ಕಲ್ಪ ಮೀಡಿಯಾ ಹೌಸ್ | ಸೊರಬ |
ಮಲೆನಾಡ ಕಾನನದಲ್ಲಿ ಸ್ಥಾಪಿತವಾದ ಕೃಷಿ ವಿಶ್ವವಿದ್ಯಾಲಯ ಇರುವಕ್ಕಿ ಕ್ಯಾಂಪಸ್ಗೆ ಮಲೆನಾಡಿನ ಅರಣ್ಯ, ಕೃಷಿ ತಜ್ಞರು, ಸಂಘ ಸಂಸ್ಥೆಗಳ ನಿಯೋಗ ಭೇಟಿ ನೀಡಿ ಮಲೆನಾಡಿನ ಕೃಷಿ, ತೋಟಗಾರಿಕೆ ಅರಣ್ಯ ಸುಸ್ಥಿರ ಅಭಿವೃದ್ಧಿ ಕುರಿತ ಹಲವು ಶಿಫಾರಸುಗಳನ್ನು ಸಲ್ಲಿಸಿತು.
ಸ್ಥಳೀಯ ಗ್ರಾಮ ಜೀವ ವೈವಿಧ್ಯ ಸಮಿತಿಗಳು, ಮಹಿಳಾ ಸ್ವ ಸಹಾಯ ಸಂಘಗಳಿಗೆ ಕೃಷಿ ವಿ.ವಿ.ಯ ಮೂಲಕ ತರಬೇತಿ, ಜಾಗೃತಿಗಾಗಿ ವಿಶೇಷ ಪೈಲಟ್ ಯೋಜನೆ ಜಾರಿ, ಮಾದರಿ ಪ್ರಾತ್ಯಕ್ಷಿಕೆಗಳನ್ನು ರೂಪಿಸುವುದು, ಔಷಧಿ ಮೂಲಿಕೆಗಳ ಅನ್ವೇಷಣೆ, ಅಭ್ಯಾಸ, ವಿನಾಶದ ಅಂಚಿನ ಸಸ್ಯಗಳ ಅಭಿವೃದ್ಧಿ ಬಗ್ಗೆ ಇನ್ನಷ್ಟು ಗಮನ ನೀಡಲು ಮುಂದಾಗಬೇಕು ಎಂದು ವಿಶ್ವ ವಿದ್ಯಾಲಯದ ಉಪಕುಲಪತಿಗಳಿಗೆ ತಂಡ ಮನವಿ ಮಾಡಿದೆ.
ಮಿಡಿ ಮಾವಿನ ವೃಕ್ಷ ವೈವಿಧ್ಯ, ಕಾಡಿನ ಹಣ್ಣುಗಳ ವೈವಿಧ್ಯ, ಹಲಸು ಜಾತಿಯ ವೈವಿಧ್ಯ ರಕ್ಷಣೆ, ಈ ಬಗ್ಗೆ ದೇಶದ ಗಮನ ಸೆಳೆಯುವ ಮಾದರಿ ಪ್ರಯೋಗ ನಡೆಯಬೇಕು, ಕಂಚಿ, ಲಿಂಬು, ಮಾದಲ, ಚಕೋತ, ಸೇರಿದಂತೆ ಸಿಟ್ರಸ್ ಜಾತಿಯ ಫಲ ವೃಕ್ಷಗಳು ವಿನಾಶದ ಅಂಚಿಗೆ ಸರಿಯುತ್ತಿವೆ. ಅವುಗಳ ತಳಿ ಉಳಿಸಲು ವಿಶೇಷ ಕಾರ್ಯಕ್ರಮ ರೂಪಿಸಬೇಕು. ಇಲ್ಲಿನ ತೋಟಗಳು ಜೀವ ವೈವಿಧ್ಯತೆಗೆ ಹೆಸರು. ಆದರೆ, ಇದೀಗ ಕೇವಲ ಅಡಿಕೆ ಎಂಬ ಏಕ ಜಾತಿ ನೆಡು ತೋಪಾಗಿದೆ. ಅಡಿಕೆಯ ಜೊತೆಗೆ ಆದಾಯ ತರುವ ಸಾಂಬಾರು, ಇತರೆ ಬೆಳೆಗಳ ಮಾದರಿ ಯೋಜನೆಗೆ ಮುಂದಾಗಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಕಾಲೇಜುಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ವಿಶೇಷ ಕ್ಷೇತ್ರ ಅಧ್ಯಯನದಲ್ಲಿ ಈ ಮೇಲಿನ ವಿಷಯಗಳ ಬಗ್ಗೆ ಚಿಕ್ಕ ಚಿಕ್ಕ ಅಧ್ಯಯನ ಕೈಗೊಳ್ಳುವಂತಾಗಭೇಕು ಎಂದು ತಂಡ ತನ್ನ ಅಭಿಪ್ರಾಯ ಮಂಡಿಸಿತು.
ಇಡೀ ಮಲೆನಾಡಿನ ಕೃಷಿ ಸಂಸ್ಕೃತಿ ಸೊಗಡು ಬಿಂಬಿಸುವ ಆಲೆಮನೆ, ಸುಗ್ಗಿ ಕುಣಿತ, ಭೂಮಿ ಪೂಜೆ, ಗಂಗಾ ಪೂಜೆ, ನಾಟಿ ವೈದ್ಯರು, ಜೌಷಧಿ ಮಾಲಿಕೆ, ಬಿದಿರು ಕುಶಲ ಕೃಷಿ ಉಪಕರಣಗಳು ಮುಂತಾದ ಸಂಗತಿಗಳಿಗೆ ಕೃಷಿ ಮೇಳ ವೇದಿಕೆ ಆಗಬೇಕು. ಕಾನು ಅರಣ್ಯ ಅಧ್ಯಯನ, ಸಮೀಕ್ಷೆ ದಾಖಲಾತಿ: ವಿಶ್ವವಿದ್ಯಾಲಯಕ್ಕೆ ನೀಡಲಾದ ಒಟ್ಟೂ 777 ಎಕರೆ ಕಾನು ಅರಣ್ಯ ಭೂಮಿಯಲ್ಲಿ 200 ಎಕರೆ ಕಾನು ಅರಣ್ಯಕ್ಕೆ ಸಂಪೂರ್ಣ ರಕ್ಷಣೆ ನೀಡಬೇಕು. ೫೦ ಎಕರೆ ಕಾನು ಪ್ರದೇಶದಲ್ಲಿ ಅರಣ್ಯ ಸಂಶೋಧನೆ ಕಾರ್ಯ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.
ಕೃಷಿ ಹೊಂಡ, ಚಿಕ್ಕ ಕೆರೆ, ಜಲ ಸಂವಧನಾ ಕಾರ್ಯ, ಇರುವಕ್ಕಿ ಕ್ಯಾಂಪಸ ವ್ಯಾಪ್ತಿಯ ಜಲಮೂಲ ಸಂರಕ್ಷಣೆಗೆ, ಜಲ ಸಂವರ್ಧನೆಗೆ ವಿಶ್ವ ವಿದ್ಯಾಲಯ ಮುಂದಾಗಬೇಕು ಎಂದ ತಂಡ ರಾಸಾಯನಿಕ ಕೀಟನಾಶಕಗಳ ಅಪಾರ ಬಳಕೆ ಹಾಗೂ ನಿಷೇಧಿಸಲ್ಪಟ್ಟ ಕ್ರಿಮಿ, ಕೀಟನಾಶಕ ಬಳಕೆ ತಪ್ಪಿಸಲು ತೋಟಗಾರಿಕೆ & ಕೃಷಿ ಇಲಾಖೆಗಳಿಗೆ ಕೃಷಿ ವಿಶ್ವ ವಿದ್ಯಾಲಯ ಮಾರ್ಗದರ್ಶನ, ಶಿಫಾರಸನ್ನು ಆಗಾಗ್ಗೆ ನೀಡಲು ವಿಶೇಷ ಕಾರ್ಯ ಯೋಜನೆ ರೂಪಿಸಬೇಕು. ಈ ಕೀಟನಾಶಕಗಳಿಗೆ ಬದಲೀ ಉಪಾಯಗಳನ್ನು ವಿಶ್ವ ವಿದ್ಯಾಲಯ ಸೂಚಿಸಭೇಕು ಎಂದು ಒತ್ತಾಯ ಮಾಡಲಾಗಿದೆ.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜೀವ ವೈವಿಧ್ಯ ಮಂಡಳಿಯ ಸದಸ್ಯ ಕೆ. ವೆಂಕಟೇಶ, ಸಹ್ಯಾದ್ರಿ ಪ್ರಾಧಿಕಾರದ ಶ್ರೀಪಾದ ಬಿಚ್ಚುಗತ್ತಿ, ಜೀವವೈವಿಧ್ಯ ವಿಜ್ಞಾನಿ ಡಾ. ಕೇಶವ ಕೊರ್ಸೆ, ಪ್ರಗತಿಪರ ಕೃಷಿಕ, ಪರಿಸರತಜ್ಞ ಡಾ. ಬಾಲಚಂದ್ರ ಸಾಯಿಮನೆ ಸಿದ್ದಾಪುರ, ಗಜೇಂದ್ರ ಗೊರಸು ಕುಡಿಗೆ, ಚಿಕ್ಕಮಗಳೂರು ಗ್ರಾಮ ಅರಣ್ಯ ಸಮೀತಿ ಅಧ್ಯಕ್ಷ ಬಿ.ಹೆಚ್. ರಾಘವೇಂದ್ರ ಮತ್ತು ಶಿವಮೊಗ್ಗ, ಉ.ಕ., ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿಪರ ಸಾವಯವ ರೈತರು ಈ ತಂಡದಲ್ಲಿದ್ದರು.
ನಾಗೇಂದ್ರ ಸಾಗರ, ಗಣಪತಿ ಕೆ.ಬಿಸ್ಲಕೊಪ್ಪ, ಎಂ.ಜಿ. ರಾಮಚಂದ್ರ ಪ್ರಕಾಶ ಮುಂಚಾಲೆ ಆನೆಗೊಳಿ ಸುಬ್ಬರಾವ ಗಿರೀಶ ಹಕ್ರೆ, ಮೊದಲಾದವರು ಅಭಿಪ್ರಾಯ ಮಂಡಿಸಿದರು. ಇರುವಕ್ಕಿ ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಆರ್.ಸಿ.ಜಗದೀಶ, ರಜಿಸ್ಟ್ರಾರ್ ಡಾ. ಲೋಕೇಶ, ಡಾ. ಹೇಮಾ ನಾಯ್ಕ, ಡಾ. ಗಣಪತಿ, ಡಾ. ಪ್ರಭಾಕರ ಇವರು ಮಲೆನಾಡು ಕೃಷಿ, ಜೀವವೈವಿಧ್ಯ ತಜ್ಞರ ತಂಡದ ಜೊತೆ ಸಮಾಲೋಚನೆ ನಡೆಸಿದರು. ಹಾಗೂ ವಿಶೇಷ ಪ್ರಯೋಗಗಳ ಸ್ಥಳ ಭೇಟಿ ಮಾಡಿಸಿದರು. ಮಲೆನಾಡು ಅಜೆಂಡಾ ಬಗ್ಗೆ ಇನ್ನಷ್ಟು ಆದ್ಯತೆ ನೀಡುವ ಭರವಸೆ ನೀಡಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post