ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಯನೂರು ಗೇಟ್ ಸರ್ಕಲ್ನಲ್ಲಿ Ayanuru Gate Circle ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಸಂಚಾರ ಸಮಸ್ಯೆಗಳನ್ನು ನಿಯಂತ್ರಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಮೇರೆಗೆ, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ನಾಲ್ಕು ದಾರಿಗಳ ಕೂಡು ರಸ್ತೆ (ಜಂಕ್ಷನ್) ಯಲ್ಲಿ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈಗಾಗಲೇ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗಿದೆ. ಆಯನೂರು ಗೇಟ್ ಸರ್ಕಲ್ವು ಹೆಲಿಪ್ಯಾಡ್ ಸರ್ಕಲ್, ಸಾಗರ ರಸ್ತೆ, ಗೋಪಾಳ ಹಾಗೂ ಶರಾವತಿ ನಗರ ಮಾರ್ಗಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿದೆ.
ಇದೇ ಸಂದರ್ಭದಲ್ಲಿ, ಸರ್ಕಲ್ ಸಮೀಪದಲ್ಲಿರುವ ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಗ್ಯಾರೇಜ್ಗಳು ಹಾಗೂ ವಾಹನ ದುರಸ್ತಿ ಅಂಗಡಿಗಳಿಂದಾಗಿ ಹೆಚ್ಚುವರಿ ವಾಹನ ಸಂಚಾರ ಉಂಟಾಗುತ್ತಿದೆ. ನಿಯಮಾನುಸಾರವಾಗಿ, ಆಟೋ ಕಾಂಪ್ಲೆಕ್ಸ್ಗೆ ತೆರಳುವ ವಾಹನಗಳು ಎಪಿಎಂಸಿ ಮುಂಭಾಗದ ಡಿವೈಡರ್ ಮಾರ್ಗವನ್ನು ಬಳಸಬೇಕು. ಆದರೆ, ಅನೇಕ ವಾಹನ ಸವಾರರು ಈ ಮಾರ್ಗವನ್ನು ಅನುಸರಿಸದೇ, ಆಯನೂರು ಗೇಟ್ ಸಿಗ್ನಲ್ ಬಳಿ ವಿರುದ್ಧ ದಿಕ್ಕಿನಲ್ಲಿ ಸಾಗುವ ವಾಹನಗಳಿಗೆ ಎದುರಾಗಿ ನೇರವಾಗಿ ಪ್ರವೇಶಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
Also read: ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ಸುಗಮತೆಗೆ ಆದ್ಯತೆ ನೀಡುವ ಉದ್ದೇಶದಿಂದ, ಆಯನೂರು ಗೇಟ್ ಸಿಗ್ನಲ್ನಲ್ಲಿ ಆಲ್ಗೊಳ ಸರ್ಕಲ್ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುವ ವಾಹನಗಳಿಗೆ ಎದುರಾಗಿ ಆಟೋ ಕಾಂಪ್ಲೆಕ್ಸ್ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ನಿಷೇಧಿಸಿ ‘ನೋ ಎಂಟ್ರಿ’ ನಿಯಮ ಜಾರಿಗೆ ತರಲಾಗಿದೆ.
ಈ ಆದೇಶವನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 221(ಎ)(5) ಅನ್ವಯ ಜಾರಿಗೊಳಿಸಲಾಗಿದೆ.
ಈ ಅಧಿಸೂಚನೆ ಜೂನ್ 8, 2026ರಿಂದ ಜಾರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















