ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಾಂದ್ರಮಾನ ಸಂವತ್ಸರದ ತಿಂಗಳುಗಳ ಎಣಿಕೆಯಲ್ಲಿ ಒಂಭತ್ತನೆಯದಾಗಿ, ಮಾರ್ಗಶೀರ್ಷ ಮಾಸವು ತನ್ನ ಹಿಂದಿನ ಎಲ್ಲ ತಿಂಗಳುಗಳಿಗಿಂತ ವಿಶಿಷ್ಟ ಗುಣಸೌಂದರ್ಯಗಳಿಂದ ತುಂಬಿದುದಾಗಿರುವುದು. ಬೇಸಿಗೆ ಕಾಲದ ಬಿರುಬಿಸಿಲಿನ ಬೇಗೆಯಿಲ್ಲ, ಬರಿ ಮಣ್ಣಿನ ಹೊಲ ನೆಲಗಳಿಲ್ಲ. ಅದರಂತೇ ಮಳೆಗಾಲದ ಮೋಡ ಮುಸುಕಿದ ದುರ್ದಿನಗಳ ದರ್ಶನವಿಲ್ಲ. ಕೆಸರು-ಕದಡು ನೀರುಗಳ ಸಂಪರ್ಕವಿಲ್ಲ.
ಮುಂಗಾರು ಬೆಳೆಗಳು ತನ್ನ ಜೀವನದ ಪೂರ್ಣತೆಯಿಂದ ಅನ್ನದ ಉಗ್ರಾಣವನ್ನು ತುಂಬುತ್ತಿರುವುದು ಹಸುಗೂಸಿನಂತೆ ದಿನಕ್ಕೊಂದು ಚೆಂದದಲ್ಲಿ ಬೆಳೆಯುತ್ತಿರುವ ಹಿಂಗಾರು ಧಾನ್ಯಗಳ ಬೆಳೆಯು ಲೋಕಕ್ಕೆ ಶುಭ ಭವಿಷ್ಯದ ಸೂಚನೆಯನ್ನು ಕೊಡುತ್ತಿರುವುದು ಎಂತಲೇ ಈ ತಿಂಗಳು, ಪರಮಾತ್ಮನ ವಿಭೂತಿರೂಪದ ಸ್ಥಾನಕ್ಕೇರಿರುವುದು. ಸಮೃದ್ಧಿ, ಸಂತೃಪ್ತಿ, ಸೌಂದರ್ಯ, ಸುಭಗತೆಗಳೇ ಪರಮಾತ್ಮಶಕ್ತಿಯ ವಿಶಿಷ್ಟ ಲಕ್ಷಣಗಳಲ್ಲವೆ? ಋತ-ಸತ್ಯಗಳ ಸಾಕಾರರೂಪಿಯಾದ ಶ್ರೀಕೃಷ್ಣ, ಮಾರ್ಗಶಿರ ಮಾಸವೆಂದರೆ ತಾನು ಎಂದು ಸಾರಿ ಹೇಳಿದ್ದಾನೆ. ಗೀತೆಯಲ್ಲಿ ಈ ಮಾಸದ ಮೇಲ್ಮೆಗೆ ಇದಕ್ಕಿಂತಲೂ ಹೆಚ್ಚಿನ ಆಪ್ತವಾಕ್ಯ ಪ್ರಮಾಣ ಇನ್ನೇನು ಬೇಕು?
ಸುಬ್ರಮಣ್ಯ ಎಂಬ ಹೆಸರು ಕೇಳುತ್ತಲೇ ಮುದ್ದುಮುಖದ ಮುಗ್ದ ಚೆಲುವಿನ ಬಾಲಕನ ರೂಪ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇವನನ್ನು ಪ್ರಣವಸ್ವರೂಪಿಯಾಗಿಯೂ, ಜ್ಞಾನ ಸ್ವರೂಪಿಯಾಗಿಯೂ, ಗುರುರೂಪಿಯಾಗಿಯೂ, ಸರ್ಪರೂಪಿಯಾಗಿಯೂ, ಜ್ಯೋತಿ ಸ್ವರೂಪಿಯಾಗಿಯೂ, ಬಾಲಬ್ರಹ್ಮಚಾರಿಯಾಗಿಯೂ, ಇಬ್ಬರು ಹೆಂಡತಿಯರ ಗಂಡನನ್ನಾಗಿಯೂ ಭಾವಿಸಿ ಕೊಂಡಾಡಿ, ಭಕ್ತರು ಪರವಶರಾಗಿ ಸ್ತುತಿಸುತ್ತಾರೆ.
ಕೃತ್ತಿಕಾ ನಕ್ಷತ್ರದಂದು, ಷಷ್ಠಿ ತಿಥಿಯಂದು, ಮಂಗಳವಾರದಂದು ಅವನ ಅನುಗ್ರಹಕ್ಕಾಗಿ ಜಪತಪಾನುಷ್ಠಾನ, ಹೋಮ, ವ್ರತೋಪವಾಸಾದಿ ಆಚರಣೆಗಳೊಡನೆ ಅವನ ತೀರ್ಥಕ್ಷೇತ್ರ ದರ್ಶನ ಮಾಡಿ ಧನ್ಯರಾಗುತ್ತಾರೆ.
ಸುಬ್ರಮಣ್ಯ ಮನೆದೇವರಾಗಿದ್ದ ಪಕ್ಷದಲ್ಲಿ ಪೂಜಾಕೈಂಕರ್ಯದಲ್ಲಿ ಮಡಿ ಮೈಲಿಗೆಯಲ್ಲಿ ಸ್ವಲ್ಪ ವ್ಯತ್ಯಾಸವಾದರು ತಕ್ಷಣ ಹಾವು ಕಾಣಿಸಿಕೊಳ್ಳುತ್ತಿತ್ತು ಎಂಬುದಕ್ಕೆ ಹಿರಿಯನೇಕರು ಸಾಕ್ಷಿ, ಸುಬ್ರಮಣ್ಯ ಒಲಿದರಂತೂ ಇಷ್ಟಾರ್ಥ ಸಿದ್ದಿಸುವುದರಲ್ಲಿ ಎರಡು ಮಾತಿಲ್ಲ.
ಗೀತಾಚಾರ್ಯನು ಭಗವದ್ಗೀತೆಯಲ್ಲಿ ಸೇನಾನಾಯಕರಲ್ಲಿ ತಾನು ಸ್ಕಂಧನೆಂದು ಹೇಳಿಕೊಂಡಿದ್ದಾನೆ. ಆತನ ಕಥಾಶ್ರವಣ ಮತ್ತು ಮನನದಿಂದ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ. ಮಧುರವಾದ ಅನ್ನಭಕ್ಷ್ಯಗಳ ನೈವೇದ್ಯದ ಮೂಲಕ ಈ ದೇವನನ್ನು ಒಲಿಸಿಕೊಂಡು ಚರ್ಮರೋಗ ಮುಂತಾದ ಜಾಡ್ಯಗಳ ನಿವಾರಣೆಯಾಗುವುದೆಂಬ ನಂಬಿಕೆ ಅನೇಕ ಭಕ್ತರಲ್ಲಿದೆ.
ಎಲ್ಲಾ ಕಾಲದಲ್ಲೂ ಕಾಮನೆಯಿಲ್ಲದೆ ಬ್ರಹ್ಮಚಾರಿಯಾಗಿರುವುದರಿಂದ ಕುಮಾರ ಎಂಬ ಹೆಸರು ಅನ್ವರ್ಥವಾಗಿದೆ. ಶ್ರೀ ಸುಬ್ರಮಣ್ಯ ಸ್ವಾಮಿ ಶಿವ ಶಿವೆಯರ ಆತ್ಮಜ, ದುರುಳ ತಾರಕಾಸುರನ ಸಂಹಾರಕ್ಕಾಗಿ ಆತನ ಆವಿರ್ಭಾವ. ಅಗ್ನಿದೇವ – ಹಾಗೂ ಗಂಗಾಮಾತೆ ಇವರೀರ್ವರು ಸಹಕಾರಿಗಳು, ಶಿಶುರೂಪ ತಾಳಿದ ಆ ಶಿವ ತೇಜಸ್ಸಿಗೆ ಎದೆ ಹಾಲುಣಿಸಲು ಆಗಮಿಸಿದವರು ಆರು ಜನ ಕೃತ್ತಿಕಾ ಸ್ತ್ರೀಯರು, ಅವರ ಸಂತೋಷಕ್ಕಾಗಿ ಆ ಶಿಶು ಷಣ್ಮುಖನಾಗಿ (ಆರು ಮೊಗವುಳ್ಳವನಾಗಿ) ಸಂವರ್ಧಿಸಿದ ಕಾರ್ತಿಕೇಯ, ಮಹತ್ತಾದ ಸೇನೆಯೊಂದಿಗೆ ಅವನು ಅಸುರರನ್ನು ಎದುರಿಸಿದ ಕಾರಣ ಮಹಾಸೇನಾ ಶಕ್ತಿಯೆಂಬ ಆಯುಧವನ್ನು ಧರಿಸಿರುವುದರಿಂದ ಅವನು ಶಕ್ತಿಧರ. ಆ ಶಿವಾತ್ಮಜನು ಶರವಣದಲ್ಲಿ ಪ್ರಾದುರ್ಭವಿಸಿದ ಶುಭದಿನ ಮಾರ್ಗಶಿರ ಶುದ್ದ ಷಷ್ಠಿ (ಚಂಪಾ ಷಷ್ಠಿ ಸ್ಕಂದನು ದೇವಸೇನೆಯನ್ನು ವಿವಾಹ ಮಾಡಿಕೊಂಡು ಶ್ರೀಯೋಗವನ್ನು ಪಡೆದ ದಿನ ಶ್ರೀಪಂಚಮಿ. ಇಂದ್ರನಿಂದ ದೇವಸೇನಾಧಿಪತಿಯಾಗಿ ಅಭಿಷೇಕಿಸಲ್ಪಟ್ಟ ದಿನ, ಅವನು ತಾರಕಾಸುರ ಸಂಹಾರ ಮಾಡಿ ಕೃತಕೃತ್ಯನಾದ ದಿನ ಷಷ್ಠಿ ಆದುದರಿಂದ ಇವೆರಡೂ ದಿನ ಅವನಿಗೆ ಪ್ರಿಯ.
ಆರು ತಲೆಗಳು ಮನಸ್ಸು ಸೇರಿದಂತೆ ಪಂಚೇಂದ್ರಿಯಗಳನ್ನು (5+1) ಪ್ರತಿನಿಧಿಸುತ್ತದೆ. ಈ ಇಂದ್ರಿಯಗಳನ್ನು ನಿಯಂತ್ರಿಸಿ ಹದಮಾಡಿದವ ಅತಿಮಾನುಷ ವ್ಯಕ್ತಿಯಾಗುತ್ತಾನೆ. ಯೋಗಿಯು ತನ್ನ ಸಾಧನೆಯಿಂದ ತನ್ನಲ್ಲಿರುವ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ , ಅನಾಹತ, ವಿಶುದ್ದ, ಆಜ್ಞಾ ಚಕ್ರಗಳನ್ನು ಮೇಲೆತ್ತಿ ಆಧ್ಯಾತ್ಮಿಕತೆಯ ಹರಿವು ಎಲ್ಲಾ ಚಕ್ರಗಳಲ್ಲೂ ಏಕರೂಪವಾಗಿ ಏಕಪ್ರಕಾರವಾಗಿರುವಂತೆ ಮಾಡಿ ಪೂರ್ಣತೆಯನ್ನು ಗಳಿಸಿಕೊಳ್ಳುತ್ತಾನೆ. ಸುಬ್ರಮಣ್ಯನು ಇಂತಹ ಆಧ್ಯಾತ್ಮಿಕವೂ ಪರಿಪೂರ್ಣವೂ ಆದ ಪ್ರಜ್ಞಾವಸ್ಥೆಯನ್ನು ಪ್ರತಿನಿಧಿಸುತ್ತಾನೆ. ಈತನ ಕೈಯಲ್ಲಿರುವ ಭಲ್ಲೆ/ಈಟಿಯು ಅಜ್ಞಾನವೆಂಬ ಆಸುರನನ್ನು ನಿವಾರಿಸುವ ಜ್ಞಾನ ಅಥವ ವಿವೇಕವನ್ನು ಪ್ರತಿನಿಧಿಸುತ್ತದೆ.
ವೇದ ಪಾರಂಗತರ ಪ್ರಿಯನೆಂದು ಸೂಚಿಸಲು ದೇವೇಂದ್ರನ ಪುತ್ರಿಯಾದ ದೇವಸೇನಾಳನ್ನು, ಪಾಮರ ಪ್ರಿಯನೆಂದು ಸೂಚಿಸಲು ವಲ್ಲೀ ದೇವಿಯನ್ನು ವಿವಾಹ ಮಾಡಿಕೊಂಡಿರುವುದು ಈ ಸ್ವಾಮಿಯ ವಿಶೇಷ. ಆಧ್ಯಾತ್ಮ ದೃಷ್ಠಿಯಲ್ಲಿ ವಲ್ಲೀ ದೇವಿಯು ಇಚ್ಛಾಶಕ್ತಿ ಸ್ವರೂಪಿಣಿಯೆಂದೂ, ದೇವಸೇನಾದೇವಿಯು ಕ್ರಿಯಾಶಕ್ತಿರೂಪಳು. ಇವರಿಬ್ಬರಿಂದ ಎರಡೂ ಪಾರ್ಶ್ವಗಳಲ್ಲಿ ಆಲಂಗಿಸಲ್ಪಟ್ಟಿರುವ ಶಕ್ತಿಪಾಣಿಯಾದ ಶ್ರೀ ಕುಮಾರ ಸ್ವಾಮಿಯು ಅತ್ಯುನ್ನತ ತತ್ವದ ನೆಲೆಯಾದ ಜ್ಞಾನಶಕ್ತಿ ಸ್ವರೂಪನು. ಸರ್ಪರೂಪನಾದ ಶ್ರೀಷಣ್ಮುಖಸ್ವಾಮಿಯೇ ಕುಂಡಲಿನ ಶಕ್ತಿಯೆಂದು ತಂತ್ರಗಳು ತಿಳಿಸುತ್ತವೆ.
ಬಾಲಸ್ವರೂಪಿಯಾಗಿ ನಿಂತಿರುವ ಆ ಭಂಗಿ ಸಾಧಕನು ಸಾಧನೆಗೆ ತುದಿಗಾಲಿನಲ್ಲಿ ನಿಂತಿರಬೇಕು. ಆಂತರಿಕ ಬ್ರಹ್ಮಚರ್ಯದಲ್ಲಿರಬೇಕು. ಮೋಡದ ಗುಡುಗಿಗೆ ತಾಳಲಾರದೇ ಕುಣಿದಾಡುವ ನವಿಲು ಸುಖತಾಳಲಾರದೆ ಕುಣಿದಾಡುವ ಅದಕ್ಕೆ ಸಂಯಮ ಇಲ್ಲ. ಅದನ್ನು ವಾಹನ ಮಾಡಿಕೊಂಡು ಷಣ್ಮುಖ ಪ್ರದರ್ಶನ ಚಾಪಲ್ಯವನ್ನು ಮೆಟ್ಟಿನಿಲ್ಲಬೇಕೆಂದು ತಿಳಿಸುವನು.
ಇವನು ಕರ್ಪೂರಕ್ಕೆ ಅಭಿಮಾನಿ. ಉರಿಯುವಾಗ ಬಿಸಿಯಾಗಿ ಆಮೇಲೆ ಮಸಿಯಾಗಿ ನಿಂತುಬಿಡುವ ಈ ದ್ರವ್ಯ ಕಾಮವನ್ನು ಬೇಕಾಬಿಟ್ಟಿ ಬಳಸಬಾರದೆಂಬ ಎಚ್ಚರಿಕೆ ನೀಡುತ್ತದೆ. ಸ್ಕಂದ ಎಂದೂ ಮುಗಿಯದ ಹರೆಯದವನು, ಹುಡುಗನೆಂದೇ ಎಣಿಕೆ. ಅವನ ನಿರಂತರ ತಾರುಣ್ಯವನ್ನು ಸೂರ್ಯನ ಹಿನ್ನೆಲೆಯಲ್ಲಿ ಪಂಡಿತರು ಕಂಡಿರುವುದುಂಟು. ಹಾಗೆಯೇ ಆವನದು ಕುಕ್ಕುಟಧ್ವಜ/ಕೋಳಿಗೂ ಸೂರ್ಯನಿಗೂ ಹಳೆಯ ನಂಟಷ್ಟೇ. ಕೋಳಿಯನ್ನು ಸೂರ್ಯಪಕ್ಷಿ ಎಂದೂ ಕರೆಯುವುದುಂಟು. ಆರು ಮುಖಗಳೆಂದರೆ ಆರು ಋತುಗಳು, ಹನ್ನೆರಡು ಕೈಗಳೆಂದರೆ 12 ತಿಂಗಳು.
ಶರವಣ ಭವ ಎಂಬ ಈ ಷಡಾಕ್ಷರಿ ಮಂತ್ರದ ಅಕ್ಷರಗಳ ಮೂಲಕ ಕ್ರಮವಾಗಿ ಲಕ್ಷ್ಮೀ, ವಿದ್ಯಾ, ಮೋಕ್ಷಾ, ಶತ್ರುನಾಶ, ಮೃತ್ಯುವಿನಿಂದ ಜಯ, ನಿರೋಗತ್ವ ಈ ಆರು ತತ್ವಗಳನ್ನು ಭೂಲೋಕದಲ್ಲಿ ಸ್ಥಾಪಿಸುವ ಸಲುವಾಗಿ ನಾರಾದಾದಿ ಶಿಷ್ಯರ ಸಮ್ಮುಖದಲ್ಲಿ ಭಗವಂತನು ಪ್ರಕಟನಾದನು.ಇದಲ್ಲದೆ ತಮಿಳುನಾಡಿನಲ್ಲಿ ಪಳನಿ, ತಿರುಚ್ಚೆಂದೂರು, ಕುಂಭಕೋಣಂ ಬಳಿಯ ಸ್ವಾಮಿ ಮಲೈ, ಮಧುರೈ ಬಳಿಯ ತಿರುವರಂ ಕುಡ್ರಂ ಹಾಗೂ ಫಳಮುದಿರ್ ಚೋಳ್ಯ ಮತ್ತು ತಿರುತ್ತಣಿ ಸುಬ್ರಮಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾದ ಮುರುಗನ್ ಷಟ್ ಕ್ಷೇತ್ರಗಳಿದ್ದು ಅವುಗಳನ್ನು ಸ್ವಾಮಿಯ ಆರು ಯುದ್ದ ಶಿಬಿರಗಳು ಎನ್ನುತ್ತಾರೆ.
ಜಾತಕಗಳಲ್ಲಿ ಅದರಲ್ಲೂ ವಿವಾಹ ಜೀವನದಲ್ಲಿ ಸುಬ್ರಮಣ್ಯ ಪಾತ್ರ ಮಹತ್ತರವಾದದು.ಇನ್ನು ಯಾವುದೇ ಜಾತಕ ನೋಡಿದಾಗ ಪರಿಶೀಲಿಸಿದಾಗ ಮೊದಲು ನೋಡುವುದೇ ಕುಜದೋಷ. ಜ್ಯೋತಿಷಶಾಸ್ತ್ರಕ್ಕೆ ಸುಬ್ರಮಣ್ಯನು ಅಭಿಮಾನಿ ದೇವತೆ, ನವಗ್ರಹರಲ್ಲಿ ಕುಜನಿಗೆ ಅವನು ಅಧಿದೇವತೆ.
Get in Touch With Us info@kalpa.news Whatsapp: 9481252093
Discussion about this post