ಸಮಾಜದಲ್ಲಿ ಸ್ವಲ್ಪ ಮೇಲುಸ್ತರದ ಹಾದಿಯಲ್ಲಿ ಸಾಗಿದರೆ ಸಾಕು, ಸಣ್ಣದೊಂದು ಒಳ್ಳೆಯ ಕೆಲಸ ಮಾಡಿದರೆ ಸಾಕು, ತಮ್ಮನ್ನು ಹಿಡಿಯುವವರು ಇಲ್ಲ, ತಮ್ಮ ಸರಿಸಾಟಿ ಯಾರೂ ಇಲ್ಲ ಎಂಬು ಬೀಗುವ ಜನರೇ ಅಧಿಕ… ಆದರೆ, ಇಂತಹ ಮಾತುಗಳಿಗೆ ಅಪವಾದ ಈ ಗೀತಬ್ರಹ್ಮ ಎಸ್ಪಿಬಿ…
ಭಾರತ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರ ಕಂಡ ಅತ್ಯಂತ ಪ್ರತಿಭಾನ್ವಿತ, ಸರಳತೆಯ ಪ್ರತೀಕ, ಮಗುವಿನ ಮುಗ್ದ ಮನಸ್ಸಿನ ಗೀತ ಶಕ್ತಿ ಎಸ್.ಪಿ. ಬಾಲಸುಬ್ರಹ್ಮಣ್ಯಂ…
ಹೌದು… ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಉಣಬಡಿಸುತ್ತಿರುವ ಕಲರ್ಸ್ ಕನ್ನಡ ಚಾನಲ್ನಲ್ಲಿ ಜೂನ್ 10ರಂದು ನೂರೊಂದು ನೆನಪು ಎಂಬ ಅದ್ಬುತ ಕಾರ್ಯಕ್ರಮ ಪ್ರಸಾರವಾಯಿತು. ಅಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ನೆನಪಿನ ವಿಶೇಷಾರ್ಥ ನಡೆದ ಗಾಯನ ಕಾರ್ಯಕ್ರಮದಲ್ಲಿ ಹಾಡಿದ್ದು ಎಸ್ಪಿಬಿ…
ಅಂದು ಕಾರ್ಯಕ್ರಮ ಆರಂಭವಾದಾಗ ಮೊಟ್ಟ ಮೊದಲ ಹಾಡನ್ನು ಎಸ್ಪಿಬಿ ಹಾಡಿದ್ದು ಮಲಯ ಮಾರುತ ಚಿತ್ರದ ಶಾರದೆ ದಯೆತೋರಿದೆ ಹಾಡನ್ನು…
ಇಲ್ಲಿ, ಅವರೇ ಹಿಂದೆ ಹಾಡಿದ್ದ ಹಾಡನ್ನು ಮತ್ತೆ ಹಾಡಿದ್ದು ವಿಶೇಷ ಅಲ್ಲ.. ಆದರೆ, ಇಲ್ಲಿ ಶಾರದೆ ದಯೆತೋರಿದೆ ಹಾಡನ್ನು ವೇದಿಕೆಯ ಮೇಲೆ ಬಾಲಸುಬ್ರಹ್ಮಣ್ಯಂ ಹಾಡುವಾಗ ತಮ್ಮ ಪಾದರಕ್ಷೆಗಳನ್ನು ಬಿಚ್ಚಿಟ್ಟು ಬರಿ ಕಾಲಿನಲ್ಲಿ ನಿಂತು ಹಾಡಿದ್ದು.(ಚಿತ್ರ ನೋಡಿ)
ಹೌದು… ಚಪ್ಪಲಿ ಹಾಕಿಕೊಂಡು ವೇದಿಕೆಗೆ ಬಂದ ಎಸ್ಪಿಬಿ ಶಾರದೆ ದಯೆ ತೋರಿದೆ ಎಂದು ಹಾಡು ಆರಂಭಿಸುವ ಮುನ್ನ ಚಪ್ಪಲಿಯನ್ನು ಪಕ್ಕದಲ್ಲಿ ಬಿಟ್ಟು, ಬರಿಗಾಲಿನಲ್ಲಿ ನಿಂತು ಹಾಡಿದರು.. ಹಾಡು ಮುಗಿದ ನಂತರ ಮತ್ತೆ ಚಪ್ಪಲಿ ಹಾಕಿಕೊಂಡೇ ಉಳಿದ ಚಿತ್ರಗೀತೆಗಳನ್ನು ಹಾಡಿದರು. ಇದಕ್ಕೆ ಅವರ ಇಷ್ಟವಾಗೋದು.
ಸುಮಾರು 15ಕ್ಕೂ ಅಧಿಕ ಭಾಷೆಯಲ್ಲಿ ಅಂದಾಜು 50 ಸಾವಿರಕ್ಕೂ ಹೆಚ್ಚು ವಿವಿಧ ಹಾಡುಗಳನ್ನು ಹಾಡಿರುವ ಪ್ರಪಂಚದ ಏಕೈಕ ಗಾಯಕ, ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು, 25 ಬಾರಿ ಆಂಧ್ರಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ, 4 ಭಾಷೆಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಹಾಗೂ ಹಲವು ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೌರವ ಪಡೆದ ಗಾಯಕ ಇವರು.
ನಿಜಕ್ಕೂ ಇಷ್ಟೆಲ್ಲಾ ಸಾಧನೆ ಮಾಡಿ, ಮುಗಿಲೆತ್ತರಕ್ಕೆ ಬೆಳೆದಿದ್ದರೂ ಇವರಲ್ಲಿನ ಸರಳತೆ ಮಾತ್ರ ಪದಗಳಲ್ಲಿ ವರ್ಣಿಸಲಸಾಧ್ಯ. ಒಂದೆರಡೆ ಚಿತ್ರಗಳಲ್ಲಿ, ಅರ್ಥವಿಲ್ಲದ ಹಾಡುಗಳನ್ನು ಹಾಡಿದ ಮಾತ್ರಕ್ಕೆ ತಮ್ಮ ಸರಿಸಾಟಿಯಿಲ್ಲ ಎಂದು ಬೀಗುವ ಯುವಗಾಯಕರಲ್ಲಿ ಕೆಲವರು ಇರುವ ಈ ಕಾಲದಲ್ಲಿ ಇಷ್ಟೆಲ್ಲಾ ಸಾಧನೆಯ ಶಿಖರವೇರಿದ್ದರೂ, ತಮ್ಮ ನಾಲಿಗೆಯ ಮೇಲೆ ತಾಯಿ ಶಾರದೆಯೇ ಸಾಕ್ಷಾತ್ ನರ್ತಿಸುತ್ತಿದ್ದರೂ ಯಾವುದೂ ನನ್ನದಲ್ಲ, ನಾನಿನ್ನೂ ಕಲಿಯುತ್ತಿದ್ದೇನೆ ಎಂಬ ಮುಗ್ದ ಮನಸ್ಸಿನ ಎಸ್ಪಿಬಿ, ವೇದಿಕೆಯೊಂದರಲ್ಲಿ ತಾಯಿ ಶಾರದೆಯ ಹಾಡು ಹಾಡುವಾಗಲೂ ಚಪ್ಪಲಿ ಬಿಚ್ಚಿ ಹಾಡುವ ಮೂಲಕ, ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ದೇವಿಗೆ ಗೌರವ, ಭಕ್ತಿ ಸಲ್ಲಿಸುತ್ತಾರೆ ಎಂದರೆ ಇವರದ್ದು ಇನ್ನೆಂತಹ ಶ್ರೇಷ್ಠ ಮನಃಸ್ಥಿತಿಯಿರಬೇಕು.
ಇಂತಹ ವ್ಯಕ್ತಿ ಇಂದಿನ ಎಲ್ಲ ಕಲಾವಿದರಿಗೆ ಮಾದರಿಯಾಗಬೇಕು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯದಿಂದಲೇ ವರ್ತಿಸಬೇಕು, ಸರಳತೆ ನಮ್ಮ ಆಭರಣವಾಗಬೇಕು, ಸ್ನೇಹ-ಪ್ರೀತಿ-ವಿಶ್ವಾಸಗಳು ಅಲಂಕಾರವಾಗಬೇಕು, ನಮಗೆ ಅನ್ನ ಹಾಗೂ ಅಸ್ಥಿತ್ವ ನೀಡಿದ ಕ್ಷೇತ್ರವನ್ನು ನಮ್ಮ ತಾಯಿಯಂತೆ ಪ್ರೀತಿಸಬೇಕು ಎಂಬುದಕ್ಕೆ ಎಸ್ಪಿಬಿ ಉದಾಹರಣೆ…
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post