ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವೇಶ್ವರಯ್ಯನವರ ತಾಂತ್ರಿಕ ಕೌಶಲ್ಯತೆ, ಪ್ರಾಯೋಗಿಕ ಕಾರ್ಯ ತತ್ಪರತೆ ಹಾಗೂ ಸಮಾಜಮುಖಿ ಗುಣಗಳನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ತನ್ಮೂಲಕ ತಾವು ಹುಟ್ಟಿ ಬೆಳೆದ ಸಮಾಜಕ್ಕೆ ತೃಣಮಾತ್ರದ ಕೊಡುಗೆಗಳನ್ನು ನೀಡುವಲ್ಲಿ ಶ್ರಮಿಸಬೇಕು ಎಂದು ಶಿವಮೊಗ್ಗ ಈಶ್ವರ್ ಸ್ಟೀಲ್ ಟೆಕ್ ಪ್ರೈವೇಟ್ ಕಂಪೆನಿಯ ಮಾಲೀಕರಾದ ಟಿ.ಎನ್. ಪರಮಶೇಖರ್ ಕರೆ ನೀಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ PESITM ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ ವತಿಯಿಂದ ಇಂದು ಜರುಗಿದ ರಾಷ್ಟ್ರೀಯ ಇಂಜಿನಿಯರ್ಸ್ ಡೇ Engineers Day ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿ ವೃಂದವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಧ್ಯೇಯೋದ್ದೇಶಗಳಿಂದ ಕೂಡಿದ ಗುರಿಗಳನ್ನು ಮನಸ್ಸಿನಲ್ಲಿ ಕೇಂದ್ರೀಕರಿಸಿಕೊಂಡು ತನ್ಮೂಲಕ ಆ ಗುರಿಗಳನ್ನು ತಲುಪಲು ಅದ್ವಿತೀಯ ಪ್ರಯತ್ನಗಳನ್ನು ಪ್ರಖರವಾಗಿ ಮಾಡಬೇಕು. ಈ ಮೂಲಕ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ತಾವು ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಪೋಷಕರಿಗೆ ಋಣಿಯಾಗುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
Also read: ಗಡಿಯಲ್ಲಿ ಗುಂಡಿನ ಚಕಮಕಿ | ಕರ್ನಲ್, ಮೇಜರ್ ಸೇರಿ ವೀರಸ್ವರ್ಗ ಸೇರಿದ ನಾಲ್ವರು ಯೋಧರು
ತಮ್ಮ ಹಾಗೂ ವಿಶ್ವೇಶ್ವರಯ್ಯನವರ ಕಾಲಘಟ್ಟದ ಹಲವಾರು ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಸೂಚ್ಯವಾಗಿ ವಿವರಿಸಿದ ಅವರು, ಇಂಜಿನಿಯರಿಂಗ್ ಪದವಿಯನ್ನು ಅಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ನಮ್ಮ ಭಾರತ ದೇಶದ ಅನ್ಹೂಯ ರತ್ನಗಳಲ್ಲಿ ಒಬ್ಬರಾದ ಎಂ. ವಿಶ್ವೇಶ್ವರಯ್ಯನವರ Sir M. Vishweshwaraiah ಒಟ್ಟಾರೆ ಸಾಧನೆಯ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ತಾವು ಕಲಿತ ತಾಂತ್ರಿಕ ವಿಷಯದಲ್ಲಿನ ಹಲವಾರು ಪ್ರಯೋಗಗಳ ಫಲಿತಾಂಶಗಳನ್ನು ಮಾರ್ಮಿಕವಾಗಿ ಅಳವಡಿಸಿಕೊಂಡು ಜೀವನ ಶೈಲಿಯು ಉತ್ತುಂಗದೆಡೆಗೆ ಒಯ್ಯುವಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ರೂಪಿಸುವ ಗುರಿಗಳು, ಅವುಗಳನ್ನು ತಲುಪಲು ಬೇಕಾದ ಪ್ರಾಯೋಗಿಕ ಚಾಕಚಕ್ಯತೆಗಳು, ತಮ್ಮ ಸುತ್ತಮುತ್ತಲಿನ ಪ್ರಕೃತಿಯ ಜೊತೆಗೆ ಅಪರಿಮಿತ ಒಡನಾಟ ಮತ್ತು ಉತ್ತಮ ಗುಣಮಟ್ಟವುಳ್ಳ ಬೌದ್ಧಿಕ ಮನೋಸ್ಥಿತಿಯನ್ನು ವೃದ್ಧಿಸಿಕೊಳ್ಳುವಂತೆ ಪ್ರೇರೇಪಿಸಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧಿಸಬೇಕಾದ ಗುರಿಗಳು, ಆ ಗುರಿಗಳನ್ನು ತಲುಪಲು ಬೇಕಾದ ಪ್ರಾಯೋಗಿಕ ಕಾರ್ಯಕ್ಷಮತೆ ಮತ್ತು ಕಲಾಕೌಶಲ್ಯಗಳು, ತಮ್ಮ ಗುಣಮಟ್ಟವುಳ್ಳ ಪದಾರ್ಥಗಳ ಸೇವನೆ ಮತ್ತು ತನ್ಮೂಲಕ ಆರೋಗ್ಯ ಭರಿತ ಸಮಾಜ ನಿರ್ಮಾಣ ಮಾಡುವಲ್ಲಿ ಕಾರ್ಯಯೋನ್ಮುಖರಾಗಬೇಕೆಂದು ಸೂಚಿಸಿದರು.
ತಮ್ಮ ಸುತ್ತಮುತ್ತಲಿನ ಸಮಾಜದ ಹಾಗೂ ಪರಿಸರದ ಜೊತೆಗೆ ತಾರ್ಕಿಕ ನಂಟನ್ನು ಬೆಸೆದು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳ ಮನಮುಟ್ಟುವಂತೆ ಹಲವು ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ರಾಷ್ಟ್ರೀಯ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್. ನಾಗರಾಜ, ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ವಿ. ಚೈತನ್ಯ ಕುಮಾರ್, ಪಿಇಎಸ್ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಎಲ್. ಗಿರೀಶ್ ಮುಖ್ಯ ಅತಿಥಿಗಳ ಕಿರು ಪರಿಚಯವನ್ನು ನೀಡುವುದರ ಮೂಲಕ ಸಭೀಕರನ್ನು ಸ್ವಾಗತಿಸಿದರು. ಪ್ರಥಮ ವರ್ಷದ ಇಂಜಿನಿಯರಿAಗ್ ವಿದ್ಯಾರ್ಥಿನಿ ಅನನ್ಯ ಪ್ರಾರ್ಥಿಸಿ, ಮೆಕಾನಿಕಲ್ ವಿಭಾಗದ ಬೋಧಕ ಸಿಬ್ಬಂದಿ ಡಾ. ಆರ್. ಅಶೋಕ್ ಬಣಗಾರ್ ವಂದಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸಿ.ಪಿ. ಅಜೇಯ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post