ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾವು ಅಂದುಕೊಂಡಿದ್ದನ್ನು ಸಾಧಿಸಲು ಈ ಕಾಲೇಜು ಪ್ರೇರಣೆ ನೀಡಿದೆ. ಕಷ್ಟದ ದಿನಗಳಲ್ಲಿ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕಲಿತು ಸಮಾಜದಲ್ಲಿ ಒಂದು ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಿಮ್ಸ್ ಮೆಡಿಕಲ್ ಡೈರೆಕ್ಟರ್ ಡಾ. ಶ್ರೀಧರ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಕನ್ನಡ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ವತಿಯಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ `ಹೊರೆಯಾಗದಿರಲಿ ಹರೆಯ’ ಎಂಬ ವಿಷಯದ ಕುರಿತಾಗಿನ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ತಿಳುವಳಿಕೆ ಕಡಿಮೆಯಾಗುತ್ತಿದೆ. ತಮ್ಮ ಸಹಪಾಠಿಗಳ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಕ್ಷೀಣಿಸುತ್ತಿದೆ. ಆರ್ಥಿಕವಾಗಿ ಸಬಲವಾಗಿರುವ ವಿದ್ಯಾರ್ಥಿಗಳು ದುರ್ಬಲ ಪರಿಸ್ಥಿತಿಯಲ್ಲಿರುವ ತಮ್ಮ ಸ್ನೇಹಿತರಿಗೆ ನೆರವು ನೀಡುವ ಮನಸ್ಥಿತಿ ಹೊಂದದೆ ಇರುವುದು ವಿಷಾದನೀಯ ಸಂಗತಿ. ನಮಗೆ ಕಲಿಸಿದ ಗುರುಗಳನ್ನು ಮರೆಯಬಾರದು. ಸಮಾಜದಲ್ಲಿ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಬೇಕು. ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಚಟುವಟಿಯಿಂದ ನಮ್ಮ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ದತ್ತಿ ಉಪನ್ಯಾಸ ನೀಡುತ್ತಿರುವ ಮಹಿಳಾ ವೈದ್ಯರ ತಂಡದ ಕಾರ್ಯ ಶ್ಲಾಘನೀಯ. ಭಾರತೀಯ ವೈದ್ಯಕೀಯ ಬರಹಗಾರರ ಸಂಘ ಇನ್ನು ಮುಂದಿನ ದಿನಗಳಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಡಾ. ನಯ ಶ್ರೀನಿವಾಸ್ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.
ಜೆಎನ್’ಎನ್’ಸಿಇ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿ ಸಲಹೆಗಾರರಾದ ಡಾ.ಸಿ.ಕೆ. ಅನುರಾಧ ಮಾತನಾಡಿ, ಎಲ್ಲಾ ಮಕ್ಕಳಲ್ಲಿ ಹದಿಹರೆಯದ ಸಮಸ್ಯೆಗಳು ಸಾಮಾನ್ಯ. ಅದನ್ನು ಸಮರ್ಥವಾಗಿ ನಿಭಾಯಿಸಿ, ಪ್ರಬುದ್ಧತೆಯಿಂದ ನಿಮ್ಮ ಗುರಿ ಸಾಧಿಸಿ ಎಂದರು.
ಪರೀಕ್ಷೆಯಲ್ಲಿ ಅಂಕ ಗಳಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಪೋಷಕರಿಂದ ಒತ್ತಡ ಹೆಚ್ಚಿದಾಗ ಹಾಗೂ 16ರಿಂದ 18ರ ವಯೋಮಾನದ ಮಕ್ಕಳಲ್ಲಾಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಯಿಂದಾಗಿ ಹದಿಹರೆಯದ ಸಮಸ್ಯೆಗಳು ಉದ್ಭವಿಸುತ್ತವೆ. ಪೋಷಕರೊಂದಿಗೆ ಉತ್ತಮ ಸಂವಹನ ಬೆಳೆಸಿಕೊಂಡು ತಮ್ಮ ಮನಸ್ಸಿನ ತುಮುಲಗಳ ಬಗ್ಗೆ ಮನಬಿಚ್ಚಿ ಮಾತನಾಡುವುದರಿಂದ ಹದಿಹರೆಯದ ಘಟ್ಟವನ್ನು ಯಶಸ್ವಿಯಾಗಿ ದಾಟಬಹುದು ಎಂದು ಸಲಹೆ ನೀಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಆರನೇ ಇಂದ್ರಿಯವಾಗಿದೆ. ಮೊಬೈಲ್ ಗೀಳಿಗೆ ಕಡಿವಾಣ ಹಾಕುವುದು ಅತಿ ಅವಶ್ಯವಾಗಿದೆ. ಮುಂಬರುವ ದಿನಗಳಲ್ಲಿ ಉದ್ಯೋಗವಕಾಶಗಳು ಕಡಿಮೆಯಾಗುತ್ತದೆ. ಅದನ್ನು ಮೀರಿ ಯಶಸ್ವಿಯಾಗಲು ನೀವು ಉತ್ತಮ ವಿದ್ಯಾಭ್ಯಾಸ ಹೊಂದಬೇಕು. ಪದವಿ ಜೊತೆಗೆ ಇನ್ನಿತರೆ ಸರ್ಟಿಫಿಕೇಟ್ ಕೋರ್ಸ್’ಗಳನ್ನು ಮಾಡಿ ಬಯೋಡೆಟಾದಲ್ಲಿ ನಮೂದಿಸುವುದರಿಂದ ಉದ್ಯೋಗ ಪಡೆಯಲು ಉಪಯೋಗವಾಗುತ್ತದೆ ಎಂದರು.
ಕನ್ನಡ ನಮ್ಮ ಉಸಿರಾದರೆ ಇಂಗ್ಲಿಷ್ ನಮ್ಮ ವ್ಯವಹಾರಿಕ ಭಾಷೆ. ನಮ್ಮ ಮಲೆನಾಡ ಯುವಜನತೆ ಇಂಗ್ಲಿಷ್ ಮಾಡನಾಡಲು ಹಿಂಜರಿಕೆಪಡುತ್ತಿದ್ದು, ಬೇರೆ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪದವಿ ಮಟ್ಟದಲ್ಲಿಯೇ ಇಂಗ್ಲಿಷ್ ಕಲಿಕೆ ಬಗ್ಗೆ ಗಮನ ಕೊಟ್ಟು ಇಂಗ್ಲಿಷ್ ಕಲಿಯಿರಿ ಹಾಗೂ ಕನ್ನಡ ಬೆಳೆಸಿರಿ ಎಂದು ಕರೆ ನೀಡಿದರು.
ಅಂದಿನ ಪಾಠವನ್ನು ಅಂದೇ ಓದುವನ್ನು ಅಳವಡಿಸಿಕೊಳ್ಳಿ. ಸಹ್ಯಾದ್ರಿ ಕಾಲೇಜಿನ ಓದಿದ ವಿದ್ಯಾರ್ಥಿಗಳಲ್ಲಿ ಸದೃಢತೆಯ ಮನೋಭಾವ ಹೆಚ್ಚಿರುತ್ತದೆ. ಇರುವ ಸಮಯದಲ್ಲಿ ವೇಳಾಪಟ್ಟಿ ಹಾಕಿಕೊಂಡು ವಿದ್ಯಾಭ್ಯಾಸ ಮತ್ತು ಇತರೆ ಚಟುವಟಿಕೆಯಲ್ಲಿ ಮಗ್ನರಾಗಿ, ಪ್ರತಿದಿನ ಪುಸ್ತಕ ಓದುವ ಹವ್ಯಾಸ ಮಾಡಿಕೊಳ್ಳುವುದು ಒಂದು ಉತ್ತಮ ಅಭ್ಯಾಸವಾಗಿದೆ. ನಮ್ಮ ಜೀವನ ನಮ್ಮ ಕೈಲಿದೆ ಅದನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಂಡು ಯಶಸ್ವಿಯಾಗಿ ಎಂದು ಸಲಹೆ ನೀಡಿದರು.
ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ವೈದ್ಯ ಸಾಹಿತ್ಯದ ದತ್ತಿ ಉಪನ್ಯಾಸಗಳ ಕುರಿತಾಗಿ ತಿಳಿಸಿ, ಪ್ರಾಸ್ತಾವಿಕವಾಗಿ ಎಲ್ಲರನ್ನೂ ಸ್ವಾಗತಿಸಿದರು.
ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ, ಮನೋರೋಗ ತಜ್ಞೆ ಡಾ. ಕೆ.ಎಸ್. ಶುಭ್ರತಾ, ಐಎಂಎ ಶಿವಮೊಗ್ಗ ಕಾರ್ಯದರ್ಶಿ ಡಾ. ರಕ್ಷಾ, 1999ರ ಬ್ಯಾಚ್ ವಿದ್ಯಾರ್ಥಿಗಳಾದ ಡಾ.ಎಸ್.ಕೆ. ಕಿರಣ್, ಮಕ್ಕಳ ತಜ್ಞೆ ಡಾ.ಜಯಲಕ್ಷ್ಮಿ ನಾಯಕ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post