ಕಲ್ಪ ಮೀಡಿಯಾ ಹೌಸ್ | ಸೊರಬ |
ಕರ್ನಾಟಕ ಜೀವವೈವಿಧ್ಯ ಮಂಡಳಿಯು ನಾಡಿನ ನೆಲ-ಜಲ ಸೇರಿದಂತೆ ಸಕಲ ಜೈವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಉದ್ದೇಶದ ಸಾಂವಿಧಾನಿಕ ಸಂಸ್ಥೆ. ರಾಷ್ಟ್ರಮಟ್ಟದಲ್ಲಿ ಜಾರಿಗೆ ಬಂದಿರುವ ಜೀವವೈವಿಧ್ಯ ಕಾಯ್ದೆಯ ಅನ್ವಯ 2003ರ ಅಗಸ್ಟ್ ಒಂದರಿಂದ ಕಾರ್ಯಾರಂಭ ಮಾಡಿದ ರಾಜ್ಯ ಸರ್ಕಾರದ ಸಂಸ್ಥೆಯಿದು. ರಾಜ್ಯದ ಕಾಡು-ಕಣಿವೆ, ಕೃಷಿಭೂಮಿ-ಗೋಮಾಳ, ನದಿ-ಕೆರೆಗಳು, ಸಮುದ್ರ ಸೇರಿದಂತೆ ಎಲ್ಲೆಡೆ ಇರುವ ಅಸಂಖ್ಯ ಬಗೆಯ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ಮತ್ತು ಅವುಗಳ ತಳಿವೈವಿಧ್ಯವನ್ನು ಸಂರಕ್ಷಿಸುವ ಯೋಜನೆಗಳನ್ನು ವಿವಿಧ ಇಲಾಖೆಗಳ ಸಹಯೋದೊಂದಿಗೆ ರೂಪಿಸುವ ಹೊಣೆ ಮಂಡಳಿಯದು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶಿಸರ ತಿಳಿಸಿದರು.
ತಾಲ್ಲೂಕು ಬಿಳಾಗಿ ಸಾಲುಮರದ ತಿಮ್ಮಕ್ಕ ವೃಕ್ಷೆಧ್ಯಾನದಲ್ಲಿ ನಡೆದ ತಾಲ್ಲೂಕು ಜೀವವೈವಿಧ್ಯ ಕಾರ್ಯಕ್ರಮಗಳಿಗೆ ಚಾಲನೆ ಮತ್ತು ಜೀವವೈವಿಧ್ಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಿನ ಜೀವಸಂಕುಲಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಮಿತವಾಗಿ ಬಳಸುವ ಕುರಿತಂತೆ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ನೀತಿ ನಿರೂಪಣೆಯಿಂದ ತೊಡಗಿ, ಇಲಾಖೆಗಳ ಜೊತೆ ಸೇರಿ ಯೋಜನೆಗಳನ್ನು ರೂಪಿಸುವುದು, ಇಲಾಖೆಗಳ ಜಿಲ್ಲಾಮಟ್ಟದ ವಿಭಾಗಗಳ ಸಹಯೋಗದಲ್ಲಿ ಅನುಷ್ಟಾನಗೊಳಿಸುವದು, ತಳಮಟ್ಟದಲ್ಲಿ ಪಂಚಾಯತ ರಾಜ್ ಸಂಸ್ಥೆಗಳು ಸೇರಿದಂತೆ ಜಸಮೂದಾಯದ ಸಹಭಾಗಿತ್ವದೊಂದಿಗೆ ಜೀವವೈವಿಧ್ಯ ಸಂರಕ್ಷಣೆ ಯೋಜನೆಗಳನ್ನು ಕಾರ್ಯಗತಗೊಳಿಸಿವದು. ಈ ಎಲ್ಲ ನಿಟ್ಟಿನಲ್ಲಿ ಮಂಡಳಿಯ ಚಟುವಟಿಕೆಗಳು ಸಾಗಿವೆ ಎಂದರು.
ತಾಲ್ಲೂಕು ರಾಜ್ಯವೇ ಗಮನಿಸುವಂಥ ಸಂಪದ್ಭರಿತ ವನ ಸಂಪತ್ತನ್ನೊಳಗೊಂಡ ಪ್ರದೇಶವಾಗಿದ್ದು, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ತಾಲ್ಲೂಕು ಪಂಚಾಯತ್, ತಾಲ್ಲೂಕು ಜೀವವೈವಿಧ್ಯ ಸಮಿತಿ ಗ್ರಾಮಪಂಚಾಯತ್ ಜೀವವೈವಿಧ್ಯ ಸಮಿತಿ, ಅರಣ್ಯ ಇಲಾಖೆಗಳ ಮೂಲಕ ಈಗಾಗಲೆ ತಾಲೂಕಿನ ಅನೇಕ ಕಡೆ ಅರಣ್ಯ, ಪರಿಸರ ರಕ್ಷಣೆ ಕಾರ್ಯ ಚಟುವಟಿಕೆಯನ್ನ ನಡೆಸಿದ್ದು, ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ, ಮಹಿಳೆಯರಿಗೆ ಜೀವ ವೈವಿಧ್ಯತೆ, ಪರಿಸರ, ಅರಣ್ಯಗಳ ಮಹತ್ವವನ್ನು ತಿಳಿಸಲು ಮುಂದಾಗಿದೆ ಎಂದರು.
ಮುಂದೆ ತಾಲ್ಲೂಕಿನ ಅತಿ ಅಗತ್ಯ, ಅವಶ್ಯ ಜೀವವೈವಿಧ್ಯ ತಾಣಗಳನ್ನಾಗಿಸುವ ನಿಟ್ಟಿನಲ್ಲಿ, ಅರಣ್ಯ ಸಂರಕ್ಷಣೆಯಲ್ಲಿ ಆಸಕ್ತಿ ವಹಿಸಿದ್ದು, ತಾಲ್ಲೂಕಿನ ಹಲವು ಊರುಗಳಲ್ಲಿ ಕೈಗೊಂಡಿರುವ ವಿಸ್ತಾರವಾದ ದೇವರಕಾಡು ಸಂರಕ್ಷಣೆ ಮತ್ತು ಕೆರೆ ಸಂರಕ್ಷಣೆಯ ಜೊತೆಗೆ ಸ್ಥಳೀಯ ರೈತರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಇವರೆಲ್ಲರನ್ನು ಜೊತೆಯಾಗಿಸಿಕೊಂಡು, ಅಡವಿಜೇನು, ಔಷಧಿ ಗಿಡಮೂಲಿಕೆ, ದೇವರಕಾಕಾಡು, ಕೆರೆಗಳು, ಗೋಮಾಳ ಇವೆಲ್ಲವುಗಳ ಸಂರಕ್ಷಣೆ ವಿಷಯದಲ್ಲಿ ವ್ಯಾಪಕ ಜನಜಾಗೃತಿ ಅಭಿಯಾನ ಹಾಗೂ ತಳಮಟ್ಟದ ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿವೆ. ಗುಡವಿ ಪಕ್ಷಿಧಾಮ, ಚಂದ್ರಗುತ್ತಿ ಬೆಟ್ಟ ಸಂರಕ್ಷಣೆಯಂಥ ಅನನ್ಯ ಕಾರ್ಯಯೋಜನೆಗಳಿಗೆ ಚಾಲನೆ ನೀಡಿದೆ ಎಂದರು.
ಬಿಳಾಗಿ ಕೆರೆ ದೇಶವಿದೇಶದ ಪಕ್ಷಿಗಳ ವಲಸೆ ಪ್ರಕ್ರಿಯೆಗೆ ನೆರವಾಗಿದ್ದು, ಅದರ ರಕ್ಷಣೆ ಸಾರ್ವಜನಿಕರ ಕರ್ತವ್ಯ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕೆರೆಯ ರಕ್ಷಣೆಗೆ ಮುಂದಾಗಿದ್ದು ಶ್ಲಾಘನೀಯ. ಜಲನಿರ್ವಹಣೆಯತ್ತ ಆಡಳಿತಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ನೀರು ಕಾಯ್ದುಕೊಳ್ಳಬೇಕು. ಸೊರಬ ಪಟ್ಟಣದಲ್ಲಿ ಹರಿಯುತ್ತಿರುವ ದಂಡಾವತಿ ನದಿ ಮಲೀನವಾಗಿದ್ದು, ಸ್ಥಳೀಯ ಆಡಳಿತ ಇದರ ಸ್ವಚ್ಛತೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇದೇ ಉಧ್ಯಾನವನದ ಪಕ್ಕದಲ್ಲಿರುವ ಕೆರೆಗೆ ರಕ್ಷಿತ ಜೀವವೈವಿಧ್ಯ ಕೆರೆ ಘೋಷಣೆ ಮಾಡಿ ನಾಮಫಲಕ ಅನಾವರಣ, ವೃಕ್ಷೆಧ್ಯಾನದಲ್ಲಿ ಅಶೋಕ ವೃಕ್ಷಾರೋಪಣೆ, ತಾಲ್ಲೂಕು ಜೀವವೈವಿಧ್ಯ ನಿರ್ವಹಣೆ, ಯೋಜನೆ ಕುರಿತಾದ ವರದಿ ಬಿಡುಗಡೆಗೊಳಿಸಿದರು. ಈವರೆಗೆ ತಾಲ್ಲೂಕಿನ ಜೀವವೈವಿಧ್ಯ ಸಮತೋಲನಕ್ಕೆ ಪೂರಕವಾಗಿ ನಿಸ್ಪೃಹ ಸೇವೆ ಸಲ್ಲಿಸುತ್ತ ಬಂದಿರುವ ದೇಸಿ ಭತ್ತ ತಳಿ ಪೋಷಕ ಸಂಪಗೋಡು ವೃಷಭಕುಮಾರ್, ದೇಸಿ ಆಲೆಮನೆ ನಿರ್ವಾಹಕ ಕಾನುಗೋಡು ಕೃಷ್ಣಮೂರ್ತಿ, ಸಾವಯವ ಕೃಷಿಕ ಕುಪ್ಪೆ ಛತ್ರಪತಿ, ಜೇನು ಪೋಷಕ ವಿಘ್ನೇಶ್ ತಲಕಾಲುಕೊಪ್ಪ, ಜೀವವೈವಿಧ್ಯ ಪೋಷಕ ಶಾಲೆ ಕಮರೂರು ಮುಖ್ಯ ಶಿಕ್ಷಕ ಪಂಚಾಕ್ಷರಿ ಇವರುಗಳಿಗೆ ಸನ್ಮಾನಿಸಲಾಯಿತು.
ಉದ್ರಿ ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರು ಅನುಭವ ಹಂಚಿಕೊಂಡರು. ಪಿಬಿಆರ್ ಉಪಸಮಿತಿಯ ತಜ್ಞ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ತಾಪಂ ಪ್ರಭಾರ ಸಹಾಯಕ ನಿರ್ದೇಶಕಿ ಸೀಮಾ, ಪಿಡಿಒ ಹೋಮೇಶ್, ನಾಗೇಂದ್ರಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ಸೋಮಶೇಖರ್ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post