ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಕಾರ್ಯ ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ #Justice Manjunath Nayak ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ.
ಈ ಕುರಿತಂತೆ ಉಚ್ಚ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಶಿವಮೊಗ್ಗದಿಂದ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ.
ಮಂಜುನಾಥ್ ನಾಯಕ್ ಅವರು 2023ರ ಜೂನ್ ತಿಂಗಳಿನಲ್ಲಿ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ನೇಮಕಾತಿ ನಿಭಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಶಿವಮೊಗ್ಗದಲ್ಲಿ ಪದಗ್ರಹಣ ಮಾಡಿದ್ದರು.
ಮಂಜುನಾಥ ನಾಯಕ್ ಅವರು ನವೆಂಬರ್ 3ರಂದು ಶಿವಮೊಗ್ಗ ನ್ಯಾಯಾಲಯದಿಂದ ಮುಕ್ತಗೊಂಡು, ನ.5ರಂದು ಬೆಳಗಾವಿಯಲ್ಲಿ ಪದಗ್ರಹಣ ಮಾಡಲಿದ್ದಾರೆ.
ಎಷ್ಟು ಪ್ರಕರಣ ಬಗೆ ಹರಿಸಿದ್ದಾರೆ?
ನ್ಯಾ.ಮಂಜುನಾಥ ನಾಯಕ್ ಅವರು ತಮ್ಮ ಸೇವಾ ಅವಧಿಯಲ್ಲಿ ಒಟ್ಟು 10 ರಾಷ್ಟ್ರೀಯ ಲೋಕ ಅದಾಲತ್’ಗಳನ್ನು ಶಿವಮೊಗ್ಗ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದ ಒಟ್ಟು 1,21,499 ಪ್ರಕರಣಗಳು ರಾಜಿ ಸಂಧಾನದ ಮೂಲಕ ಅಂತಿಮವಾಗಿ ವಿಲೇವಾರಿ ಮಾಡಲು ನ್ಯಾಯಾಧೀಶರಿಗೆ, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಹಾಗೂ ನ್ಯಾಯವಾದಿಗಳಿಗೆ ಮತ್ತು ಪಕ್ಷಗಾರರಿಗೆ ಮಾರ್ಗದರ್ಶನ ನೀಡಿ ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುದ್ದಾರೆ.
ತಮ್ಮ ಸೇವಾ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನೇಮಕಾತಿ ಮಾಡಿದ್ದು, ಸೇವೆಯಲ್ಲಿದ್ದ 54 ಸಿಬ್ಬಂದಿಗಳ ಸೇವೆಯನ್ನು ಪರಿಶೀಲಿಸಿ ಅವರಿಗೆ ಮುಂಬಡ್ತಿಯನ್ನು ನೀಡಿದ್ದಾರೆ. ಅಲ್ಲದೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 69 ಸಿಬ್ಬಂದಿಗಳು ತೃಪ್ತಿಕರವಾಗಿ ಪ್ರೊಬೇಷನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆದೇಶ ಹೊರಡಿಸಿ ಅಂತಹ ಸಿಬ್ಬಂದಿಗಳನ್ನು ಸಾರ್ವಜನಿಕ ಸೇವೆಯಲ್ಲಿ ಖಾಯಂಗೊಳಿಸಿ ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಪದಗ್ರಹಣ ಮಾಡಿದ ದಿನದಿಂದ ಈ ದಿನದವರೆಗೂ ಹಲವಾರು ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಿ ಉಚ್ಚ ನ್ಯಾಯಾಲಯ ನಿಗದಿಪಡಿಸಿದ ನಿಯಮಕ್ಕಿಂತ ಮೂರು ಪಟ್ಟು ಅಧಿಕ ಪ್ರಕರಣಗಳಲ್ಲಿ ಆದೇಶ ನೀಡುವುದರ ಮೂಲಕ ವಿಲೇಗೊಳಿಸಿದ್ದಾರೆ.
ಇನ್ನು, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಾಧಿಕಾರದ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳು ಹಾಗೂ ಅಭಿಯಾನಗಳಲ್ಲಿ ಅನೇಕ ಸರಕಾರಿ ಇಲಾಖೆಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ. ಈ ಮೂಲಕ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಮಾನ್ಯ ಜನರಿಗೆ ಕಾನೂನು ಅರಿವನ್ನು ನೀಡುವಲ್ಲಿ ಹಾಗೂ ಅರ್ಹ ವ್ಯಕ್ತಿಗಳಿಗೆ ಕಾನೂನು ನೆರವನ್ನು ನೀಡುವಲ್ಲಿ ಮತ್ತು ರಾಷ್ಟ್ರೀಯ ಲೋಕ ಅದಾಲತ್’ನಲ್ಲಿ ವಿಚಾರಣಾ ಹಂತದ ವಿವಿಧ ಸ್ವರೂಪದ ಪ್ರಕರಣಗಳು ಅಂತಿಮವಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















