ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ಜಾತ್ರೆ ಎಂದು ಕರೆಯಲ್ಪಡುವ ಶ್ರೀ ಕ್ಷೇತ್ರ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರ ಸ್ವಾಮಿ ಜಾತ್ರೆ ಇಂದಿನಿಂದ ಪ್ರಾರಂಭವಾಗಿದ್ದು 16 ನೆಯ ತಾರೀಖಿನವರೆಗೂ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಪ್ರಧಾನ ಐತಿಹಾಸಿಕ ಜಾತ್ರೆ ಫಾಲ್ಗುಣ ಮಾಸದ ಚಿತ್ತ ನಕ್ಷತ್ರದಂದು ರಥೋತ್ಸವವು ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದ್ದು, ದೊಡ್ಡ ತೇರು 12ರಂದು 3.30 ಕ್ಕೆ ನಡೆಯುತ್ತದೆ.
ಸ್ವಾಮಿಯ ಹಿನ್ನೆಲೆ
16 ಮತ್ತು17 ನೆಯ ಶತಮಾನದ ಬಳಿ ಬದುಕಿದ ಕರ್ಮ ಜೀವಿಕಾಯಕ ಯೋಗಿ ತಿಪ್ಪೇರುದ್ರಸ್ವಾಮಿ ಸಮಾಜ ಸುಧಾರಕನಾಗಿ ಜನರ ಕಲ್ಯಾಣಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ಅವಧೂತ. ಸುಮಾರು 400 ವಷಗಳ ಹಿಂದೆ ತಿಪ್ಪೇರುದ್ರಸ್ವಾಮಿಯವರು ನಾಯಕನಹಟ್ಟಿಗೆ ಬಂದು ಅನೇಕ ಪವಾಡಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿ ದೈವೀಕ ಪುರುಷರಾಗಿ ಹೆಸರುವಾಸಿಯಾದರು.
ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರ ಸ್ವಾಮಿ ಕರ್ನಾಟಕದ ಹಲವು ಭಾಗಗಳಲ್ಲಿ ಸಂಚರಿಸಿ ಫಣಿಯಪ್ಪ ಶಿವಭಕ್ತನ ಇಚ್ಚೆಯಂತೆ ನಾಯಕನಹಟ್ಟಿಯಲ್ಲಿ ನೆಲೆಸಿ ಈ ಸ್ಥಳವನ್ನು ತಮ್ಮ ಕರ್ಮಭೂಮಿಯಾಗಿ ಆರಿಸಿಕೊಂಡರು.
ವಿಜಯನಗರ ಸಾಮ್ರಾಜ್ಯ ಪಥನವಾದ ನಂತರ ನಾಯಕನಹಟ್ಟಿ ಪಾಳೇಗಾರ ಬೋಡಿ ಮಲ್ಲಪ್ಪನಾಯಕ ತನ್ನ ಸಂಸ್ಥಾನದಲ್ಲಿ ತಿಪ್ಪೇರುದ್ರಸ್ವಾಮಿಯವರಿಗೆ ಆಶ್ರಯ ನೀಡುತ್ತಾರೆ. ಬೋಡಿಮಲ್ಲಪ್ಪ ನಾಯಕ ತಿಪ್ಪೇರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಏಳು ಪುರ, ಏಳು ಕೆರೆಗಳನ್ನು ಕಟ್ಟಿಸಿದರು. ರೈತ ಸಮುದಾಯಕ್ಕೆ ಕೆರೆ, ಕಟ್ಟಡಗಳ ನಿರ್ಮಾಣ ಮಾಡುವ ಮೂಲಕವೇ ಜಲಕ್ರಾಂತಿಗೆ ನಾಂದಿ ಹಾಡಿದ ಜಲ ಸಂಸ್ಕೃತಿಯ ಹರಿಕಾರನಾಗಿ ಕೃಷಿಕರ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತ ಕ್ರಾಂತಿ ಪುರುಷ, ದೀನ ದಲಿತರ ಉದ್ದಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ ತಿಪ್ಪೇರುದ್ರಸ್ವಾಮಿ.
ತಿಪ್ಪೇರುದ್ರಸ್ವಾಮಿ ಸಾಕಷ್ಟು ಪವಾಡಗಳನ್ನು ಮಾಡುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ಇದನ್ನು ಮನಗಂಡು ಎರಡು ಕೆರೆಗಳನ್ನು ನಿರ್ಮಾಣ ಮಾಡಿಸುತ್ತಾರೆ. ಒಮ್ಮೆ ಭಕ್ತರೊಬ್ಬರ ಬಳಿ ಹಾಲು ಕೇಳಿದಾಗ ಹಾಲು ಇಲ್ಲ, ಎಮ್ಮೆ ಸತ್ತು ಹೋಗಿದೆ ಎನ್ನುತ್ತಾರೆ. ಆದರೆ ಅದರಂತೆ ಎಮ್ಮೆ ಸತ್ತು ಹೋಗುತ್ತದೆ. ಇದನ್ನ ಮನಗಂಡು ನಾವು ಸುಳ್ಳು ಹೇಳಿ ತಪ್ಪು ಮಾಡಿದೆವು. ನಮ್ಮನ್ನು ಕ್ಷಮಿಸಿ ಎಂದಾಗ ಸತ್ತ ಎಮ್ಮೆಯಿಂದ ಹಾಲು ಕರೆಯುವುದು ಮಾತ್ರವಲ್ಲಿ ಆ ಜೀವವನ್ನು ಬದುಕಿಸುತ್ತಾರೆ. ಹೀಗೆ ಅನೇಕ ಪವಾಡಗಳನ್ನು ಮಾಡುತ್ತಾ ಪವಾಡ ಪುರುಷರಾಗುತ್ತಾರೆ.
ಜಾತಿ ಬೇಧವಿಲ್ಲದೇ ಇಲ್ಲಿನ ವಿಶೇಷತೆ ಎಂದರೆ ಮುಸ್ಲಿಮರು ಸಹ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೂರಿಯಾಗಿ ನಡೆಸುತ್ತಾರೆ. ಈ ಜಾತ್ರೆಗೆ ಆಂಧ್ರಪ್ರದೇಶ, ಸೀಮಾಂಧ್ರ, ತಮಿಳುನಾಡು, ಮಹಾರಾಷ್ಟ್ರ ಮಾತ್ರವಲ್ಲ ವಿದೇಶಿಗರೂ ಸಹ ಜಾತ್ರೆಗೆ ಆಗಮಿಸುತ್ತಾರೆ.
ನಾಯಕನಹಟ್ಟಿ ಜಾತ್ರೆಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಲ್ಲಾ ಸಿದ್ದತೆಗಳನ್ನು ಮಾಡಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ
ಮಾಡಿದೆ.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಹಲವೆಡೆ ಸಿಸಿ ಕ್ಯಾಮೆರಾ, ವಿದ್ಯುತ್ ದೀಪಗಳ ವ್ಯವಸ್ಥೆ, ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಾಣಿ ಬಳಿ ನಿಷೇಧ ಇರುವುದರಿಂದ ದೇವಸ್ಥಾನದ ಸುತ್ತಮುತ್ತ ಪ್ರಾಣಿ ಬಲಿಯನ್ನು ಕೊಡುವಂತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಭಕ್ತರು ಕೊಬ್ಬರಿಯನ್ನು ಸುಡದೇ ದೇವಸ್ಥಾನಕ್ಕೆ ನೀಡಲು ಮನವಿ ಮಾಡಿದೆ.
(ಲೇಖನ: ಎಸ್. ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post