ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಯೋಧ್ಯೆ ಶ್ರೀರಾಮ ದೇವರ ಪ್ರತಿಷ್ಠಾಪನೆಯ Ayodhya Shri Rama Mandira ಸಂಭ್ರಮದ ಅಂಗವಾಗಿ ಶಿವಮೊಗ್ಗ ಜಯನಗರದ ಶ್ರೀಸೀತಾರಾಮ ಮಂದಿರ ಟ್ರಸ್ಟ್ ವತಿಯಿಂದ ಜ.22ರಂದು ವಿಶೇಷ ಪೂಜೆ ಹಾಗೂ ರಾಜಬೀದಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ರಾಮಭಕ್ತ ಬಿ.ಎ. ರಂಗನಾಥ್ ಹಾಗೂ ಪ್ರಧಾನ ಅರ್ಚಕ ಸತೀಶ್ ಅಯ್ಯಂಗಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 500 ವರ್ಷಗಳ ಭಾರತೀಯರ ಸತತ ಹೋರಾಟ ಹಾಗೂ ಬಲಿದಾನದ ಫಲವಾಗಿ ಇಂದು ಶ್ರೀರಾಮನ ಭವ್ಯ ನಿರ್ಮಾಣ ಜ.22ರಂದು ಶ್ರೀರಾಮರ ಪ್ರತಿಷ್ಠಾಪನೆಯೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಇದೊಂದು ಅಭೂತಪೂರ್ವ ಸಂಭ್ರಮದ ಅಮೃತ ಘಳಿಗೆಯಾಗಿದೆ. ಇದು ನಮ್ಮ ಪೂರ್ವ ಸುಕೃತವು ಆಗಿದೆ. ಇಂತಹ ಕಾರ್ಯಕ್ರಮಕ್ಕೆ ಆಯೋಧ್ಯೆಗೆ ಹೋಗಿ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ಎಲ್ಲಿದ್ದಿವಿಯೋ ಅಲ್ಲಿಯೇ ಶ್ರೀರಾಮನನ್ನು ಆರಾಧಿಸಬೇಕಾಗಿದೆ. ಇದರ ಅಂಗವಾಗಿ ಶ್ರೀರಾಮಮಂದಿರದ ಟ್ರಸ್ಟ್ ಜ.22ರ ಬೆಳಿಗ್ಗೆ ಅಭಿಷೇಕ, ಕಿರೀಟಧಾರಣೆ, ಉತ್ಸವವನ್ನು ಹಮ್ಮಿಕೊಂಡಿದೆ ಎಂದರು.
ಬಹಳ ಮುಖ್ಯವಾಗಿ ಶ್ರೀರಾಮಮಂದಿರದಿಂದ ಸಂಜೆ 6.30ಕ್ಕೆ ರಾಜಬೀದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಉತ್ಸವದಲ್ಲಿ ಕೋಟೆ ಶ್ರೀ ಸೀತಾರಾಮಂಜನೇಯ ದೇವಸ್ಥಾನ, ಜಯನಗರದ ರಾಮಮಂದಿರ, ಜೆ.ಸಿ. ನಗರ ರಾಮಮಂದಿರ, ಬೊಮ್ಮನಕಟ್ಟೆ, ಬಾಪೂಜಿ ನಗರ, ದುರ್ಗಿಗುಡಿ ರಾಮಮಂದಿರಗಳ ದೇವರುಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದರು.
ರಾಜಬೀದಿ ಉತ್ಸವದಲ್ಲಿ ನಾದಸ್ವರ, ಡೊಳ್ಳು ಕುಣಿತ, ವೀರಗಾಸೆ, ಉಡುಪಿ ಚೆಂಡೆ, ಕೊಲ್ಲಾಟ, ವೇದಘೋಷ, ವೇಷಭೂಷಣ, ಭಜನೆ ಮುಂತಾದವುಗಳು ನಡೆಯುತ್ತವೆ. ರಾಜಬೀದಿ ಸಾಗುವ ದಾರಿಗಳಲ್ಲಿ ಪ್ರಮುಖವಾಗಿ ಮೆಟ್ರೋ ಆಸ್ಪತ್ರೆ ಬಳಿ, ಉಷಾ ನರ್ಸೀಂಗ್ ಹೋಂ ಬಳಿ ಹಾಗೂ ವಿನಾಯಕ ಬಡಾವಣೆಗಳಲ್ಲಿ ವಿಶೇಷ ದೀಪದ ವ್ಯವಸ್ಥೆ ಮಾಡಲಾಗಿದೆ. ವಿನಾಯಕ ನಗರದದಲ್ಲಿ ಸುಮಾರು 5 ಸಾವಿರ ದೀಪಗಳನ್ನು ಹಚ್ಚಲಾಗುತ್ತದೆ. ನಂತರ ನವ್ಯಶ್ರೀ ಸಭಾಂಗಣದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಮಹತ್ವದ ರಾಜಬೀದಿ ಉತ್ಸವದಲ್ಲಿ ಹಾಗೂ ವಿಶೇಷ ಪೂಜೆಗಳಲ್ಲಿ ಶ್ರೀರಾಮ ಭಕ್ತರು, ಉಪಾಸಕರು, ಆರಾಧಕರು, ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀರಾಮಚಂದ್ರನ ಸಂಪೂರ್ಣ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶೃಂಗೇರಿ ನಾಗರಾಜ್, ದಿನೇಶ್ ಶೇಟ್, ನವ್ಯಶ್ರೀ ನಾಗೇಶ್, ರಾಜೇಂದ್ರ, ಚಂದ್ರಶೇಖರ್, ಸಂತೋಷ್ ಬಳ್ಳಕೆರೆ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post