ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ಮಲವಗೊಪ್ಪದ ಸುತ್ತಮುತ್ತಲ ಬಡಾವಣೆ ಮತ್ತು ಗ್ರಾಮಗಳಿಂದ ಜನರು ಆಗಮಿಸಿದ್ದರು. ರಥೋತ್ಸವದ ವೇಳೆ ವಿಶೇ? ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮೊದಲು ಅರ್ಚಕರ ಮನೆಯಲ್ಲಿ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ರುದ್ರಾಭಿ?ಕ, ಪೂಜೆ, ಬಾಸಿಂಗ ಧಾರಣೆ, ಮಹಾ ಮಂಗಳಾರತಿ ನಡೆಯಿತು. ಬಳಿಕ ರಾಜಬೀದಿ ಉತ್ಸವ ನೆರವೇರಿಸಲಾಯಿತು.
ಭಗತ್ ಸಿಂಗ್ ಯುವಕರ ಸಂಘದ ಅಧ್ಯಕ್ಷ ಶಶಿಕುಮಾರ್ ನೇತೃತ್ವದಲ್ಲಿ ಭಕ್ತಾದಿಗಳಿಗೆ ಗ್ರಾಮಸ್ಥರಿಗೆ ಪ್ರಸಾದ ಮತ್ತು ಪಾನಕ ಸೇವೆ ನಡೆಯಿತು. ಸಂಘದ ಸದಸ್ಯರು ಪದಾಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.
ನ್ಯಾ. ಸದಾಶಿವ ಆಯೋಗ ವರದಿ ಶಿಫಾರಸ್ಸಿಗೆ ಆಗ್ರಹ
ನ್ಯಾ. ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಮಾದಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.
ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಜನಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಸಚಿವ ಸಂಪುಟ ಸಭೆಗೆ ಈ ವಿಷಯವನ್ನೇ ತರದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ನಂ.ಒನ್ ಸ್ಥಾನದಲ್ಲಿರುವ ಅಸ್ಪೃಶ್ಯ ಜಾತಿಯ ಮಾದಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಕಳೆದ 20 ವರ್ಷದಿಂದ ಸಮಾಜದ ಅತ್ಯಂತ ಶೋಷಿತ ಸಮುದಾಯವಾದ ಅಸ್ಪೃಶ್ಯರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಡಾ. ಅಂಬೇಡ್ಕರ್ ಅವರು ಮೀಸಲಾತಿ ಕಲ್ಪಿಸಿದರು. ಆದರೆ ರಾಜಕೀಯ ಬುನಾದಿಗಾಗಿ ಕಾಂಗ್ರೆಸ್ ಆಡಳಿತದ ದಿವಂಗತ ದೇವರಾಜ ಅರಸುರವರು ಮುಂಬೈ, ಆಂದ್ರ ಇತರೆ ಕಡೆಗಳಿಂದ ಕರ್ನಾಟಕಕ್ಕೆ ಬಂದಿದ್ದ ಅಲ್ಲಿನ ಹಿಂದುಳಿದ ಜಾತಿಯವರಾದ ಬಂಜಾರ, ಭೋವಿ, ಕೊರಮ, ಕೊರಚ ಜಾತಿಯವರನ್ನೇ ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ರಾಜ್ಯದ ಅಸ್ಪೃಶ್ಯ ಜಾತಿಯ ಮಾದಿಗ, ಹೊಲೆಯ, ಸಮಗಾರ ಇತರೆ ಉಪ ಜಾತಿಗಳಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಇಂದು ದಲಿತೋದ್ಧಾರದ ಮಾತನಾಡುತ್ತಿದೆ ಎಂದು ಆರೋಪಿಸಿದರು.
ಮಾದಿಗ ಸಮುದಾಯ ಸಾಮಾಜಿಕ ನ್ಯಾಯಕ್ಕಾಗಿ ಬಿಜೆಪಿಯನ್ನು ಅವಲಂಬಿಸಿದರೆ ಅವರಿಂದಲೂ ನ್ಯಾಯ ಸಿಕ್ಕಿಲ್ಲ. ಇದರಿಂದಾಗಿ ರಾಜ್ಯದ ಮಾದಿಗ ಸಮುದಾಯ ಬಿಜೆಪಿಯಿಂದ ವಿಮುಖವಾಗಲಿದ್ದು, ಸರ್ಕಾರ ಕೂಡಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಚುನಾವಣೆ ನೀತಿಸಂಹಿತೆ ಜಾರಿ ಆಗುವುದರೊಳಗಾಗಿ ಶಿಫಾರಸು ಮಾಡಬೇಕು ಎಂದು ದಲಿತ ಜನಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಇನ್ನಿತರ ಸಂಘಟನೆಗಳು ಆಗ್ರಹಿಸಿವೆ ಎಂದರು.
ಮಾ.20ರೊಳಗಾಗಿ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಬಗ್ಗೆ ಸ್ಪಷ್ಟ ತಿರ್ಮಾನ ತೆಗೆದುಕೊಳ್ಳದಿದ್ದಲ್ಲಿ ಮುಂಬರುವ ಚುನಾಣೆಯಲ್ಲಿ ಬಿಜೆಪಿ ಪಕ್ಷಕ್ಕೆ ವೋಟು ನೀಡದಂತೆ ರಾಜ್ಯ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಂಬಾಣಿ, ಬೋವಿ ಜನಾಂಗದ ಶಾಸಕರು ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಆ ಜನಾಂಗಗಳ ಶಾಸಕರು ವರದಿ ಜಾರಿಗೆ ಆಗ್ರಹಿಸಬೇಕು ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸದಸ್ಯ ಸಿ.ಮೂರ್ತಿ ಮಾತನಾಡಿ, ಆಯೋಗದ ವರದಿ ಜಾರಿಗೆ ಮೂರು ಪಕ್ಷಗಳು ಕಡೆಗಣಿಸಿವೆ. ಲಂಬಾಣಿ ಹಾಗೂ ಬೋವಿ ಜನಾಂಗದ ಶಾಸಕರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಸಿಗುವ ಸೌಲಭ್ಯಗಳನ್ನು ಇತರೆ ಜನಾಂಗದವರು ಪಡೆಯುತ್ತಿದ್ದಾರೆ ಎಂದ ಅವರು, ವರದಿ ಜಾರಿಯಾಗದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಜಿ. ಸುರೇಶ್ಬಾಬು, ಪ್ರಭು, ಶ್ರೀಧರ್, ಎಸ್. ನಾಗರಾಜ್, ಅಣ್ಣಪ್ಪ , ಬಿ.ಸಿ. ನಾಗರಾಜು ಇನ್ನಿತರರು ಇದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಶ್ವಾಸನೆ ಈಡೇರಿಸಲು ಬದ್ಧ: ಎನ್. ರಮೇಶ್
ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಘೋಷಿಸಿರುವ ಗೃಹ ಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ಇವನ್ನು ಈಡೇರಿಸಲು ಬದ್ಧವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇವಲ ಪ್ರಚಾರಕ್ಕಾಗಿ ಈ ಯೋಜನೆಗಳನ್ನು ಪಕ್ಷ ಘೋಷಣೆ ಮಾಡಿಲ್ಲ. ಇವನ್ನು ಬದ್ಧತೆಯಿಂದ ಜಾರಿ ಮಾಡಲಾಗುತ್ತದೆ. ಈಗಾಗಲೇ ಈ ಯೋಜನೆಯ ಗ್ಯಾರಂಟಿ ಕಾರ್ಡ್ಗಳನ್ನು ಶೇ.80ರಷ್ಟು ಮನೆಗಳಿಗೆ ತಲುಪಿಸಲಾಗಿದೆ. ಉಳಿದ ಮನೆಗಳಿಗೂ ತಲುಪಿಸಲಾಗುತ್ತದೆ ಎಂದರು.
ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 50 ಸಾವಿರ ಮನೆಗಳಿಗೆ ಈ ಯೋಜನೆಯ ಕಾರ್ಡ್ಗಳನ್ನು ತಲುಪಿಸಿ ಜಾಗೃತಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದು ಸಂಪೂರ್ಣ ಯಶಸ್ವಿಯಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ 150 ಸ್ಥಾನಗಳು ಬರುವುದು ಖಚಿತವಾಗುತ್ತಿದೆ ಎಂದು ಹೇಳಿದರು.
ಕೊಟ್ಟ ಮಾತು ಉಳಿಸಿಕೊಳ್ಳುವುದು ಒಂದು ಮೌಲ್ಯ. ಇಂತಹ ಮೌಲ್ಯಾಧಾರಿತ ರಾಜಕಾರಣವೇ ಕಾಂಗ್ರೆಸ್ನ ಹೊಣೆಗಾರಿಕೆ. 2013ರಿಂದ 2018ರವರೆಗೆ ಆಡಳಿತ ನಡೆಸಿರುವ ಸಿದ್ದರಾಮುನವರು ಪ್ರಣಾಳೀಕೆಯಲ್ಲಿ ನೀಡಿದ ಭರವಸೆಗಳಲ್ಲಿ 162ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು.
ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎಸ್.ಪಿ. ದಿನೇಶ್ ಮಾತನಾಡಿ, ಸಿದ್ದರಾಮಯ್ಯನವರ ಬಗ್ಗೆ ಶಾಸಕ ಕೆ.ಎಸ್. ಈಶ್ವರಪ್ಪನವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜ್ಯ ನಾಯಕರು. ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸವಿದೆ. ಆದರೆ ಈಶ್ವರಪ್ಪನವರು ಶಿವಮೊಗ್ಗ ಬಿಟ್ಟು ಭದ್ರಾವತಿಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು.
ಮಗ ಕಾಂತೇಶ್ ಅವರಿಗೆ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಬೇರೆ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ಇವರು ಗೆಲ್ಲಿಸಲು ಶ್ರಮಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಬೇರೆ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದೆ ಎಂದು ಟೀಕಿಸುವ ಈಶ್ವರಪ್ಪನವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾರ್ಟಿಸ್, ಸಿ.ಎಸ್. ಚಂದ್ರಭೂಪಾಲ್, ಆಸೀಫ್, ಶಿವು ಇದ್ದರು.
ಸಿ.ಟಿ. ರವಿ ಲಿಂಗಾಯತ ವಿರೋಧಿ ಹೇಳಿಕೆಗೆ ನವೀನ್ ವಾರದ್ ಖಂಡನೆ
ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಡಿ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರ ಹೇಳಿಕೆ ಖಂಡನೀಯ ಮತ್ತು ಇಡೀ ಸಮುದಾಯಕ್ಕೆ ಮಾಡಿದ ಅವಮಾನ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ. ಶಿವರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ವಾರದ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಹುಸಂಖ್ಯಾತರಾದ ವೀರಶೈವ ಲಿಂಗಾಯುತರ ಬಲದಿಂದಲೇ ಬಿ.ಜೆ.ಪಿ. ಅಧಿಕಾರದಲ್ಲಿದೆ. ನಮ್ಮ ಸಮಾಜದ ಪ್ರಬಲ ಮುಖಂಡರನ್ನು ಕಡೆಗಣಿಸಿದ್ದಕ್ಕಾಗಿ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಆದ ಗತಿ ನೆನಪಿರಲಿ ನಿಮಗೆ ಸಿ.ಟಿ. ರವಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಂಘಸಂಸ್ಥೆಗಳು, ಮಠ ಮಾನ್ಯಗಳು ಇಡೀ ಕರ್ನಾಟಕಕ್ಕೆ ಜಾತಿ-ಧರ್ಮಗಳನ್ನು ಮೀರಿ ಆರ್ಥಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಕೊಡುಗೆ ನೀಡಿರುವುದು ನಿಮಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ವೀರಶೈವ ಲಿಂಗಾಯುತ ಸಮಾಜಕ್ಕೆ ತಕ್ಷಣವೇ ಸಿ.ಟಿ.ರವಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ನೀವು ಚುನಾವಣಾ ಪ್ರಚಾರದಲ್ಲಿ ಕಂಡುಬಂದಲ್ಲಿ ನಿಮಗೆ ಮುತ್ತಿಗೆ ಹಾಕುವುದಲ್ಲದೆ ಕಿತ್ತೋದ ಸಿ.ಟಿ. ರವಿ ಎಂದು ಘೋಷಣೆ ಕೂಗಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಿ.ಟಿ. ರವಿ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಅವರ ಎಲ್ಲಾ ಸ್ಥಾನಮಾನ ರದ್ದುಗೊಳಿಸಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















