ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭಾರತೀಯ ಜನತಾ ಪಕ್ಷ ನಮ್ಮ ಈವರೆಗಿನ ಸೇವೆಯನ್ನು ಗುರುತಿಸಿ ಸರ್ಕಾರದ ವ್ಯವಸ್ಥೆಯಲ್ಲಿ ನಮಗೊಂದು ಸ್ಥಾನ ಒದಗಿಸಿದಾಗ ಜಿಲ್ಲೆಯ ವಿವಿಧ ಸಂಘಟನೆಗಳು ಅಭಿನಂದಿಸಿವೆ. ಅವುಗಳ ಜೊತೆಗೆ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ಸಂಸ್ಥೆಗಳು ನೀಡುವ ಸನ್ಮಾನ ಸ್ವೀಕರಿಸುವುದು ಅತ್ಯಂತ ಸಾರ್ಥಕ ಸಮಾಧಾನವನ್ನು ತಂದುಕೊಡುತ್ತದೆ ಎಂದು ಕೆಎಸ್ಎಸ್ಐಡಿಸಿ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ ತಿಳಿಸಿದರು.
ನಗರದ ಶಂಕರ ಕೃಪಾ ಸಭಾಂಗಣದಲ್ಲಿ ಶಿವಮೊಗ್ಗದ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವಿವಿಧ ಸಮಾಜಗಳು ಅವರನ್ನು ಪ್ರತಿನಿಧಿಸುವ ವ್ಯಕ್ತಿಗಳು ಉನ್ನತ ಸ್ಥಾನಗಳನ್ನು ತಲುಪಿಸಿದಾಗ ಅಭಿನಂದಿಸುವ ರೀತಿ, ಆ ಕುರಿತು ಅಭಿನಂದನಾ ಜಾಹೀರಾತುಗಳನ್ನು ಹಾಕಿಸುವ ಪರಿ ಒಂದು ರೀತಿಯ ಅಚ್ಚರಿ ಮೂಡಿಸುತ್ತದೆ. ಇಂತಹ ಕ್ರಿಯೆಗಳು ನಮ್ಮೊಳಗೂ ಅಭಿಮಾನ ಮೂಡಿಸುತ್ತದೆ. ನಮ್ಮ ಸಮಾಜ ಆ ನಿಟ್ಟಿನಲ್ಲಿ ಗುರುತಿಸುವಲ್ಲಿ ವಿಫಲ ಎಂದುಕೊಳ್ಳುವಾಗಲೇ ವಿಪ್ರ ನೌಕರರ ಸಂಘಟನೆ ನಮಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡು ಭಿನ್ನವಾಗಿ ನಡೆದುಕೊಳ್ಳುವ ಮೂಲಕ ನಮಗೆ ಚೈತನ್ಯ ತುಂಬಿದ್ದು ಶ್ಲಾಘನೀಯ. ಸಂಘಟನೆ ಸಮಾಜದ ಗಟ್ಟಿ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಸರ್ವ ಸಮಾಜದ ಹಿತಕ್ಕಾಗಿ ದುಡಿಯುವ ಗುರಿಯೊಂದಿಗೆ ವಿಪ್ರ ಸಮಾಜದ ಹಿತಾಸಕ್ತಿಗಳನ್ನು ಕೂಡ ಹೆಚ್ಚಿನ ಆದ್ಯತೆಯೊಂದಿಗೆ ರಕ್ಷಿಸಲಾಗುವುದು. ಸಮಾಜದ ಅವಿಚ್ಛಿನ್ನ ಪರಂಪರೆಗೆ ಧಕ್ಕೆ ಆಗುವ ಅಪಾಯಗಳಿಂದ ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದರು.
ವಿವಿಧ ಮಂಡಳಿಗಳಿಗೆ ನೇಮಕಗೊಂಡ ವಿಪ್ರ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ, ನೇಮಕಗೊಂಡ ಗಣ್ಯರು ತಮ್ಮ ತಮ್ಮ ಮಂಡಳಿಗಳ ಅಧಿಕಾರ, ಯೋಜನೆ ಮೊದಲಾದವುಗಳ ಬಗ್ಗೆ ಸೂಕ್ತ ಅಧ್ಯಯನವನ್ನು ನಡೆಸಬೇಕು. ಈ ಅರಿವು ಕಾನೂನುಬದ್ಧವಾಗಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೆ ಕೊಡುವಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದರು.
ಇಂದು ಇಡೀ ಜಗತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಪಣಾ ಮನೋಭಾವ, ಆಡಳಿತ ವೈಖರಿಯನ್ನು ಕೊಂಡಾಡುತ್ತಿದೆ. ಅವರು ನಮಗೆ ಪ್ರೇರಕ ಶಕ್ತಿ ಎಂಬುದು ಸಂಶಯಾತೀತ ವಿಚಾರ. ಬಹುಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಎರಡನೇ ಅವಧಿಯಲ್ಲಿ ಅಧಿಕಾರ ನಡೆಸುತ್ತಿರುವ ಮೋದಿಯವರ ಆಸ್ತಿ ಗಳಿಕೆಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಅವರು ತಮ್ಮ ವೇತನದ ಗಳಿಕೆಯ ಹೊರತಾಗಿ ಮತ್ತಾವುದನ್ನೂ ಅಪೇಕ್ಷಿಸದಿರುವಾಗ, ಅವರ ಹೆಜ್ಜೆಗಳನ್ನು ಅನುಸರಿಸುವ ಉದ್ದೇಶದ ನಾವು ದಾರಿ ತಪ್ಪಬಾರದು ಎಂದರು.
ಈ ಸಂದರ್ಭದಲ್ಲಿ ಕೆಎಸ್ಎಸ್ಐಡಿಸಿ ಎಸ್. ದತ್ತಾತ್ರಿ, ಉಪ ಮಹಾಪೌರರಾದ ಸುರೇಖಾ ಮುರುಳೀಧರ್, ಆರಾಧನಾ ಸಮಿತಿ ಅಧ್ಯಕ್ಷರಾದ ಬಾ.ರಾ. ಮಧುಸೂಧನ್, ಮೆಡಿಕಲ್ ಸೂಪರಿಟೆಂಡೆಂಟ್ ಕೊರೋನಾ ವಾರಿಯರ್ಸ್ ಡಾ. ಎಸ್. ಶ್ರೀಧರ್, ಪಿಎಚ್ಡಿ ಅವಾರ್ಡ್ ಪಡೆದ ಡಾ. ಎನ್.ಆರ್. ಮಂಜುಳಾ, ಕಿಯೋನಿಕ್ಸ್ ನಿರ್ದೇಶಕರಾದ ಪಿ.ಆರ್. ಪ್ರಶಾಂತ್, ಮೆಸ್ಕಾಂ ನಿರ್ದೇಶಕರಾದ ಎಸ್.ಎಸ್. ನಂಜುಂಡಸ್ವಾಮಿ, ಮಹಿಳಾ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಪ್ರೇಮಾ ಆನಂದ್ ಹಾಗೂ ಸೂಡಾ ನಿರ್ದೇಶಕರಾದ ಉಮಾ ಮೂರ್ತಿಯವರನ್ನು ಅಭಿನಂದಿಸಲಾಯಿತು.
ವಿಪ್ರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ಕೇಶವಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಜಿ.ಎಸ್.ಅನಂತ ವೇದಿಕೆಯಲ್ಲಿದ್ದರು. ಅಶ್ವಥ್ ಪ್ರಾರ್ಥಿಸಿ, ರವೀಂದ್ರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಅಚ್ಯುತರಾವ್ ಮಾತನಾಡಿದರು. ಗೌರವಾಧ್ಯಕ್ಷ ಎಚ್.ಎನ್. ಛಾಯಾಪತಿ ವಂದಿಸಿ, ಲಕ್ಷ್ಮೀ ಬಾಲಚಂದ್ರ ಹಾಗೂ ವನಜಾ ರವಿಕುಮಾರ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post