ತುಮಕೂರು: ಹೌದು.. ಸಿದ್ದಗಂಗಾ ಶ್ರೀಗಳ ಅಸ್ತಂಗತದ ಹಿನ್ನೆಲೆಯಲ್ಲಿ ಇಂದು ನಾಡಿಗೆ ನಾಡೇ ಶೋಕಸಾಗರದಲ್ಲಿ ಮುಳುಗಿಹೋಗಿದ್ದರೆ, ಇನ್ನೊಂದೆಡೆ ಶ್ರೀಗಳ ಸಂಪಾದಿಸಿದ್ದ ಅಪಾರ ಆಸ್ತಿ ಕಣ್ಣೀರಿನ ಕೋಡಿಯನ್ನು ಹರಿಸುತ್ತಿದೆ… ಯಾವುದು ಗೊತ್ತಾ ಶ್ರೀಗಳ ಆಸ್ತಿ? ಅವರು ಬೆಳೆಸಿದ್ದ ಸಾವಿರಾರು ಮಕ್ಕಳು.
ನಿಜ… ಅವರು ತಮ್ಮ ಕುಟುಂಬವನ್ನೆಲ್ಲಾ ತೊರೆದು ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು. ಆದರೆ, ಆನಂತರ ಅವರು ಇಷ್ಟಪಟ್ಟಿದ್ದ ಸಮಾಜವೇ ಅವರ ಕುಟುಂಬವಾಯಿತು.. ಈ ಕುಟುಂಬದಲ್ಲಿ ಅವರ ಸಂಪಾದಿಸಿದ ಅಪಾರ ಆಸ್ತಿ ಎಂದರೆ ಸಾವಿರಾರು ಮುಗ್ದ ಮಕ್ಕಳು.
ಯಾವುದೇ ಮಕ್ಕಳಿಗೆ ಉತ್ತಮ ಜೀವನ ರೂಪಿಸಿಕೊಳ್ಳಲು ವಿದ್ಯೆಯೇ ಅಗತ್ಯ ಎಂದು ಪ್ರತಿಪಾದಿಸಿದ್ದ ಶ್ರೀಗಳು ಇದಕ್ಕಾಗಿ ಜಾತಿ, ಧರ್ಮ ಎನ್ನುವುದನ್ನು ನೋಡದೇ ಅಗತ್ಯವಿರುವ ಎಲ್ಲ ಬಡ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದ ಮಹಾತ್ಮರು. ಪ್ರಸ್ತುತ ಶ್ರೀಮಠದಲ್ಲಿ 10 ಸಾವಿರ ಮಕ್ಕಳು ಉಚಿತ ವಿದ್ಯಾಭ್ಯಾಸ ಪಡೆಯುತ್ತಿದ್ದರೆ ಇದುವರೆಗೂ ಇಲ್ಲಿ ಶಿಕ್ಷಣ ಪಡೆದ ಮಕ್ಕಳ ಸಂಖ್ಯೆ ಲಕ್ಷಾಂತರ.
ಇಂತಹ ಶ್ರೀಗಳು ತಮ್ಮ ಮಠದ ಪ್ರತಿ ಮಕ್ಕಳೊಂದಿಗೂ ಸಹ ಒಡನಾಟ ಹೊಂದಿದ್ದರು. ಮಾತ್ರವಲ್ಲ ಪ್ರತಿ ಮಗುವಿನ ಅವಿಭಾಜ್ಯ ಅಂಗವಾಗಿದ್ದ ಶ್ರೀಗಳು, ಮಕ್ಕಳೇ ತಮ್ಮ ಜೀವನ ಎಂಬಂತೆ ಬದುಕಿದ್ದವರು.
ಈಗ ಶ್ರೀಗಳನ್ನು ಕಳೆದುಕೊಂಡ ಸಾವಿರಾರು ಮಕ್ಕಳು ಅನಾಥಪ್ರಜ್ಞೆಯಿಂದ ಕಣ್ಣೀರಿಡುತ್ತಿದ್ದಾರೆ. ಶ್ರೀಗಳ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿರುವ ಸಾವಿರಾರು ಭಕ್ತರು ಒಂದಡೆಯಾದರೆ, ಮಠದ ಹಾಸ್ಟೆಲ್’ನಲ್ಲಿರುವ ಸಾವಿರಾರು ಮಕ್ಕಳು ಶ್ರೀಗಳ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದಾರೆ.
ನಮಗಿನ್ನಾರು ದಿಕ್ಕು, ನಮಗೆ ಗುರುಗಳ ಬೇಕು, ಅವರನ್ನು ಬಿಟ್ಟಿರಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಾವಿರಾರು ಮಕ್ಕಳು ಕಣ್ಣೀರಿಡುತ್ತಿರುವ ಮಕ್ಕಳ ರೋಧನ ಮನಕಲಕುವಂತಿದೆ. ಪ್ರತಿ ಮಗುವಿನ ಮುಖದಲ್ಲಿನ ಕಣ್ಣೀರು, ದುಃಖ ಹಾಗೂ ರೋಧನವನ್ನು ನೋಡುತ್ತಿದ್ದರೆ, ಶ್ರೀಗಳ ಮಕ್ಕಳನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ತೋರುತ್ತದೆ.
ಇಂತಹ ಪ್ರತಿಯೆಂಬ ಆಸ್ತಿಯನ್ನು ಸಂಪಾದಿಸಿದ ಶ್ರೀಗಳ ಬದುಕು ನಿಜಕ್ಕೂ ಇಡಿಯ ವಿಶ್ವಕ್ಕೆ ಆದರ್ಶಪ್ರಾಯ ಎಂದರೆ ಅತಿಶಯೋಕ್ತಿಯಲ್ಲ…
Discussion about this post