ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭರತನಾಟ್ಯ ಕಲಾವಿದೆ ರೋನಿತಾ ನವಲೆ ಇವರ ಭರತನಾಟ್ಯ ರಂಗಪ್ರವೇಶ ಜೂ.19ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಭರತನಾಟ್ಯ ಗುರು ವಿದುಷಿ ಪುಷ್ಪಾ ಕೃಷ್ಣಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೋನಿತಾ ನವಲೆ ತಮ್ಮ ಶಿಷ್ಯೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈಗಾಗಲೇ ಅವರು 100ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹಲವು ಬಾರಿ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕೊಡಚಾದ್ರಿ ವೈಭವ, ನವರಾತ್ರಿ ಉತ್ಸವ, ಯುವಸೌರಭ, ಜಾನಪದ ಉತ್ಸವ ಹಾಗೂ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ, ಧಾರ್ಮಿಕ ಉತ್ಸವಗಳಾದ ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ. ಸುಮಾರು 16 ವರ್ಷಗಳಿಂದ ಕಲಿತು ಈಗ ಸ್ವತಂತ್ರವಾಗಿ ನೃತ್ಯ ಮಾಡುವಷ್ಟು ಪ್ರತಿಭೆಯನ್ನು ಬೆಳೆಸಿಕೊಂಡಿದ್ದಾರೆ ಎಂದರು.
ಭರತನಾಟ್ಯದಲ್ಲಿ ರಂಗ ಪ್ರವೇಶ ಎನ್ನುವುದು ಬಹಳ ಮುಖ್ಯವಾದ ಘಟ್ಟವಾಗುತ್ತದೆ. ಇದನ್ನು ರಂಗಾಭಿವಂದನೆ ಎಂದು ಕರೆಯುತ್ತಾರೆ. ಯಾವುದೇ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯವನ್ನು ಪ್ರದರ್ಶಿಸಲು ಈ ರಂಗಪ್ರವೇಶ ಬುನಾದಿ ನೀಡುತ್ತದೆ. ತುಂಬಾ ಕ್ರಿಯಾಶೀಲತೆಯಿಂದ ಅಭ್ಯಾಸ ಮಾಡಿರುವ ರೋನಿತಾ ನವಲೆ ಅವರ ಮುಂದಿನ ಭರತನಾಟ್ಯ ಕಲಾಜೀವನ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನನ್ನದು ಎಂದರು.
ನಾಳಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್. ಈಶ್ವರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವದಿ, ಸುಗಮ ಸಂಗೀತಗಾರ ಆನಂದ ಮಾದಲಗೆರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿದೇಶಕ ಹೆಚ್. ಉಮೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಶ್ರೀಧರಮೂರ್ತಿ ನವಲೆ ಅವರು ಭಾಗವಹಿಸಲಿದ್ದಾರೆ ಎಂದರು.
Also read: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ 5 ಲಕ್ಷ ರೂ. ಸಹಾಯಧನ
ರೋನಿತಾ ನವಲೆ ಅವರ ತಾಯಿ ವಿನಿತಾ ರಾಜೇಶ್ ನವಲೆ ಮಾತನಾಡಿ, ನನ್ನ ಮಗಳ ಬಹುದೊಡ್ಡ ಕನಸು ರಂಗಪ್ರವೇಶವಾಗಿದ್ದು, ನಾಟ್ಯಗುರು ವಿದುಷಿ ಪುಷ್ಪಾ ಕೃಷ್ಣಮೂರ್ತಿಯವರು ತಮ್ಮ ವಿದ್ವತ್ತನ್ನು ಧಾರೆ ಎರೆದು ಆಕೆಯನ್ನು ಕಲಾವಿದೆಯನ್ನಾಗಿ ರೂಪಿಸಿದ್ದಾರೆ. ನಾಳಿನ ರಂಗಪ್ರವೇಶ ಕಾರ್ಯಕ್ರಮಕ್ಕೆ ಕಲಾಸಕ್ತರೆಲ್ಲರೂ ಆಗಮಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಧರಮೂರ್ತಿ ನವಲೆ, ಗಿರೀಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post