ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯು ತಾಲ್ಲೂಕು ಸಮಿತಿ ಮತ್ತು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಂತರ್ಜಾಲೀಯ ಸಂಪರ್ಕದಲ್ಲಿ ಶ್ರೀವ್ಯಾಸ ಜಯಂತಿಯನ್ನು ಆಚರಿಸಲಾಯಿತು.
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಬೆಂಗಳೂರಿನ ಸಂಸ್ಥೆಯಲ್ಲಿ ಪಾಲಿಯೋಗ್ರಫಿ & ಮ್ಯಾನ್ ಸ್ಕ್ರಿಪ್ಟಾಲಜಿ ವಿಭಾಗದಲ್ಲಿ ತಜ್ಞರಾಗಿರುವ ಶ್ರೀಸದ್ಯೋಜಾತ ಭಟ್ ಮತ್ತು ಆದಿಚುಂಚನಗಿರಿ , ಶ್ರೀಕಾಲಭೈರವೇಶ್ವರ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ಡಾ.ಮಧುಸೂದನ ಅಡಿಗ ಮುಖ್ಯ ಚಿಂತನಕಾರರಾಗಿ ಉಪಸ್ಥಿತರಿದ್ದರು.
ಶ್ರೀವ್ಯಾಸರಿಗೆ ಮಹಾಭಾರತ ರಚನೆ& ಪ್ರೇರಣೆಗಳ ಬಗ್ಗೆ ಶ್ರೀಸದ್ಯೋಜಾತ ಭಟ್ಟರು ತಿಳಿಸಿಕೊಟ್ಟರು. ವೇದಮೂಲದ ಚಿಂತನೆಗಳನ್ನು ವ್ಯಾಸರು ಮತ್ತಷ್ಟು ಜನಮಾನಸದಲ್ಲಿ ಉಳಿಸುವ ದೃಷ್ಟಿಯಿಂದ ಪಾತ್ರಗಳ ಮೂಲಕ ಮಹಾಭಾರತ ಕಥೆ ನಿರೂಪಿಸುವ ತಂತ್ರದಿಂದ ಈ ಕಾವ್ಯ ರಚಿಸಿರಬಹುದು. ನಕ್ಷತ್ರಗಳ ಹುಟ್ಟು , ವನಪರ್ವದಲ್ಲಿ ನಿರೂಪಿತವಾಗಿದೆ. ಮಯನಿಂದ ನಿರ್ಮಾಣಗೊಂಡ ಇಂದ್ರಪ್ರಸ್ಥ ಈಗ ದೆಹಲಿಯಾಗಿದೆ. ಹಲವು ಪ್ರದೇಶಗಳ ಉಲ್ಲೇಖ ಭಾರತದಲ್ಲೇ ಇದ್ದು ,ಮಹಾಭಾರತ ಘಟನೆ ಇಲ್ಲಿಯೇ ಘಟಿಸಿದ ದಾಖಲೆಯನ್ನೂ ವ್ಯಾಸರ ಕೃತಿಯಲ್ಲಿ ಕಾಣಬಹುದು. ವೇದಗಳನ್ನು ವಿಭಾಗಿಸಿದ ನಂತರ ಅದರ ಚಿಂತನೆಗಳನ್ನು ಸುಲಲಿತ ಹಂಚಿಕೊಳ್ಳುವ ಹಿನ್ನೆಲೆ, ಪ್ರೇರಣೆ ಅವರಲ್ಲಿ ಕಂಡುಬರುತ್ತದೆ ಎಂದರು.
ಮಹಾಭಾರತದಲ್ಲಿ ನನ್ನ ಮೆಚ್ಚಿನ ಪಾತ್ರಗಳು ಕುರಿತು ಡಾ.ಮಧುಸೂದನ ಅಡಿಗ ಮಾತನಾಡಿ, ಕಾವ್ಯವನ್ನು ಆಸ್ವಾದಿಸುತ್ತಿದ್ದಂತಯೇ ಸಹೃದಯನನ್ನು ಸಂಪೂರ್ಣ ಆವರಿಸಿಕೊಳ್ಳುವ ಪಾತ್ರ , ಶ್ರೀಕೃಷ್ಷ. ” ಯೋಗಕ್ಷೇಮಂ ವಹಾಮ್ಯಹಂ ” ಕೃಷ್ಣನ ಒಂದು ಮಹದ್ ವ್ರತವಾಗಿದೆ. ಶರಣು ಬಂದವರನ್ನ ಪೊರೆಯುವ ಧೀಃಶಕ್ತಿಯಾಗಿ,ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸಿಲುಕಿದ ಪಾಂಡವರನ್ನು ರಕ್ಷಿಸುತ್ತಾನೆ. ಧರ್ಮದ ಪಕ್ಷಪಾತಿಯಾಗಿ, ಸಂಭವಾಮಿ ಯುಗೇ ಯುಗೇ ಎಂಬಂತೆ ಅಧರ್ಮಿಗಳ ಶಿಕ್ಷೆಗೆ ಅವತರಿಸಿದ ಕೃಷ್ಣ ಎಲ್ಲೂ ಕಿಂಚಿತ್ ತನ್ನ ತೋಲನ ತಪ್ಪುವುದಿಲ್ಲ. ಇದು ವ್ಯಾಸರ ಕೃಷ್ಣನ ಪಾತ್ರ ನಿರೂಪಣೆ. ದ್ರೌಪದಿಯ ಅಕ್ಷಯಾಂಬರ ಪ್ರಸಂಗ, ದೂರ್ವಾಸಾತಿಥ್ಯ ಇತ್ಯಾದಿ ಪ್ರಸಂಗಗಳಲ್ಲಿ ಕೃಷ್ಣ ತನ್ನ ಜಾಣ್ಮೆ,ಜವಾಬ್ದಾರಿಯಿಂದ ಇಡೀ ಜಗತ್ತಿಗೆ ಭಾರತೀಯ ಸನಾತನ ಧರ್ಮದ ಶ್ರೇಷ್ಠತೆಯನ್ನ ಸಾರಿಹೇಳಿದ್ದಾನೆ ಎಂದರು.
ಅಕ್ಷಯಾಂಬರ ಸನ್ನಿವೇಶದಲ್ಲಿ ಕೃಷ್ಣ ಬಾರದೇ, ಕೌರವರಿಂದ ಅಚಾತುರ್ಯವಾಗಿದ್ದಿದ್ದರೆ ಭಾರತೀಯತೆಯ ಬಿಂಬವೇ ಛಿದ್ರವಾಗಿ ಬಿಡುತ್ತಿತ್ತು. ಆದರೆ ಹಾಗಾಗಲು ಬಿಡದೇ ಸ್ರ್ತೀ ಸಂರಕ್ಷಣೆ, ಗೌರವ ಪ್ರತಿಪಾದನೆಯ ತತ್ವಗಳನ್ನ ಪ್ರಕಾಶಿಸಿದ್ದಾನೆ. ಕೃಷ್ಣನ ಪಾತ್ರ ಆಕರ್ಷಣೀಯ, ಮನೋಹರ. ಆತನ ಬುದ್ಧಿಕುಶಲತೆ ಅನನ್ಯವಾಗಿ ವರ್ಣಿಸಲ್ಪಟ್ಟಿದೆ ಎಂದರು.
ಶಿವಮೊಗ್ಗ ಸಮಿತಿಯ ಲಕ್ಷ್ಮೀ ಮಹೇಶ್ ಪ್ರಾರ್ಥಿಸಿದರು. ಅಭಾಸಾಪ ವಿಭಾಗೀಯ ಸಂಚಾಲಕ ಹರ್ಷಭಟ್ ಪ್ರಾಸ್ತಾವಿಕ ನುಡಿಯಾಡಿದರು. ಸಾಗರ ಸಮಿತಿಯ ಗಜಾನನ ಭಟ್ ಎಲ್ಲರಿಗೂ ಸ್ವಾಗತ ಕೋರಿದರು.
ಸಮಿತಿ ಸದಸ್ಯರಾದ ಫ್ರೊ.ಜೆ ಎಸ್ ಸದಾನಂದ ಚಿಂತನಕಾರರ ಪರಿಚಯ ಮಾಡಿಕೊಟ್ಟರು. ಸಮಿತಿಯ ಕಾರ್ಯದರ್ಶಿ ಸತ್ಯನಾರಾಯಣರಾವ್ ಸದಸ್ಯತ್ವ ಅಭಿಯಾನದ ಬಗ್ಗೆ ಎಲ್ಲರ ಗಮನ ಸೆಳೆಯುವ ಮಾಹಿತಿ ನೀಡಿದರು. ಸಾಗರದ ಸಮಿತಿಯ ಗಜಾನನ ಭಟ್, ಶರಾವತಿ ರಾವ್ ,ಹೊಸನಗರ ಸಮಿತಿಯ ಶ್ರೀಅಂಬ್ರಯ್ಯ ಮಠ ,ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಸುಧೀಂದ್ರ, ವಿಭಾಗೀಯ ಸಂಚಾಲಕ ಶ್ರೀಹರ್ಷಭಟ್ ಪ್ರತಿಕ್ರಿಯೆ ನೀಡಿದರು.
ಜಿಲ್ಲಾ ಸಮಿತ ಕೋಶಾಧಿಕಾರಿ ಕೆ.ಜಿ. ಮಂಜುನಾಥ ಶರ್ಮ ವಂದನೆ ಅರ್ಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post