ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಂಸ್ಥೆ, ಶೃಂಗೇರಿ ಶಂಕರ ಮಠ, ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಆಶ್ರಯದಲ್ಲಿ ನ.26 ಮತ್ತು 27ರಂದು ಸಹಸ್ರ ನಾರಿಕೇಳ ಗಣಯಾಗ, ಗಣಹೋಮ, ಶೋಭಾಯಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ನ.26ರಂದು ಆದಿಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶಿವಮೊಗ್ಗ ನಗರಕ್ಕೆ ಆಗಮಿಸಿ ನಮ್ಮನ್ನು ಅನುಗ್ರಹಿಸಲಿದ್ದಾರೆ ಎಂದರು.
ನ.26ರ ಸಂಜೆ 5.30ಕ್ಕೆ ಮಂಗಳವಾದ್ಯದೊಂದಿಗೆ ವಿನೋಬನಗರದ ಡಿವಿಎಸ್ ಕಾಲೇಜಿನಿಂದ ಶುಭಮಂಗಳ ಸಮುದಾಯ ಭವನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಅಂದು ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಹಾ ಸ್ವಾಮಿಗಳಿಂದ ಅನುಗ್ರಹ ಭಾಷಣ ನಡೆಯಲಿದ್ದು, 8.30ಕ್ಕೆ ಶ್ರೀಶಂಕರ ಮಠದಲ್ಲಿ ಭಕ್ತಾದಿಗಳಿಂದ ಪಾದಪೂಜೆ, ವಸ್ತ್ರ ಸಮರ್ಪಣೆಗೆ ಅವಕಾಶವಿರುತ್ತದೆ ಎಂದರು.
ನ.27ರಂದು ಲೋಕ ಕಲ್ಯಾಣಾರ್ಥವಾಗಿ ಶುಭ ಮಂಗಳ ಸಮುದಾಯ ಭವನದ ಅವರಣದಲ್ಲಿ ಬೆಳಿಗ್ಗೆ 9.30ಕ್ಕೆ ಸಹಸ್ರ ಮೋದಕ ಗಣಹೋಮ ಹಾಗೂ 11.30ಕ್ಕೆ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿನಿಯೋಗವಾಗಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಉಭಯ ಜಗದ್ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಚಾಲಕ ಬಿ.ಆರ್. ಮಧುಸೂದನ್, ಪ್ರಮುಖರಾದ ವಿ.ರಾಜು, ದತ್ತಾತ್ರಿ, ಸ.ನ. ಮೂರ್ತಿ, ನಟರಾಜ್ ಭಾಗವತ್, ಎಸ್.ಎಲ್.ಎನ್. ಸ್ವಾಮಿ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post