ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಗರೀಕ ಸಮಾಜದಿಂದ ದೂರ ಉಳಿದಿರುವ, ನಿರ್ಲಕ್ಷ್ಯಕ್ಕೊಳಗಾಗಿರುವ, ಅವಕಾಶಗಳಿಂದ. ಮೂಲಭೂತ ಸಮಸ್ಯೆಗಳಿಂದ ವಂಚಿತರಾಗಿರುವ ಮಂಗಳಮುಖಿಯರ ಬದುಕು ಹಸನಗೊಳ್ಳುವತ್ತ ಸರಕಾರದ ಕನಿಷ್ಠ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ಪ್ರೋತ್ಸಾಹಗಳು ನಿರಂತರಗೊಳಿಸಬೇಕಿದೆ ಎಂದು ಜೆಡಿಎಸ್ ಮುಖಂಡರು ಹಾಗೂ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಸದಸ್ಯ ಎಂ ಶ್ರೀಕಾಂತ್ ಅಭಿಪ್ರಾಯಪಟ್ಟರು.
ನಗರದ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ಜೆಸಿಐ ಶಿವಮೊಗ್ಗ ಶ್ರೀರಕ್ಷೆ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಮುಖಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು, ಮಾತನಾಡಿದರು.
ಈ ಹೊತ್ತಿನ ಒಟ್ಟು ಸಮಾಜದಲ್ಲಿ ಮಂಗಳಮುಖಿಯರನ್ನು ಮನುಷ್ಯರೆಂದು ಪರಿಗಣಿಸಲಾಗಿದಿಯೇ..? ಆಗಿದ್ದರೆ ಅವರಿಗೂ ಉದ್ಯೋಗ, ವಸತಿಯನ್ನು ನೀಡುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.
ನಾಗರೀಕ ಸಮಾಜದಲ್ಲಿ ಬಹುಪಾಲು ಜನರು ಅವರನ್ನು ಅಪಮಾನಿಕರಿಸಿ ನೋಡುತ್ತಿರುವುದು ಅನಾಗರೀಕ ವರ್ತನೆಯಲ್ಲವೇ. ಅವರನ್ನು ಲೈಂಗಿಕ ಕಾರ್ಯಕರ್ತರು, ನಿತ್ಯ ಬಿಕ್ಷಾಟನೆಯಲ್ಲಿ ತೊಡಗಿಸಿಕೊಂಡು ಬೆದರಿಸುತ್ತಾರೆ ಎಂದು ಆರೋಪಿಸುವ ಮೊದಲು ಅವರಿಗೂ ವಿವಿಧ ಸ್ವಯಂ ಉದ್ಯೋಗದ ತರಬೇತಿ ನೀಡಿ ಕೆಲಸ ಕೊಟ್ಟು ಲಿಂಗ ಸಮಾನತೆಯ ಸ್ಥಾನವನ್ನು ನಿಜಕ್ಕೂ ಕೊಟ್ಟಿದ್ದರೆ ನೀವು ಆರೋಪಿಸುವಂತೆ ಅವರ್ಯಾಕೆ ಬಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಮುಂದಿನ ದಿನದಲ್ಲಿ ಅವರ ಮೂಲಭೂತ ಸೌಲಭ್ಯಗಳಿಗಾಗಿ ನಾವೆಲ್ಲರು ಸೇರಿಯೇ ದನಿಯಾಗೋಣ. ಅವರನ್ನು ಕಂಡಾಗ ಅನಾಗರೀಕರಾಗಿ ವರ್ತಿಸದೇ ಗೌರವಯುತವಾಗಿ ನಡೆದುಕೊಳ್ಳಬೇಕಿದೆ. ಇದೊಂದು ಅಸ್ವಾಭಾವಿಕ ಲಿಂಗತ್ವ, ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಸಮಾಜದ ಮುಖ್ಯವಾಹಿನಿಯಿಂದ ಹೊರ ತಳ್ಳುವುದು ಅಪಹಾಸ್ಯಗೈಯುವುದು ಸಲ್ಲದು ಎಂದರು.
ಮಂಗಳಮುಖಿಯರಾದ ವೈಷ್ಣವಿ ಮತ್ತು ಅರ್ಚನಾರವರುಗಳನ್ನು ಸನ್ಮಾನಿಸಿಲಾಯಿತು ಹಾಗೂ ನೆರೆದಿದ್ದ 60 ಜನ ಮಂಗಳಮುಖಿಯರಿಗೆ ಜೆಸಿ.ಎಂ ಶ್ರೀಕಾಂತ್ ರವರು ಐದು ಲೀಟರ್ ಪ್ರೆಸ್ಟಿಜಿಯಸ್ ಕಂಪನಿಯ ಕುಕ್ಕರ್ಗಳನ್ನು ಉಚಿತವಾಗಿ ವಿತರಿಸಿದರು.
ಗೌರವ ಅತಿಥಿಗಳಾಗಿದ್ದ ಜೆಸಿಐ ಸಂಸ್ಥೆಯ ಪೂರ್ವವಲಯಾಧಿಕಾರಿ ಜೆಸಿ ಗಾ.ರಾ. ಶ್ರೀನಿವಾಸ್ ಮಾತನಾಡಿ, ಬಹುತ್ವ ಭಾವದಡಿ ಎಲ್ಲರಲ್ಲೂ ಮನುಷ್ಯತ್ವವನ್ನೇ ಬಿತ್ತಿ ಮನುಷ್ಯತ್ವವನ್ನೆ ನೋಡಬೇಕಾಗಿರುವ ಈ ಬದಲಾದ ದಿನಮಾನದಲ್ಲಿಯೂ ಮಂಗಳಮುಖಿಯರನ್ನು ಒಟ್ಟು ಸಮಾಜದಲ್ಲಿ ಒಪ್ಪಿಕೊಳ್ಳಲಾಗುತ್ತಿಲ್ಲ ಎನ್ನುವುದೇ ದುರಂತವಾಗಿದೆ. ಕುಟುಂಬದಿಂದ, ಸಹಪಾಠಿಗಳಿಂದ ದೂರ ಉಳಿವ ಮಂಗಳಮುಖಿಯರ ಅತೀವ ಮಾನಸಿಕ ಯಾತನೆಗೊಳಗಾಗಿ ಆತ್ಮಹತ್ಯೆಯಂತಹ ಸ್ಥಿತಿಗೆ ಬಲಿಯಾಗುತ್ತಿದ್ದಾರೆ, ದುಡಿಮೆಗಳಿಲ್ಲದೆ ಅನಿವಾರ್ಯತೆಗಳಲ್ಲಿ ಮುಳುಗಿದ್ದಾರೆ. ಪ್ರೋತ್ಸಾಹಿಸಬೇಕಾದ ಸಮಾಜ ಈ ಸಮುದಾಯವನ್ನು ಅತ್ಯಂತ ಕೀಳಿರಿಮೆಗಳಿಂದ ನೋಡುತ್ತಿದೆ. ಹೀಗಾಗಿ ನಾವು ಅವರೊಂದಿಗೆ ಇದ್ದೇವೆ ಎನ್ನುವ ಆತ್ಮಸ್ಥೆರ್ಯ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಎದ್ದು ನಿಂತು ಸ್ವಯಂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸೋಣ ಎಂದು ಸಾಮೂಹಿಕವಾಗಿ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
Also read: ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ: ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ
ಜೆಸಿಐ ಸವಿತಾ ರಮೇಶ್ ಮಾತಾನಾಡಿ, ಮಂಗಳಮುಖಿಯರಿಗೆ ಬದುಕುವ ಕಲೆ ತಿಳಿಸಿದರು. ಅಲ್ಲದೆ ಅವರನ್ನು ಹುರಿದುಂಬಿಸಿದರು. ಇತಿಹಾಸದ ಕಾಲಘಟ್ಟದಿಂದಲೂ ಶೋಷಣೆ ಎನ್ನುವುದು ಜೀವಂತವಾಗಿದೆ. ಈ ಶೋಷಣೆ ಮಂಗಳಮುಖಿಯರ ಮೇಲೆ ನಿರಂತರಗೊಳಿಸಿ ಅಸಡ್ಡೆ ಮಾಡಲಾಗುತ್ತಿದೆ. ಹೀಗಿದ್ದರೂ ಇದೇ ಸಮುದಾಯದವರು ಈ ಎಲ್ಲಾ ಶೋಷಣೆಗಳ ಮೀರಿ ಬದುಕಿ ಸಾಧಿಸಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಅಗ್ರಮಾನ್ಯ ಸ್ಥಾನವನ್ನು ಗಳಿಸುತ್ತಿದ್ದಾರೆ ಎಂದರು.
ಬಹುತೇಕ ಅನಕ್ಷರಸ್ಥರೇ ಇರುವ ಈ ಸಮುದಾಯಕ್ಕೆ ಉತ್ತಮ ತರಬೇತಿ, ಅರಿವು, ಪ್ರೋತ್ಸಾಹ, ಮೂಲಭೂತ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಹೋರಾಟ, ಸೇವೆ ನಡೆದಿದ್ದಾದರೆ ಮುಂದೊಂದು ದಿನ ಮಂಗಳಮುಖಿಯರು ಎಲ್ಲ ರಂಗಗಳಲ್ಲಿಯೂ ದರ್ಶಿಸಿಕೊಳ್ಳುತ್ತಾರೆ ಇದು ಆಗಬೇಕಿದೆ ನಮ್ಮ ಜೆಸಿಐ ಸಂಸ್ಥೆಗಳಿಂದ ಇಂತಹದೊಂದು ತರಬೇತಿಗಳನ್ನು ಮುಂದಿನ ದಿನಗಳಲ್ಲಿ ಅವರಿಗಾಗಿ ಮೀಸಲಾಗಿರುತ್ತದೆ ಎಂದು ತಿಳಿಸಿದರು.
ಮಂಗಳಮುಖಿಯರ ಕಾರ್ಯಕ್ರಮದ ನಂತರ ನೂತನ ಘಟಕ ಜೆಸಿಐ ಶಿವಮೊಗ್ಗ ಶ್ರೀರಕ್ಷೆಯ ಪದಗ್ರಹಣ ಜರುಗಿತು. ಪದಗ್ರಹಣದಲ್ಲಿ ನೂತನ ಅಧ್ಯಕ್ಷರಾಗಿ ಜೆಸಿ. ಅರ್ಜುನ್ ವಿ ಪಂಡೀತ್. ವಲಯಾಧ್ಯಕ್ಷರಾದ ಜೆಸಿ ದೀಪಿಕಾ ಎನ್ ಬಿದರಿಯವರಿಂದ ಪ್ರಮಾಣವಚನ ಸ್ವೀಕರಿಸಿದರು. ಇನ್ನುಳಿದ ನೂತನ ಜೆಸಿ ಸದಸ್ಯರಿಗೆ ವಲಯ ಉಪಾಧ್ಯಕ್ಷರಾದ ಜೆಸಿ.ಚೆನ್ನವೀರೆಶ್ ಹಾವಣಗಿಯವರು ಪ್ರಮಾಣವಚನ ಭೋದಿಸಿದರು.
ವೇದಿಕೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಸೌಮ್ಯ ಅರಳಪ್ಪ ಮತ್ತು ಕಾರ್ಯದರ್ಶಿಗಳಾದ ಮಮತಾ ಶಿವಣ್ಣ, ಜೆಜೆಸಿ ವಿಭಾಗದ ಅದ್ಯಕ್ಷರಾದ ಜೆಜೆಸಿ ನಿಶಾಂತ್ ಎಸ್ ಗಾರಾ, ವಲಯಾಧ್ಯಕ್ಷರಾದ ಜೆಸಿ ದೀಪಿಕಾ ಎನ್ ಬಿದರಿ, ನೋಮ್ ಕೋ-ಆರ್ಡಿನೇಟರ್ ಜೆಸಿಐ ಪಿಪಿಪಿ ಸವಿತಾ ರಮೇಶ್ , ವಲಯ ಉಪಾಧ್ಯಕ್ಷರಾದ ಜೆಸಿ ಚೆನ್ನವೀರೇಶ್ ಹಾವಣಗಿ, ಮುಖ್ಯ ಅತಿಥಿಗಳಾದ ಜೆಸಿಎಂ ಶ್ರೀಕಾಂತ್, ಸ್ಥಾಪಕ ಅಧ್ಯಕ್ಷರಾದ ಜೆಸಿ ಜ್ಯೋತಿ ಅರಳಪ್ಪ, ಪೂರ್ವ ವಲಯ ನಿರ್ದೇಶಕರಾದ ಜೆಸಿ ಗಾರಾ.ಶ್ರೀನಿವಾಸ್, ಐಪಿಪಿ ಜೆಸಿ ಮೋಹನ್. ಕಾರ್ಯಕ್ರಮದ ಪಿಡಿಯಾದ ಜೆಸಿ.ಸ್ವಪ್ನ ಸಂತೋಷ್ ಗೌಡ, ಜೆಸಿ ನವೀನ್ ತಲಾರಿ ಹಾಗೂ ನಗರದ ಎಂಟು ಸ್ಥಳೀಯ ಘಟಕಗಳ ಅಧ್ಯಕ್ಷರುಗಳು ಮತ್ತು ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಎಲ್ಲಾ ಜೆಸಿಗಳು ಸೇರಿದಂತೆ ಮಂಗಳಮುಖಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post