ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ತಾಲ್ಲೂಕು ಕುಂಚೇನಹಳ್ಳಿ ಹಾಗೂ ಬೀರನಕೆರೆ ಗ್ರಾಮಗಳ ಸರ್ವೆ ನಂ. 45,43,82,99,ರ ಸುಮಾರು 110 ಕುಟುಂಬಗಳ 200ಕ್ಕೂ ಹೆಚ್ಚು ಎಕರೆ ಸಾಗುವಳಿ ಭೂಮಿಗಳಿಗೆ ಹಕ್ಕು ಪತ್ರ ನೀಡಿದ್ದರೂ ಕೂಡ ಅದನ್ನು ವಜಾ ಮಾಡಲಾಗಿದೆ. ಇದರ ವಿರುದ್ಧ ಹೋರಾಟ ಆರಂಭಿಸಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತ ಬಂದಿವೆ. ಒಂದು ಕಡೆ ಶರಾವತಿ ಸಂತ್ರಸ್ಥರಿಗೆ ಅನ್ಯಾಯವಾದರೆ ಮತ್ತೊಂದು ಕಡೆ ಬಗರ್ಹುಕುಂ ಸಾಗುವಳಿದಾರರಿಗೆ ನ್ಯಾಯ ಸಿಕ್ಕಿಲ್ಲ. ಈಗ ಶಿವಮೊಗ್ಗ ಜಿಲ್ಲೆಯ ಸುಮಾರು 110 ಕುಟುಂಬಗಳ ಜಮೀನುಗಳಿಗೆ ಹಕ್ಕು ಪತ್ರ ಹಾಗೂ ಪಹಣಿಯನ್ನು ನೀಡಿದ್ದರೂ ಕೂಡ ಈಗ ಯಾವುದೋ ಉದ್ದೇಶ ಇಟ್ಟುಕೊಂಡು ಹಕ್ಕು ಪತ್ರ ಮತ್ತು ಪಹಣಿಯನ್ನು ವಜಾ ಮಾಡಲಾಗಿದೆ ಎಂದು ದೂರಿದರು.
ಈ ಕುಟುಂಬಗಳು ಇದೇ ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇರೆ ಎಲ್ಲಿಯೂ ಕೂಡ ಜಮೀನು ಇಲ್ಲ. ಆದ್ದರಿಂದ ಇವರ ಬದುಕು ಈಗ ಬೀದಿಗೆ ಬಿದ್ದಿದೆ. ತಕ್ಷಣವೇ ರದ್ದುಗೊಳಿಸಿರುವ ಪಹಣಿ ಮತ್ತು ಹಕ್ಕುಪತ್ರಗಳನ್ನು ಮತ್ತೇ ಮೊದಲಿನಂತೆ ನೀಡಿ ಸಾಗುವಳಿ ಮಾಡಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು.ಇದರ ವಿರುದ್ಧ ಜೂ.26ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅರಣ್ಯ ಇಲಾಖೆಯವರು ರೈತರಿಗೆ ಸದಾ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗಳಂತೆ ಹಾಗೂ ನ್ಯಾಯಾಲಯದ ಆದೇಶದಂತೆಯೇ ಸಾಗುವಳಿದಾರರಿಗೆ ಭೂಮಿಹಕ್ಕನ್ನು ನೀಡಲು ಅವಕಾಶವಿದ್ದರೂ ಕೂಡ ಇದುವರೆಗೂ ಯಾವ ಅಧಿಕಾರಿಗಳೇ ಆಗಲಿ, ರಾಜಕಾರಣಿಗಳಾಗಲಿ ಈ ಬಗ್ಗೆ ಪ್ರಯತ್ನ ಪಡದೇ ಇಚ್ಛ ಶಕ್ತಿ ಪ್ರದರ್ಶಿಸದೇ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಇದೀಗ ಲೋಕಸಭಾ ಅಧಿವೇಶನ ಆರಂಭವಾಗುತ್ತದೆ. ರಾಜ್ಯದ ಸಂಸದರು ಈ ಅಧಿವೇಶನದಲ್ಲಾದರೂ ಶರಾವತಿ ಸಂತ್ರಸ್ಥರ ಹಾಗೂ ಭೂ ಸಾಗುವಳಿದಾರರ ಪರವಾಗಿ ಧ್ವನಿ ಎತ್ತಬೇಕು. ಗಂಭೀರವಾಗಿ ಚರ್ಚಿಸಿ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಶಿವಮೊಗ್ಗ ಜಿಲ್ಲೆಯ ಸಾಗುವಳಿದಾರರ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
Also read: ನಾಗರಿಕರೊಂದಿಗೆ ಶಾಸಕ ಚನ್ನಬಸಪ್ಪ ಚಿಂತನ – ಮಂಥನ ಸಭೆ
ತಮ್ಮ ಕಾಲೇಜು ಅರಣ್ಯ ಭೂಮಿ ಪ್ರದೇಶದಲ್ಲಿದ್ದರೂ ಕೂಡ ಅದನ್ನು ಅರಣ್ಯ ಇಲಾಖೆಯಿಂದ ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ ಅವರಿಗೆ ರೈತರ ಜಮೀನುಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಯಿಂದ ಹೊರಗಿಡುವಂತೆ ಹೋರಾಟ ಮಾಡುವುದಿಲ್ಲ ಎಂದು ಹೇಳಿದರು.
ಹಾಗೆ ನೋಡಿದರೆ ಶಿವಮೊಗ್ಗದ ಬಸ್ಸ್ಟ್ಯಾಂಡ್, ಎಸ್.ಪಿ.ಆಫೀಸ್, ಡಿ.ಸಿ.ಆಫೀಸ್ ಸೇರಿದಂತೆ ಅನೇಕ ಪ್ರದೇಶಗಳು ಈಗಲೂ ಅರಣ್ಯ ಇಲಾಖೆಯಲ್ಲಿಯೇ ಇವೆ. ಹಾಗಂತ ಅವುಗಳನ್ನು ಕೆಡವಲು ಸಾಧ್ಯವೇ. ಅದೇ ರೀತಿ ಯಡಿಯೂರಪ್ಪನವರ ಫೆಸಿಟ್ ಕಾಲೇಜು ಕೂಡ ಅರಣ್ಯ ಇಲಾಖೆಯಲ್ಲಿಯೇ ಬರುತ್ತದೆ. ಅದರಲ್ಲೂ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ತಮ್ಮ ಕಾಲೇಜುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಯಡಿಯೂರಪ್ಪ ಕುಟುಂಬ ರೈತರ ಸಮಸ್ಯೆಗಳಿಗೆ ಏಕೆ ಸ್ಪಂಧಿಸುವುದಿಲ್ಲ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಾಯಕ, ತೀರ್ಥನಾಯ್ಕ, ಠಾಕ್ಯನಾಯ್ಕ, ವೆಂಕಟೇಶ ನಾಯ್ಕ, ದಶರಥ ನಾಯ್ಕ, ಶಂಕರ ನಾಯ್ಕ, ಬೂದ್ಯನಾಯ್ಕ, ಜಯರಾಮ್ ನಾಯ್ಕ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post