ಹರಿದಾಸ ಪರಂಪರೆಯಲ್ಲಿ ಅಗ್ರಗಣ್ಯರಾದ ಶ್ರೀಜಗನ್ನಾಥ ದಾಸರ ಆರಾಧನೆಯನ್ನು ಇಂದು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶ್ರದ್ದಾಭಕ್ತಿಗಳಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಜಗನ್ನಾಥದಾಸರ ಸ್ಮರಣಾರ್ಥ ಲೇಖನ.
ಸಂತರು, ಯತಿಗಳು ಮತ್ತು ಹರಿದಾಸರು ಭೂಮಿಯಲ್ಲಿ ಅವತಾರ ಮಾಡಿರುವುದು ಮನು ಕುಲದ ಉದ್ಧಾರಕ್ಕೆ, ಸತ್ಯ ಪರಿಪಾಲನೆ ಮತ್ತು ಧರ್ಮದ ರಕ್ಷಣೆಗಾಗಿ. ಹರಿದಾಸರು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಪದಗಳನ್ನು, ಕೀರ್ತನೆಗಳನ್ನು ರಚಿಸಿ ತಮ್ಮ ನಾದಮಯ ಪದ ಸೃಷ್ಟಿಯನ್ನು ತಂಬೂರಿಯ ಶ್ರುತಿಯೊಂದಿಗೆ ಮೇಳವಿಸಿ, ನರ್ತಿಸುತ್ತ ಹಾಡಿ ಮನೆ ಮನೆಗೂ ಸಂಗೀತ ಸಾಹಿತ್ಯ, ನೃತ್ಯಗಳ ರಸಾನುಭವವನ್ನು ಮುಟ್ಟಿಸಿದವರು. ಹರಿದಾಸ ಸಾಹಿತ್ಯ ಮಾನವೀಯ ಗುಣ, ಕಾಯಕ ಪ್ರಜ್ಞೆ, ಜೀವನಕ್ಕೆ ಸರಿಯಾದ ದೃಷ್ಟಿ ಕೋನವನ್ನು ಒಳಗೊಂಡಿದ್ದು ಯಾವುದೇ ಒಂದು ಜಾತಿ, ಧರ್ಮ, ವಿಚಾರಕ್ಕೆ ಸೀಮಿತವಾಗಿರದೇ ಎಲ್ಲವನ್ನು ಕೂಡಿಕೊಂಡಿದ್ದು ಪ್ರತಿಯೊಬ್ಬರು ತನ್ನನ್ನು ತಾನು ಅರಿತು ಜೀವನ ದರ್ಶನ ಪಡೆದು, ವಿಶ್ವ ಪಥದ ಮಾನವನಾಗಿ ಹೊರಹೊಮ್ಮಲು ನೆರವಾಗಿದೆ.
ದಾಸರ ರಚನೆಗಳಲ್ಲಿ ಸಂಗೀತದ ಮಾಧುರ್ಯವೂ, ಸಾಹಿತ್ಯದ ಸ್ವಾರಸ್ಯವೂ ಧರ್ಮದ ಸಂದೇಶವೂ ಸರಿಸಮನಾಗಿ ಬೆರೆತು ಎಲ್ಲರಿಗೂ ಪ್ರಿಯವಾದುವುಗಳಾಗಿವೆ. ದಾಸರ ಕೀರ್ತನೆಗಳಲ್ಲಿ ಸಂಸ್ಕೃತದ ಆಡಂಬರವಿಲ್ಲ, ಸಂಧಿಸಮಾಸಗಳ ಕ್ಲಿಷ್ಟತೆಯಿಲ್ಲ, ಅಂತರಂಗದ ಅನುಭವಗಳನ್ನೂ, ತುಮುಲಗಳನ್ನೂ ನೇರವಾಗಿ, ಪ್ರಾಮಾಣಿಕವಾಗಿ ತಿಳಿದ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವಂತಿದೆ.
ಶ್ರೀಹರಿದಾಸ ಸಾಹಿತ್ಯದ ಎರಡನೆಯ ಸಾಲಿನಲ್ಲಿ ಬಂದ ಶ್ರೀವಿಜಯದಾಸರು, ಶ್ರೀಗೋಪಾಲದಾಸರ ನಂತರದ ಪ್ರಧಾನರೆಂದರೆ ಶ್ರೀಜಗನ್ನಾಥದಾಸರು. ಇವರು ದಾಸಚತುಷ್ಟಯರಲ್ಲಿ ಕೊನೆಯವರು. ಶ್ರೀಮದಾಚಾರ್ಯರ ನಂತರದ ಯತಿ ಪೀಳಿಗೆಯಲ್ಲಿ ಶ್ರೀಜಯತೀರ್ಥರಿದ್ದಂತೆ ಹರಿದಾಸರಲ್ಲಿ ಶ್ರೀಜಗನ್ನಾಥದಾಸರು ಎಂದರೆ ತಪ್ಪಾಗಲಾರದು.
ಇವರ ಜೀವನಗಾಥೆ ರೋಮಾಂಚಕ, ಕೃತಿಗಳು ರಚನಾತ್ಮಕ. ಅಸದೃಶ ಪಾಂಡಿತ್ಯ ಹೊಂದಿದ ಇವರು ಗೆಜ್ಜೆಕಟ್ಟಿ ತಾಳ ತಂಬೂರಿ ಹಿಡಿದು ದಾಸರಾದರು. ಹಾಡಿದರು, ನಲಿದರು, ನರ್ತಿಸಿದರು. ಭಗವಂತನ ಗುಣಗಾನದಲ್ಲಿ ಜೀವನವನ್ನು ಅರ್ಪಿಸಿಕೊಂಡವರು. ಇದರ ಫಲವೇ ಅವರ ಹರಿಕಥಾಮೃತಸಾರ. ಕಾರುಣ್ಯಮೂರ್ತಿಯನ್ನು ಕಂಡ ಇವರು ನಂಬಿದ ಭಕ್ತರನ್ನು ಕರುಣಿಸಿದರು.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಬ್ಯಾಗವಟ್ಟ ಗ್ರಾಮದಲ್ಲಿ ವಾಸವಾಗಿದ್ದ ಶ್ರೀನರಸಿಂಹಾಚಾರ್ಯ ಮತ್ತು ಲಕ್ಷ್ಮೀಬಾಯಿ ದಂಪತಿಗಳ ಪುತ್ರನಾಗಿ ಕ್ರಿಶ 1728 ರಲ್ಲಿ ಇವರ ಜನನವಾಗುತ್ತದೆ. ತಿರುಪತಿಯ ತಿಮ್ಮಪ್ಪನ ಅನುಗ್ರಹದಿಂದ ಹುಟ್ಟಿದ ಇವರಿಗೆ ತಂದೆತಾಯಿಯರು ಶ್ರೀನಿವಾಸನೆಂದು ನಾಮಕರಣ ಮಾಡುತ್ತಾರೆ. ಶ್ರೀರಾಘವೇಂದ್ರಸ್ವಾಮಿಗಳವರ ಹಿಂದಿನ ಅವತಾರವಾದ ಪ್ರಹ್ಲಾದರಾಜರ ತಮ್ಮನಾದ ಸಹ್ಲಾದರೇ ಜಗನ್ನಾಥದಾಸರಾಗಿ ಅವತಾರ ಮಾಡಿದ್ದಾರೆಂದು ಜ್ಞಾನಿಗಳು ತಿಳಿಸಿದ್ದಾರೆ. ಬಾಲಕ ಶ್ರೀನಿವಾಸನನ್ನು ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀವರದೇಂದ್ರ ತೀರ್ಥಗುರುಗಳಲ್ಲಿ ವೇದಾಧ್ಯಯನಕ್ಕಾಗಿ ಕಳಿಸಿಕೊಡುತ್ತಾರೆ.
ಶ್ರೀನಿವಾಸನು ಸಕಲ ಶಾಸ್ತ್ರ, ವೇದವಿದ್ಯೆಗಳಲ್ಲಿ ಪಾರಂಗತರಾದ ಮೇಲೆ ಶ್ರೀವರದೇಂದ್ರತೀರ್ಥರು ಅವರಿಗೆ ಇನ್ನು ಮಾನವಿಗೆ ತೆರಳಿ ಗ್ರಹಸ್ಥಾಶ್ರಮ ಸ್ವೀಕರಿಸಿ ಗುರುಕುಲವನ್ನು ಪ್ರಾರಂಭಿಸಿ ಶ್ರೀಮದಾಚಾರ್ಯರ ತತ್ವಶಾಸ್ತ್ರಗಳನ್ನು ಪ್ರಚಾರ ಮಾಡುವಂತೆ ಆಜ್ಞಾಪಿಸುತ್ತಾರೆ. ಗುರುಗಳ ಆಜ್ಞಾನುಸಾರ ಶ್ರೀನಿವಾಸನು ಶ್ರೀನಿವಾಸಾಚಾರ್ಯರಾಗಿ ಮಾನವಿಗೆ ಬಂದು ಗೃಹಸ್ಥರಾಗಿ ಮನೆಯಲ್ಲೇ ಗುರುಕುಲವನ್ನು ಪ್ರಾರಂಭಿಸಿ ಶಿಷ್ಯರಿಗೆ ಪಾಠ ಪ್ರವಚನಗಳನ್ನು ಪ್ರಾರಂಭಿಸುತ್ತಾರೆ.
ಒಂದು ದಿನ ದಾಸ ಶ್ರೇಷ್ಠರಾದ ವಿಜಯದಾಸರು ಸಂಚಾರ ಮಾಡುತ್ತಾ ಮಾನವಿಗೆ ಬರುತ್ತಾರೆ. ಶ್ರೀವಿಜಯದಾಸರು ಯಾವುದೇ ಊರಿಗೆ ಬಂದರೂ ಅವರು ಆ ಊರಿನಲ್ಲಿರುವ ಜ್ಞಾನಿಗಳು, ಪಂಡಿತರುಗಳನ್ನು ತಮ್ಮ ಜೊತೆ ಭೋಜನಕ್ಕೆ ಆಹ್ವಾನಿಸುತ್ತಿದ್ದರು. ಅದರಂತೆ ಶ್ರೀವಿಜಯದಾಸರು ಶ್ರೀನಿವಾಸಾಚಾರ್ಯರಿಗೆ ತಾವು ವಾಸ್ತವ್ಯ ಮಾಡಿರುವ ಪ್ರಾಣದೇವರಗುಡಿಗೆ ಭೋಜನಕ್ಕೆ ಬರುವಂತೆ ಆಹ್ವಾನಿಸುತ್ತಾರೆ.
ಶ್ರೀನಿವಾಸಾಚಾರ್ಯರು ಶ್ರೀವಿಜಯದಾಸರು ದೇವರಿಗೆ ನೈವೇದ್ಯ ಮಾಡುವ ವಿಷಯದಲ್ಲಿ ಮನದಲ್ಲಿ ಸಂಶಯಬಂದು ಅವರು ಭೋಜನಕ್ಕೆ ಹೋಗುವುದಿಲ್ಲ. ಇತ್ತ ಶ್ರೀವಿಜಯದಾಸರು ದೇವರಿಗೆ ತಯಾರು ಮಾಡಿದ ಅಡುಗೆಯನ್ನು ನೈವೇದ್ಯ ಮಾಡಿ ಶ್ರೀನಿವಾಸಾಚಾರ್ಯರು ಇನ್ನೂ ಬಾರದಿದ್ದುದರಿಂದ ಶಿಷ್ಯನೊಬ್ಬನ ಸಂಗಡ ಶ್ರೀನಿವಾಸಾಚಾರ್ಯರನ್ನು ಭೋಜನಕ್ಕೆ ಕರೆದುಕೊಂಡು ಬರಲು ಕಳಿಸುತ್ತಾರೆ.
ಶಿಷ್ಯನು ಬಂದಾಗ ಶ್ರೀನಿವಾಸಾಚಾರ್ಯರು ತಮಗೆ ಆರೋಗ್ಯ ಸರಿಯಿಲ್ಲವೆಂತಲೂ ಉದರ ವ್ಯಾಧಿಯಿಂದ ಬಳಲುತ್ತಿರುವುದರಿಂದ ಮನೆಯಲ್ಲಿಯೇ ಭೋಜನ ಮಾಡಿದ್ದೇನೆ. ಈ ವಿಷಯವನ್ನು ದಾಸರಿಗೆ ತಿಳಿಸು ಎಂದು ತಮ್ಮನ್ನು ಕರೆಯಲು ಬಂದ ಶಿಷ್ಯನ ಸಂಗಡ ಹೇಳಿ ಕಳಿಸುತ್ತಾರೆ. ಶಿಷ್ಯನು ಯಥಾವತ್ತಾಗಿ ಶ್ರೀನಿವಾಸಾಚಾರ್ಯರು ಹೇಳಿದ ವಿಷಯವನ್ನು ದಾಸರಿಗೆ ತಿಳಿಸುತ್ತಾನೆ.
ಶ್ರೀವಿಜಯದಾಸರು ಇದನ್ನು ಕೇಳಿ ಹರಿಚಿತ್ತ ಎಂದುಕೊಂಡು ಸೇರಿದ್ದ ಭಕ್ತಜನರಿಗೆ ಭೋಜನ ಮಾಡಿಸುತ್ತಾರೆ. ವಿಜಯದಾಸರ ಆಹ್ವಾನ ತಿರಸ್ಕರಿಸಿದ್ದರ ಫಲವಾಗಿ ಶ್ರೀನಿವಾಸಾಚಾರ್ಯರಿಗೆ ತೀವ್ರವಾದ ಉದರರೋಗದಿಂದ(ಹೊಟ್ಟೆನೋವು) ಪೀಡಿತರಾಗುತ್ತಾರೆ. ದಿನ ದಿನಕ್ಕೆ ಕಾಯಿಲೆ ಉಲ್ಬಣಗೊಂಡು ಕೃಶರಾಗುತ್ತಾ ಹೋಗುತ್ತಾರೆ. ವ್ಯಾಧಿ ಪರಿಹಾರ ಮಾಡಿಕೊಳ್ಳಲು ವಾಯುದೇವರ ಸೇವೆ ಮಾಡುತ್ತಾರೆ.
ಮುಖ್ಯಪ್ರಾಣದೇವರು ಅವರ ಕನಸಿನಲ್ಲಿ ಬಂದು ಮಂತ್ರಾಲಯಕ್ಕೆ ಹೋಗಿ ಅಲ್ಲಿ ಶ್ರೀರಾಯರ ಸೇವಾ ಮಾಡುವಂತೆ ಸೂಚನೆ ಮಾಡುತ್ತಾರೆ. ಅದರಂತೆ ಶ್ರೀನಿವಾಸಾಚಾರ್ಯರು ಮಂತ್ರಾಲಯಕ್ಕೆ ಬಂದು ಶ್ರೀರಾಯರ ಸೇವಾ ಮಾಡುತ್ತಾರೆ. ಶ್ರೀರಾಯರು ಅವರಿಗೆ ಸ್ವಪ್ನದಲ್ಲಿ ಈ ವ್ಯಾಧಿ ದೇಹದಲ್ಲಿ ಬರಲು ಶ್ರೀವಿಜಯರಾಯರು ಅಂದು ಮಾನವಿಯಲ್ಲಿ ಭೋಜನಕ್ಕೆ ಬರಲು ಕೊಟ್ಟ ಆಹ್ವಾನವನ್ನುಧಿಕ್ಕರಿಸಿದುದರ ಕಾರಣದಿಂದ ಆಗಿರುತ್ತೆ. ಆದ್ದರಿಂದ ನೀನು ವಿಜಯರಾಯರಲ್ಲಿ ಹೋಗಿ ಅವರ ಆಶೀರ್ವಾದ ಪಡೆದು ಈ ವ್ಯಾಧಿ ಪರಿಹಾರ ಮಾಡಿಕೋ ಎಂತ ಸೂಚಿಸುತ್ತಾರೆ. ಅದಕ್ಕೆ ಶ್ರೀನಿವಾಸಾಚಾರ್ಯರು ಈಗ ವಿಜಯರಾಯರು ತಿರುಪತಿಗೆ ಹೋಗಿದ್ದಾರೆ. ಈಗಿನ ನನ್ನ ದೇಹಸ್ಥಿತಿಯಲ್ಲಿ ನನಗೆ ತಿರುಪತಿವರೆಗೆ ಹೋಗುವುದು ಅಸಾಧ್ಯ. ಆದ್ದರಿಂದ ಭವರೋಗ ವೈದ್ಯರಾದ ನೀವೇ ನನ್ನನ್ನು ಈ ವ್ಯಾಧಿಯಿಂದ ಮುಕ್ತಗೊಳಿಸಿ ಎಂದು ಪ್ರಾರ್ಥಿಸುತ್ತಾರೆ. ಶ್ರೀರಾಯರು ನೀನು ಶ್ರೀಪ್ರಾಣದೇವರ ಭಕ್ತ ಮತ್ತು ಅವರೇ ನಿನಗೆ ವಿಜಯರಾಯರಲ್ಲಿ ಹೋಗಲು ಶಕ್ತಿ ಕೊಡುತ್ತಾರೆ ಎಂದು ತಿಳಿಸಿ ಅದೃಶ್ಯರಾದರು. ಶ್ರೀನಿವಾಸಾಚಾರ್ಯರಿಗೆ ದೇಹದಲ್ಲಿ ಸ್ವಲ್ಪಶಕ್ತಿ ಮತ್ತು ಚೈತನ್ಯ ಬಂದಂತಾಗಿ ತಿರುಪತಿಗೆ ಹೋಗುತ್ತಾರೆ.
ಅಪರೋಕ್ಷ ಜ್ಞಾನಿಗಳಾದ ವಿಜಯರಾಯರಿಗೆ ಶ್ರೀನಿವಾಸಾಚಾರ್ಯರ ಬಗ್ಗೆ ಎಲ್ಲವೂ ತಿಳಿದಿರುತ್ತದೆ. ಶ್ರೀವಿಜಯರಾಯರನ್ನು ನೋಡುತ್ತಿದ್ದ ಹಾಗೇ ಶ್ರೀನಿವಾಸಾಚಾರ್ಯರು ಅವರ ಚರಣಕಮಲಗಳಿಗೆ ನಮಸ್ಕಾರ ಮಾಡಿ ಅವರ ಕ್ಷಮೆ ಕೇಳಿ ತಾವು ಅನುಭವಿಸುತ್ತಿರುವ ವ್ಯಾಧಿಯನ್ನು ಪರಿಹಾರ ಮಾಡುವಂತೆ ಪ್ರಾರ್ಥಿಸುತ್ತಾರೆ.
ಶ್ರೀ ವಿಜಯರಾಯರು ನಿಮ್ಮ ಸ್ವರೂಪೋದ್ಧಾರಕ ಗುರುಗಳು ಉತ್ತನೂರಿನಲ್ಲಿರುವ ಗೋಪಾಲದಾಸರನ್ನು ಮೊರೆ ಹೋಗಿ, ಅವರು ನಿಮ್ಮ ವ್ಯಾಧಿಯನ್ನು ಪರಿಹರಿಸುತ್ತಾರೆ ಎಂದು ಅಲ್ಲಿಗೆ ಹೋಗುವಂತೆ ತಿಳಿಸುತ್ತಾರೆ. ಶ್ರೀಗೋಪಾಲದಾಸರು ಗಣೇಶನ ಅಂಶ ಮತ್ತು ಅಪರೋಕ್ಷ ಜ್ಞಾನಿಗಳು. ಅವರಿಗೆ ಶ್ರೀನಿವಾಸಾಚಾರ್ಯರ ಬಗ್ಗೆ ಎಲ್ಲವೂ ತಿಳಿದಿತ್ತು. ಅವರು ಧನ್ವಂತ್ರಿಗೆ ನಿವೇದಿಸಿದ ಎರಡು ಜೋಳದ ಭಕ್ಕರಿಗಳನ್ನು ಇವರಿಗೆ ತಿನ್ನಲಿಕ್ಕೆ ಕೊಡುತ್ತಾರೆ. ಗೋಪಾಲದಾಸರು ಅವರ ಆಯುಷ್ಯದಲ್ಲಿ 40 ವರ್ಷಗಳನ್ನು ಅವರ ಗುರುಗಳಾದ ವಿಜಯರಾಯರ ಆಜ್ಞೆಯಂತೆ ಧಾರೆ ಎರೆಯುತ್ತಾರೆ. ದಿನೇ ದಿನೇ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
ಕೆಲವು ದಿವಸಗಳಾದ ಮೇಲೆ ಶ್ರೀನಿವಾಸಾಚಾರ್ಯರು ಶ್ರೀಗೋಪಾಲದಾಸರಲ್ಲಿ ಅವರಿಗೆ ದಾಸ ದೀಕ್ಷೆಯನ್ನು ಕೊಡುವಂತೆ ಪ್ರಾರ್ಥಿಸುತ್ತಾರೆ. ಶ್ರೀಗೋಪಾಲದಾಸರು ಅವರಿಗೆ ಪಂಢರಾಪುರಕ್ಕೆ ಹೋಗಿ ಅಲ್ಲಿ ಪಾಂಡುರಂಗ ವಿಠಲನಿಂದ ಅವರಿಗೆ ಅನುಗ್ರಹವಾಗುವುದಾಗಿ ತಿಳಿಸುತ್ತಾರೆ. ಶ್ರೀನಿವಾಸಾಚಾರ್ಯರು ಪಂಢರಾಪುರಕ್ಕೆ ಬಂದು ಅಲ್ಲಿ ಚಂದ್ರಭಾಗಾ ನದಿಯಲ್ಲಿ ಸ್ನಾನಮಾಡುತ್ತಾ ಮುಳುಗು ಹಾಕಿದಾಗ ಒಂದು ಜಗನ್ನಾಥ ವಿಠಲ ಎಂದು ಬರೆದಿದ್ದ ಫಲಕ ಇವರ ಕೈಗೆ ಸಿಗುತ್ತದೆ. ಇದಾದ ಮೇಲೆ ಮೊದಲ ಹಾಡನ್ನು ವಿಠಲನ ಮೇಲೆ ಹಾಡುತ್ತಾರೆ.
ವಿಠಲಯ್ಯ ವಿಠಲಯ್ಯ/ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅಂದಿನಿಂದ ವಿಠಲನ ಅನುಗ್ರಹದಿಂದ ಜಗನ್ನಾಥದಾಸರಾಗಿ ದಾಸ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿದರು. ಅವರು ಪಂಢರಾಪುರದಲ್ಲಿ ಶ್ರೀ ವಿಠಲನ ಸೇವೆ ಮಾಡುತ್ತಿರುವಾಗ ಸ್ವತಃ ವಿಠಲನೇ ದಾಸರಿಗೆ ಮೃಷ್ಟಾನ್ನ ಭೋಜನದ ಅನುಗ್ರಹ ಮಾಡಿದ ಪ್ರಸಂಗ ನಡೆಯುತ್ತದೆ. ಇವರು ದೇವಸ್ಥಾನದ ಪ್ರಾಕಾರದಲ್ಲಿ ಪ್ರದಕ್ಷಿಣೆ ಮಾಡುತ್ತಿದ್ದಾಗ ವಿಠಲನು ಓರ್ವ ಯಾತ್ರಿಕ ಬ್ರಾಹ್ಮಣನ ವೇಷಧರಿಸಿ ದಾಸರೇ ಇಂದು ದೇವಾಲಯದಲ್ಲಿ ಔತಣಕೂಟ ಏರ್ಪಡಿಸಿದ್ದೇನೆ. ತಾವು ಭೋಜನಕ್ಕೆ ಬರಬೇಕೆಂದು ಆಹ್ವಾನಿಸುತ್ತಾನೆ.
ಭೋಜನವಾದ ಮೇಲೆ ದಾಸರಿಗೆ ಸುರಗೀ ಹೂವಿನ ಮಾಲೆಯನ್ನೂ ಮತ್ತು ಫೇಡೆಯ ಉಂಡೆಗಳನ್ನು ಕಟ್ಟಿದ ಗಂಟನ್ನೂ ಕೊಟ್ಟು ಅದೃಶ್ಯನಾಗುತ್ತಾನೆ. ದಾಸರಿಗೆ ಇದು ಪಾಂಡುರಂಗವಿಠಲನ ಅನುಗ್ರಹವೆಂದೇ ತಿಳಿದರು. ಪರಮಾತ್ಮ ವಿಠಲನು ನೀಡಿದ ಔತಣದ ಈ ಒಂದು ಅವಕಾಶ, ಭಕ್ತಕೋಟಿಗೆ ಹರಿಕಥಾಮೃತಸಾರವನ್ನುಣಿಸಿದ ಜಗನ್ನಾಥದಾಸರಿಗಲ್ಲದೆ ಮತ್ತಾರಿಗೆ ಲಭ್ಯ? ಇಂತಹ ಅನೇಕ ಘಟನೆಗಳು ದಾಸರ ಜೀವನದಲ್ಲಿ ನಡೆದಿದೆ.
ಒಮ್ಮೆ ಶ್ರೀಜಗನ್ನಾಥದಾಸರು ತೀರ್ಥಯಾತ್ರೆ ನಿಮಿತ್ತ ಸಂಚಾರ ಮಾಡುತ್ತಾ ಸುರಪುರ ಎಂಬ ಊರಿಗೆ ಬರುತ್ತಾರೆ. ಆಗಿನ ಸುರಪುರದ ಅರಸನಾದ ವೆಂಕಟಪ್ಪ ನಾಯಕ ಶ್ರೀದಾಸರ ಮಹಿಮೆಯನ್ನು ಕೇಳಿದ್ದರಿಂದ ಅವರಿಗೆ ಯಥೋಚಿತ ಸತ್ಕಾರ, ಗೌರವ ಮಾಡಿ ಕೃತಕೃತ್ಯನಾಗುತ್ತಾನೆ. ಅಲ್ಲಿರುವಷ್ಟು ದಿನವೂ ದಾಸರು ನೆರೆದ ಭಕ್ತ ಸಮೂಹಕ್ಕೆ ಹಿತೋಪದೇಶವನ್ನು ಮಾಡುತ್ತಿದ್ದರು. ಇವರ ಹಿತೋಪದೇಶದಿಂದ ಪ್ರಭಾವಿತನಾದ ಆ ಊರಿನ ಬಡತನದಲ್ಲಿದ್ದ ಬ್ರಾಹ್ಮಣನೊಬ್ಬ ಇವರನ್ನು ಹಿಂಬಾಲಿಸಿಕೊಂಡು ಬರುತ್ತಾನೆ.
ಇವರ ಜೊತೆಗೇ ಸಂಚಾರ ಮಾಡುತ್ತಾ ಬರುತ್ತಿರುವ ಬ್ರಾಹ್ಮಣನಿಗೆ ತಮ್ಮನ್ನು ಹಿಂಬಾಲಿಸುತ್ತಿರುವುದಕ್ಕೆ ಕಾರಣವೇನೆಂದು ವಿಚಾರಿಸಲಾಗಿ, ಆ ಬ್ರಾಹ್ಮಣ ತನ್ನ ಬಡತನದ ಬೇಗೆ ಮತ್ತು ತನ್ನ ಸಾಧನೆಯ ಮಾರ್ಗದಲ್ಲಿನ ಅಡೆತಡೆಗಳನ್ನು ಕಣ್ಣೀರಿಡುತ್ತಾ ಬಿನ್ನವಿಸಿದಾಗ ಶ್ರೀದಾಸರು ಆತನಿಗೆ ಹಿಂದಿನ ಜನ್ಮದಲ್ಲಿ ಸತ್ಪಾತ್ರರಿಗೆ ದಾನ ಮಾಡದ ಲೋಭಿತನವೇ ಈಗಿನ ಬಡತನಕ್ಕೆ ಕಾರಣವೆಂದು ತಿಳಿಸಿ ತಮ್ಮ ದೈವೀ ಶಕ್ತಿಯಿಂದ ಅವನ ಬಡತನವನ್ನು ಹೋಗಲಾಡಿಸುತ್ತಾರೆ. ಅವರು ಶ್ರೀ ನರಸಿಂಹ ಸುಳಾದಿಯನ್ನು ರಚಿಸಿ ಅದನ್ನು ಸುರಪುರದ ಗುಡ್ಡದಲ್ಲಿನ ಶ್ರೀಆಂಜನೇಯನ ಸನ್ನಿಧಿಯಲ್ಲಿ ಒಂದು ಮಂಡಲ ಪಠಿಸುವಂತೆ ಸೂಚಿಸಿದರು. ಬ್ರಾಹ್ಮಣನು ಮಾಡಿದ ಸೇವೆಯ ಫಲವಾಗಿ ರಾಜನಾಗಿದ್ದ ವೆಂಕಟಪ್ಪನಾಯಕನು ಬ್ರಾಹ್ಮಣನು ಕೆಲಸದ ಪೇಕ್ಷೆಯಿಂದ ಬಂದಾಗ ದಾಸರ ಶಿಷ್ಯನೆಂಬ ಕಾರಣದಿಂದ ಆತನಿಗೆ ಅರಮನೆಯಲ್ಲಿ ಕೆಲಸ ಕೊಟ್ಟು ಕ್ರಮೇಣ ತನ್ನ ಆಸ್ಥಾನದಲ್ಲಿ ದಿವಾನರನ್ನಾಗಿಯೂ ನೇಮಿಸಿ ಪುರಸ್ಕರಿಸಿದ. ಇವರು ತಮ್ಮ ಗುರುಗಳಾದ ಗೋಪಾಲದಾಸರು ಭಗವನ್ಮೂರ್ತಿಗಳ ಚಿತ್ರಗಳನ್ನು ರಂಗವಲ್ಲಿಯಲ್ಲಿ ಬಿಡಿಸುತ್ತಿದ್ದ ಹಾಗೆ ಜಗನ್ನಾಥದಾಸರೂ ಭಗವನ್ಮೂರ್ತಿಗಳ ಚಿತ್ರಗಳನ್ನು ರಂಗವಲ್ಲಿಯಲ್ಲಿ ಬಿಡಿಸುತ್ತಿದ್ದರು. ಆದ್ದರಿಂದ ಇವರಿಗೆ ರಂಗೋಲಿದಾಸರು ಮತ್ತು ರಂಗವಲಿದ ದಾಸರು ಎಂಬ ಬಿರುದು ಇತ್ತು.
ಅವರಿಂದ ರಚಿತವಾದ ಅನೇಕ ಕೀರ್ತನೆಗಳನ್ನು ತತ್ವಸುವ್ವಾಲಿ, ಮೇರು ಕೃತಿಯಾದ ಹರಿಕಥಾಮೃತಸಾರ ಹರಿದಾಸ ಸಾಹಿತ್ಯಕ್ಕೆ ಮುಕುಟಪ್ರಾಯವಾಗಿ ಎಲ್ಲರ ಮನೆಮನಗಳಲ್ಲಿ ಬೀಡುಬಿಟ್ಟಿದೆ. ಹರಿಕಥಾಮೃತಸಾರ ಇವರ ತಾತ್ವಿಕ ಉದ್ಗ್ರಂಥ. ಇದರಲ್ಲಿ ಶುಷ್ಕ ವೈದಿಕ ತತ್ವಬೋಧನೆ ಮಾತ್ರವಿರದೆ ಸರಳವಾಗಿ, ಅರ್ಥವಾಗುವಂತಿರುವುದು ಇದರ ವೈಶಿಷ್ಟ್ಯ. ಈ ಕೃತಿಯಲ್ಲಿ 32 ಸಂದಿಗಳಿವೆ. ಶಾಸ್ತ್ರದಲ್ಲಿ ಅಭಿರುಚಿ, ಧರ್ಮದಲ್ಲಿ ಶ್ರದ್ಧೆ ಪರಮಾತ್ಮನಲ್ಲಿ ಭಕ್ತಿ, ಪ್ರೀತಿ ಇರುವ ಎಲ್ಲರಿಗೂ ಈ ಗ್ರಂಥ ಒಂದು ಸವಿಯುಣಿಸಾಗಬಲ್ಲುದು. ಇದರೊಂದಿಗೆ ಅನೇಕ ಕೀರ್ತನೆಗಳನ್ನೂ, ಸುಳಾದಿಗಳನ್ನೂ ಇವರು ರಚಿಸಿದ್ದಾರೆ. ಸುವ್ವಾಲಿಗಳನ್ನು ರಚಿಸಿರುವುದು ಇವರ ಮತ್ತೊಂದು ವೈಶಿಷ್ಟ್ಯ.
ಶಿಷ್ಯರಾದ ಪ್ರಾಣೇಶದಾಸರಿಂದ ಆದದ್ದಾಯಿತು ಇನ್ನಾದರೂ ಒಳ್ಳೆ ಹಾದಿ ಹಿಡಿಯೋ ಪ್ರಾಣಿ ಎಂದು ಹಾಡಿಸಿ ಕರ್ಜಗಿ ದಾಸಪ್ಪನವರಿಗೆ ಅನುಗ್ರಹಿಸಿ ಶ್ರೀವಿಠಲರನ್ನಾಗಿ ಮಾಡಿ ಹರಿಕಥಾಮೃತಸಾರಕ್ಕೆ ಫಲಶೃತಿಯನ್ನು ಬರೆಯುವಂತೆ ಅನುಗ್ರಹ ಮಾಡಿರುತ್ತಾರೆ. ಜಗನ್ನಾಥ ದಾಸರು ದಾಸಕೂಟಕ್ಕೆ ಶಿಖರ ಪ್ರಾಯರು. ಪಂಢರಾಪುರದ ಪಾಂಡುರಂಗ ರೂಪಿ ಪರಮಾತ್ಮನಿಂದಲೇ ಅಂಕಿತ ಪಡೆದ ಅಪರೋಕ್ಷಜ್ಞಾನಿಗಳು.
ಹರಿಕಥಾಮೃತಸಾರ ಜಗನ್ನಾಥದಾಸರಿಂದ ರಚಿತವಾದ ಒಂದು ಉತ್ಕ್ರೃಷ್ಟವಾದ ಗ್ರಂಥ. ಶ್ರೀಜಗನ್ನಾಥದಾಸರು ಶಾಲಿವಾಹನ ಶಕೆ 1731 ನೆಯ ಶುಕ್ಲ ಸಂವತ್ಸರದ ಭಾದ್ರಪದ ಶುದ್ಧನವಮಿ ಹರಿಪದವನ್ನೈದಿದರು. ಇಂತಹ ಮಹಾನುಭಾವರ ನಾಮ ಸ್ಮರಣೆಯನ್ನು ಈ ಪರ್ವಕಾಲದಲ್ಲಿ ನಾವೂ ಭಕ್ತಿಯಿಂದ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
ಲೇಖನ: ಎನ್. ಜಯಭೀಮ್ ಜೋಯ್ಸ್
Discussion about this post