ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮೇ 30ರಂದು ನಮ್ಮ ನಡೆ ಹಾಸನದ ಕಡೆ ಎಂಬ ಘೋಷಣೆಯಡಿ ಹಾಸನ ಚಲೋ ಬೃಹತ್ ಪ್ರತಿಭಟನೆಯನ್ನು ರಾಜ್ಯದ ನೂರಾರು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಚಲೋ ಸಂಚಾಲಕ ಕೆ.ಪಿ. ಶ್ರೀಪಾಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಹೊರದೇಶಕ್ಕೆ ಪರಾರಿಯಾಗಿದ್ದು, ಒಂದು ತಿಂಗಳಾದರೂ ಅವರನ್ನು ಸರ್ಕಾರ ಬಂಧಿಸದೇ ಇರುವುದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಂದು ಬೆಳಗ್ಗೆ ಮಹಾರಾಜ ಪಾರ್ಕ್ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.
ಪ್ರಜ್ವಲ್ ರೇವಣ್ಣ #Prajwal Revanna ಹೊರದೇಶದಲ್ಲಿರುವ ಬಗ್ಗೆ ಮಾಹಿತಿ ಇದ್ದರೂ ಸಹ ಆತನನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ. ಈಗ ಆತ ವಿಡಿಯೋವೊಂದರ ಮೂಲಕ ಅವರ ಕುಟುಂಬದ ಕ್ಷಮೆ ಮಾತ್ರ ಕೇಳಿದ್ದಾನೆ. ಆದರೆ, ಅವನು ನಿಜವಾಗಿಯೂ ಈ ರಾಜ್ಯದ ಜನತೆಯ ಕ್ಷಮೆ ಕೇಳಬೇಕಿತ್ತು. ಕ್ಷಮೆಯಲ್ಲೂ ಆತನ ಗರ್ವವಿದೆ ಎಂದರು.
ಪ್ರಗತಿಪರ ಹೋರಾಟಗಾರ ಕೆ.ಎಲ್. ಅಶೋಕ್ ಮಾತನಾಡಿ, ಹಾಸನ ಹಲವು ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ಪ್ರಜ್ವಲ್ ರೇವಣ್ಣ ಅವರ ಕೃತ್ಯ ಖಂಡಿಸಲು ನಿಘಂಟಿನಲ್ಲಿ ಪದಗಳೇ ಸಿಗುವುದಿಲ್ಲ. ಅವರ ಕುಟುಂಬದ ಅಧಿಕಾರದ ಪಿತ್ತ ನೆತ್ತಿಗೇರಿದೆ. ದೌರ್ಜನ್ಯ, ಅತ್ಯಾಚಾರ, ಹಿಂಸೆ, ಶೋಷಣೆಗಳು ನಡೆಯುತ್ತಿವೆ. ನೂರಾರು ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಆತನನ್ನು ಬಂಧಿಸುವುದಷ್ಟೇ ಅಲ್ಲದೇ ಇಡೀ ಘಟನೆಯ ಸುತ್ತ ಯಾರೇ ಇದ್ದರೂ ಕೂಡ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
Also read: ಪರಿಷತ್ ಚುನಾವಣೆ | ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ | ಡಾ. ನರೇಶ್ಚಂದ್ ಹೆಗ್ಡೆ ಮನವಿ
ಈ ಅಸಭ್ಯ, ಅಶ್ಲೀಲ, ಅನಾಗರಿಕ ಕ್ರೂರತೆ ಖಂಡಿಸಿ ನಮ್ಮ ನಡಿಗೆ ಹಾಸನದ ಕಡೆಗೆ ಎಂಬಂತೆ ಇಡೀ ರಾಜ್ಯಾದ್ಯಂತ ಹಾಸನ ಚಲೋ ಹಮ್ಮಿಕೊಂಡಿದ್ದೇವೆ. ರೈತ ಸಂಘಟನೆ, ಮಹಿಳಾ ವೇದಿಕೆಗಳು, ವಿವಿಧ ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಚಿಂತಕರು, ಕನ್ನಡಪರ ಸಂಘಟನೆಗಳು ಹೀಗೆ ಎಲ್ಲಾ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದ ಮೂಲಕ ಘಟನೆಯನ್ನು ಖಂಡಿಸುವುದರ ಜೊತೆಗೆ ಇಂತಹ ಘಟನೆಗಳಿಗೆ ಸರ್ಕಾರಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಹನುಮಕ್ಕ ಮಾತನಾಡಿ, ಇದೊಂದು ಕ್ರೂರ ಘಟನೆಯಾಗಿದೆ. ಹೆಣ್ಣುಮಕ್ಕಳಿಗೆ ಭದ್ರತೆಯೇ ಇಲ್ಲದಂತಾಗಿದೆ. ರಾಜಕಾರಣಿಗಳಿಗೆ ಅಧಿಕಾರದ ದಾಹ ಹೆಚ್ಚಾಗಿ ಇಂತಹ ಕೆಲಸ ಮಾಡುತ್ತಾರೆ. ಪ್ರಜ್ವಲ್ ರೇವಣ್ಣ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಬಾರದು. ಶಿವಮೊಗ್ಗದಿಂದ ಬಿಸಿಯೂಟ ತಯಾರಕರ ಸಂಘದ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗವಹಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಎಸ್.ಎಸ್. ಹಾಲೇಶಪ್ಪ, ಸಿಐಟಿಯುನ ನಾರಾಯಣ್, ಪ್ರಭಾಕರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post