ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಶಿವಮೊಗ್ಗದ ಸಾಂಸ್ಕೃತಿಕ ಸಮುಚ್ಛಯ, ರಂಗಾಯಣದಲ್ಲಿ ಡಿ.31 ಮತ್ತು ಜನವರಿ 1 ರಂದು (ಶನಿವಾರ ಮತ್ತು ಭಾನುವಾರ) ಸಂಜೆ 6 ಕ್ಕೆ ‘ಟಿಪ್ಪು ನಿಜಕನಸುಗಳು’ ವಿಶೇಷ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ನಿರ್ದೆಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.
‘ಟಿಪ್ಪು ನಿಜಕನಸುಗಳು’ ನಾಟಕ ಸತ್ಯ ಚರಿತ್ರೆಯ ಅನಾವರಣ. ಮೈಸೂರು ಸಂಸ್ಥಾನವನ್ನು ಆಕ್ರಮಿಸಿಕೊಂಡವನ್ನು ಪರ್ಷಿಯನ್ ಮೂಲದ ಟಿಪ್ಪು ಸುಲ್ತಾನನ ಬಗ್ಗೆ ಅತಿರಂಜಿತ ಸುಳ್ಳು ಚರಿತ್ರೆಯೇ ನಿರ್ಮಾಣಗೊಂಡಿದೆ. ಭಾರತೀಯ ಸಂಸ್ಕೃತಿಯ ಮೇಲೆ ನಡೆದಿರುವ ಮುಸ್ಲಿಂ ದೊರೆಗಳ ಆಕ್ರಮಣಕಾರಿ ಕೃತ್ಯಗಳನ್ನು ಅತ್ಯಂತ ಜಾಣತನದಿಂದ ಮುಚ್ಚಿಟ್ಟು ಬರೆದಿರುವ ಇತಿಹಾಸಕಾರರ ಚರಿತ್ರೆಯನ್ನೇ ಪಠ್ಯಪುಸ್ತಕವನ್ನಾಗಿಸಿ ಅದನ್ನೇ ಓದಿಸಿಕೊಂಡು ಬರಲಾಗಿದೆ. ಈ ಸುಳ್ಳಿನಲ್ಲಿ ಟಿಪ್ಪು ಸುಲ್ತಾನ ಸೇರುತ್ತಾನೆ.
ಟಿಪ್ಪು ಸುಲ್ತಾನನನ್ನು ಮಹಾ ಶೂರ, ಧೀರ, ದೇಶಪ್ರೇಮಿ, ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರ, ವಿಶ್ವಧರ್ಮ ಪ್ರೇಮಿ, ಪ್ರಜಾಪ್ರೇಮಿ: ಮುಸ್ಲಿಂ ಆಗಿದ್ದರೂ ಹಿಂದೂ ದೇವಾಲಯ, ಮಠಗಳಿಗೆ ಉದಾರವಾಗಿ ದಾನ ದತ್ತಿ ನೀಡಿದ ಜಾತ್ಯತೀತವಾದಿ, ಹೀಗೆಲ್ಲ ಹೊಗಳಿ ಅಟ್ಟಕ್ಕೇರಿಸಲಾಗಿದೆ. ಈ ಅಟ್ಟದ ಮೇಲಿನ ಟಿಪ್ಪುವಿನ ಹೆಗಲ ಮೇಲೆ ಓಟ್ ಬ್ಯಾಂಕ್ ನಿರ್ಮಾತರು, ಡೋಂಗಿ ಬುದ್ಧಿಜೀವಿಗಳು ಕೋಟೆಯನ್ನೇ ನಿರ್ಮಾಣ ಮಾಡಿಕೊಂಡಿದ್ದಾರೆ. ಅತ್ಯಂತ ಅಘಾತಕಾರಿ ವಿಷಯವೆಂದರೆ ಕನ್ನಡವನ್ನು ಕೊಂದ ಒಬ್ಬ ಮುಸ್ಲಿಂ ಸುಲ್ತಾನನನ್ನು ‘ಕನ್ನಡ ಪ್ರೇಮಿ’ ಎಂದು ಬಣ್ಣಿಸಿರುವುದು. ಈತನ ಕರಾಳ ಮುಖದ ಚರಿತ್ರೆಯನ್ನು ಬಚ್ಚಿಡಲಾಗಿದೆ. ಇಂತಹ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ಡೋಂಗಿ ವಾದವನ್ನು ತಿರಸ್ಕರಿಸಿ ಮತ್ತು ನಿಷ್ಕ್ರಿಯಗೊಳಿಸಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಬಚ್ಚಿಡಲಾದ ಅನೇಕ ಸತ್ಯಗಳನ್ನು ಹೊರಚೆಲ್ಲಲು ಹದಿನೈದು ದೃಶ್ಯಗಳ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ರಚಿಸಿ, ಪ್ರಯೋಗಕ್ಕೆ ಸಿದ್ಧಪಡಿಸಲಾಗಿದೆ. ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ ಕಾರ್ಯಪ್ಪ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಖ್ಯಾತ ರಂಗವಿನ್ಯಾಸಕ ಶಶಿಧರ್ ಅಡಪ, ವಸ್ತ್ರ-ಪರಿಕರ ವಿನ್ಯಾಸಕ ಪ್ರಮೋದ್ ಶಿಗ್ಗಾಂವ್, ಸಂಗೀತಕ್ಕೆ ಧನಂಜಯ್ ಆರ್.ಸಿ. ಮತ್ತು ಸುಬ್ರಹ್ಮಣ್ಯ ಮೈಸೂರು, ಬೆಳಕಿನ ವಿನ್ಯಾಸ ಮಹೇಶ್ ಕಲ್ಲತ್ತಿ ಕೈ ಜೋಡಿಸಿದ್ದಾರೆ.
Also read: ಸಚಿವ ಸ್ಥಾನ ನೀಡದಿದ್ದಕ್ಕೆ ಪಿತೂರಿ ಇದೆ ಎನ್ನಲ್ಲ, ಪಕ್ಷವನ್ನು ಭಾಗ ಮಾಡಲು ಇಷ್ಟವೂ ಇಲ್ಲ: ಈಶ್ವರಪ್ಪ
ಈ ವಿಶೇಷ ರಂಗಪ್ರಯೋಗ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ಪ್ರದರ್ಶನಗೊಳ್ಳಬೇಕೆಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ನಮ್ಮ ರಂಗಪಯಣದ ಮೊದಲ ಹೆಜ್ಜೆ ಬೆಂಗಳೂರಿನಿಂದ ಆರಂಭಗೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಾಟಕ ಮೂರುವರೆ ತಾಸುಗಳ ಅವಧಿಯದ್ದಾಗಿದ್ದು 10 ನಿಮಿಷಗಳ ಮಧ್ಯಂತರದ ವಿರಾಮವಿದೆ. ಈ ಪ್ರದರ್ಶನಕ್ಕೆ ರೂ.100/- ಬೆಲೆಯ ಟಿಕೆಟ್ಗಳನ್ನು ಇಡಲಾಗಿದೆ. ಶಿವಮೊಗ್ಗ ರಂಗಾಯಣ ಕಛೇರಿಯಲ್ಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಟಿಕೆಟ್ಗಳು ಲಭ್ಯವಿರುತ್ತದೆ. ರಂಗಾಯಣದ ವೆಬ್ ಸೈಟ್ www.rangayana.org ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ. ಟಿಕೆಟ್ ಖರೀದಿಸಿ ನಾಟಕ ನೋಡಿ ಎಂದು ವಿನಂತಿಸಿದ್ದಾರೆ.
ಇಂತಹದೊಂದು ವಿಶೇಷ ರಂಗಪ್ರಯೋಗದ ಸತ್ಯದ ಅನಾವರಣಕ್ಕೆ ಎಲ್ಲಾ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಮಾಧ್ಯಮದ ಸ್ನೇಹಿತರು ಸಾಕ್ಷಿಗಳಾಗಬೇಕೆಂಬುದು ಮೈಸೂರು ರಂಗಾಯಣದ ಬಯಕೆ, ರಂಗಭೂಮಿಯ ಈ ಕ್ರಿಯಾತ್ಮಕ ಕಾಯಕದ ಸಂಭ್ರಮಕ್ಕೆ ಎಲ್ಲಾ ರಂಗಾಸಕ್ತರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post