ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಡಾ.ರಾಜ್ ನಮ್ಮ ಕನ್ನಡದ ಚೇತೋಹಾರಿ ಮುಂಚೂಣಿ ಮಾದರಿಗಳಲ್ಲಿ ಅನನ್ಯವಾದವರು. ಅವರ ಜನಾನುರಾಗಕ್ಕೆ ಎಲ್ಲೆಯಿಲ್ಲ. ವ್ಯಕ್ತಿತ್ವ ವರ್ಣಿಸಲು ಪದಗಳು ಸಾಲವು. ಒಬ್ಬ ಸಾಮಾನ್ಯ ರಂಗಪ್ರತಿಭೆ ಇಡೀ ಭಾಷೆಯ ಮಮತೆಯ ಮೂರ್ತಿಯಾಯಿತು ಅಂದರೆ ತಕ್ಷಣ ನಂಬುವ ಮಾತಲ್ಲ. ಒಂದು ಕ್ಷೇತ್ರದ (ಐಕಾನ್) ಕಣ್ಮಣಿಯಾಗುವುದೆಂದರೆ ಸುಲಭವೂ ಅಲ್ಲ. ಕೇವಲ ರಂಗ-ಚಿತ್ರರಂಗವೊಂದೇ ಅಲ್ಲ. ಒಂದು ಪೂರ್ಣ ಪ್ರಮಾಣದ ಸಾಂಸ್ಕೃತಿಕ, ನಿಷ್ಕಳಂಕ ಪ್ರತಿಮೆಯಾಗಿ ಕಂಗೊಳಿಸುವಲ್ಲಿ ಡಾ.ರಾಜ್ ಅವರ ಹಿರಿಮೆಯಿದೆ.
ಅವರಿಗೆ ದೇಶದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1995)ಬಂದಾಗ ಕನ್ನಡಿಗರೆಲ್ಲರೂ ಅವರ್ಣನೀಯ ಆನಂದಪಟ್ಟರು. ಇಡೀ ದೇಶವೇ ಸಾಮಾನ್ಯ ಕನ್ನಡ ಚಿತ್ರ ನಟನತ್ತ ನೋಡುವಂತಾಯಿತು. ನಮಗವರು ಸಾಮಾನ್ಯರಲ್ಲ. ಆದರೆ ಮಿಕ್ಕ ಭಾಷೆಯ ಚಿತ್ರರಂಗವೂ ಅವರನ್ನು ಶ್ರೇಷ್ಠರನ್ನಾಗಿ ನೋಡುವಂತಾಯಿತು.
ಯಾಕೆ ಸಾಮಾನ್ಯರು ಎಂದು ರಾಜಣ್ಣನವರನ್ನು ನೋಡಬೇಕು? ಎಂದರೆ ಅವರ ಸರಳತೆ, ಸಜ್ಜನಿಕೆಯೇ ಅದಕ್ಕುತ್ತರ. ದಂತದ ಅರಮನೆಯನ್ನು ಅವರ ವ್ಯಕ್ತಿತ್ವ ಕಟ್ಟಿಕೊಳ್ಳಲಿಲ್ಲ. ಅಭಿಮಾನಿಗಳಿಗೆ ಆತ್ಮೀಯರಾಗಿದ್ದರು. ಮೊದಲಾಗಿ ಅವರು ಕೆಲವು ನಟರಂತೆ *ಶೋ ಮ್ಯಾನ್* ಅಗಿರಲೇ ಇಲ್ಲ. ಹಾಗಿರಲು ಬಯಸುತ್ತಲೂ ಇರಲಿಲ್ಲ. ಉನ್ನತ ಪ್ರಶಸ್ತಿಗಳು ಬಂದಾಗ ನೆಲದಿಂದ ನಭಕ್ಕೆ ಚಿಮ್ಮಿ ಕೂರಲಿಲ್ಲ. ಅದೇ ಅವರ ದೊಡ್ಡತನ.
ಅವರನ್ನು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹುಡುಕಿಕೊಂಡು ಬಂತು. ಆಗ ನಮ್ಮ ಗೆಳೆಯರ ತಂಡ ಆ ಸರಳತೆಯ, ಸಜ್ಜನಿಕೆಯ ಮೇರುಪರ್ವತವನ್ನು ಅರಸಿಕೊಂಡು ಹೋಯಿತು.
ಗೆಳೆಯರ ತಂಡದಲ್ಲಿ ಶಿವಮೊಗ್ಗ ಕೇಬಲ್ ಟಿವಿಯ ಶ್ರೀಗುಂಡಾರ್ಚಾರ್, ಶ್ರೀವಾಮನ ಶರ್ಮಾ, ಭೀಮು, ರಘು ಮತ್ತೂ ಮೂರ್ನಾಲ್ಕು ಗೆಳೆಯರು ಇದ್ದರು. ಅವರ ಹೆಸರು ನೆನಪಿಗೆ ಬರುತ್ತಿಲ್ಲ.(ಗೆಳೆಯರೇ ಕ್ಷಮಿಸಿ).
ನಾನು ಭದ್ರಾವತಿ ಆಕಾಶವಾಣಿಯಲ್ಲಿದ್ದಾಗ ಶ್ರಾವಣ ಮಾಸದ ಒಂದು ದಿನ ಸಹೋದ್ಯೋಗಿ ಸುದರ್ಶನರ ಮುಖಾಂತರ ಸಂದೇಶ ಬಂತು. ಸುಧೀಂದ್ರ.. ಶಿವಮೊಗ್ಗ ಸಿಟಿ ಕೇಬಲ್’ನವರು ಡಾ ರಾಜ್ ಸಂದರ್ಶನಕ್ಕೆ ಆಕಾಶವಾಣಿಯವರನ್ನೇ ಅಪೇಕ್ಷೆ ಪಡುತ್ತಿದ್ದಾರೆ. ನೀವು ಸಂದರ್ಶನ ಮಾಡಿದರೆ ಚೆನ್ನಾಗಿರುತ್ತದೆ ಅಂದರು. ಸಾಮಾನ್ಯವಾಗಿ ಗಂಭೀರ ಉರುಫ್ ಮಹತ್ತರ ಸಂದರ್ಭಗಳು ಬಂದರೆ ಸುದರ್ಶನ್ ತಾವದಕ್ಕೆ ತಲೆಕೊಡುತ್ತಿಲಿಲ್ಲ. ’ಅದ್ಯಾವನು ತಲೆ ಕೆರಕೊಂಡು ಪ್ರಶ್ನೆಗಳನ್ನು ರೆಡಿಮಾಡೋವ್ನು’ ಎಂದು ನಗುತ್ತಲೇ ನನ್ನ ಬಳಿ ಬಂದು ನನ್ನನ್ನು ಒಪ್ಪಿಸುವ ಕೆಲಸ ಮಾಡಿಬಿಡುತ್ತಿದ್ದರು.
ಸರಿ! ಇನ್ಮೋರ್ವ ಸಹೋದ್ಯೋಗಿ ಶ್ರೀನಿವಾಸರ ಜತೆ ಕುಳಿತು ಸಂದರ್ಶನಕ್ಕೆ ಅಗತ್ಯವಾದ ಪ್ರಶ್ನೆಮಾಲಿಕೆಯನ್ನು ಸಿದ್ಧಪಡಿಸಿದೆವು. ಸಾಮಾನ್ಯ ಗಣ್ಯರನ್ನು ಅದರಲ್ಲೂ ಕಲಾವಿದರನ್ನು ಸಂದರ್ಶಿಸುವಾಗ ಒಬ್ಬರಲ್ಲ ಇಬ್ಬರಿರುತ್ತೇವೆ. ಜೊತೆಗೆ ಬಾನುಲಿ ಸಹೋದ್ಯೋಗಿ ಶ್ರೀಮತಿ ನಳಿನಮ್ಮ ಅವರೂ ಸೇರಿಕೊಂಡರು.
ಡಾ ರಾಜ್ ಅವರ ಮನೆ ಮುಟ್ಟಿದಾಗ ಬೆಳಗಿನ ಹನ್ನೊಂದೂವರೆ ಇರಬಹುದು. ಅಂದು ಶ್ರೀರಾಘವೇಂದ್ರ ಸ್ವಾಮಿಗಳವರ ಪೂರ್ವಾರಾಧನೆ. ನಮಗೆ ಮನೆಯೊಳಗೆ ಪ್ರವೇಶ ಸಿಕ್ಕೊಡನೆ ನಮಗೆ ನಡು ಹಾಲ್’ನಲ್ಲಿ ಕೂರಲು ಹೇಳಿದರು. ಸ್ವಲ್ಪ ಹೊತ್ತು ಕಾದೆವು. ಮೊದಲಿಗೆ ಭೇಟಿಯಾದವರು ರಾಜಣ್ಣನವರ ಅರ್ಧಾಂಗಿ ಶ್ರೀಮತಿ ಪಾರ್ವತಮ್ಮನವರು. ಸಿಟಿ ಕೇಬಲ್ ನವರ? ಎಂದು ಕೇಳಿದವರೇ ರಾಜಣ್ಣನವರಿಗೆ ಕರೆತರಲೋ ಎಂಬಂತೆ ಒಳಕೋಣೆಗೆ ತೆರಳಿದರು.
ಮತ್ತೆ ನಾವು ಆ ಭವ್ಯ ವ್ಯಕ್ತಿತ್ವದ ಬರವನ್ನು ಗಂಭೀರವಾಗಿ ಕಾಯುತ್ತಿದ್ದೆವು. ಆಗ ತುಸು ಬುದ್ಧಿವಂತಿಕೆ ಉಪಯೋಗಿಸಿ ಫೋಕಸ್ ದೀಪಗಳನ್ನು ಆನ್ ಮಾಡಿ ಕ್ಯಾಮೆರಾ ಫೋಕಸ್ ಮಾಡಿ ಸಿದ್ಧರಾಗಿಬಿಟ್ಟೆವು.
ನಮಗೆ ಮತ್ತೆ ರಾಜಣ್ಣನವರ ಆಗಮನವನ್ನು ಗಂಭೀರವಾಗಿ ಕಾಯುತ್ತಿದ್ದೆವು. ಬಹುನಿರೀಕ್ಷೆಯ ಫಲವಾಗಿ ಡಾ.ರಾಜ್ ನಮ್ಮತ್ತ ಬಂದರು ಅನ್ನುವುದಕ್ಕಿಂತ ಬಹುದೊಡ್ಡ ನಮ್ಮ ಕನ್ನಡ ಕಲೆಯ ಆಸ್ತಿಯೊಂದು ನಮ್ಮತ್ತ ನಸುನಗೆ ಬೀರಿ ಬರುತ್ತಿದೆ ಅಂತ ಅನಿಸಿತು. ಶುಭ್ರ ಶ್ವೇತ ವರ್ಣದ ಅಂಗಿ. ಅದಕ್ಕೊಪ್ಪುವ ಪಂಚೆ. ಅಷ್ಟೆ ಅವರ ನಿಲುವು.
ಅವರು ನಮ್ಮೆದುರು ಸೋಫಾದಲ್ಲಿ ಕೂರುತ್ತಿದ್ದಂತೆಯೇ ಫೋಕಸ್ ದೀಪ ಮತ್ತು ಕ್ಯಾಮೆರಾ ಚಾಲೂ ಆಗಿಬಿಟ್ಟವು. ನಾವೆಲ್ಲರೂ ಪ್ರೀತಿಯಿಂದ ನಮಸ್ಕಾರ ಅಂತ ಸೌಜನ್ಯದಿಂದ ಹೇಳಿದೆವು. ರಾಜಣ್ಣನವರು ಮುಗುಳ್ನಗೆ ಬೀರಿ ಪ್ರತಿವಂದಿಸಿದರು. ಗುಂಡಾಚಾರ್ ಅವರು ನಮ್ಮೆಲ್ಲರ ಪರಿಚಯ ಮಾಡಿಸಿದರು.
ಪ್ರಶ್ನೆಗಳನ್ನ ನೋಡುವಿರಾ ಅಣ್ಣಾವ್ರೆ? ಅಂತ ನಾನು ನಮ್ರನಾಗಿ ಕೇಳಿದೆ. ನೀವು ಆಕಾಶವಾಣಿಯವರು ನಿಮ್ಮ ಪ್ರಶ್ನೆಗಳು ಅಂದ್ರೆ ನಂಗೆ ಯಾವುದೇ ಆತಂಕವಿಲ್ಲ. ನಾನೂ ಆಕಾಶವಾಣಿಯ ಸಂಪರ್ಕದಲ್ಲಿದ್ದು ಬೆಳೆದೋನು. ಪರವಾಗಿಲ್ಲ ಕೇಳಿ ಎಂದು ನಗುತ್ತಲೇ ಹೇಳಿದರು. ನಮಗೆ ಆರಂಭ ಬಹಳ ಸುಲಲಿತವಾಗಿಯೇ ಸಿಕ್ಕಿತು. ನಿಜಕ್ಕೂ ನಮ್ಮ ಮಾಧ್ಯಮದ ಬಗ್ಗೆಯೂ ಹೆಮ್ಮೆ ಪಟ್ಟೆವು.
ನಿಮಗೆ ಧಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ನಿಮಗೆ ಏನು ಅನಿಸತ್ತೆ? ಎಂಬುದಕ್ಕೆ ಅವರು ತುಸು ನಗೆ ಚಿಮ್ಮಿದರು.
ನಮ್ಮ ದೇಶದ ಚಿತ್ರರಂಗದ ಹಿರಿಯರ ಹೆಸರಿನ ಪ್ರಶಸ್ತಿ ನನಗೆ ನೀಡಿದ್ದಾರೆ ಎಂದರೆ ನನಗಲ್ಲ ಇಡೀ ಕನ್ನಡಕ್ಕೇ ಕೊಟ್ಟ ದೊಡ್ಡ ಮರ್ಯಾದೆ, ಗೌರವ. ಎಲ್ಲದಕ್ಕೂ ನಮ್ಮ ಅಭಿಮಾನಿ ದೇವರುಗಳ ಆಶೀರ್ವಾದ ಎಂದರು.
ನಿಜಕ್ಕೂ ಅವರು ನನಗೆ ಸಂತೋಷವಾಗಿದೆ ಅಂತ ಒಂದೇ ವಾಕ್ಯ ಹೇಳಿಬಿಡಬಹುದಿತ್ತು. ಆದರೆ ಫಾಲ್ಕೆ ಅವರ ಮೇಲಿನ ದೊಡ್ಡ ಗೌರವ ಮತ್ತು ಕನ್ನಡದ ಅಭಿಮಾನಿ ದೇವರುಗಳಲ್ಲಿ ಅವರು ಇರಿಸಿ ಕೊಂಡಿದ್ದ ಅವ್ಯಾಜ ಪ್ರೀತಿ ಅವರ ಮಾತಿನಲ್ಲಿ ತುಂಬಿ ಬಂದಿತ್ತು.
ಸಿನಿಮಾಕ್ಕೆ ಬರುವವರಿಗೆ ರಂಗದ ಅನುಭವ ಅವಶ್ಯವೇ ಎಂಬ ಪ್ರಶ್ನೆ ಬಂದಾಗ ಅವರಿಂದ ಬಂದ ಉತ್ತರ ಯುವಪೀಳಿಗೆಗೆ ಆದರ್ಶವೆನಿಸಿತು.
ನೋಡಿ.. ನಂಗೆ ಅಪ್ಪನವರು ರಂಗನಟರಾಗಿದ್ದರು. ನನಗೆ ರಕ್ತದಲ್ಲೇ ಅದನ್ನು ಅವರ ಆಶೀರ್ವಾದವೆಂಬಂತೆ ತುಂಬಿದರು. ನಾನು ರಂಗನಟನೆಯನ್ನೇ ನಂಬಿಕೊಂಡಿದ್ದವನು. ’ಬೇಡರ ಕಣ್ಣಪ್ಪ’ನಾಗಿ ಅವಕಾಶ ಒದಗಿ ಬಂತು. ಅಲ್ಲಿಂದ ಚಿತ್ರರಂಗದ ನಂಟು ಬೆಳೀತು. ನೀವು ಕೇಳಿದ್ರೀ.. ಈಗಿನ ಸಿನಿಮಾ ನಟರಿಗೆ ರಂಗಭೂಮಿಯ ಹಿನ್ನೆಲೆ ಇರಬೇಕಾ? ಅಂತ. ಇರಬೇಕು. ನಂಗೆ ಇಷ್ಟು ಪಾತ್ರಗಳನ್ನು ಮಾಡಿದೀನಿ ಅಂದ್ರೆ ರಂಗಭೂಮಿಯ ಅನುಭವದಿಂದ ಮಾತ್ರ ಸಾಧ್ಯ ಆಗಿದೆ. ನಂಗೆ ರಂಗಭೂಮಿ ತಾಯಿಮನೆ ಇದ್ದಂತೆ. ಅದನ್ನು ಮರೆಯೋ ಹಂಗಿಲ್ಲ ಎಂದರು.
ರಂಗಭೂಮಿಯ ಬಗ್ಗೆ ಅವರಿಗಿರುವ ಮಮತೆ ಕುರಿತು ಹೆಮ್ಮೆಯೆನಿಸಿತು. ಈಗಿನ ಬಹಳಷ್ಟು ಮಂದಿ ಕೇವಲ ಹಣಬಲ ಮತ್ತು ಆಕರ್ಷಕ ರೂಪ ಇವರಡೇ ಬಂಡವಾಳ ಇಟ್ಟುಕೊಂಡಿರುವುದು. ಅಭಿನಯ ಶ್ರೀಮಂತಿಕೆಯ ಕೊರತೆಯಿಂದ ಅವರ ಭವಿಷ್ಯ ಅಷ್ಟಾಗಿ ಉಜ್ವಲಗೊಳ್ಳುತ್ತಿಲ್ಲ ಅನಿಸಿತು.
ಇದು ನಮ್ಮ ಮಾತಿನ ನಡುವೆ ಬಂದ ಅನೌಪಚಾರಿಕ ಚರ್ಚೆಯಾಗಿತ್ತಷ್ಟೆ. ಇದಕ್ಕೆ ರಾಜಣ್ಣನವರು ಯುವಪೀಳಿಗೆ ನಟರ ಬಗ್ಗೆ ಏನೊಂದೂ ಅಪಶಬ್ದ ಹೇಳಲಿಲ್ಲ. ಅವರು ಯಾವಾಗಲೂ ಹೇಳುವಂತೆ ಕನ್ನಡಕ್ಕೆ ಒಬ್ಬ ರಾಜಕುಮಾರ ಸಾಲದು. ನಿಮ್ಮಲ್ಲೂ ನೂರಾರು ರಾಜಕುಮಾರರು ಬರಬೇಕು ಎಂಬುದು ಅವರ ಜೀವನದ ಸಾರವತ್ತಾದ ನುಡಿಯಾಗಿತ್ತು.
ನಮ್ಮದು ಇನ್ನೊಂದು ಪ್ರಶ್ನೆ ಅವರ ಅಂತರಂಗ ಕಾಡಿದ ಹಾಗೇ ಕೇಳಿದೆವು.
ನನಗೆ ಯಾವ ಪಾತ್ರ ಇಷ್ಟವಾಯಿತು ಅಂತ ಕೇಳಿದರೆ ಹೆತ್ತ ತಾಯಿಗೆ ನಿಂಗೆ ಯಾವ ಮಗು ಇಷ್ಟ ಅಂತ ಕೇಳಿದಂತೆ. ಆ ತಾಯಿ ಯಾವ ಮಗು ಅಂತ ತೋರಿಸ್ತಾಳೆ ಹೇಳಿ? ಹಾಗೆ ಆವಾಗಾವಾಗ ನಾನು ನಟಿಸಿದ ಪಾತ್ರಗಳಿಗೆ ಆಗ ದೇವರು ಕೊಟ್ಟ ಶಕ್ತಿಯೇ ವಿನಾ ಬೇರೆಯಿಲ್ಲ. ಎಂದವರೇ ಬಹುವಾಗಿ ಬೇಗ ನಾವೇ ಭಕ್ತ ಕುಂಬಾರ, ಹಳೆಯ ಸರ್ವಜ್ಞ ಮೂರ್ತಿ, ಕನಕದಾಸ, ಶ್ರೀರಾಘವೇಂದ್ರ ವಿಜಯ ಅಥವಾ ಮಂತ್ರಾಲಯ ಮಹಾತ್ಮೆ ಪ್ರಸ್ತಾಪಿಸಿದೆವು.
ಇವತ್ತು ರಾಯರ ಆರಾಧನೆ ಇರಬೇಕು ಅಲ್ಲವೆ? ಎಂದು ಕೇಳಿದರು. ಹೌದು ಇವತ್ತು ಮೊದಲ ದಿನ ಎಂದೆ ನಾನು. ಅದೊಂದು ಅವರ್ಣನೀಯ ಅನುಭವ. ಆ ಮಹಾತ್ಮರನ್ನು ಅರ್ಥಮಾಡಿಕೊಂಡು ನಟಿಸಬೇಕಲ್ಲ. ಅದು ನನ್ನಂತಹ ಸಣ್ಣ ನಟನಿಗೆ ದೊಡ್ಡ ಸವಾಲಾಗಿತ್ತು. ಹೇಗೋ ಅವರೆಲ್ಲರ ಕೃಪೆ ಚೆನ್ನಾಗಿತ್ತು. ಅಭಿಮಾನಿಗಳು ಆಶೀರ್ವದಿಸಿದರು ಎಂದರು ವಿನೀತರಾಗಿ.
ನಮ್ಮದು ನಾನ್ ಸ್ಟಾಪ್ ಸಂದರ್ಶನ.!. ಕೂಡಲೇ ಅವರ ಕೃಷ್ಣದೇವರಾಯ ಐತಿಹಾಸಿಕವಾಗಿ ತುಂಬಾ ಚೆನ್ನಾಗಿ ಬಂದಿದೆ ಎಂದರು. ಈಗಲೂ ಕೃಷ್ಣದೇವರಾಯ, ಶ್ರೀರಾಘವೇಂದ್ರ ಸ್ವಾಮಿಗಳು ಅಂದರೆ ಡಾ.ರಾಜ್ ಅವರ ಮುಖವೇ ನಮ್ಮ ಕಣ್ಮುಂದೆ ನಿಲ್ಲುತ್ತದೆ. ನಿಮ್ಮದು ನಟನೆ ಜನ್ಯಭೂತವಾದ ಪ್ರತಿಭೆ ಎಂದೆ. ನಸುನಕ್ಕು ಅದೆಲ್ಲಾ ದೇವರ ಆಶೀರ್ವಾದ ನನ್ನದು ಅಂತ ಏನಿಲ್ಲ ಅಂದರು.
ನೀವು ಕತೆ ಓದಿ ಸಿನಿಮಾ ಒಪ್ಪಿಕೊಳ್ಳುವಿರಾ? ಅಥವಾ ಒಪ್ಪಿದ ಮೇಲೆ ಸಿನಿಮಾ ನಟನೆಗೆ ಸಿದ್ಧವಾಗುವಿರ? ಎಂದಾಗ ಅವರ ಉತ್ತರ ಬಹಳ ಮಾರ್ಮಿಕವಾಗಿತ್ತು.
ನನ್ನನ್ನುಅಂತಹ ಪಾತ್ರದಲ್ಲಿ ನಿರ್ದೇಶಕರೇ ಕಲ್ಪಿಸಿಕೊಂಡು ಬಂದಾಗ ಅವರ ಅಭಿಮಾನಕ್ಕೆ ಇಲ್ಲ ಅನ್ನಲಾರೆ. ಇನ್ನು ಕತೆಯನ್ನಂತೂ ನೋಡಲೇ ಬೇಕು. ಅದು ಅನಿವಾರ್ಯ.
ಯಾವ ನಿರ್ದೇಶಕರು ನಿಮಗಿಷ್ಟ? ಎಂದು ಕೇಳಿದ್ದಕ್ಕೆ ಎಲ್ಲರೂ ಕನ್ನಡದ ಪ್ರತಿಭಾವಂತರೆ. ಒಳ್ಳೊಳ್ಳೆ ನಿರ್ದೇಶಕರಿದ್ದಾರೆ. ಒಳ್ಳೆಯ ಸಿನಿಮಾ ತೆಗೆದಿದ್ದಾರೆ ಎಂದರು.
ಕನ್ನಡ ಚಿತ್ರರಂಗದಲ್ಲಿ ನೀವು ಅಭಿನಯಿಸದ ಪಾತ್ರಗಳೇ ಇಲ್ಲ. ನಿಮ್ಮ ದೃಷ್ಟಿಯಲ್ಲಿ ಯಾವ ಪಾತ್ರವನ್ನು ನೀವು ಮಾಡಬೇಕು ಅಂತ ಅಪೇಕ್ಷೆ ಪಟ್ಟಿದ್ದೀರಿ? ಎಂದಾಗ ಅವರು ನಾನು ಭಕ್ತ ಅಂಬರೀಶ ಪಾತ್ರ ಮಾಡಬೇಕಿದೆ ಸಿದ್ಧತೆಗಳು ನಡೆಯುತ್ತಿವೆ ಅಂದರು.
ಅಂಬರೀಶ ಪಾತ್ರದ ಬಗ್ಗೆ ಅವರು ಬಹಳ ಹಚ್ಚಿಕೊಂಡಿದ್ದರು. ರಂಗದಲ್ಲಿ ಆ ಪೌರಾಣಿಕ ಪಾತ್ರ ನಿರ್ವಹಿಸಿದ ಅವರಲ್ಲಿ ಅದನ್ನ ಬೆಳ್ಳಿತೆರೆಗೆ ತರುವ ಅಪಾರ ಆಸೆ, ನಿರೀಕ್ಷೆಯಿತ್ತು.
ಅಷ್ಟರಲ್ಲಿ ಶ್ರೀಮತಿ ಪಾರ್ವತಮ್ಮನವರು ಬಂದು ಅವರ ಜತೆ ಕುಳಿತರು. ಶ್ರೀನಿವಾಸ ಕಲ್ಯಾಣ ಚಿತ್ರದಿಂದ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿತು. ಅಲ್ಲದೆ ಅಲ್ಲಿಂದ ರಾಜಣ್ಣನವರ ಅಭಿನಯ ಸಾಮರ್ಥ್ಯ ಮತ್ತು ಲೆಜೆಂಡರಿ ಇಮೇಜು (ಚಿತ್ರರಂಗದ ದಂತಕತೆಯ ರೂಪ) ತಾನಾಗೇ ಸಿಗಲು ಆರಂಭಿಸಿತು ಎನ್ನಬಹುದು.
ಪಾರ್ವತಿ… ಇವರಿಗೆಲ್ಲಾ… ಕಾಫಿ ಕೊಡಕಾಗುತ್ಯೆ? ಅವರಿಗೆಲ್ಲಾ ಕಾಫಿ ಕೊಡುವಾಗ ನಂಗೂ ಕುಡಿಯೋಕೆ ಸಿಗುತ್ತಲ್ಲವಾ? ಅಂತ ಲಘು ಹಾಸ್ಯ ಬೆರೆಸಿ ಮಾತನಾಡಿದರು. ಅಮ್ಮನವರು ಮುಗುಳ್ನಗುತ್ತಾ ನಾನು ಸಿಟಿ ಕೇಬಲ್ಲು ಅಂದ್ರೆ ಬೆಂಗಳೂರು ಸಿಟಿಯವರು ಅಂತ ಅಂದ್ಕೊಂಡಿದ್ದೆ.. ನೀವು ಶಿವಮೊಗ್ಗ ಸಿಟಿಯವರ? ಹತ್ತು ನಿಮಿಷ ಅವರ ಸಮಯ ಕೊಡುತ್ತಿದ್ದೆ. ಯಾಕಂದ್ರೆ ಅವರೀಗ ಗಾಯನದ ಧ್ವನಿಮುದ್ರಣಕ್ಕೆ ಸ್ಟುಡಿಯೋಗೆ ಹೊರಡಬೇಕು. ಸರಿ ಟೈಮಾಯಿತು ಅನ್ನುತ್ತಿದ್ದಂತೆಯೇ ಕಾಫಿ ಬಂತು.
ನಂತರ ಅಣ್ಣಾವ್ರೊಂದಿಗೆ ನಮ್ಮೆಲ್ಲರ ಫೋಟೋ ಸೆಷನ್ ನಡೆಯಿತು. ರಾಜಣ್ಣ ನಮ್ಮೊಂದಿಗೆ ಪ್ರೀತಿಯಿಂದ ಸಹಕರಿಸಿದರು…
ಇನ್ನೂ ಒಂದಿಷ್ಟು ನೆನಪುಮಾಡಿಕೊಳ್ಳಲು ಯತ್ನಿಸುತ್ತೇನೆ. ಅದೊಂದು ನನ್ನ ಅವರ್ಣನೀಯ ಕ್ಷಣ. ಆನಂದ ಪಡುವ ಘಳಿಗೆ.
(Images Courtesy: Internet)
ಲೇಖನ: ಡಾ.ಸುಧೀಂದ್ರ
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರು (ವಿಶ್ರಾಂತ)
& ಹಿರಿಯ ಸಲಹಾ ಸಂಪಾದಕರು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Get in Touch With Us info@kalpa.news Whatsapp: 9481252093
Discussion about this post