ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರಕ್ಕೆ ಸಮೀಪದ ಕಲ್ಲೂರು ಮಂಡಳಿ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಸಮೀಕ್ಷೆ ನಡೆಸಲಾಯಿತು.
ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತವಾಗಿರುವ ಹೆಮ್ಮೆಯ ಸಂಸದ ಬಿ.ವೈ. ರಾಘವೇಂದ್ರ ಅವರ ನಿರ್ದೇಶನದಂತೆ ಇಂದು(ಬುಧವಾರ) ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಶ್ರೀ ಲಕ್ಷ್ಮೀ ನಾರಾಯಣ ಕಾಶಿ ಅವರ ನೇತೃತ್ವದಲ್ಲಲಿ ಮೈಸೂರು ಹಾಗೂ ಬೆಂಗಳೂರು ವಿಭಾಗದ ಯೋಜನಾ
ಇಂಜಿನಿಯರ್’ಗಳ ತಂಡ ಕಲ್ಲೂರು ಮಂಡಳಿ ಪ್ರದೇಶವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು ಸ್ಥಳ ಸಮೀಕ್ಷೆ ನಡೆಸಿತು.
ಇಂಜಿನಿಯರ್’ಗಳಾದ ಮಂಜಪ್ಪ ಮತ್ತು ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಶಿವಮೊಗ್ಗ ಜಿಲ್ಲಾ ಸಹಾಯಕ ನಿರ್ದೇಶಕ ಎನ್. ರಾಮಕೃಷ್ಣ, ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್. ಗೋಪೀನಾಥ್, ಸಾಹಸ ಅಕಾಡೆಮಿ ಕಾರ್ಯದರ್ಶಿ ಅ.ನಾ. ವಿಜೇಂದ್ರರಾವ್ ಅವರು ತಂಡದಲ್ಲಿದ್ದು ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಅವರೆಲ್ಲರ ಸಲಹೆಯಂತೆ ಕಲ್ಲೂರು ಮಂಡಳಿ ಗುಡ್ಡದ ಮೇಲಿನ ದೇವಸ್ಥಾನದ ಸುತ್ತ ಇರುವ ಕಲ್ಲುಬಂಡೆ, ಜಲತಾಣ, ವೀಕ್ಷಣಾ ಗೋಪುರಗಳನ್ನು ಅಭಿವೃದ್ಧಿಪಡಿಸುವುದು, ಸಾಹಸ ಕ್ರೀಡಾ ತರಬೇತಿ, ಚಾರಣ ಹಾಗೂ ಪ್ರವಾಸಿಗಳ ಅನುಕೂಲಕ್ಕಾಗಿ ಶೌಚಾಲಯ, ಸ್ನಾನಗೃಹ ಸೇರಿದಂತೆ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ರಸ್ತೆಯನ್ನ ಅಭಿವೃದ್ಧಿಪಡಿಸುವುದು ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಬೆಂಗಳೂರು ವಿಭಾಗದ ಇಂಜಿನಿಯರ್ ಮಂಜಪ್ಪನವರು ಈ ಎಲ್ಲ ಅಂಶಗಳನ್ನೊಳಗೊಂಡಂತೆ ಶೀಘ್ರವಾಗಿ ನೀಲ ನಕ್ಷೆ ತಯಾರಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆಂದು ಭರವಸೆ ನೀಡಿದರು. ಭೂ ದಾಖಲೆ, ಸಾಹಸ ಕ್ರೀಡೆಗಳಿಗೆ ಅಗತ್ಯವಾಗಿರುವ ಪರಿಕರಗಳ ಪಟ್ಟಿಯನ್ನು ನೀಡಲು ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರ್ಥಿಕ ಕ್ಲಿಷ್ಟ ಪರಿಸ್ಥಿತಿಯಲ್ಲೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜಿಸಿರುವುದು, ಕಾರ್ಯಪಡೆ ರಚಿಸಿ ವರದಿ ಪಡೆದು ರಾಜ್ಯದಾದ್ಯಂತ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಜೊತೆಗೆ ಶಿವಮೊಗ್ಗ ಜಿಲ್ಲೆಯ ಪ್ರವಾಸೀತಾಣಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಹೆಮ್ಮೆಯ ವಿಷಯ.
ನಮ್ಮ ನಲ್ಮೆಯ ಸಂಸದ ಬಿ.ವೈ. ರಾಘವೇಂದ್ರ ಅವರು ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜೋಗ ಅಭಿವೃದ್ಧಿ, ಉಡುತಡಿ, ನಗರಕೋಟೆ, ಕವಲೆದುರ್ಗ ಹಾಗೂ ಕಲ್ಲೂರು ಮಂಡಳಿಗಳನ್ನು ಪ್ರವಾಸಿತಾಣವನ್ನಾಗಿಸಲು ಬೇಕಾದ ಮಂಜೂರಾತಿ ಪಡೆದಿರುವುದು ಸಂಸದರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ಈ ವೇಳೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಕಾರ್ಯಪಡೆ ಸದಸ್ಯ ಶ್ರೀ ಲಕ್ಷ್ಮೀ ನಾರಾಯಣ ಕಾಶಿ, ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸದ್ಯದ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದು ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಂಬಿಕೆಯಿದೆ. ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಪ್ರವಾಸಿತಾಣಗಳನ್ನ್ನು ಆಕರ್ಷಣೀಯವನ್ನಾಗಿಸುವ ಬಗ್ಗೆ ವಿಸ್ತೃತ ಆಲೋಚನೆಗಳಿವೆ. ಹಂತಹಂತವಾಗಿ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಇದಕ್ಕೆ ಪೂರಕವಾಗಿ ನೆಚ್ಚಿನ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಹಲವಾರು ತಾಣಗಳನ್ನು ಆಕರ್ಷಣೀವನ್ನಾಗಿಸುವ ಭರವಸೆ ನೀಡಿದ್ದಾರೆ. ಅವರ ಪರಿಶ್ರಮದ ಫಲವಾಗಿ ಕೆಲಕಾಲದಲ್ಲಿಯೇ ಕಲ್ಲೂರು ಮಂಡಳಿ ಪ್ರದೇಶದಲ್ಲಿ ಚಾರಣ, ಶಿಲಾರೋಣ, ಜಲಸಾಹಸ ಕ್ರೀಡಾತಾಣವಾಗುತ್ತಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದರು.
ಮುಖ್ಯಮಂತ್ರಿಗಳು ಹಾಗೂ ಸಂಸದರ ಆದ್ಯತೆಯಂತೆ ಜಿಲ್ಲೆಯ ಜೋಗ ಸೇರಿದಂತೆ ಎಲ್ಲಾ ತಾಣಗಳಲ್ಲಿ ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ.
(ವರದಿ: ಡಾ.ಸುಧೀಂದ್ರ)
Get in Touch With Us info@kalpa.news Whatsapp: 9481252093
Discussion about this post