ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅಭಿನವ ಶಂಕರಾಲಯ – ವಿದ್ಯಾ ಪ್ರದಾಯಕಳಾದ ಜಗನ್ಮಾತೆ ಶ್ರೀ ಶಾರದೆ ಕೃಪೆತೋರಿ ಮೈಸೂರಿನಲ್ಲಿ ನೆಲೆಸಿದ ಪುಣ್ಯ ಭೂಮಿಕೆ. ಅದುವೇ ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾಪೀಠದ 33ನೇ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಅವರ ಜನ್ಮಸ್ಥಳವೂ ಆಗಿರುವುದು ಇನ್ನೊಂದು ವಿಶೇಷ. ಮೈಸೂರಿನ ಶಾರದೆ ನೆಲೆವೀಡು ಅಭಿನವ ಶಂಕರಾಲಯಕ್ಕೆ ಈಗ ಶತಮಾನ ಪೂರ್ಣಗೊಂಡಿದೆ ಎಂಬುದು ಮಹತ್ವದ ಸಂಗತಿ.
ಯಾವುದೇ ಸ್ಥಳ ದೇವತಾರಾಧನೆ ಸನ್ನಿಧಿ ಆಗಬೇಕು, ಭಾರತೀಯ ಸನಾತನ ಪರಂಪರೆಯ ನೆಲೆಯಾಗಬೇಕು, ಹೋಮ, ಹವನಗಳ ಪರಮ ಪವಿತ್ರ ತಾಣವಾಗಬೇಕು, ವಿದ್ಯೆ, ವಿನಯಗಳು ಮೇಳೈಸಬೇಕು, ಗುರು- ಹಿರಿಯರು, ಶ್ರೇಷ್ಠ ಸನ್ನಿಧಾನಂಗಳು, ಮಹಾತ್ಮರು ಅಲ್ಲಿ ಪಾದ ಸ್ಪರ್ಶ ಮಾಡಬೇಕು ಎಂದರೆ ಅದರ ಹಿಂದೆ ಒಂದು ದೈವಿಕ ಶಕ್ತಿ ಗುಪ್ತ ಗಾಮಿನಿಯಂತೆ ಹರಿಯುತ್ತ ಇರುತ್ತದೆ. ಹಾಗಾಗಿ ಅವು ಶತ ಶತಮಾನಗಳಿಂದ ಪುಣ್ಯ ನೆಲೆಯಾಗುತ್ತವೆ. ಯತಿ ಪರಂಪರೆಯೊಂದಿಗೆ, ದೈವಿಕ ಶಕ್ತಿಗಳನ್ನು ಅನುಗ್ರಹಿಸುವ, ಪಂಡಿತರನ್ನು ರಕ್ಷಿಸುವ, ಪಾಮರರನ್ನೂ ಉದ್ಧರಿಸುವ ಮೂಲಕ ನಮ್ಮ ದೇಶದ ಆತ್ಮವೇ ಆಗಿರುವ ಧರ್ಮವನ್ನು ಪರಿಪಾಲಿಸುವ ಪುಣ್ಯಕ್ಷೇತ್ರವಾಗುತ್ತವೆ ಎಂದು ಪ್ರಾಜ್ಞರು ಹೇಳುತ್ತಾರೆ. ಹೌದು. ಈ ಮಾತು ಸತ್ಯಸ್ಯ ಸತ್ಯವಾಗಿದೆ ನಮ್ಮ ಮೈಸೂರಿನಲ್ಲಿ…. ಅದೂ ಶಂಕರ ಮಠದ ‘ಅಭಿನವ ಶಂಕರಾಲಯ’ದಲ್ಲಿ…..
ವೈವಿಧ್ಯಮಯ ಕಾರ್ಯಕ್ರಮ:
ಮೈಸೂರಿನ ಅಗ್ರಹಾರದ ಫೋರ್ಟ್ ಮೊಹಲ್ಲಾದಲ್ಲಿರುವ ‘ಅಭಿನವ ಶಂಕರಾಲಯ’ದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆಗೆ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠ ಹಮ್ಮಿಕೊಂಡಿದೆ. ಏ. 4 ರಂದು ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಕುಂಭಾಭಿಷೇಕ, ನವಗ್ರಹ ಮೂರ್ತಿಗಳ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. 5ರಂದು ಶಾರದಾಂಬಾ ಹಾಗೂ ಜಗದ್ಗುರು ಶ್ರೀ ಸಚ್ಚಿದಾನಂದ ನೃಸಿಂಹ ಭಾರತೀ ಮಹಾಸ್ವಾಮಿಗಳ ಸನ್ನಿಧಿಯಲ್ಲಿ ಕುಂಭಾಭಿಷೇಕ, ಸಂಜೆ 5.30ಕ್ಕೆ ‘ಗುರುವಂದನಾ’ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭಾರತ ಸರ್ಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ಶೃಂಗೇರಿ ಶಂಕರ ಮಠ ಆಯೋಜಿಸಿರುವ ಹೋಮ, ಹವನ, ಗುರು ದರ್ಶನ, ಪಾದಪೂಜೆಗಳಿಗೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಶೃಂಗೇರಿ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸರ್ವ ಪ್ರಕ್ರಿಯೆಗಳ ಸಾನ್ನಿಧ್ಯ ವಹಿಸಲಿದ್ದಾರೆ. ತನ್ನಿಮಿತ್ತ ‘ಶಂಕರಾಲಯ’ ದ ಮಹತ್ವ ಪರಿಚಯಿಸುವ ಲೇಖನ …
ಶ್ರೀ ನೃಸಿಂಹ ಭಾರತೀ’ ಸಾಧನೆ ಅನನ್ಯ
ಶೃಂಗೇರಿ ಜಗದ್ಗುರು ‘ ಶ್ರೀ ನೃಸಿಂಹ ಭಾರತೀ’ (1872 -1912) ಅವರ ಸಾಧನೆ ಅಪಾರ ಮತ್ತು ಅನನ್ಯ. ಅವರು ಹೆಚ್ಚು ಸಂದೇಶಗಳನ್ನು ನೀಡಲಿಲ್ಲ, ಜೀವನ ಸಾಧನೆ ಮಾಡಿ ಜಗತ್ತಿಗೆ ಗುರುಶಕ್ತಿ ತೋರಿದರು. ಸತ್ಯಂ, ಶಿವಂ, ಸುಂದರಂ- ಎಂಬಂತೆ ಬಾಳಿದರು. ಹಿಂದಿನ ಯತಿಗಳಿಗೆ ವಿನೀತರಾಗಿ, ಮುಂದಿನ ಪರಂಪರೆಗೆ ಆದರ್ಶವಾಗಿ ನಡೆದರು. ಅಂತರಂಗ- ಬಹಿರಂಗ ಸಾಧನೆಗಾಗಿ ಮಿಡಿದರು. ಸಂತತ ಶ್ರೀ ಶಂಕರರ ಮಾರ್ಗ ಪಾಲನೆಯೇ ಅವರ ಉಸಿರಾಗಿತ್ತು.
ಶಂಕರಾಚಾರ್ಯರು ಜನಿಸಿದ ಪುಣ್ಯಕ್ಷೇತ್ರ ಈಗಿನ ಕೇರಳ ರಾಜ್ಯದ ಕಾಲಟಿ ದೀರ್ಘಕಾಲದವರೆಗೆ ಅಜ್ಞಾತವಾಗಿತ್ತು. ಅದು ಕೇರಳದಲ್ಲಿ ಎಂದು ಗೊತ್ತಿತ್ತು, ಆದರೆ ಎಲ್ಲಿದೆ ಎಂಬುದು ಬಹುತೇಕರಿಗೆ ತಿಳಿದಿರಲಿಲ್ಲ. ಅಂತಹಾ ಕಾಲಘಟ್ಟದಲ್ಲಿ ಅಭಿನವ ಶಂಕರರು ಎಂದೇ ಖ್ಯಾತರಾಗಿದ್ದ ಶೃಂಗೇರಿ ಪೀಠದ 33ನೇ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಕಾಲಟಿ ಕ್ಷೇತ್ರವನ್ನು ಭಕ್ತ ಕೋಟಿಗೆ ಸಮಗ್ರವಾಗಿ ಪರಿಚಯಿಸುವ ಮಹೋನ್ನತ ಕಾರ್ಯ ಮಾಡಿದರು.
ಆದಿಗುರು ಶ್ರೀ ಶಂಕರಾಚಾರ್ಯರ ಕೃತಿಗಳನ್ನು ಪ್ರಕಟಿಸುವ ಹೊಣೆ ಹೊತ್ತರು. ಪೀಠದಲ್ಲಿ ವಿರಾಜಮಾನರಾಗಿರುವ ಪರ್ಯಂತ ಅವರು ವಿಶ್ವಗುರು ಶಂಕರರ ಸೇವೆಯನ್ನು ಇದೇ ರೀತಿ ಮಾಡಿದರು. ಹಾಗಾಗಿ ಅವರು ಅಗ್ರಮಾನ್ಯ ಯತಿಗಳಾದರು. ಜನಮಾನಸದಲ್ಲಿ ಅಧ್ಯಾತ್ಮಿಕ ರಾಜನಂತಿದ್ದರೂ ನೃಸಿಂಹಭಾರತೀ ಅವರು ಅತ್ಯಂತ ಸರಳವಾಗಿದ್ದರು. ಅಧ್ಯಾತ್ಮ ಮತ್ತು ಜ್ಞಾನದಲ್ಲಿ ಉಜ್ವಲ ವ್ಯಕ್ತಿತ್ವ ಹೊಂದಿದ್ದರು. ಈ ಮಹಾನ್ ಯತಿ ಶ್ರೇಷ್ಠರನ್ನು ಅದ್ವೈತ ಪರಂಪರೆಯ ದಕ್ಷಿಣಾಮ್ನಾಯ ಮಹಾಪೀಠ ಶ್ರೀ ಶಂಕರ ಮಠದ ಪರಂಪರೆಗೆ ಹೆತ್ತು, ಹೊತ್ತು ಕೊಟ್ಟ ಹಿರಿಮೆ ಸಲ್ಲುವುದು ಮೈಸೂರಿಗೆ.
ನಿರಂತರ ಅಭಿವೃದ್ಧಿಯ ಕ್ಷೇತ್ರ
ಶೃಂಗೇರಿ ಶ್ರೀ ಶಾರದಾಪೀಠವು ನಗರದ ಅಭಿನವ ಶಂಕರಾಲಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿದೆ, ಆಸ್ತಿಕರ ವೈದಿಕ ಆಚರಣೆ, ಆಧ್ಯಾತ್ಮಿಕ ಅನುಸಂಧಾನ, ಜನರಿಗೆ ಭಕ್ತಿಯ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಿಸುವುದು, ಸೂಕ್ತ ಮಾರ್ಗದರ್ಶನದಲ್ಲಿ ಸಂಪ್ರದಾಯಗಳನ್ನು ಕಾಪಾಡುವುದು ಮುಖ್ಯ ಧ್ಯೇಯವಾಗಿದೆ.ಎಚ್. ರಾಮಚಂದ್ರ, ಅಭಿನವ ಶಂಕರಾಲಯದ ಧರ್ಮಾಧಿಕಾರಿ
ಶಿವಸ್ವಾಮಿ ಸನ್ಯಾಸಿಯಾದರು:
ಈಗ ಮೈಸೂರಿನ ಅಭಿನವ ಶಂಕರಾಲಯ ಎಂದೇ ಖ್ಯಾತವಾದ, ಶೃಂಗೇರಿಯ ಮಠಕ್ಕೆ ಸೇರಿದ ಕ್ಷೇತ್ರದಲ್ಲೇ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಅವರು ಜನಿಸಿದ್ದು. ಅವರ ಪೂರ್ವಾಶ್ರಮದ ಹೆಸರು ಶಿವಸ್ವಾಮಿ. ತಂದೆ ಕುಣಿಗಲ್ ರಾಮಶಾಸ್ತ್ರಿ ಮೈಸೂರಿನ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ (1794-1868) ಆಸ್ಥಾನದ ಶ್ರೇಷ್ಠ ವಿದ್ವಾಂಸರಾಗಿದ್ದರು. ಜನ್ಮದಾತೆ ಲಕ್ಷ್ಮಮ್ಮ. ಶಿವಸ್ವಾಮಿ ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಸ್ವಲ್ಪ ಸಮಯದ ನಂತರ ತಾಯಿಯೂ ನಿಧನರಾದರು. ಅಣ್ಣ ಲಕ್ಷ್ಮೀ ನರಸಿಂಹಶಾಸ್ತ್ರಿಗಳ ಆಶ್ರಯದಲ್ಲಿ ಶಿವಸ್ವಾಮಿ ಬೆಳೆದರು. ದೈವ ಕೃಪೆ ಎಂಬಂತೆ ಶೃಂಗೇರಿಯ 32ನೇ ಪೀಠಾಧಿಪತಿ ಶ್ರೀ ನರಸಿಂಹಭಾರತೀ ಸ್ವಾಮಿಗಳು ಮೈಸೂರಿಗೆ ದಿಗ್ವಿಜಯಕ್ಕಾಗಿ ಆಗಮಿಸಿದ್ದರು. ಪೂರ್ಣ ಚಂದ್ರನಂತೆ ಹೊಳೆಯುತ್ತಿದ್ದ ಬಾಲಕ ಶಿವಸ್ವಾಮಿಯ ತೇಜಸ್ಸು ಗಮನಿಸಿದರು. ಸಂತಸಪಟ್ಟರು. ಅವರನ್ನೇ ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಿಬಿಟ್ಟರು. !
ಈ ವಿಷಯವನ್ನು ಅವರು ಮೈಸೂರು ಮಹಾರಾಜ (ತಮ್ಮ ಪ್ರೀತಿಯ ಶಿಷ್ಯ) ಮುಮ್ಮಡಿ ಕೃಷ್ಣರಾಜ ಒಡೆಯರ್ಗೆ ತಿಳಿಸಿದರು. ಆದರೆ ಶಿವಸ್ವಾಮಿಯ ಅಣ್ಣ ಲಕ್ಷ್ಮೀ ನರಸಿಂಹಶಾಸ್ತ್ರಿಗಳು ಮೊದಲು ಒಪ್ಪಲಿಲ್ಲ. ನಂತರ ಸ್ವಾಮಿಗಳ ಇಚ್ಛೆ ಮತ್ತು ಮಹಾರಾಜರ ಆದೇಶ ಎರಡೂ ಬಂದಾಗ ಗೌರವಿಸಿದರು. ಮೈಸೂರು ಅರಮನೆ ಆವರಣದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶಿವಸ್ವಾಮಿಗೆ ಸಂನ್ಯಾಸಾಶ್ರಮ ಸ್ವೀಕಾರ ವಿಧಿಗಳು ನೆರವೇರಿದವು. ಪರಂಪರೆಯ 33 ನೇ ಜಗದ್ಗುರುಗಳನ್ನು ನೀಡಿದ ಕೀರ್ತಿ ಹೀಗೆ ಮೈಸೂರಿಗೆ ಪ್ರಾಪ್ತಿಯಾಯಿತು.
Also read: ರಾಮೇಶ್ವರಂ ಕೆಫೆ ಸ್ಫೋಟ | ಚಿಕ್ಕಮಗಳೂರಿಗೂ ಉಗ್ರರ ನಂಟು | ಕಳಸದಲ್ಲಿ ಓರ್ವನ ಬಂಧನ
ಇತ್ತ ಲಕ್ಷ್ಮೀ ನರಸಿಂಹಶಾಸ್ತ್ರಿಗಳ ದತ್ತು ಪುತ್ರ ರಾಮಶಾಸ್ತ್ರಿ ಅವರು ‘ಶಿವಸ್ವಾಮಿ’ ಅವರು ಜನಿಸಿದ ಮನೆಯನ್ನು ಧಾರ್ಮಿಕ ಕಾರ್ಯ ಕ್ಷೇತ್ರ ಮಾಡಬೇಕು ಎಂದು ಸಂಕಲ್ಪ ಮಾಡಿದರು. ಮಠದ ಪರಮ ಭಕ್ತರಾಗಿದ್ದ ಮಹಾರಾಜರು ಈ ನಿಟ್ಟಿನಲ್ಲಿ ಅಗತ್ಯ ನೆರವು ನೀಡಿದರು. 1922 ರ ಸುಮಾರಿಗೆ ದೇಗುಲ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. 31-3-1924 ಭಾನುವಾರ (ಫಾಲ್ಗುಣ ಕೃಷ್ಣ ಏಕಾದಶಿ) ಮಹಾರಾಜರು ಹೊಸ ದೇವಾಲಯ ಉದ್ಘಾಟಿಸಿದರು. ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಸ್ವಾಮೀಜಿ ಅವರ ಶಿಲಾ ಪ್ರತಿಮೆಯನ್ನು ಸ್ಥಾಪಿಸಿ ಭವ್ಯವಾದ ದೇವಾಲಯಕ್ಕೆ ’ಅಭಿನವ ಶಂಕರಾಲಯ’ ಎಂದೇ ನಾಮಕರಣ ಮಾಡಲಾಯಿತು. ಈ ಭವ್ಯ ಮಂದಿರವೀಗ ಶತಮಾನ ಪೂರ್ಣಗೊಳಿಸಿದೆ.
ಕಲ್ಯಾಣ ಮಂಟಪ ನಿರ್ಮಾಣ:
1924ರ ಕಾಲದಲ್ಲೇ ‘ವಿದ್ಯಾಶಂಕರನಿಲಯ’ ಎಂಬ ಕಲ್ಯಾಣ ಮಂಟಪವೂ ನಿರ್ಮಾಣವಾಯಿತು. ನಂತರ ’ವಿದ್ಯಾಭಾರತಿ ನಿಲಯ’ ಎಂಬ ಇನ್ನೊಂದು ಕಲ್ಯಾಣ ಮಂಟಪವೂ ತಲೆ ಎತ್ತಿತು. ಇಲ್ಲಿ ಶಾರದಾಂಬೆ ಮತ್ತು ಶ್ರೀ ಶಂಕರಾಚಾರ್ಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂಬ ಸಂಕಲ್ಪ ಈಡೇರಿದ್ದು ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಮತ್ತು ಭಾರತೀ ತೀರ್ಥ ಮಹಾಸ್ವಾಮಿಗಳ ಸಮ್ಮುಖದಲ್ಲಿ. 1-5-1980 ರಂದು ಮಹಾಗಣಪತಿ ಹೋಮದೊಂದಿಗೆ ಪ್ರತಿಷ್ಠಾಪನೆಯ ಕಾರ್ಯ ಸಂಪನ್ನಗೊಂಡಿತು. 5-5-1980ರಂದು ಜಗದ್ಗುರುಗಳು ಮೂರು ಗರ್ಭಗುಡಿಗಳಲ್ಲಿರುವ ಮೂರ್ತಿಗಳಿಗೆ ಪೂಜಾಭಿಷೇಕ, ನಂತರ ಅಭಿನವ ಶಂಕರಾಲಯ ಗೋಪುರಕ್ಕೆ ಕುಂಭಾಭಿಷೇಕ ನೆರವೇರಿಸಿದ್ದು ಭವ್ಯ ಇತಿಹಾಸ. 1984ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಪ್ರವಚನ ಮಂದಿರ, ಶ್ರೀ ಭಾರತೀ ತೀರ್ಥ ವೇದಸಂಸ್ಕೃತ ಪಾಠಶಾಲೆಯೂ ಸ್ಥಾಪನೆಯಾಯಿತು ಎಂಬುದು ಹೆಮ್ಮೆಯ ಸಂಗತಿ.
ನಮ್ಮೆಲ್ಲರಿಗೆ ಧನ್ಯತೆ:
ಮೈಸೂರಿನಲ್ಲೇ ಜನಿಸಿ ಶ್ರೀ ಶಾರದಾ ಪೀಠದ ಪರಂಪರೆಯನ್ನು ಬೆಳಗಿದವರು ಮಹಾ ಮಹಿಮರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ ಅವರು. ಅವರು ಸನಾತನ ಪರಂಪರೆಯ ಪ್ರತೀಕವೂ ಹೌದು, ಜಗನ್ಮಾತೆ ಶಾರದಾಂಬೆಯ ಮಹಾ ಅನುಗ್ರಹಕ್ಕೆ ಪಾತ್ರರಾದ ಮಹೋನ್ನತ ಶಿಖರವೂ ಹೌದು. ಅವರ ನೆನಪಿಗಾಗಿ ಮೀಸಲಾಗಿರುವ ಈ ಪವಿತ್ರ ಕ್ಷೇತ್ರವು ಮೈಸೂರಿನ ಪ್ರಮುಖ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ ಎಂಬುದೇ ನಾಡಿನ ಅಸ್ಮಿತೆ. ನಮ್ಮೆಲ್ಲರಿಗೆ ಧನ್ಯತೆ. 100 ವರ್ಷಗಳನ್ನು ಪೂರೈಸುತ್ತಿರುವ ಈ ಆಲಯ ಮುಂದಿನ ಶತ ಶತಮಾನಗಳವರೆಗೆ ಹೀಗೆಯೇ ಭಾರತೀಯ ಸನಾತನ ಪರಂಪರೆಯ ಧರ್ಮ ಮತ್ತು ಸಂಸ್ಕೃತಿಗಳ ನೆಲೆವೀಡಾಗಿರಲಿ ಎಂದು ಆಶಿಸೋಣ.
ಅಕ್ಷರ ಮಾತೆ ನೆಲೆವೀಡು
ಶಾರದೆ ಸನ್ನಿಧಿಯಲ್ಲಿ ನಿತ್ಯವೂ ಮಕ್ಕಳ ಅಕ್ಷರಾಭ್ಯಾಸಕ್ಕೆ ಅವಕಾಶವಿದೆ. ಪರೀಕ್ಷಾ ಸಮಯ ಬಂತೆಂದರೆ ವಿದ್ಯಾರ್ಥಿಗಳ ದಂಡೇ ಇಲ್ಲಿ ನೆರೆದಿರುತ್ತದೆ. ನಿತ್ಯ ಬೆಳಗ್ಗೆ ಅಮ್ಮನವರಿಗೆ ಅಷ್ಟೋತ್ತರ, ಸಹಸ್ರನಾಮ, ಕುಂಕುಮಾರ್ಚನೆ, ಶ್ರೀಚಕ್ರ ನವಾವರಣ ಪೂಜೆಗಳು ಕಲ್ಪೋಕ್ತ ವಿಧಾನದಲ್ಲಿ ನಡೆಯುತ್ತದೆ. ಆಶಾಢ ಶುಕ್ರವಾರಗಳಂದು ದೇವಿಗೆ ವಿಶೇಷ ಅಲಂಕಾರ, ವಿವಿಧ ಹೋಮ, ಶ್ರಾವಣ ಶುಕ್ರವಾರಗಳಂದು ಮಹಾಲಕ್ಷ್ಮೀ ಹೋಮ ನೆರವೇರುತ್ತದೆ. ವಿವರಗಳಿಗೆ 94481 85448 ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post