ಕಲ್ಪ ಮೀಡಿಯಾ ಹೌಸ್
ಸೊರಬ: ಅರಣ್ಯ ಹಕ್ಕು ಕಾಯ್ದೆ ಜಾರಿ ಮಾಡಬೇಕು ಹಾಗೂ ವೈಯುಕ್ತಿಕ ದ್ವೇಷದಿಂದ ರೈತರಿಗೆ ಕಿರುಕುಳು ನೀಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿಯ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ ಮಾತನಾಡಿ, ಕ್ಷೇತ್ರವನ್ನು ಪ್ರತಿನಿಧಿಸಿ ಮುಖ್ಯಮಂತ್ರಿಗಳಾಗಿ ಅಧಿಕಾರ ನಿರ್ವಹಿಸಿದ ಎಸ್. ಬಂಗಾರಪ್ಪ ಅವರ ಕಾಲಾ ನಂತರ ತಾಲೂಕಿನಲ್ಲಿ ರೈತರು ಮತ್ತು ಬಗರ್ಹುಕುಂ ಸಾಗುವಳಿದಾರರ ಮೇಲೆ ನಿರಂತವಾಗಿ ದೌರ್ಜನ್ಯ ನಡೆಯುತ್ತಿದೆ. ಈ ಹಿಂದೆ ಕುಪ್ಪಗಡ್ಡೆ ಹೋಬಳಿಯ ಕೆರೆಹಳ್ಳಿ, ತಾಳಗುಪ್ಪದಲ್ಲಿ ಅರಣ್ಯ ಇಲಾಖೆಯೇ ಮಂಜೂರಾತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದ 32 ಜನ ರೈತರನ್ನು ಒಕ್ಕಲೆಬ್ಬಿಸಲಾಯಿತು. ತಾಳಗುಪ್ಪ ಗ್ರಾಮದ ವ್ಯಕ್ತಿಯೊಬ್ಬ ವೈಯುಕ್ತಿಕ ದ್ವೇಷ, ಬಡವರ ವಿರೋಧಿ ಮನೋಭಾವರಿಂದ ಸರ್ಕಾರಕ್ಕೆ ಮತ್ತು ನ್ಯಾಯಾಲಯಗಳಿಗೆ ಸುಳ್ಳು ಮಾಹಿತಿ ನೀಡಿ, ಒಕ್ಕಲೆಬ್ಬಿಸಲು ಕಾರಣವಾಯಿತು ಎಂದು ಆರೋಪಿಸಿದರು.
ಸದಾ ಬಡವರ ಪರವಾದ ಕಾಳಜಿ ಹೊಂದಿದ್ದ ಎಸ್. ಬಂಗಾರಪ್ಪ ಅವರು ಸ್ವತಃ ನ್ಯಾಯಾಲಯದಲ್ಲಿ ರೈತರ ಪರವಾಗಿ ವಾದ ಮಾಡಲು ವಕೀಲರನ್ನು ನೇಮಿಸಿದ್ದರು. ಬಂಗಾರಪ್ಪ ಅವರ ಕಾಲಾ ನಂತರ ಸರ್ಕಾರ ಮತ್ತು ವಕೀಲರು ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ. ಇದೀಗ ಗೆಂಡ್ಲಾ ಗ್ರಾಪಂ ವ್ಯಾಪ್ತಿಯ ಶಿಡ್ಡಿಹಳ್ಳಿ ಗ್ರಾಮದ 123 ಜನರ ವಿರುದ್ಧ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆ ಮತ್ತು ನ್ಯಾಯಾಲಯದಲ್ಲಿ ಸುಳ್ಳು ದೂರು ನೀಡಿ ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಅನಾವಶ್ಯಕವಾಗಿ ಬಡವರ ಮೇಲೆ ದೂರು ನೀಡಿದ್ದಾರೆ. ಇಂತಹವರ ಮೇಲೆ ಕಾನೂನು ಕ್ರಮ ಕೈಗೊಂಡು ರೈತರಿಗೆ ಉಪಟಳ ತಪ್ಪಿಸಬೇಕು ಎಂದು ಆಗ್ರಹಿಸಿದರು.
ಮಲಂದೂರು ಮಾದರಿಯಾಗಲಿ:
ನಕ್ಸಲ್ ಪೀಡಿತ ಪ್ರದೇಶವಾಗಿದ್ದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಮಲಂದೂರು ಗ್ರಾಮದಲ್ಲಿ ರೈತರಿಗೆ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ ಎಂಬುದನ್ನು ಅರಿತ ಜಿಲ್ಲಾಧಿಕಾರಿಗಳು ಅರಣ್ಯ ಹಕ್ಕು ಸಮಿತಿ ಸಭೆ ಕರೆದಿದ್ದರು. ಈ ಸಂದರ್ಭದಲ್ಲಿ ರೈತರೊಂದಿಗೆ ಚರ್ಚೆ ನಡೆಸಿ ಸಾಂದರ್ಭಿಕ ಸಾಕ್ಷಿ ಅನುಸರಿಸಿ ರೈತರಿಗೆ ಒಂದೇ ದಿನದಲ್ಲಿ ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಸುಮಾರು 78 ರೈತರಿಗೆ ಭೂ ಮಾಲಿಕತ್ವದ ಹಕ್ಕನ್ನು ನೀಡಲಾಯಿತು. ಅಂತೆಯೇ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಮಲಂದೂರು ಮಾದರಿಯಲ್ಲಿ ತ್ವರಿತವಾಗಿ ನ್ಯಾಯ ಒದಗಿಸಿ, ಒಂದು ತಿಂಗಳ ಒಳಗಾಗಿ ಹಕ್ಕು ಪತ್ರ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಕಾಯ್ದೆಯಂತೆ ರೈತರು ಅರ್ಜಿ ಸಲ್ಲಿಸಿದ್ದರೂ ಸಹ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ನೋಟೀಸ್ ಜಾರಿ ಮಾಡಿರುವುದು ಖಂಡನೀಯವಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳು, ಬುಡಕಟ್ಟು ವ್ಯಕ್ತಿಯನ್ನು ಅಥವಾ ಪಾರಂಪರಿಕ ಅರಣ್ಯ ವಾಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಅವರ ಅಧಿಭೋಗದಲ್ಲಿರುವ ಅರಣ್ಯ ಜಮೀನಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವಂತಿಲ್ಲ ಎಂದು ಕಾಯ್ದೆಯಲ್ಲಿದೆ. ಆದರೂ ನೋಟೀಸ್ ನೀಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಇದಕ್ಕೂ ಮೊದಲು ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಅಜೀಜ್ ಸಾಬ್, ಪರಶುರಾಮ, ಮಹದೇವಪ್ಪ, ಬಸವರಾಜಪ್ಪ, ವೀರೇಶಯ್ಯ, ಅಹಮ್ಮದ್ ಶರೀಫ್, ರಶೀದ್ ಸಾಬ್ ಸೇರಿದಂತೆ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post