ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮ ದಿನೋತ್ಸವ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ನ 40 ನೇ ವರ್ಷಾಚರಣೆಯ ಅಂಗವಾಗಿ ಉತ್ತಮ ಗ್ರಂಥಾಲಯವೊಂದನ್ನು ಸ್ಥಾಪನೆ ಮಾಡಲಾಗುತ್ತಿದೆ.
ಈ ಕುರಿತಂತೆ ಮಾತನಾಡಿದ ಆರ್ಟ್ ಆಫ್ ಲಿವಿಂಗ್’ನ ಶಬರೀಶ್ ಕಣ್ಣನ್ ಅವರು, ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿ ಮಂದಿರಗಳು, ಸಂಸಾರದಲ್ಲಿ ಬೆಂದು ನೊಂದವರು ಶಾಂತಿ ಸಮಾಧಾನಗಳಿಗಾಗಿ ಪುಸ್ತಕ ಭಂಡಾರಗಳೆಂಬ ದಿವ್ಯಾಶ್ರಮಗಳನ್ನಾಶ್ರಯಿಸಬೇಕು. ಉತ್ತಮ ಗ್ರಂಥಗಳಿಗೆ ಯಾವಾಗಲೂ ಮುಪ್ಪಿಲ್ಲ. ಅವು ಯೌವ್ವನದ ಆಹಾರ, ಮುಪ್ಪಿನ ಆನಂದ, ದೌರ್ಬಲ್ಯದ ವಿಟಮಿನ್ ಎಂದು ಬಲ್ಲವರು ಹೇಳುತ್ತಾರೆ ಎಂದರು.
ಇಂದಿನ ನಿಜವಾದ ಆಸ್ತಿ ಭುಮಿಯಲ್ಲ ಚಿನ್ನವಲ್ಲ, ಜ್ಞಾನ ನಿಧಿಗಳಾದ ಗ್ರಂಥರಾಶಿಗಳು ’ಆನಂದ ಬೇಕಾದರೆ ಗ್ರಂಥಗಳನ್ನು ಸಂಗ್ರಹಿಸು’ ಎಂಬ ಗಾದೆಯೂ ಉಂಟು, ಹಾಗೆಯೇ ’ಹಳೆಯ ಕೋಟನ್ನಾದರೂ ಧರಿಸು ಆದರೆ ಹೊಸ ಪುಸ್ತಕವನ್ನೇ ಕೊಳ್ಳು’ ಹಾಗೂ ’ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ ಮಕ್ಕಳನ್ನೇ ಆಸ್ತಿಯಾಗಿ ಮಾಡು’ ಎಂಬ ಸೂಕ್ತಿಗಳೂ ಕೂಡ ಜಗಜ್ಜಾಹೀರಾಗಿದೆ ಎಂದರು.
ಓದಿನಿಂದ ಅರಿವು ಮೂಡುತ್ತದೆ; ಅರಿವೇ ಗುರುವೆಂಬ ಶರಣ ಸೂಕ್ತಿ ನಿಜಕ್ಕೂ ಸತ್ಯ. ಮಾನವನ ಬೌದ್ದಿಕ ಶಕ್ತಿ ಸಾಮರ್ಥ್ಯ ಪ್ರತಿಭೆಗಳ ವಿಶ್ವಾಸಕ್ಕೆ ಓದು ಪ್ರಚೋದನೆಯನ್ನೋದಗಿಸುತ್ತದೆ ಮತ್ತು ಚಿಂತನಾ ಕೌಶಲ ವೃದ್ಧಿಯಾಗುತ್ತದೆ. ವಿಜ್ಞಾನ ಶಿಕ್ಷಣದ ಯಶಸ್ಸಿಗೆ ಪ್ರಯೋಗಶಾಲೆ ಎಷ್ಟು ಮುಖ್ಯವೋ, ಹಾಗೆ ಎಲ್ಲಾ ಶಿಕ್ಷಣದ ಶ್ರೇಯಸ್ಸಿಗೆ ಗ್ರಂಥಾಲಯವು ಅಗತ್ಯ ಮತ್ತು ಅನಿವಾರ್ಯವಾದ ಅವಿಬಾಜ್ಯ ಅಂಗ ಎಂಬುದಾಗಿ ಹಿರಿಯರು ಅರ್ಥೈಸಿದ್ದಾರೆ. ಗ್ರಂಥಾಲಯವು ಸೇವಾ ಸಂಸ್ಥೆಯೂ ಸಹ ಹೌದು. ಓದುಗರೆಂಬ ಗ್ರಾಹಕರು ಹೆಚ್ಚಿದಷ್ಟು ಭಂಡಾರಿಗಳು ಖುಶಿ ಪಡುತ್ತಾರೆ ಮತ್ತು ಅಗತ್ಯಗಳನ್ನು ಪೂರೈಸುವುದು ಸಂಸ್ಥೆಯ ಮುಖ್ಯಸ್ಥರ ಮತ್ತು ಗ್ರಂಥಾಲಯದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಸತ್ ಜನರು ತಮ್ಮ ತಮ್ಮ ಮನೆಯಲ್ಲಿರುವ ಅವರು ಈಗಾಗಲೇ ಹಲವು ಬಾರಿ ಓದಿ ಮುಗಿಸಿರುವ ಅನೇಕ ಪುಸ್ತಕಗಳು ಧರ್ಮ, ಆಧ್ಯಾತ್ಮ, ಪರಿಸರ, ಶಿಕ್ಷಣ, ಯೋಗ, ರಾಷ್ಟ್ರ ಚಿಂತನೆ, ಸಾಧು ಸಂತರ ಜೀವನ ಸಾಧನೆ ಕುರಿತು, ದೇಶ ಸೇವೆ ಮಾಡಿದ ಯೋಧರ ಜೀವನ ಚರಿತ್ರೆ ಮತ್ತು ಪುರಾಣ, ಉಪನಿಷತ್, ರಾಮಾಯಣ, ಭಗವದ್ಗೀತೆಯ ಇತರೆ ಯಾವುದೇ ಪುಸ್ತಕಗಳನ್ನು ನಾವು ಪ್ರಾರಂಭಿಸಲು ಹೊರಟಿರುವ ಗ್ರಂಥಾಲಯಕ್ಕೆ ನೀಡಬಹುದಾಗಿದೆ. ಇದನ್ನು ನಾವು ಶೇಖರಿಸಿ ಪ್ರತಿಯೊಬ್ಬರಿಗೂ ಅದು ತಲುಪುವಂತೆ ಹಾಗೂ ಪುಸ್ತಕ ಓದುವ ಮನಸ್ಸುಗಳಿಗೆ ಜೊತಯಾಗುತ್ತೇವೆ ಎಂದರು.
ಪುಸ್ತಕ ನೀಡ ಬಯಸುವ ಆಸಕ್ತರು ಶಬರೀಶ್ ಕಣ್ಣನ್(99640 72793) ಅವರನ್ನು ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post