ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರ ಸಾಗುವಳಿ ಜಮೀನಿನ ಹಕ್ಕು ಪತ್ರ ವಜಾಗೊಳಿಸಿರುವುದನ್ನು ವಿರೋಧಿಸಿ ಮಲೆನಾಡು ರೈತರ ಹೋರಾಟ ಸಮಿತಿ ಮತ್ತು ಗೋರ ಸೇನಾ ಸಂಘಟನೆ ವತಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ನಮ್ಮ ಜಮೀನುಗಳಿಗೆ ಹಕ್ಕುಪತ್ರಗಳನ್ನು ಕೊಟ್ಟಿದ್ದರೂ ಕೂಡ ಈಗ ಅದನ್ನು ವಜಾ ಮಾಡಿದ್ದಾರೆ. ಇದು ರೈತ ವಿರೋಧಿ ನೀತಿಯಾಗಿದೆ. ರೈತರಿಗೆ ಭೂ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
ಕುಂಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸ.ನಂ. 82, 99, 43 ಹಾಗೂ ಬೀರನಕೆರೆ ವ್ಯಾಪ್ತಿಯ 45, 102 ರಲ್ಲಿ ಸುಮಾರು 50 ವರ್ಷಗಳಿಂದ 110ಕ್ಕೂ ಹೆಚ್ಚು ಕುಟುಂಬಗಳು ಬಗರ್ಹುಕುಂ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇವರಿಗೆ 2023ರಲ್ಲಿ ಹಕ್ಕುಪತ್ರ ಕೊಡಲಾಗಿತ್ತು. ಆದರೆ, ಈಗ ಹಕ್ಕು ಪತ್ರ ಮತ್ತು ಪಹಣಿಯನ್ನು ವಜಾ ಮಾಡಲಾಗಿದೆ. ಆದ್ದರಿಂದ ಕೂಡಲೇ ಮರಳಿ ಹಕ್ಕು ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Also read: ಜೂನ್ 30ರವರೆಗೂ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಸಾಧ್ಯತೆ | ಶಿವಮೊಗ್ಗದ ಪರಿಸ್ಥಿತಿಯೇನು?
ಗೋರ ಸೇನಾ ತಾಲೂಕು ಘಟಕದ ಮುಖಂಡರು ಕೂಡ ಬಡ ಕುಟುಂಬಗಳ ಹಕ್ಕು ಪತ್ರ ಕಸಿದುಕೊಂಡಿರುವುದು ಅನ್ಯಾಯವಾಗಿದೆ. ರೈತರನ್ನು ಭೂ ಹಕ್ಕಿನಿಂದ ವಂಚಿಸಬಾರದು. ತಕ್ಷಣವೇ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ್ ನಾಯ್ಕ್, ಚಂದ್ರಾ ನಾಯ್ಕ್, ವಿನಾಯಕ, ಕೃಷ್ಣಾ ನಾಯ್ಕ್, ಸಂತೋಷ್ ನಾಯ್ಕ್, ಹನುಮ ನಾಯ್ಕ್, ಮಂಜುನಾಯ್ಕ್, ಶಿವಾಜಿ ನಾಯ್ಕ್, ಹಾಗೂ ಗೋರ ಸೇನಾದ ಪ್ರಮುಖರಾದ ಜಿ. ಚಂದ್ರಾ ನಾಯ್ಕ್, ಸಂತೋಷ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















