ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು 6397.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿರುವುದರಿಂದ ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ತುಮಕೂರು-ಶಿವಮೊಗ್ಗ ನಡುವೆ 5 ದೊಡ್ಡ ಸೇತುವೆಗಳು, 66 ರೈಲ್ವೆ ಕೆಳಸೇತುವೆ/ಮೇಲ್ಸೇತುವೆಗಳು, 7 ಕಡೆ ಬೈಪಾಸ್ಗಳು ನಿರ್ಮಾಣವಾಗಲಿದ್ದು, ಬೆಂಗಳೂರಿನಿಂದ ಮಲೆನಾಡಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವರನ್ನು ಭೇಟಿಯಾಗಿ ಹೆಚ್ಚುವರಿಯಾಗಿ 1,796.24 ಕೋಟಿ ರೂ. ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಭಾರತಮಾಲಾ ಯೋಜನೆಯಡಿ ಈಗಾಗಲೇ ನೀಡಲಾಗಿರುವ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ, ಭೂಸ್ವಾಧಿನ ಹಾಗೂ ಇತರ ವೆಚ್ಚಗಳಿಗಾಗಿ ಒಟ್ಟಾರೆ ಯೋಜನೆ ಅನುಷ್ಟಾನಕ್ಕೆ 6,397.47 ಕೋಟಿ ರೂ. ಮಂಜೂರು ಮಾಡಿರುವುದಕ್ಕೆ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟು ನಾಲ್ಕು ಪ್ಯಾಕೇಜ್ಗಳಲ್ಲಿ ಕಾಮಗಾರಿ ಅನುಷ್ಟಾನಗೊಳಿಸಲಾಗುತ್ತಿದ್ದು, ಬೆಟ್ಟದಹಳ್ಳಿ (ತರೀಕೆರೆ)ಯಿಂದ ಶ್ರೀರಾಂಪುರ (ಶಿವಮೊಗ್ಗ) ಪ್ಯಾಕೇಜಿನಲ್ಲಿ 56.335 ಕಿಮೀ. ಅಭಿವೃದ್ಧಿಪಡಿಸಲಾಗುತ್ತಿದೆ. ಇದರೊಂದಿಗೆ 33ಕಿಮೀ ಸರ್ವಿಸ್ ರಸ್ತೆ, ತುಂಗಾ ಮತ್ತು ಭದ್ರಾ ನದಿಗೆ 3 ಬೃಹತ್ ಸೇತುವೆಗಳು, 20 ಅಂಡರ್ ಮತ್ತು ಓವರ್ ಪಾಸ್ಗಳು, ಶಿವಮೊಗ್ಗದಲ್ಲಿ 17.74 ಕಿಮೀ ಹಾಗೂ ತರೀಕೆರೆಯಲ್ಲಿ 9 ಕಿಮೀ ಬೈಪಾಸ್, ರಂಗಾಪುರ ಗ್ರಾಮದಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ. ಈ ಮೊದಲು 1331.77 ಕೋಟಿ ರೂ. ಅಂದಾಜಿಸಲಾಗಿದ್ದು, ಇದೀಗ ಪರಿಷ್ಕೃತ ಅಂದಾಜಿನಲ್ಲಿ 2082.98 ಕೋಟಿ ರೂ. ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post