ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಮೂರನೆಯ ವರ್ಷದ ದಸರಾ ಉತ್ಸವವನ್ನು ಗ್ರಾಮಸ್ಥರು, ಸಂಘ-ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಸಹಕಾರದಿಂದ ಅದ್ಧೂರಿಯಾಗಿ ನಡೆದಿದ್ದು, ಉತ್ಸವ ಆಚರಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಶ್ರೀರೇಣುಕಾಂಬ ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್. ಶ್ರೀಧರ ಹುಲ್ತಿಕೊಪ್ಪ ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಚಂದ್ರಗುತ್ತಿ ಕ್ಷೇತ್ರವು ಇತಿಹಾಸ ಪ್ರಸಿದ್ಧವಾಗಿದ್ದು, ಶ್ರೀ ರೇಣುಕಾಂಬ ದೇವಿ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದು, ವಿಶೇಷವಾಗಿ ಹುಣ್ಣಿ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ ಎಂದಿದ್ದಾರೆ.
ದಸರಾ ಹಬ್ಬದ ದಿನಗಳಲ್ಲಿ ನವರಾತ್ರಿ ಉತ್ಸವಗಳು ದೇಶಾದ್ಯಂತ ನಡೆಯುತ್ತಿದ್ದ ಇತ್ತ ಚಂದ್ರಗುತ್ತಿಯಲ್ಲಿ ಅದರ ಮಹತ್ವ ಗೊತ್ತಾಗುತ್ತಿರಲಿಲ್ಲ. ಇದನ್ನು ಅರಿತ ತಾವು 2016 ರಲ್ಲಿ ಚಂದ್ರಗುತ್ತಿಯಲ್ಲಿ ಊರ ಪ್ರಮುಖರ ಸಭೆ ನಡೆಸಿ ನವರಾತ್ರಿ ಉತ್ಸವ ಆಚರಿಸುವ ಬಗ್ಗೆ ತೀರ್ಮಾನಿಸಿ ಅಂದಿನಿಂದ ನವರಾತ್ರಿ ಉತ್ಸವ ಆರಂಭಿಸಿ ಚಂದ್ರಗುತ್ತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಆರಂಭಿಸುವ ಮೂಲಕ ಚಂದ್ರಗುತ್ತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಈ ವರ್ಷವೂ ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಯಕ್ಷಗಾನ, ಜಾನಪದ ನೃತ್ಯ, ಬಯಲಾಟ, ನಾಟಕ ಮತ್ತು ನವದುರ್ಗಾ ವೈಭವದಂತಹ ಜಾನಪದ ರೂಪ ಮತ್ತು ಭರತ ನಾಟ್ಯ ಕಲೆಗಳನ್ನು ಪರಿಚಯಿಸುವುದರ ಮೂಲಕ ಜನರಲ್ಲಿ ಭಕ್ತಿ ಭಾವ ತುಂಬುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಚಂದ್ರಗುತ್ತಿ ಹೋಬಳಿಯ ಎಲ್ಲಾ ಶಾಲಾ ಮಕ್ಕಳಿಂದ ಮನರಂಜನೆ ಮತ್ತು ಸ್ಥಳೀಯ ಕಲಾವಿದರಿಂದ ಅಭಿನಯಿಸುವ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀರೇಣುಕಾಂಬ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರ ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದಿದ್ದಾರೆ.
ಮುಂದಿನ ವರ್ಷದಿಂದ ಇನ್ನೂ ಅದ್ಧೂರಿಯಾಗಿ ದಸರಾ ಉತ್ಸವ ಆಚರಿಸಲು ಉದ್ದೇಶಿಸಲಾಗಿದ್ದು, ಮುಂದಿನ ವರ್ಷ ಆನೆಯ ಅಂಬಾರಿ ಮೇಲೆ ಶ್ರೀ ರೇಣುಕಾಂಬ ದೇವಿಯ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಪ್ರತಿದಿನ ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
(ವರದಿ: ಮಧುರಾಮ್, ಸೊರಬ)
Discussion about this post