ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಕ್ಷೇತ್ರ ಧರ್ಮಸ್ಥಳದ #Shri Kshthra Dharmasthala ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ವಿಶೇಷ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಕೋಟ್ಯಾಂತರ ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ಇತ್ತೀಚೆಗೆ ನಡೆಯುತ್ತಿರುವ ಸುಳ್ಳು ಪ್ರಚಾರ ಹಾಗೂ ದುರುದ್ದೇಶಿತ ವರದಿಗಳ ಬಗ್ಗೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಸರ್ಕಾರ ತನಿಖಾದಳವನ್ನು ರಚಿಸಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಸತ್ಯ ಹೊರಬಂದಿಲ್ಲ. ಆದರೆ ತನಿಖೆಯ ಅಧಿಕೃತ ಫಲತಾಂಶ ಪ್ರಕಟವಾಗುವ ಮೊದಲು ಕೆಲವು ಯೂಟ್ಯೂಬರ್ಗಳು ಹಾಗೂ ಅಂತರ್ರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳದ ಬಗ್ಗೆ ಸುಳ್ಳು ಮತ್ತು ದುರುದ್ದೇಶಿತ ವರದಿಗಳನ್ನು ಪ್ರಸಾರ ಮಾಡಿರುವುದು ಹಿಂದೂ ಸಮಾಜ ಭಾವನೆಗಳಿಗೆ ಅವಮಾನವಾಗಿದೆ ಎಂದು ದೂರಿದರು.
ಈ ಎಲ್ಲಾ ಘಟನೆಗಳು ಒಟ್ಟಿಗೆ ನೋಡಿದಾಗ ಇದು ಕೇವಲ ತಾತ್ಕಾಲಿಕ ಘಟನೆ ಅಲ್ಲದೆ ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಭಾಗವೆಂದು ಸ್ಪಷ್ಟವಾಗುತ್ತಿದೆ. ಧರ್ಮಸ್ಥಳದ ಅಪಮಾನ ಮಾಡಿದವರ ಮೇಲೆ ವಿಶೇಷ ತನಿಖಾ ದಳದ ಮೂಲಕ ಸಂಪೂರ್ಣ ತನಿಖೆ ನಡೆಸಿ, ಸತ್ಯ ಹೊರತರುವಂತೆ ಮಾಡಬೇಕು. ಸುಳ್ಳು ಪ್ರಚಾರ ಹಾಗೂ ಧರ್ಮಸ್ಥಳದ ತೇಜೋವಧೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಿಂದೂ ಧಾರ್ಮಿಕ ಕೇಂದ್ರಗಳನ್ನು ಎರಡಪಂಥೀಯ-ಕಮ್ಯೂನಿಷ್ಟ್ ಒತ್ತಡಗಳಿಂದ ಮತ್ತು ಸುಳ್ಳು ಪ್ರಚಾರಗಳಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿಂದೂ ಸಮಾಜದ ಭಾವನೆಗಳಿಗೆ ಗೌರವ ನೀಡಿ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪ್ರಮುಖರಾದ ದಿನೇಶ್ ಚೌವ್ಹಾಣ್, ಹೆಚ್. ಪ್ರಫುಲ್ಲಚಂದ್ರ, ಜಗ್ಗಣ್ಣ, ರಮೇಶ್ಬಾಬು ಜಾದವ್, ವಿಶ್ವನಾಥ್, ಬಸವರಾಜ್ ಸಾಳಂಕೆ, ಕಾಂಚನಾ, ಜ್ಯೋತಿ, ಮಂಜುಳಾ, ವಕೀಲರಾದ ಉಜ್ವಲ, ವಾಗೀಶ್, ರಿತೇಶ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















