ಸುಮಾರು ಎರಡು ದಿನಗಳಿಂದ ಏಳು ದಿನಗಳೊಳಗೆ ಎಥನಾಲನನ್ನು ಈ ಘಟಕದಲ್ಲಿ ಡಿಸ್ಟಿಲೇಷನ್ ಮಾಡಹುದಾಗಿದೆ. ಜೈವಿಕ ಎಥನಾಲ್ ಜೊತೆಗೆ ಜೈವಿಕ ಇಂಧನವನ್ನು ಕೂಡ ಈ ಘಟಕದಲ್ಲಿ ಉತ್ಫಾದಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ನಾವಿನ್ಯ ಯೋಜನೆಯ ಮೂಲಕ ಉತ್ಫಾದಿಸಲ್ಪಟ್ಟ ಎಥನಾಲ್ ಮಾರಾಟ ಹಾಗೂ ವಿನ್ಯಾಸ ಮತ್ತು ಫ್ಯಾಬ್ರಿಕೇಷನ್ನನ್ನು ಇತರೆಡೆಗಳಲ್ಲೂ ಸ್ಥಾಪಿಸುವ ಮೂಲಕ ಸ್ಟಾರ್ಟ್ ಅಪ್ ಶುರು ಮಾಡುವ ಅಭಿಲಾಷೆ ತಂಡದ್ದಾಗಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂ ಜೆನರೇಷನ್ ಇನೋವೇಷನ್ ಎಂಟ್ರಾಪ್ರಿನರ್ಶಿಪ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಈ ನಾವಿನ್ಯ ಯೋಜನೆಗೆ ಆರ್ಥಿಕ ಸಹಕಾರ ನೀಡಲಾಗಿದೆ.
ಈ ಕುರಿತಂತೆ ಮಾತನಾಡಿರುವ ಜೆಎನ್ಎನ್ಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಆರ್. ಮಹದೇವಸ್ವಾಮಿ, ಭಾರತ ಸರ್ಕಾರ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂ ಜೆನರೇಷನ್ ಇನೋವೇಷನ್ ಎಂಟ್ರಾಪ್ರಿನರ್ಶಿಪ್ ಡೆವಲಪ್ಮೆಂಟ್ ಸೆಂಟರ್ ಮೂಲಕ ವಿದ್ಯಾರ್ಥಿಗಳ ಪ್ರತಿ ನಾವಿನ್ಯ ಯೋಜನೆಗೆ 2.5 ಲಕ್ಷ ರೂಪಾಯಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನಾವಿನ್ಯ ಯೋಜನೆಗಳು ಅನುಷ್ಟಾನಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ರಸಾಯನ ವಿಜ್ಞಾನ ವಿಭಾಗದ ನಿರ್ದೇಶಕರಾದ ಡಾ.ಎಂ.ಎಚ್. ಮೊಯನುದ್ದಿನ್ ಖಾನ್, ಅಧ್ಯಾಪಕರಾದ ಡಾ.ಕೆ.ಎಂ. ಬಸಪ್ಪಾಜಿ ಸಹ ಪ್ರಾಧ್ಯಾಪಕರಾದ ಎಚ್.ಕೆ. ಪ್ರದೀಪ್, ಎಚ್.ಪಿ. ಡಾ.ಸಚಿನ್. ಲ್ಯಾಬ್ ಫೋರ್ಮ್ಯಾನ್ಗಳಾದ ಎಸ್. ಚಂದ್ರಶೇಖರ್, ಎ.ಜಿ. ಸುನಿಲ್, ನಾವಿನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಮಲ್ಲೇಶ್ ಕುಮಾರ, ಯೋಜನಾ ಸಂಯೋಜಕರಾದ ಸಿ.ಎಂ. ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post