ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ವೇತನಕ್ಕೆ ಕತ್ತರಿ ಹಾಕುವ ನೋಟಿಸ್ ನೀಡುವುದರ ಮೂಲಕ ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ KS Eshwarappa ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಕನ್ನಡದಲ್ಲಿ ಪೂಜೆ ಮಾಡುವುದರ ಮೂಲಕ ಕಳೆದ 44 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸುಸಂಸ್ಕøತ ಅರ್ಚಕರಾದ ಕಣ್ಣನ್ ಮಾಮಾ ಎಂದೇ ಖ್ಯಾತರಾದ ಕನ್ನಡಿಗದ ಜನಪ್ರಿಯ ವಿದ್ವಾಂಸರಾದ ಹಿರೇಮಗಳೂರು ಕಣ್ಣನ್ ಅವರಿಗೆ ದೇವಾಲಯದ ಆದಾಯದಲ್ಲಿ ಕೊರತೆ ಇರುವುದರಿಂದ ನಿಮಗೆ ನೀಡುತ್ತಿದ್ದ ವೇತನ 7500 ರೂ.ಗಳನ್ನು 4500 ರೂ.ಗೆ ಇಳಿಸಿದ್ದು, 10 ವರ್ಷದ ಅವಧಿಯ ನೀವು ಪಡೆದ ಸಂಬಳದಲ್ಲಿ 4.74 ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಮರು ಪಾವತಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದು ಇದು ಅತ್ಯಂತ ದುರಂತದ ಸಂಗತಿಯಾಗಿದೆ. ಒಂದೆಡೆ ಕನ್ನಡದ ಪೂಜಾರಿಗೆ ಅವಮಾನ, ಇನ್ನೊಂದೆಡೆ ಅವರ ಆತ್ಮಗೌರವದ ಪ್ರಶ್ನೆ, ಇದನ್ನು ಮಾಧ್ಯಮದವರು ಗಮನಕ್ಕೆ ತಂದ ಮೇಲೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅದು ಸಣ್ಣ ವಿಷಯ ನಾನು ಬಗೆಹರಿಸುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ತಪಸ್ಸಿನ ರೂಪದಲ್ಲಿ ಅರ್ಚಕ ವೃತ್ತಿಯಲ್ಲಿ ತಮ್ಮದೇ ಆದ ಹೆಸರುಗಳಿಸಿದ ಕಣ್ಣನ್ ಅವರನ್ನು ಆದಾಯ ಇಲ್ಲ ಎಂಬ ಕಾರಣಕ್ಕೆ ಹಣ ವಾಪಸ್ ಕೊಡಲು ನೋಟಿಸ್ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಮುಜರಾಯಿ ಇಲಾಖೆ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ಇದು ಬಂದಿದೆ ಎಂದಾದರೆ ಈ ಕೂಡಲೇ ಸಂಬಂಧಿತ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಬೇಕು. ನಾಡಿನ ಪ್ರಸಿದ್ಧ ವಿದ್ವಾಂಸರಾದ ಕಣ್ಣನ್ ಅವರಂತಹವರಿಗೆ ಈ ರೀತಿ ಅವಮಾನವಾದರೆ ನಮ್ಮ ಸಂಸ್ಕøತಿಯ ಗತಿಯೇನು? ಪೂಜೆ ಮಾಡಲು ಯಾವ ಅರ್ಚಕರು ಮುಂದೆ ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ 50 ಸಾವಿರ ಅರ್ಚಕರಿಗೆ ಆದಾಯ ಕಡಿಮೆ ಎಂಬ ನೆಪವೊಡ್ಡಿ ಆದಾಯಕ್ಕೆ ಖೋತಾ ಮಾಡಿದರೆ ಅವರ ಪಾಡೇನು ಎಂದು ಪ್ರಶ್ನಿಸಿದ ಅವರು, ಆದಾಯ ಹೆಚ್ಚಿರುವ ದೇವಾಲಯಗಳಲ್ಲಿ ನೀವು ವೇತನ ಹೆಚ್ಚಳ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇಡೀ ದೇಶದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಭ್ರಮಾಚರಣೆಯಲ್ಲಿರುವಾಗ ಕೋದಂಡರಾಮನ ಅರ್ಚಕರಿಗೆ ಈ ಗತಿ ಆದರೆ, ಭಾರತೀಯ ಸಂಸ್ಕøತಿಯ ಗತಿ ಏನು? ನಿನ್ನೆಯ ಪ್ರತಿಷ್ಠಾಪನಾ ಮಹೋತ್ಸವವನ್ನು ದೇಶದ ಸಹಸ್ರಾರು ಗಣ್ಯರು, ಸಂತರು ಕಣ್ತುಂಬಿಕೊಂಡು ನಮ್ಮ ಜನ್ಮ ಸಾರ್ಥಕವಾಯ್ತು ಎಂದಿದ್ದಾರೆ. ರಾಮ ಮಂದಿರ ಕಟ್ಟಿ ಅಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದ್ದನ್ನು ಕಣ್ಣಾರೆ ನೋಡಿದ ನಾವೇ ಧನ್ಯರು ಎಂದು ಹೇಳಿದ್ದಾರೆ. ಆದರೆ, ಅವರಲ್ಲಿ ಎಲ್ಲಾ ಜಾತಿ ಧರ್ಮ ಪಕ್ಷದವರಿದ್ದಾರೆ. ಸಿದ್ಧರಾಮಯ್ಯನವರು ಮಾತ್ರ ಬಿಜೆಪಿ ರಾಮ ಎಂದು ಆರೋಪಿಸುತ್ತಾರೆ. ಮಹಾತ್ಮಾ ಗಾಂಧಿ ಸಮಾಧಿ ಮೇಲೆಯೂ ಹೇ ರಾಮ್ ಅಂತಿದೆ. ಅಲ್ಲಿ ಬಿಜೆಪಿ ಕಾಂಗ್ರೆಸ್ ರಾಮ ಎಂದಿಲ್ಲ. ಆ ರಾಮನನ್ನು ಕೂಡ ಒಡೆದು ಆಳುವ ಮಟ್ಟಕ್ಕೆ ಕಾಂಗ್ರೆಸ್ ನವರು ಹೋಗಿದ್ದಾರೆ. ಆದ್ದರಿಂದಲೇ ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ ಎಂದರು.
Also read: ಬಾಲರಾಮನಿಗೆ ಚಿನ್ನದ ಕಿರೀಟ ಕಾಣಿಕೆ ಕೊಟ್ಟ ವಜ್ರದ ವ್ಯಾಪಾರಿ | ಬೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ!
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ಸ್ಥಾನವೂ ಸಿಕ್ಕಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗುತ್ತದೆ. ಅಯೋಧ್ಯೆ ರಾಮನ ಬಗ್ಗೆ ಟೀಕೆ ಮಾಡಿದ ಸಿದ್ಧರಾಮಯ್ಯ ನಿನ್ನೆ ನಾನು ಕೂಡ ರಾಮ ಭಕ್ತ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಅದನ್ನು ನೋಡಿ ನನಗೆ ಸಂತೋಷವಾಗಿದೆ. ನಾನು ಇದರಲ್ಲಿ ರಾಜಕೀಯ ಬೆರೆಸಲು ಹೋಗುವುದಿಲ್ಲ. ದೇವರು ಅವರಿಗೆ ಇದೇ ರೀತಿಯಲ್ಲಿ ಮುಂದುವರೆಯುವ ಸದ್ಬುದ್ದಿ ನೀಡಲಿ. ರಾಮ ಇಡೀ ಪ್ರಪಂಚಕ್ಕೆ ಸೇರಿದವನು. ಬಿಜೆಪಿ ರಾಮ ಕಾಂಗ್ರೆಸ್ ರಾಮ ಎಂದು ಬೇರೆ ಬೇರೆ ಇಲ್ಲ. ರಾಮನ ಹೆಸರಲ್ಲಿ ಕೆಟ್ಟ ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post