ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಪದವೀಧರ ಕ್ಷೇತ್ರದಿಂದ South-West graduate constituency ನನಗೆ ಟಿಕೇಟ್ ಸಿಗುವುದು ಖಚಿತ. ಸ್ಪರ್ಧಿಸುವುದು ಖಚಿತ ಎಂದು ಪ್ರಬಲ ಆಕಾಂಕ್ಷಿ ಆಯನೂರು ಮಂಜುನಾಥ್ Ayanur Manjunath ಇಂದು ಪುನರುಚ್ಚರಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಹಲವು ತಿಂಗಳುಗಳಿಂದಲೇ ನೈರುತ್ಯ ಪದವೀದರ ಕ್ಷೇತ್ರ ಚುನಾವಣೆಗಾಗಿ ಕಾರ್ಯಾಲಯವನ್ನು ಸ್ಥಾಪಿಸಿ, ಕ್ಷೇತ್ರದಲ್ಲಿ ಓಡಾಡಿ ಚುನಾವಣೆಯ ಸಿದ್ಧತೆ ಮಾಡಿಕೊಂಡಿದ್ದೇನೆ. ಕಾಂಗ್ರೆಸ್ ರಾಜ್ಯ ನಾಯಕರು ಕೇಂದ್ರಕ್ಕೆ ನನ್ನ ಹೆಸರನ್ನು ಕೂಡ ಶಿಫಾರಸ್ಸು ಮಾಡಿದ್ದಾರೆ. ಕೇಂದ್ರದ ನಾಯಕರು ನನಗೆ ಟಿಕೇಟ್ ನೀಡುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ಆದ್ದರಿಂದಲೇ ನಾನು ಈಗಾಗಲೇ ಚುನಾವಣೆಯ ಸಿದ್ಧತೆ ಮಾಡಿಕೊಂಡು ಪ್ರಚಾರದಲ್ಲಿ ತೊಡಗಿದ್ದೇನೆ ಎಂದರು.
ಮುಖ್ಯಮಂತ್ರಿಗಳು ಪೊಲೀಸ್ನೌಕರರಿಗೆ ವಿಶೇಷ ಸೌಲಭ್ಯಗಳನ್ನು ಕೊಟ್ಟಿರುವುದು ಸ್ವಾಗತರ್ಹ. ಈ ಹಿಂದೆ ಪೊಲೀಸ್ ಇಲಾಖೆಯ ಕಲ್ಯಾಣಕ್ಕಾಗಿ ಔರಾದ್ಕರ್ ವರದಿಯನ್ನು ಜಾರಿ ಮಾಡಲಾಗಿತ್ತು. ಆದರೆ ಆ ವರದಿಯಿಂದ ಪೊಲೀಸರಿಗೆ ಏನು ಪ್ರಯೋಜನವಿಲ್ಲ ಎನ್ನುವುದು ಗೊತ್ತಾಗಿತ್ತು. ಅವರ ಜೇಷ್ಠತೆಯನ್ನೇ ಕಡೆಗಣನೆ ಮಾಡಲಾಗಿತ್ತು. ಈಗ ಮುಖ್ಯಮಂತ್ರಿಗಳು ಪೊಲೀಸ್ ನೌಕರರಿಗೆ ವೈದ್ಯಕಿಯ ತಪಾಸಣೆ ಭತ್ಯವನ್ನು 1000 ದಿಂದ 1500ಕ್ಕೆ ಹೆಚ್ಚಿಸಿದ್ದಾರೆ. ಇದು ಸ್ವಾಗತರ್ಹವಾಗಿದೆ. ಹಾಗೆಯೇ ಕಾರ್ಮಿಕ ಸಂಘಟನೆಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ತಿಳಿಸಿದ್ದಾರೆ. ಇದಕ್ಕೂ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ದಿನಕ್ಕೆ 12 ಗಂಟೆ ಕಾರ್ಮಿಕರು ಕೆಲಸ ಮಾಡಬೇಕಿತ್ತು. ಈಗ ಮೊದಲಿನಂತೆ 8 ಗಂಟೆಗೆ ಇಳಿಸಲು ಮತ್ತು ಕಾಯ್ದೆಗೆ ತಿದ್ದುಪಡಿ ಮಾಡಲು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.
-ಆಯನೂರು ಮಂಜುನಾಥ್
ನನಗೆ ನೌಕರರ ಬೆಂಬಲವಿದೆ. ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ವಿದ್ಯಾರ್ಥಿ ದಿನದಿಂದಲೂ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಾರ್ಮಿಕರ, ಪದವೀಧರರ, ಅತಿಥಿ ಉಪನ್ಯಾಸಕರ ಮುಂತಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ಇರುವ ಅವಕಾಶಗಳನ್ನೇಲ್ಲ ಬಳಸಿಕೊಂಡು ಸದನದ ಹೊರಗೆ ಒಳಗೆ ಹೋರಾಟ ಮಾಡುತ್ತ ಬಂದಿದ್ದೇನೆ. ಹಳೆ ಪಿಂಚಣಿ ವ್ಯವಸ್ಥೆಗಾಗಿ ಧ್ವನಿ ಎತ್ತಿದ್ದೇನೆ. ಅಲ್ಲದೇ 4 ವರ್ಷಗಳಿಂದ ಯಾವುದೇ ಸರ್ಕಾರವಿದ್ದರು ಸೈದ್ಧಾಂತಿಕವಾಗಿ ನೌಕರರ ಪರವಾಗಿ ಇದ್ದೇನೆ ಎಂದರು.
ಮತ್ತೊಬ್ಬ ಆಕಾಂಕ್ಷಿ ಎಸ್.ಪಿ.ದಿನೇಶ್ರವರು ನಿಮಗೆ ಗುರುಬಲವಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹೇಳಿರುವುದು ಬಿಜೆಪಿಯಲ್ಲಿ ನಿಮಗೆ ಗುರುಬಲ ಇಲ್ಲ ಎಂದು ಆದರೆ ನಾನು ಅವರಿಗೆ ಹೇಳಬಯಸುತ್ತೇನೆ. ನನಗೆ ಗುರುಬಲ ಇದೆ, ಹಾಗೆಯೇ ಅವರಿಗೆ “ಕುರುಬಲ”ವಿದೆ. ನಾನು ಯಾವುದೇ ರೀತಿಯ ಅನೈತಿಕ ರಾಜಕಾರಣ ಮಾಡುವವನ್ನಲ್ಲ. ಯಾವ ಪಕ್ಷದಲ್ಲಿ ಇರುತ್ತೇನೂ ಅದೇ ಪಕ್ಷಕ್ಕಾಗಿ ಹೋರಾಡುತ್ತೇನೆ. ಹಿಂದೆ ಬಿಜೆಪಿಯಲ್ಲಿದ್ದೆ, ಈಗ ಕಾಂಗ್ರೆಸ್ನಲ್ಲಿದ್ದೇನೆ. ಬಿಜೆಪಿಯ ನಾಯಕರ ವಿರುದ್ಧ ನನ್ನಷ್ಟು ಧ್ವನಿಯನ್ನು ಇವರ್ಯಾರು ಎತ್ತಿಲ್ಲ ಎಂದರು.
Also read: ಆದಾಯ ಕೊರತೆ ನೆಪದಲ್ಲಿ ಅರ್ಚಕರ ವೇತನ ಕಡಿತ ನೋಟಿಸ್: ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ
ಕಳೆದ ಚುನಾವಣೆಯಲ್ಲಿ ನಾನು ಅವರ ಏಜೆಂಟಾಗಿದ್ದೆ ಎಂದು ಅವರು ಹೇಳುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ನನ್ನ ಏಜೆಂಟಾಗಿ ಇರಲಿ, ಮುಂದಿನ ಬಾರಿ ಬೇಕಾದರೆ ಅವರು ಸ್ಪರ್ಧೆ ಮಾಡಲಿ. ಅವರು ನಮ್ಮ ಊರ ಪಕ್ಕದವರು. ಅವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ನಾವು ಪ್ರೀತಿಯನ್ನು ಕೊಡುವವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಧೀರರಾಜ್ ಹೊನ್ನಾವಿಲೆ, ಶಿ.ಜು.ಪಾಶ, ಐಡಿಯಲ್ ಗೋಪಿ, ಕೃಷ್ಣ, ಎಸ್.ವಿ.ಪಾಟೀಲ್, ಪವನ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post