ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜವಾದವೇ ಸಂಯುಕ್ತ ಜನತಾದಳದ ಅಡಿಪಾಯ ಎಂದು ಸಂಯುಕ್ತ ಜನತಾದಳದ ಮುಖಂಡ ಮಹಿಮಾ ಪಟೇಲ್ Mahima Patel ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜವಾದದ ಸಿದ್ಧಾಂತಗಳು ಜೆಡಿಯು ಮೇಲೆ ದಟ್ಟ ಪರಿಣಾಮ ಬೀರಿದೆ. ರಾಜಕಾರಣದ ದೃಷ್ಟಿಕೋನಗಳೇ ಇಂದು ಬದಲಾಗಬೇಕಾಗಿದೆ. ಎಲ್ಲವನ್ನೂ ಸರ್ಕಾರದ ಅವಲಂಬನೆಯಿಂದಲೇ ಮಾಡಬೇಕು ಎಂಬುದು ಸರಿಯಲ್ಲ. ಚುನಾವಣೆಲ್ಲಿ ಕೂಡ ಸುಧಾರಣೆ ಆಗಬೇಕಾಗಿದೆ ಎಂದರು.
ರಾಜಕಾರಣದಲ್ಲೂ ಸಾವಯವ ಪದ್ಧತಿ ಜಾರಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 11, 12, 13ರಂದು ರಾಣೆಬೆನ್ನೂರು ತಾಲೂಕು ಮದೆನೂರು ಗ್ರಾಮದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಎರಡು ದಿನ ಸಂವಾದ, ನಾಟಕ, ಸಿನೆಮಾ ಪ್ರದರ್ಶನ, ಸಾವಯವ ಕೃಷಿ-ಶಿಕ್ಷಣ ತಜ್ನರು, ಅಕಾರ ವಿಕೇಂದ್ರೀಕರಣದ ಕುರಿತು ಆಸಕ್ತರ ಜೊತೆ ಮಾತುಕತೆ ನಡೆಯಲಿದೆ ಎಂದರು.
ರಾಜಕೀಯ ಪಕ್ಷಗಳಿಗೆ ಉಚಿತ ಕೊಡುಗೆಗಳ ಘೋಷಣೆ ನೀಡುವುದು ಒಂದು ಚಟವಾಗಿದೆ. 200 ಯೂನಿಟ್ ಉಚಿತ ವಿದ್ಯುತ್ ಕೊಡುವುದು, ಮಹಿಳೆಯರಿಗೆ 2000 ರೂ. ಕೊಡುವುದು, ರೈತರಿಗೆ 6000ರೂ. ಕೊಡುವುದು ಸೇರಿದಂತೆ ಯಾವುದನ್ನೂ ಉಚಿತವಾಗಿ ಕೊಡಬಾರದು. ಆನರ ಜೀವನ ಸರ್ಕಾರದ ನೆರವಿನಿಂದ ನಡೆಯುವುದು ಸೂಕ್ತವಲ್ಲ. ಇದರಿಂದ ಜನರು ಸೋಮಾರಿಗಳಾಗುತ್ತಾರೆ. ಅಥವಾ ದೇಶಕ್ಕೆ ಆರ್ಥಿಕ ಹೊರೆ ಆಗುತ್ತದೆ. ನಾಗರಿಕರನ್ನು ರಾಜಕೀಯ ಪಕ್ಷಗಳು ಭಿಕ್ಷುಕರ ತರ ನೋಡುತ್ತಿವೆ. ಭಿಕ್ಷುಕರನ್ನೂ ಶಕ್ತಿವಂತರನ್ನಾಗಿ ಮಾಡುವ ಕೆಲಸ ಆಗಬೇಕಾಗಿದೆ. ಎಲ್ಲವನ್ನೂ ಸರ್ಕಾರ ಮಾಡಲು ಆಗುವುದಿಲ್ಲ. ನಾವೂ ಕೂಡ ಸರ್ಕಾರದ ಭಾಗ ಎಂಬುದು ಎಲ್ಲರಿಗೂ ತಿಳಿಯಬೇಕು.
ಮಹಿಮಾ ಪಟೇಲ್, ಸಂಯುಕ್ತ ಜನತಾದಳದ ಮುಖಂಡ
ಫೆ.13ರಂದು ರೈತ ಸಂಘದ ಸಂಸ್ಥಾಪಕ ಪ್ರೊ.ನಂಜುಂಡಸ್ವಾಮಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ರಾಜ್ಯ ಮತ್ತು ದೇಶದಲ್ಲಿ ಹೊಸ ಚಳುವಳಿ ಆರಂಭವಾಗವೇಕು. ರಾಜಕಾರಣ ಮತ್ತು ಜೀವನ ಸಾವಯವದಿಂದ ಕೂಡಿರಬೇಕು ಎಂಬ ಹಿನ್ನೆಲೆಯಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ. ಎಲ್ಲಾ 224 ಕ್ಷೇತ್ರಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಹಾಗಂತ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ಇಲ್ಲ. ಅಭ್ಯರ್ಥಿಗಳ ಹಿನ್ನೆಲೆ, ಆಸಕ್ತಿ ಎಲ್ಲವನ್ನೂ ಗಮನಿಸಿ ಟಿಕೆಟ್ ನೀಡಲಾಗುವುದು. ಕನಿಷ್ಟ 140 ಸ್ಥಾನಗಳಲ್ಲಿಯಾದರೂ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದರು.
ಎಲ್ಲರೂ ಒಂದಾಗಿ ಚುನಾವಣೆ ಎದುರಿಸುವ ಸಂಬಂಧ ರೈತ ಸಂಘದ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ. ಅದರಂತೆ ಆಮ್ ಆದ್ಮಿ, ಕೆಆರ್ಎಸ್ ಪಕ್ಷ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಮುಖಂಡರ ಜೊತೆಯೂ ಮಾತುಕತೆ ನಡೆಸಲಾಗುತ್ತಿದೆ. ಇನ್ನೂ ಒಂದಾಗಲು ಕಾಲ ಪಕ್ವವಾಗಿಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ ಶಿಂಧೆ, ಪ್ರಮುಖರಾದ ಶಶಿಕುಮಾರ್ ಗೌಡ, ನವೀನ್ ದಳವಾಯಿ, ರವಿ, ಕಲ್ಪನಾ ಗೌಡ, ಕಲಾವತಿ, ಶಿವರಾಮ್, ರಮೇಶ್ ಗೌಡ ಸುದ್ದಿಗೋಷ್ಟಿಯಲ್ಲಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post