ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಕ್ಯಾಸನೂರು ಗ್ರಾಮದ ಖೇಚರಯೋಗಿ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಏ.29 ರಂದು ಷಟ್ಕಾವ್ಯದ ಕರ್ತೃ ಖೇಚರಯೋಗಿ ಗುರುಬಸವ ಸ್ವಾಮೀಜಿಯ ಕರ್ತೃಗದ್ದುಗೆ, ಶ್ರೀ ಚೌಡೇಶ್ವರಿ ದೇವಿ ಹಾಗೂ ಪಂಡಿತಾರಾಧ್ಯರ ಶಿಲಾಮಂಟಪದ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಮಹಾಂತದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಕ್ಯಾಸನೂರಿನ ಖೇಚರಯೋಗಿ ಗುರುಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
Also Read>> ಗಮನಿಸಿ! ಎ.28ರ ನಾಳೆ ಭದ್ರಾವತಿಯ ಹಲವು ಕಡೆ ಕರೆಂಟ್ ಇರಲ್ಲ
ಮಠದ ನೂತನ ಕರ್ತೃಗದ್ದುಗೆಯ ನಿರ್ಮಾಣಕ್ಕೆ 5ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು, ಅಂದು ಬೆಳಗ್ಗೆ ಅಡಿಗಲ್ಲು ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರೀಶೈಲ ಮಹಾಪೀಠದ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವೀರಾಪುರ ಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ ಎಂದರು.
ಧಾರ್ಮಿಕ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕರ್ತೃಗದ್ದುಗೆಯ ಅಡಿಗಲ್ಲು ಪೂಜೆಯನ್ನು ಸಂಸದ ಬಿ.ವೈ. ರಾಘವೇಂದ್ರ, ಚೌಡೇಶ್ವರಿದೇವಿ ಅಡಿಗಲ್ಲು ಪೂಜೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಪಂಡಿತಾರಾಧ್ಯರ ಅಡಿಗಲ್ಲು ಪೂಜೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ನೆರವೇರಿಸುವರು. ವಿಪ ಸದಸ್ಯರಾದ ಭಾರತಿ ಶೆಟ್ಟಿ, ಧನಂಜಯ್ ಸರ್ಜಿ, ಕೆಆರ್ಇಡಿಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಯ್ಯ, ಉದ್ಯಮಿ ಕೆ.ಆರ್. ಪ್ರಕಾಶ್ ಕೋಣಂದೂರು, ತಹಸೀಲ್ದಾರ್ ಕೆ. ಪುರಂದರ್, ಮೆಸ್ಕಾಂ ಎಇಇ ಸತ್ಯಪ್ರಕಾಶ್ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಐತಿಹಾಸಿಕ ದಾಖಲೆ ಹೊಂದಿರುವ ಶ್ರೀ ಮಠದಲ್ಲಿ ಹಲವು ಪವಾಡಗಳು ನಡೆದಿದ್ದು, ಭಕ್ತರ ಇಷ್ಟಾರ್ಥಗಳು ಸಿದ್ಧಿಸುತ್ತಿವೆ. ಶ್ರೀ ಮಠವನ್ನು ಭಕ್ತರ ಸಹಕಾರದೊಂದಿಗೆ ಕರ್ತೃಗದ್ದುಗೆ, ಧ್ಯಾನ ಮಂದಿರ, ಶ್ರೀ ಚೌಡೇಶ್ವರಿ ಮಂದಿರ, ಶ್ರೀ ಪಂಡಿತಾರಾಧ್ಯ ಮಂದಿರ ಗೋಪುರ ಮತ್ತು ರಾಜಗೋಪುರಗಳ ಕಲ್ಲಿನ ಕಟ್ಟಡ ಕೆಲಸವನ್ನು ನಡೆಸಲಾಗುತ್ತಿದೆ. ಕಾರ್ಯಕ್ರಮದ ಅಂಗವಾಗಿ ತಾಲೂಕು ಔಷಧ ವ್ಯಾಪಾರಿಗಳ ಸಂಘ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಹಾಗೂ ಸುರಭಿ ಆರೋಗ್ಯ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ಮತ್ತು ಮಾತ್ರಗಳ ವಿತರಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ. ವೀರೇಶ್ ಗೌಡ ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















