ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀ ಭಗವದ್ಗೀತಾ ಅಭಿಯಾನ #Shri Bhagavadgeetha Abhiyana ಕರ್ನಾಟಕ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸ್ವರ್ಣರಶ್ಮೀ ಟ್ರಸ್ಟ್ ಶಿವಮೊಗ್ಗದ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ-2025ನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಸಂಕಲ್ಪದಂತೆ ಇಡೀ ರಾಜ್ಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕೂಡ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶ್ರೀ ಭಗವದ್ಗೀತೆ 11ನೇ ಅಧ್ಯಾಯದ ಪಠಣ ಆರಂಭವಾಗಿದೆ ಎಂದರು.
5ನೇ ತರಗತಿಯಿಂದ ಪದವಿಪೂರ್ವ ತರಗತಿಗಳವರೆಗೆ ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಈಗಾಗಲೇ ಶಿವಮೊಗ್ಗ ತಾಲ್ಲೂಕಿನಲ್ಲಿ 135 ಶಿಕ್ಷಣ ಸಂಸ್ಥೆಗಳಲ್ಲಿ ಅಭಿಯಾನ ಆರಂಭವಾಗಿದೆ. ಪಠಣ ಹೇಳಿಕೊಡಲು 50 ಶಿಕ್ಷಕರನ್ನು ಸಜ್ಜುಗೊಳಿಸಲಾಗಿದೆ. ಇನ್ನೂ 50 ಪ್ರಶಿಕ್ಷಕರು ಸಜ್ಜುಗೊಳ್ಳುತ್ತಿದ್ದಾರೆ ಎಂದರು.
ವಿಶ್ವರೂಪ ದರ್ಶನದ 11ನೇ ಅಧ್ಯಾಯದ ಎಲ್ಲಾ ಶ್ಲೋಕಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು 11ನೇ ಅಧ್ಯಾಯದ ಎಲ್ಲಾ ಶ್ಲೋಕಗಳನ್ನು ಕಂಠಪಾಠ ಮಾಡಬೇಕು. 5 ನಿಮಿಷದ ಅವಧಿಯೊಳಗೆ ನಿರ್ಣಾಯಕರು ಸೂಚಿಸುವ ಯಾವುದೇ 10 ಶ್ಲೋಕಗಳನ್ನು ಅನುಕ್ರಮವಾಗಿ ಹೇಳಬೇಕು. ಹಾಗೆಯೇ ಭಾಷಣಸ್ಫರ್ಧೆಯನ್ನು ಕೂಡ ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗುವುದು. ತಾಲ್ಲೂಕು ಮಟ್ಟದ ಸ್ಪರ್ಧೆಗಳು ನ.22ರೊಳಗೆ, ಜಿಲ್ಲಾ ಮಟ್ಟದ ಸ್ಪರ್ಧೆಗಳು ನ.25ರೊಳಗೆ ನಡೆಯಲಿದೆ. ರಾಜ್ಯಮಟ್ಟದ ಸ್ಫರ್ಧೆ ನ.29ರಂದು ನಡೆಯಲಿದೆ ಎಂದರು.
ಈ ಹಿನ್ನಲೆಯಲ್ಲಿ ಇಂದು ಸಂಜೆ 9.30ಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಶಿವಮೊಗ್ಗದ ಶ್ರೀ ಶೃಂಗೇರಿ ಶಂಕರ ಮಠಕ್ಕೆ ಆಗಮಿಸಲಿದ್ದು, ಸೆ.9ರ ಸಂಜೆ 4 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳ ಪ್ರಶಿಕ್ಷಕರ ಪ್ರವಚನ ಸಂಚಾಲಕರ ಸಭೆಯನ್ನು ನಡೆಸಲಿದ್ದಾರೆ. ಸೆ.10ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಾಂಶುಪಾಲರುಗಳ ಜೊತೆ ವರ್ಚುವೆಲ್ ಸಭೆ ನಡೆಯಲಿದೆ. ಹಾಗೂ ಸಂಜೆ 6 ಗಂಟೆಗೆ ಶಿವಮೊಗ್ಗದ ಹಾಲಿ ಮತ್ತು ಮಾಜಿ ಶಾಸಕರ, ಮುಖಂಡರ ಸಭೆಯನ್ನು ಶಂಕರಮಠದಲ್ಲಿ ನಡೆಸಲಾಗುವುದು ಎಂದರು.
ನ.30ರಂದು ಮಹಾಸಮರ್ಪಣೆ
ನ.30ರಂದು ಶಿವಮೊಗ್ಗ ಫ್ರೀಡಂಪಾರ್ಕ್ನಲ್ಲಿ ಅಭಿಯಾನದ ಮಹಾ ಸಮರ್ಪಣೆ ನಡೆಯಲಿದೆ. ಮಹಾಸಮರ್ಪಣೆ ಕಾರ್ಯಕ್ರಮವನ್ನು ಸಧ್ಯಕ್ಕೆ ಫ್ರೀಡಂಪಾರ್ಕ್ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಸುಮಾರು 15 ಸಾವಿರ ಮಕ್ಕಳು ಸೇರಿದಂತೆ 25 ಸಾವಿರ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಭಿಯಾನದ ಅಧ್ಯಕ್ಷ ಡಿ.ಎಸ್. ಅರುಣ್ ಹೇಳಿದರು.
ವ್ಯಕ್ತಿತ್ವ ವಿಕಸನ ಮತ್ತು ಉತ್ತಮ ಸಮಾಜದ ನಿರ್ಮಾಣ ಅಗತ್ಯ ಇಂದು ಇದೆ. ಸಮಾಜದಲ್ಲಿಂದು ವಿಕೃತ ಮನಸ್ಸುಗಳೇ ಇವೆ. ಇದನ್ನು ಓಡಿಸಿ, ಸದ್ಭಾವನೆ, ಸದಾಚಾರವನ್ನು ಮೂಡಿಸುವಲ್ಲಿ ಗೀತಾಪಠಣ ಸಹಕಾರಿಯಾಗಲಿದೆ. ಯಾವುದೇ ಜಾತಿ, ಧರ್ಮ ಇಲ್ಲದೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸಾಮಾಜಿಕ, ಸಾಮರಸ್ಯದ ಈ ಉನ್ನತ ಅಭಿಯಾನಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್, ಲಕ್ಷ್ಮೀ ನಾರಾಯಣ ಕಾಶಿ, ಮೋಹನ್ ಜಾದವ್, ಮ.ಸ. ನಂಜುಂಡಸ್ವಾಮಿ, ಡಿ.ಎಂ. ಹೆಗಡೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post