ಕಲ್ಪ ಮೀಡಿಯಾ ಹೌಸ್ | ಸೊರಬ |
ಸಂಗೀತ ಮತ್ತು ನೃತ್ಯದಂತಹ ಕಲೆಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದ್ದು, ಪೋಷಕರಾದವರು ಮಕ್ಕಳ ಮೇಲೆ ಒತ್ತಡ ಹೇರುವುದು ಸಲ್ಲದು ಎಂದು ಹೊಸಪೇಟೆ ಬಡಾವಣೆಯ ಸಂತ ಸೆಬಾಸ್ಟಿಯನ್ ಚರ್ಚ್ನ ಧರ್ಮಗುರು ಫಾದರ್ ರಾಬರ್ಟ್ ಡಿ’ಮೆಲ್ಲೋ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಭಾನುವಾರ ಸಂಜೆ ಡ್ರೀಮ್ ಡ್ಯಾನ್ಸ್ ಅಕಾಡೆಮಿಯ ದಶಮಾನೋತ್ಸವ ಅಂಗವಾಗಿ ಹಮ್ಮಿಕೊಂಡ ಸೊರಬ ನೃತ್ಯೋತ್ಸವ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Also Read>> ಗಮನಿಸಿ! ಎ.28ರ ನಾಳೆ ಭದ್ರಾವತಿಯ ಹಲವು ಕಡೆ ಕರೆಂಟ್ ಇರಲ್ಲ
ಕಲೆಗಳಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ಸೋದರತೆಯ ಬಾಂಧವ್ಯದ ಜೊತೆ ಉತ್ತಮ ಸಂಸ್ಕಾರ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದಾಗ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗದ ಅನೇಕ ಪ್ರತಿಭೆಗಳನ್ನು ರಾಜ್ಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಡಿಡಿ ಅಕಾಡೆಮಿಗೆ ಸಲ್ಲುತ್ತದೆ ಎಂದರು.
ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಮಾತನಾಡಿ, ಮಕ್ಕಳನ್ನು ಅಂಕಗಳಿಕೆಗೆ ಮಾತ್ರ ಸೀಮಿತಗೊಳಿಸದೇ ಅವಲ್ಲಿನ ಸೃಜನಾತ್ಮಕ ಕಲೆಗಳನ್ನು ಗುರುತಿಸಬೇಕು. ಈ ಮೂಲಕ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಇದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಿದಾಗ ವೃದ್ಧಾಶ್ರಮಗಳ ಸಂಖ್ಯೆ ಕುಂಠಿತವಾಗಲಿದೆ ಎಂದರು.
Also Read>> ಒಲಿಂಪಿಕ್ ಪದಕದ ಕನಸಿಗೆ ಬಳ್ಳಾರಿಯಲ್ಲಿ ಬುನಾದಿ: IIS ನಿಂದ ಹೈ-ಪರ್ಫಾರ್ಮೆನ್ಸ್ ಟೇಕ್ವಾಂಡೋ ತರಬೇತಿ ಕೇಂದ್ರ ಆರಂಭ
ಡ್ರೀಮ್ಸ್ ಡ್ಯಾನ್ಸ್ ಅಕಾಡೆಮಿ ಮುಖ್ಯಸ್ಥ ಹಾಗೂ ಡ್ಯಾನ್ಸ್ ಮಾಸ್ಟರ್ ಸ್ಟೀವನ್ ಮಾತನಾಡಿ, ನ್ಯತ್ಯ ತರಬೇತಿ ಸಂಸ್ಥೆಯನ್ನು ಆರಂಭಿಸಿದಾಗ ಹಲವಾರು ಸಮಸ್ಯೆಗಳು ಎದುರಾದವು. ಅವುಗಳನ್ನು ನಿವಾರಿಸಿಕೊಂಡು ನೂರಾರು ವಿದ್ಯಾರ್ಥಿಗಳಿಗೆ ನ್ಯತ್ಯವನ್ನು ಕಲಿಸಲಾಗಿದೆ. ಕೋವಿಡ್ ನಂತಹ ಸಂದರ್ಭದಲ್ಲಿ ಸಂಸ್ಥೆಯನ್ನು ನಡೆಸುವುದೇ ದುಸ್ಥರವಾಗಿತ್ತು. ಈ ವೇಳೆ ಉದ್ಯಮಿ ನಾಗರಾಜ ಗುತ್ತಿ ಅವರು ಮಾಡಿದ ಸಹಾಯವನ್ನು ಮರೆಯುವಂತಿಲ್ಲ. ಅಲ್ಲದೇ, ಹೊಸಪೇಟೆ ಬಡಾವಣೆಯ ಪರಶುರಾಮ್ ಮತ್ತು ವಿದ್ಯಾರ್ಥಿಗಳ ಪೋಷಕರ ಸಹಕಾರದಿಂದ ಸಂಸ್ಥೆಯು ಹತ್ತು ವರ್ಷಗಳನ್ನು ಪೂರೈಸಿ ಮುನ್ನೆಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕಿರುತೆರೆ ಕಲಾವಿದೆ ಅನಘಾ, ಸಂಸ್ಥೆಯ ಹಳೇ ವಿದ್ಯಾರ್ಥಿಗಳಾದ ನಿವೇದಿತಾ ಹಾಗೂ ಸ್ಪಂದನಾ, ಶಿವಮೊಗ್ಗದ ಡ್ಯಾನ್ಸ್ ಸ್ಟೆಪ್ ಹೋಲ್ಡರ್ನ ಅರುಣ್ ರಾಜ್ ಶೆಟ್ಟಿ, ನೃತ್ಯ ತರಬೇತುದಾರರಾದ ಪ್ರಶಾಂತ್, ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಡ್ಯಾನ್ಸ್ ಸ್ಟೆಪ್ ಹೋಲ್ಡರ್ಸ್ನ ಅರುಣ್ ರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುಂಡಶೆಟ್ಟಿಕೊಪ್ಪದ ಜ್ಞಾನ ಸಹ್ಯಾದಿ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲೆ ಡಾ. ಮೋನಿಕಾ ಡಿಸೋಜಾ, ಸಮಾಜ ಸೇವಕ ಶಂಕರ್ ಶೇಟ್, ರೋಟರಿ ಕ್ಲಬ್ ಅಧ್ಯಕ್ಷ ಜೆ.ಎಸ್. ಮಹಾಂತೇಶ್, ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ಉದ್ಯಮಿ ನಾಗರಾಜ ಗುತ್ತಿ, ಡಿ.ಎಸ್. ಪ್ರಶಾಂತ್ ದೊಡ್ಮನೆ ಸೇರಿದಂತೆ ಇತರರಿದ್ದರು. ನಾಗರಾಜ್ ಸಂಜನ್, ಕವನಾ ನಿರ್ವಹಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















